ಕೊಡಗು ಬಿಜೆಪಿ ಭದ್ರಕೋಟೆ ಎಂಬುದು ಮತ್ತೆ ಸಾಬೀತಾಯಿತು!
ಮಡಿಕೇರಿ, ಮೇ 15: ಕೊಡಗಿನ ಜನ ಜಾತಿ, ವ್ಯಕ್ತಿ ನೋಡಲ್ಲ ಪಕ್ಷವನ್ನಷ್ಟೆ ಗೆಲ್ಲಿಸುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಷ್ಟೇ ಅಲ್ಲ ಕೊಡಗು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ. ಎರಡು ಕ್ಷೇತ್ರಗಳನ್ನು ಹೊಂದಿರುವ ಕೊಡಗು ಇದೀಗ ಕೇಸರಿಮಯವಾಗಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಗೆಲುವಿನ ನಗೆ ಬೀರುವುದರೊಂದಿಗೆ ಹ್ಯಾಟ್ರಿಕ್ ಸಾಧಿಸಿದ್ದು, ತಮ್ಮ ಶಾಸಕತ್ವವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ (70631) ಅವರು ಎದುರಾಳಿ ಜೆಡಿಎಸ್ ನ ಬಿ.ಎ.ಜೀವಿಜಯ (54616) ಅವರನ್ನು ಸೋಲಿಸಿದ್ದಾರೆ. ಇಲ್ಲಿ 16015 ಮತಗಳ ಅಂತರವನ್ನು ಅಪ್ಪಚ್ಚು ರಂಜನ್ ಪಡೆದಿದ್ದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲ(38219) ಅವರು ಬಿಜೆಪಿ ಅಭ್ಯರ್ಥಿಗೆ ಪೈಪೋಟಿ ನೀಡುವಲ್ಲಿ ವಿಫಲರಾಗಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ(77944) ಅವರು ಎದುರಾಳಿ ಕಾಂಗ್ರೆಸ್ನ ಅಭ್ಯರ್ಥಿ ಅರುಣ್ಮಾಚಯ್ಯ(64591) ಅವರನ್ನು ಸೋಲಿಸಿದ್ದಾರೆ. ಇಲ್ಲಿ 13353 ಮತಗಳ ಅಂತರದ ಗೆಲುವು ಬೋಪಯ್ಯ ಅವರಿಗಾಗಿದೆ. ಇಲ್ಲಿ ಜೆಡಿಎಸ್ ನ ಸಂಕೇತ್ ಪೂವಯ್ಯ(11224) ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಕೊನೆಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಯಾವುದೇ ತಂತ್ರ ನಡೆಯದಿರುವುದು ಕಂಡು ಬಂದಿದೆ. ಬಿಜೆಪಿ ಚುನಾವಣೆಗೆ ಮುನ್ನವೇ ಗೆಲ್ಲುವ ಸೂಚನೆ ಕಂಡು ಬಂದಿತ್ತು. ಅದಕ್ಕೂ ಮುನ್ನ ಕೊಡವ ಮತ್ತು ಗೌಡ ಎಂಬ ಜಾತಿಯ ಬಾಣವನ್ನು ಎಸೆಯಲಾಗಿತ್ತು. ಕಳೆದ ಎರಡು ಬಾರಿಯಿಂದಲೂ ಗೆಲುವು ಪಡೆಯುತ್ತಲೇ ಬಂದಿದ್ದ ಬಿಜೆಪಿ ಅಭ್ಯರ್ಥಿ ಬೋಪಯ್ಯ ಅವರಿಗೆ ಟಿಕೆಟ್ ನೀಡುವುದನ್ನು ತಪ್ಪಿಸಲು ಕೊಡವ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂಬ ಬಾಣವನ್ನು ಎಸೆಯಲಾಗಿತ್ತು. ಅದೊಂದು ರೀತಿಯಲ್ಲಿ ಎಲ್ಲಿಗೆ ನಾಟಬೇಕೋ ಅಲ್ಲಿಗೆ ನಾಟಲಿಲ್ಲ. ಕೊನೆಗೂ ಯಾರ ಮಾತಿಗೂ ಸೊಪ್ಪು ಹಾಕದೆ ಬೋಪಯ್ಯ ಅವರಿಗೆ ಕೊನೆಗಳಿಗೆಯಲ್ಲಿ ಟಿಕೆಟ್ ನೀಡಲಾಯಿತು.

ಕೊಡವ ಸಮುದಾಯದವರೇ ಹೆಚ್ಚಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಜಾತಿ ರಾಜಕೀಯವನ್ನು ಎಳೆದು ತಂದರೆ ಬಿಜೆಪಿಯನ್ನು ಮಣಿಸಬಹುದು ಎಂಬುದು ಕಾಂಗ್ರೆಸ್ನ ಲೆಕ್ಕಚಾರವಾಗಿತ್ತು. ಹೀಗಾಗಿ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡವ ಸಮುದಾಯದ ಅರುಣ್ ಮಾಚಯ್ಯ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಅದೇ ವೇಳೆಗೆ ಜೆಡಿಎಸ್ ನಿಂದಲೂ ಕೊಡವ ಸಮುದಾಯದ ಸಂಕೇತ್ ಪೂವಯ್ಯ ಕಣಕ್ಕಿಳಿದಿದ್ದರು. ಹೀಗಾಗಿ ಮತಗಳು ಒಡೆದು ಬೋಪಯ್ಯ ಅವರು ಸುಲಭವಾಗಿ ಗೆಲುವು ಸಾಧಿಸಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಸಮುದಾಯಕ್ಕಿಂತ ಗೌಡ ಮತ್ತು ಇತರೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಿಜೆಪಿಯ ಅಪ್ಪಚ್ಚು ರಂಜನ್ ಕೊಡವ ಸಮುದಾಯದವರಾದರೆ, ಜೆಡಿಎಸ್ನ ಜೀವಿಜಯ ಮತ್ತು ಕಾಂಗ್ರೆಸ್ನ ಕೆ.ಪಿ.ಚಂದ್ರಕಲ ವಕ್ಕಲಿಗರಾಗಿದ್ದಾರೆ. ಆದರೂ ಇಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಗೆಲುವು ಸಾಧಿಸುವ ಮೂಲಕ ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ.












Click it and Unblock the Notifications