ಆಂಟಿ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಚುನಾವಣೆ ಬ್ಲಾಕ್ ಬಸ್ಟರ್
ಬೆಂಗಳೂರು, ಮೇ 15 : ಇನ್ನೇನು ಕರ್ನಾಟಕದಲ್ಲಿ ಕೇಸರು ರಂಗು ಚೆಲ್ಲಾಡಲಿದೆ, ಬಿಜೆಪಿ ಧ್ವಜಗಳು ಹಾರಾಡಲಿವೆ, ಗಂಟಾಕಿಕೊಂಡಿದ್ದ ಬಿಜೆಪಿ ನಾಯಕರ ಮುಖಗಳು ಕಮಲದಂತೆ ಅರಳಲಿವೆ ಅಂದುಕೊಂಡ ಸಂದರ್ಭದಲ್ಲಿಯೇ ಇದ್ದಕ್ಕಿದ್ದಂತೆ ಚಿತ್ರಣ ಬದಲಾಗಿದೆ.
ಭಾರತೀಯ ಜನತಾ ಪಕ್ಷ ಇನ್ನೇನು ಬಹುಮತ ಪಡೆದು ಸರಕಾರ ರಚಿಸಲಿದೆ ಎಂದು ಅಂದುಕೊಳ್ಳುತ್ತಿರುವಾಗ 118 ಕ್ಷೇತ್ರಗಳಿಂದ 106ಕ್ಕೆ ಕುಸಿದಿದೆ ಮತ್ತು ಹಲವಾರು ಕ್ಷೇತ್ರಗಳನ್ನು ಕಾಂಗ್ರೆಸ್ ಕಸಿದುಕೊಂಡು ಕ್ಯಾಕಿ ಹೊಡೆಯುತ್ತಿದೆ.
LIVE: ಕರ್ನಾಟಕ ಚುನಾವಣೆ 2018, ಮತಎಣಿಕೆ ಅಪ್ಡೇಟ್ಸ್
ಪಕ್ಕಾ ಸ್ಯಾಂಡಲ್ವಡ್ ಬ್ಲಾಕ್ ಬಸ್ಟರ್ ನಂತೆ ಚಿತ್ರಣಗಳು ಬದಲಾಗುತ್ತಿವೆ, ಕ್ಲೈಮ್ಯಾಕ್ಸ್ ಆಂಟಿ ಕ್ಲೈಮ್ಯಾಕ್ಸ್ ಆಗಿ ಪರಿವರ್ತನೆಯಾಗುತ್ತಿದೆ, ಸ್ಪಷ್ಟ ಬಹುಮತ ಪಡೆಯಲು ಭಾರತೀಯ ಜನತಾ ಪಕ್ಷ ತಡಕಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ
ಅರವತ್ತರ ಅರಳುಮರಳು ಅಂಕಿಗೆ ಇಳಿದಿದ್ದ ಕಾಂಗ್ರೆಸ್ ಮತಎಣಿಕೆ ಮುಂದುವರಿಯುತ್ತಿದ್ದಂತೆ ಚಿಗಿತುಕೊಂಡಿದ್ದು ತನ್ನ ಮುನ್ನಡೆ ಸ್ಥಾನಗಳನ್ನು 74ಕ್ಕೆ ಏರಿಸಿಕೊಂಡು, ಬಿಜೆಪಿ ನಾಯಕರು ಏದುಸಿರು ಬಿಡುವಂತೆ ಮಾಡಿದೆ. ಕುಸಿದಿದ್ದ ಕಾಂಗ್ರೆಸ್ ನಾಯಕರು ಟಾನಿಕ್ ಕುಡಿದು ಪುಟಿದೇಳುವಂತೆ ಆಗಿದೆ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ತಲೆಕೆಳಗಾಗುತ್ತಿರುವ ಬಿಜೆಪಿ ನಾಯಕರ ಲೆಕ್ಕಾಚಾರ
ತಲೆಕೆಳಗಾಗುತ್ತಿರುವ ಲೆಕ್ಕಾಚಾರದಿಂದಾಗಿ ಸೂರ್ಯ ನೆತ್ತಿಗೆ ಬರುವ ಹೊತ್ತಿನಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದಾರೆ. ಇದು ಜನರ ಗೆಲುವು, ಇದು ಯಡಿಯೂರಪ್ಪನವರ ನಾಯಕತ್ವದ ಗೆಲುವು, ಇದು ಸಿದ್ದರಾಮಯ್ಯನವರ ದುರಂಕಾರದ ಸೋಲು ಎಂದೆಲ್ಲ ಹೇಳಿಕೆ ನೀಡುತ್ತಿದ್ದ ಬಿಜೆಪಿ ನಾಯಕರು ತಣ್ಣಗೆ ಕುಳಿತುಕೊಳ್ಳುವಂತಾಗಿದೆ.
ನಿನ್ನೆ ಮೋದಿ, ಇಂದು ಜಿಟಿಡಿ ಮೇಲೆ ಸಿದ್ದು ಏಕವಚನ ಪ್ರಯೋಗ
ಡ್ರಾಮ್ಯಾಟಿಕ್ ಪರಿಸ್ಥಿತಿ ನಿರ್ಮಾಣ
ವಿಧಾನಸೌಧದ ತಮ್ಮ ಕೊಠಡಿಗೆ ಬೀಗ ಜಡಿದಿರುವ ಸಿದ್ದರಾಮಯ್ಯನವರು ಇಂದು ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ, ಯಡಿಯೂರಪ್ಪನವರು ಹೊಸ ಸಫಾರಿ ಧರಿಸಿ ದೆಹಲಿಯ ವಿಮಾನ ಹತ್ತಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 6.30ಕ್ಕೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾತುಗಳು ಕಸದಬುಟ್ಟಿಗೆ ಹಾಕುವಂಥ ಡ್ರಾಮ್ಯಾಟಿಕ್ ಪರಿಸ್ಥಿತಿ ನಿರ್ಮಾಣವಾಗಿದೆ.
In Pics: ಕರ್ನಾಟಕ ಜನಾದೇಶ: ಒಂದಷ್ಟು ಕಹಿ, ಮತ್ತಷ್ಟು ಸಿಹಿ
ಕೈಗೆ ಬಂದ ತುತ್ತು ಬಾಯಿಗೆ ಬರದಿದ್ದರೆ
ಒಂದು ವೇಳೆ, ಬಿಜೆಪಿಯ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕಾಂಗ್ರೆಸ್ ಪಕ್ಷ ಜಾತ್ಯತೀತ ಜನತಾದಳದೊಡನೆ ಕೈಜೋಡಿಸಿದರೆ, ಬಿಜೆಪಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಏನು ಬೇಕಾದರೂ ಆಗಬಹುದಂಥ ಪರಿಸ್ಥಿತಿ ತಲೆದೋರಿದೆ. ಇದನ್ನು ತಡೆಗಟ್ಟಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತ್ವರಿತವಾಗಿ ಕರ್ನಾಟಕಕ್ಕೆ ದೌಡಾಯಿಸಬೇಕು. ಜೆಡಿಎಸ್ ಜೊತೆ ಕೈಜೋಡಿಸುತ್ತಾರಾ ಅಥವಾ ಜೆಡಿಎಸ್ ಶಾಸಕರನ್ನೇ ಹೈಜಾಕ್ ಮಾಡುತ್ತಾರಾ?
ಜೆಡಿಎಸ್ ಮುಖದಲ್ಲಿ ಮಂದಹಾಸ
ಇನ್ನೇನು ಎಲ್ಲ ಮುಗಿದುಹೋಯಿತು ಎಂದುಕೊಂಡಿದ್ದ ಜೆಡಿಎಸ್ ಮುಖದಲ್ಲಿ ಮಂದಹಾಸ ಮರಳಿದೆ. 40 ಕ್ಷೇತ್ರಗಳಲ್ಲಿ ಮುಂದಿರುವ ಜೆಡಿಎಸ್ ಕಿಂಗ್ ಮೇಕರ್ ಆದರೂ ಅಚ್ಚರಿಯಿಲ್ಲ. ಒಂದು ವೇಳೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಜೆಡಿಎಸ್ ಬೆಂಬಲಕ್ಕೆ ದುಂಬಾಲು ಬೀಳಲಿವೆ. ಆಗ ಕುಮಾರಸ್ವಾಮಿಯವರು ಏನು ಬೇಕಾದರೂ ಆಟವಾಡಬಹುದು.
ಅಂಕಿಸಂಖ್ಯೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ
ಮತಎಣಿಕೆ ಮುಂದುವರಿಯುತ್ತಿದ್ದಂತೆ ಅಂಕಿಸಂಖ್ಯೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಎಲ್ಲ 222 ಕ್ಷೇತ್ರಗಳ ಫಲಿತಾಂಶಗಳನ್ನು ಕರ್ನಾಟಕ ಚುನಾವಣಾ ಆಯೋಗ ಪ್ರಕಟಿಸುವವರೆಗೆ ಎಲ್ಲ ನಾಯಕರು ಗಪ್ ಚಿಪ್ ಆಗುವಂತೆ ಬೆಳವಣಿಗೆಗಳು ನಡೆಯುತ್ತಿವೆ. ಇನ್ನೇನು ಗೆಲ್ಲಬೇಕಿದ್ದ ಕ್ಷೇತ್ರಗಳಲ್ಲಿ, ಕಡೆಯ ಮತಎಣಿಕೆ ಹಂತದಲ್ಲಿ ಬಿಜೆಪಿ ಸೋಲುತ್ತಿರುವುದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿದೆ.