ಕಡೆಗೂ ಕೊರಟಗೆರೆಯಲ್ಲಿ ವಿಜಯ ಪತಾಕೆ ಹಾರಿಸಿದ ಡಾ.ಜಿ.ಪರಮೇಶ್ವರ.!
ಕರ್ನಾಟಕ ವಿಧಾನಸಭೆ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಕೊರಟಗೆರೆ ಕ್ಷೇತ್ರ ಕೂಡ ಒಂದು. ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಕಡೆಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ವಿಜಯ ಪತಾಕೆ ಹಾರಿಸಿದ್ದಾರೆ.
2013 ರ ವಿಧಾನ ಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸೋಲು ಕಂಡಿದ್ದ ಡಾ.ಜಿ.ಪರಮೇಶ್ವರ ಈ ಬಾರಿ ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಜೆ.ಡಿ.ಎಸ್ ಪಕ್ಷದ ಸುಧಾಕರ್ ಲಾಲ್ ವಿರುದ್ಧ ಡಾ.ಜಿ.ಪರಮೇಶ್ವರ ಗೆಲುವಿನ ನಗೆ ಬೀರಿದ್ದಾರೆ. 9900 ಮತಗಳ ಅಂತರದಿಂದ ಡಾ.ಜಿ.ಪರಮೇಶ್ವರ ಗೆಲುವು ಸಾಧಿಸಿದ್ದಾರೆ.
ಕಳೆದ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದ ಡಾ.ಜಿ.ಪರಮೇಶ್ವರ ಅವರನ್ನೇ ಸೋಲಿಸಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಹಾಲಿ ಶಾಸಕ ಸುಧಾಕರ್ ಲಾಲ್ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಸಾಧನೆ ಏನೂ ಮಾಡಿರಲಿಲ್ಲ. ಇದರಿಂದಾಗಿ ಈ ಬಾರಿಯ ಜನಾದೇಶ ಅವರ ವಿರುದ್ಧವಾಗಿದೆ.

ಚುನಾವಣೆಯಲ್ಲಿ ಸೋತರೂ, ಗ್ರಾಮ ವಾಸ್ತವ್ಯ ಮಾಡಿ ಜನರ ಮನ ಗೆದ್ದಿದ್ದರು ಡಾ.ಜಿ.ಪರಮೇಶ್ವರ. ಅದರ ಪರಿಣಾಮ ಇಂದಿನ ಫಲಿತಾಂಶ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಪಡೆದಿರುವ ಒಟ್ಟು ಮತಗಳು - 81598. ಇನ್ನೂ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ಪಡೆದಿರುವ ಒಟ್ಟು ಮತಗಳು - 73979. 12190 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ ಬಿಜೆಪಿ ಪಕ್ಷದ ವೈ.ಎಚ್.ಹುಚ್ಚಯ್ಯ.












Click it and Unblock the Notifications