ಉಚಿತ ಶಿಕ್ಷಣ, ವಸತಿ, ಆಹಾರ ಎಂಇಪಿ ಪ್ರಣಾಳಿಕೆ ಪ್ರಕಟ
ಬೆಂಗಳೂರು, ಏಪ್ರಿಲ್ 12: ಮಹಿಳೆಯರನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಅಖಿಲ ಭಾರತ ಮಹಿಳಾ ಎಂಪವರ್ ಮೆಂಟ್ ಪಾರ್ಟಿ(AIMEP) ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಪಕ್ಷವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತ್ಯಾತೀತ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಪಕ್ಷದ ಚಿನ್ಹೆ ವಜ್ರ ಆಗಿದೆ. ಮಾನವೀಯತೆಗಾಗಿ ನ್ಯಾಯ ಎಂಬ ಧ್ಯೇಯ ಹೊಂದಲಾಗಿದೆ ಎಂದು ಡಾ. ನೌಹೀರಾ ಶೇಖ್ ಹೇಳಿದ್ದಾರೆ.
'ಮಹಿಳಾ ಸಬಲೀಕರಣಕ್ಕಾಗಿ 224 ಕ್ಷೇತ್ರಗಳಲ್ಲಿ ಸ್ಪರ್ಧೆ'
'ನಾವು ಅಧಿಕಾರಕ್ಕೆ ಬಂದರೆ, ಬಿಪಿಎಲ್ ಕಾರ್ಡುದಾರರ ಮಕ್ಕಳಿಗೆ ಪ್ರಿಕೆಜಿಯಿಂದ ಪಿಜಿವರೆಗೂ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದ್ದಾರೆ.
ಮಿಕ್ಕಂತೆ, ರೈತರ ಸಂಪೂರ್ಣ ಸಾಲ ಮನ್ನ, ಮಹಿಳೆಯರಿಗೆ ಬಡ್ಡಿ ರಹಿತ ಸಾಲ, ರೈತರಿಗೆ ಬೆಳೆ ಬೆಳೆಯುವ ಮುನ್ನ ಮುಂಗಡ ಹಣ ನೀಡುವುದು ಮುಂತಾದ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಎಂಇಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಯೋಜನೆ
ಭ್ರಷ್ಟಾಚಾರ ತಡೆಯಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕಡ್ಡಾಯ, ಬಿಪಿಎಲ್ ಕಾರ್ಡ್ ದಾರರಿಗೆ 35 ಕೆಜಿ ಅಕ್ಕಿ ಪೂರೈಕೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಆಹಾರ ಪೂರೈಕೆ ಕ್ಯಾಂಟೀನ್ ಸ್ಥಾಪನೆ, ಉಚಿತ ಆರೋಗ್ಯ ವಿಮಾ ಸೌಲಭ್ಯ, ಎಲ್ಲಾ ಮಹಿಳೆಯರಿಗೂ ಉಚಿತ ಸ್ಯಾನಿಟರಿ ನ್ಯಾಪ್ ಕಿನ್ ಪೂರೈಕೆ.. ಮುಂತಾದ ಯೋಜನೆಗಳಿವೆ.
ನಮ್ಮ ಅಭ್ಯರ್ಥಿಗಳು 224 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ನಮ್ಮ ಪಕ್ಷದಿಂದ ಕಣಕ್ಕಿಳಿಯಲು ಒಟ್ಟು 5700 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಎಲ್ಲ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ದಲಿತ, ಲಿಂಗಾಯತ, ಮುಸ್ಲಿಂ ಹೀಗೆ ಎಲ್ಲರೂ ಇದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರ ರೈತರಿಗೆ ಮೀಸಲಾಗಿದೆ.
ಮಾನವ ಹಕ್ಕುಗಳ ಹೋರಾಟಗಾರ್ತಿ, ಉದ್ಯಮಿ ಹಾಗೂ ಹೀರಾ ಸಮೂಹದ ಸಂಸ್ಥಾಪಕಿ ಮತ್ತು ಸಿಇಒ ಡಾ.ನೌಹೀರಾ ಶೇಖ್ ಮಹಿಳೆಯರನ್ನು ಜಾತಿ, ವರ್ಗ, ಧಾರ್ಮಿಕತೆ ಮತ್ತು ಪ್ರದೇಶದ ಭಿನ್ನತೆ ಮೀರಿ ಸಬಲೀಕರಣಗೊಳಿಸುವ ಅಖಿಲ ಭಾರತೀಯ ಮಹಿಳಾ ಸಬಲೀಕರಣ ಪಕ್ಷ (ಎಐಎಂಇಪಿ) ಎಂಬ ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.