ಬಳ್ಳಾರಿ ಕದನಕಣ : ಸಿರಗುಪ್ಪ (ಎಸ್ಟಿ ಮೀಸಲು)
ಗಣಿಧಣಿಗಳ ಪಾರುಪತ್ಯ ಕಂಡಿರುವ ಬಳ್ಳಾರಿಯಲ್ಲಿ ಇನ್ನೂ ದುಡ್ಡಿನದೇ ಮೇಲಾಟವಾಗಿದ್ದರೂ ಲಿಂಗಾಯತ, ವಾಲ್ಮಿಕಿ, ಕುರುಬ, ಮುಸ್ಲಿಂ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮತಗಳನ್ನು ಬುಟ್ಟಿಗೆ ಹಾಕಿಕೊಂಡವರು ಮಾತ್ರ ಇಲ್ಲಿ ಗೆಲ್ಲಲು ಸಾಧ್ಯ. ಶ್ರೀರಾಮುಲು ಮತ್ತು ರೆಡ್ಡಿಗಳ ನಡುವೆ ಒಡಕು ಮೂಡಿದೆ ಎಂಬ ಸುದ್ದಿ, ಹಾಗು ಟಿಕೆಟ್ಗಾಗಿ ಕಾಂಗ್ರೆಸ್ಸಿನಲ್ಲಿ ಭಾರೀ ಪೈಪೋಟಿ ನಡೆಯುತ್ತಿರುವುದರಿಂದ ಈ ಬಾರಿ ಏನು ಬೇಕಾದರೂ ಸಂಭವಿಸಬಹುದು. ಕಳೆದ ಬಾರಿ ಇದ್ದ ಬಿಜೆಪಿ ಅಲೆ ಈ ಬಾರಿ ಇಲ್ಲದಿದ್ದರೂ ಹಣದ ಪ್ರಭಾವ ತುಸುವೂ ಕಡಿಮೆಯಾಗಿಲ್ಲ.
ಸಿರಗುಪ್ಪ (ಎಸ್ಟಿ ಮೀಸಲು) : ಲಿಂಗಾಯತರ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕವಾದರೂ ಲಿಂಗಾಯತ ಮತಗಳು ಇಲ್ಲಿ ಹರಿದು ಹಂಚಿ ಹೋಗುತ್ತಿವೆ. 2ನೇ ಸ್ಥಾನದಲ್ಲಿ ವಾಲ್ಮೀಕಿ ನಾಯಕ, ಕುರುಬ ಹಾಗೂ ಮುಸ್ಲಿಂ ಮತಗಳಿವೆ. ಕಳೆದ ಬಾರಿ ಬಿಜೆಪಿ ಅಲೆಯಿಂದಾಗಿ ಸೋಮಲಿಂಗಪ್ಪ ಗೆಲುವು ಕಂಡಿದ್ದರು. ಹೀಗಾಗಿ ಮತ್ತೊಮ್ಮೆ ಮರು ಆಯ್ಕೆ ಬಯಸಿ ಬಿಜೆಪಿಯಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಈ ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ.
ಆದ್ರೆ ಸೋಮಲಿಂಗಪ್ಪರ ಗೆಲುವು ಕಸಿದುಕೊಳ್ಳಲು ಶ್ರೀರಾಮುಲು ವಾಲ್ಮೀಕಿ ಸಮಾಜದ ಮತಗಳನ್ನ ಗಟ್ಟಿಯಾಗಿ ನೆಚ್ಚಿಕೊಂಡಿದ್ದಾರೆ. ಸಂಸದೆ ಜೆ ಶಾಂತಾ ಇಲ್ಲವಾದ್ರೆ ಮಾಜಿ ಡಿಸಿ ಶಿವಪ್ಪರನ್ನು ಕಣಕ್ಕೆ ಇಳಿಸಲು ಬಿಎಸ್ಆರ್ ಚಿಂತನೆ ನಡೆಸಿದೆ. ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿರುವ ಕೆಜೆಪಿ ಸಹ, ಮಾಜಿ ತಹಶೀಲ್ದಾರ್ ನರಸಿಂಹ ನಾಯಕರನ್ನು ಕಣಕ್ಕೆ ಇಳಿಸುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷ, ಬಿ.ಎಂ. ನಾಗರಾಜ ಅಥವಾ ಕಮಲಾ ಮರಿಸ್ವಾಮಿಯನ್ನ ಕಣಕ್ಕೆ ಇಳಿಸಲು ಸಜ್ಜಾಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್, ಬಿಎಸ್ಆರ್ ಕಾಂಗ್ರೆಸ್, ಬಿಜೆಪಿ ಹಾಗೂ ಕೆಜೆಪಿ ಮಧ್ಯೆ ಸಮಬಲದ ಸ್ಪರ್ಧೆ ಕಾಣಬಹುದಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications