ಶೃಂಗೇರಿ ಕ್ಷೇತ್ರ : ಧರ್ಮದ ನೆಲೆಯಲ್ಲಿ ಅಭ್ಯರ್ಥಿಗಳ ಹಣೆಬರಹ!
ತುಂಗೆ-ಭದ್ರೆಯನ್ನು ಒಡಲಲ್ಲಿ ಪ್ರಕೃತಿಯ ನೆಲೆವೀಡು, ಆದಿಗುರು ಶಂಕರರು ಸ್ಥಾಪಿಸಿದ ಶಾರದಾ ಪೀಠ, ಹರಿಹರಪುರದ ಗುರುಕುಲ, ರಂಭಾಪುರಿ ಮಠ ಸೇರಿದಂತೆ ದೇಗುಲಗಳ ಸುತ್ತ ಮುತ್ತವೇ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಸುತ್ತುತ್ತದೆ.
ಮೆಣಸಿನ ಹಾಡ್ಯ, ಬಸರಿಕಟ್ಟೆ, ಬಾಳೆಹೊನ್ನೂರು, ಜಯಪುರ, ಹೇರೂರು, ಕುಂಚೆಬೈಲು, ಮೆಣಸೆ, ಕಿಗ್ಗಾ, ಬೆಳಂದೂರು, ಅಡ್ಡಗದ್ದೆ, ಹರಿಹರಪುರ, ಕೊಪ್ಪ, ಎನ್.ಆರ್ ಪುರ ಎಲ್ಲವೂ ಹಿಂದೂ ಪರ ಮತ ಬ್ಯಾಂಕ್ ಗಳಾಗಿವೆ.
ಬಿಜೆಪಿಯಿಂದ ಮೂರು ಬಾರಿ ಗೆದ್ದಿರುವ ಡಿ.ಎನ್ ಜೀವರಾಜ್ ಅವರು ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಮ್ಮೆ ಮೋದಿ ಅಲೆ, ಆಡಳಿತ ವಿರೋಧಿ ಅಲೆ ಜೀವರಾಜ್ ಬೆಂಬಲಕ್ಕೆ ನಿಲ್ಲಬಹುದು.
ಸಮಸ್ಯೆಗಳು: ವಾಣಿಜ್ಯ ಚಟುವಟಿಕೆಗಳಿಗೆ ಅಕ್ಕ ಪಕ್ಕದ ರಾಜ್ಯಗಳೇ ಆಧಾರ. ಶಿವಮೊಗ್ಗ, ಕಾರ್ಕಳವೇ ಇಲ್ಲಿನವರಿಗೆ ಕೈಗೆಟಕುವ ತಾಣಗಳು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಕ್ಕಿಲ್ಲ. ದೇಗುಲ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಕ್ಷೇತ್ರ್. ಸಾರಿಗೆ ಸಂಪರ್ಕವೂ ಅಷ್ಟಕಷ್ಟೆ. ಖಾಸಗಿ ವಲಯದ ಸಹಕಾರ ಸಾರಿಗೆಯೇ ಇಂದಿಗೂ ಕ್ಷೇತ್ರ ಜೀವಾಳ.

ನಕ್ಸಲ್ ಸಮಸ್ಯೆ ಸದ್ಯಕ್ಕೆ ಹತೋಟಿಯಲ್ಲಿದೆ. ಸಂಪನ್ಮೂಲಗಳ ಬಳಕೆ ಮಾಡಲು ಮಾರ್ಗದರ್ಶನ ಕೊರತೆ ಇದೆ. ಜತೆಗೆ ಇರುವ ತೋಟ, ಗದ್ದೆ, ಜಮೀನು ಪರ ರಾಜ್ಯದವರ ಪಾಲಾಗುತ್ತಿದೆ. ಕ್ಷೇತ್ರಕ್ಕೆ ಇದ್ದ ಪಾವಿತ್ರ್ಯತೆ, ವೈವಿಧ್ಯತೆ ಕ್ಷೀಣವಾಗುತ್ತಿದೆ. ಸಣ್ಣ ಕೈಗಾರಿಕೆಗೆ ಒತ್ತು ನೀಡದ ಕಾರಣ, ಆರ್ಥಿಕ ಬೆಳವಣಿಗೆ ಇನ್ನೂ ಆಗಿಲ್ಲ. ಧಾರ್ಮಿಕ ಕೇಂದ್ರವಾಗಿ ಮಾತ್ರ ಕ್ಷೇತ್ರವನ್ನು ಕಾಣುತ್ತಿರುವುದು ಪೂರಕ ಹಾಗೂ ಮಾರಕ ಅಂಶಗಳಾಗಿವೆ.
2013ರಲ್ಲಿ ಬಿಜೆಪಿಯ ಡಿ.ಎನ್ ಜೀವರಾಜ್ ಅವರು 58,402 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ಸಿನ ಪ್ರತಿಸ್ಪರ್ಧಿ ಟಿ.ಡಿ ರಾಜೇಗೌಡ ಅವರು 54,950 ಮತಗಳನ್ನು ಪಡೆದಿದ್ದರು. ಡಿ. ಬಿ ಚಂದ್ರೇಗೌಡ ಹಾಗೂ ಜೀವರಾಜ್ ನಡುವಿನ ಪೈಪೋಟಿ ನೋಡಿದ್ದ ಶೃಂಗೇರಿಯ ಜನತೆ ಈ ಬಾರಿ ಯಾರನ್ನು ಗೆಲ್ಲಿಸುತ್ತಾರೋ ಶಾರದಾಂಬೆಗೆ ಗೊತ್ತು.











Click it and Unblock the Notifications