ಶಿರಸಿ-ಸಿದ್ದಾಪುರ ಕ್ಷೇತ್ರ: ಯಾರಿಗೊಲಿಯುವಳೋ ಶ್ರೀ ಮಾರಿಕಾಂಬೆ!
ಸರ್ವಋತುವಿನಲ್ಲೂ ಹಚ್ಚ ಹಸಿರಲ್ಲೇ ಕಂಗೊಳಿಸುವ ಶಿರಸಿ ಮತ್ತು ಸಿದ್ದಾಪುರ ಎರಡೂ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ದಟ್ಟ ಕಾಡುಗಳಿಗೆ ಹೆಸರುವಾಸಿಯಾದ ಈ ತಾಣದಲ್ಲಿ ಅದೆಷ್ಟು ಜಲಪಾಗಳಿವೆಯೋ ಲೆಕ್ಕವಿಲ್ಲ. ಶಿರಸಿಯ ಶ್ರೀ ಮಾರಿಕಾಂಬ ದೇವಸ್ಥಾನ ವಿಶ್ವ ಪ್ರಸಿದ್ಧಿ ಪಡೆದಿದೆ. ಪ್ರತಿ 2 ವರ್ಷಕ್ಕೊಮ್ಮೆ 8 ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬ ಜಾತ್ರೆ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಜಾತ್ರೆ ಎಂಬ ಪ್ರಸಿದ್ಧಿ ಪಡೆದಿದೆ.
ಶಿರಸಿ ಮತ್ತ ಸಿದ್ದಾಪುರ ಭಾಗದಲ್ಲಿ ಅಡಿಕೆ ಬೆಳಗಾರರೇ ಈ ಭಾಗದ ರಾಜಕೀಯದಲ್ಲೂ ನಿರ್ಣಾಯಕ ಸ್ಥಾನ ವಹಿಸುತ್ತಾರೆಂದರೆ ತಪ್ಪಿಲ್ಲ. ಅಡಿಕೆ ಬೆಳೆ ಮತ್ತು ಮಾರಾಟವೇ ಈ ಭಾಗದ ಜನರ ಆರ್ಥಿಕ ಬೆನ್ನೆಲುಬು. ಅಡಿಕೆ ತೋಟಗಳು, ಕಾಡು ಹಾಗೂ ಜಲಪಾತಗಳಿಂದ ಸುತ್ತುವರಿಯಲ್ಪಟ್ಟ ಈ ತಾಣದಲ್ಲಿ ಕನ್ನಡ, (ಹವ್ಯಕ ಕನ್ನಡ, ಹವಿಗನ್ನಡ), ಕೊಂಕಣಿ, ಉರ್ದು, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದಾರೆ. ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡ ಮತ್ತು ಕೊ೦ಕಣಿ.
ಈ ಊರಿನ ಸನಿಹ ರಮಣೀಯ ಸ್ಥಳಗಳಾದ ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಮೋರೆಗಾರ ಜಲಪಾತ, ಉಂಚಳ್ಳಿ ಜಲಪಾಯತ, ಕುಮುಟಾಯಿಂದ ಶಿರಸಿಗೆ ಹೊಗುವ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಆಕರ್ಷಣೀಯ. ಇಲ್ಲಿ ಅಡಿಕೆಯೊಂದಿಗೆ ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂ ಸಹ ಬೆಳೆಯಲಾಗುತ್ತದೆ. ಇಲ್ಲಿ, ಶೆ. 79 ರಷ್ಟು ಜನರು ಸಾಕ್ಷರರು.

ಈ ಕ್ಷೇತ್ರದಿಂದ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪರ್ಧಿಸುವುದು ಖಚಿತ. ಆಕ್ರಮಣಕಾರಿಯಲ್ಲದ, ಮೃದು ಸ್ವಭಾವದ ಕಾಗೇರಿಯವರು ಈಗಾಗಲೇ ಹಲವು ಬಾರಿ ಶಾಸಕರಾಗಿಯೂ, ಮಂತ್ರಿಯಾಗಿಯೂ ಮೆರೆದಿದ್ದಾರೆ. ಆದರೆ ಅವರಿಂದ ಜಿಲ್ಲೆಗೆ ಹೆಚ್ಚಿನ ಉಪಯೋಗವಾಗಿಲ್ಲ. ಆದ್ದರಿಂದ ಬೇರೆಯವರಿಗೆ ಅವಕಾಶ ನೀಡಬೇಕೆಂಬ ಮಾತೂ ಕೇಳಿಬರುತ್ತಿದೆ.
ರಾಮಕೃಷ್ಣ ಹೆಗಡೆಯವರ ಕುಟುಂಬದ ಕುಡಿ ಶಶಿಭೂಷಣ್ ಹೆಗಡೆ ಅವರಿಗೆ ಜೆಡಿಎಸ್ ನಿಂದ ಟಿಕೇಟ್ ಸಿಗುವುದೂ ಬಹುತೇಕ ಖಚಿತವಾಗಿದ್ದು, ಇಬ್ಬರೂ ಹವ್ಯಕ ಸಮುದಾಯದವರೇ ಆಗಿರುವುದರಿಂದ ಮತಗಳು ವಿಭಜನೆ ಆಗುವುದು ಖಚಿತ. ಅದೂ ಅಲ್ಲದೆ ಕಳೆದ ಬಾರಿ ಕಾಗೇರಿಯವರಿಗೆ ಶಶಿಭೂಷಣ್ ಹೆಗಡೆ ಪ್ರಬಲ ಪ್ರತಿಸ್ಪರ್ಧೆ ನೀಡಿದ್ದರಿಂದ ಈ ಬಾರಿ ಜೆಡಿಎಸ್ ನ ಶಶಿಭೂಷಣ್ ಹೆಗಡೆಯತ್ತಲೂ ಇಲ್ಲಿನ ಜನರು ಹೊರಳಿದರೆ ಅಚ್ಚರಿಯೇನಿಲ್ಲ. ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕರ ಹೆಸರೂ ಕೇಳಿಬರುತ್ತಿದ್ದು, ಈ ಭಾಗದಲ್ಲಿ ಹವ್ಯಕ, ಈಡಿಗ ಮತ್ತು ಕೊಂಕಣಿ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ.
2013 ರ ಚುನಾವಣೆಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 42854 ಮತಗಳಿಂದ ಗೆಲುವು ಸಾಧಿಸಿದ್ದರು.












Click it and Unblock the Notifications