ಕುಮಟಾ-ಹೊನ್ನಾವರ ಕ್ಷೇತ್ರ: ಬೀಚುಗಳ ಸ್ವರ್ಗದಲ್ಲಿ ಗೆಲ್ಲುವವರ್ಯಾರು?
ವರ್ಷಪೂರ್ತಿ ಬಿಸಿಲ ಝಳದಲ್ಲೇ ಮೀಯುತ್ತಿದ್ದರೂ ಸುಂದರ ಕಡಲತಡಿ, ಶರಾವತಿಯ ಬಳುಕಿನ ಹರಿವಿನಿಂದ ಕುಮಟಾ ಮತ್ತು ಹೊನ್ನಾವರ ಕ್ಷೇತ್ರಗಳು ದೇಶ-ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.
ಕಾರವಾರ ಕ್ಷೇತ್ರ: ಕಡಲ ಕಿನಾರೆ ಒಲಿಯುವುದು ಯಾರಿಗೆ?
ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕುಮಟಾ, ಹೊನ್ನಾವರದ ಕೊಡುಗೆ ಅನನ್ಯವಾದುದು. ತೆಂಗು, ಅಡಿಕೆ ಇಲ್ಲಿನ ಪ್ರಮುಖ ಬೆಳೆ. ಕಾರವಾರದಿಂದ 60 ಕಿ.ಮಿ ದೂರದಲ್ಲಿರುವ ಈ ಕರಾವಳಿ ಪಟ್ಟಣ ಪ್ರಕೃತಿ ಸೊಬಗಿಗೆ ಹೆಸರುವಾಸಿ. ಇಲ್ಲಿನ ಓಂ ಬೀಚ್ ಅಂತೂ ವಿದೇಶಿಯರ ನೆಚ್ಚಿನ ತಾಣ. ಶಾ೦ತೇರಿ ಕಾಮಾಕ್ಷಿ ದೇವಾಲಯ, ಮಹಾಲಸ ದೇವಾಲಯ, ಹೆಗಡೆ, ಬಾಡಾದ ಅಮ್ಮನವರ ದೇವಾಲಯಗಳು ಪ್ರಸಿದ್ಧಿಪಡೆದಿದೆ. ಧಾರೇಶ್ವರದ ಧಾರಾನಾಥ ದೇವಾಲಯ ಕುಮಟಾದಿ೦ದ 8 ಕಿ.ಮೀ ದೂರದಲ್ಲಿದ್ದು, ಇಲ್ಲಿ ಶಿವನ ದೇವಾಲಯ ಗೋಕರ್ಣದ ಆತ್ಮಲಿ೦ಗದ ಒಂದು ಭಾಗ ಎಂದು ಹೇಳಲಾಗುತ್ತದೆ. ಪಾ೦ಡವರು ಒ೦ದೇ ರಾತ್ರಿಯಲ್ಲಿ ಕಟ್ಟಿದ ದೇವಾಲಯಗಳಲ್ಲಿ ಇದೂ ಒಂದು ಎಂಬ ಪ್ರತೀತಿ ಇದೆ.
ಬ್ರಿಟಿಷರ ಕಾಲದಲ್ಲಿ ವ್ಯಾಪಾರ ವಹಿವಾಟಿನಲ್ಲೂ ಈ ಕ್ಷೇತ್ರ ಹೆಸರುವಾಸಿಯಾಗಿತ್ತು. ವಿಶೇಷವಾಗಿ ಹತ್ತಿ, ಗಂಧದ ಕೆತ್ತನೆ ಕೆಲಸ ಪ್ರಮುಖವಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿ೦ದ ಇಂಗ್ಲೆಂಡಿಗೆ ಸರಬರಾಜಾಗುತ್ತಿದ್ದ ಹತ್ತಿಯು 'ಕುಮಟಾ ಹತ್ತಿ'ಯೆಂದೇ ಪ್ರಸಿದ್ಧವಾಗಿತ್ತು.
ಇಲ್ಲಿನ ಪ್ರಮುಖ ಬೆಳೆ ಭತ್ತ, ತೆಂಗು ಮತ್ತು ಅಡಿಕೆಯಾಗಿದ್ದು ಇದರ ಜೊತೆ ಗೇರು, ವೀಳ್ಯದೆಲೆ, ತರಕಾರಿಗಳು ಪ್ರಮುಖ ವಾಣಿಜ್ಯ ಬೆಳೆಯಾಗಿವೆ. ವನ್ನಳ್ಳಿ ಮತ್ತು ಅಳ್ವೇಕೋಡಿ ಗ್ರಾಮಗಳಲ್ಲಿ ಬೆಳೆಯಲಾಗುವ ವಿಶಿಷ್ಟವಾದ ಸಿಹಿ ಈರುಳ್ಳಿಯನ್ನು ಕರ್ನಾಟಕದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ಸುಂದರವಾದ ಸಮುದ್ರ ತೀರಗಳಿಂದ, ಪುರಾಣ ಪ್ರಸಿಧ್ಧ ದೇವಾಲಯಗಳು, ಮನಮೋಹಕ ಜಲಪಾತಗಳು, ಹಸಿರು ಪರ್ವತಗಳಿಂದ ಕೂಡಿರುವ ಕುಮಟಾ ಪ್ರವಾಸಿಗರ ಉತ್ತಮ ಆಯ್ಕೆ. ಬೃಹದಾಕಾರದ ಶಿಲಾರೂಪಗಳಿರುವ ಯಾಣ, ಶಿವನ ಆತ್ಮಲಿಂಗವಿರುವ ಸ್ಥಳ ಗೋಕರ್ಣ, ಮಿರ್ಜಾನ್ ಕೋಟೆಗಳು ಕುಮಟಾದ ಪ್ರಮುಖ ಆಕರ್ಷಣೆಗಳು. ಶಿವನ ಆತ್ಮಲಿಂಗವಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯ ಸುಮಾರು 30 ಕಿ.ಮಿ ದೂರದಲ್ಲಿದೆ. ರಾಣಿ ಚೆನ್ನಭೈರಾದೇವಿ ನಿರ್ಮಿಸಿದ ಮಿರ್ಜಾನ್ ಕೋಟೆ ಸುಮಾರು 12 ಕಿ.ಮಿ ದೂರದಲ್ಲಿದೆ. ಭಸ್ಮಾಸುರನನ್ನು ವಿಷ್ಣು ಕೊಂದ ಸ್ಥಳವಾದ ಯಾಣ 20 ಕಿಮೀ ದೂರದಲ್ಲಿದೆ.
ಈ ಕ್ಷೇತ್ರದ ರಾಜಕೀಯ ಇತಿಹಾಸ ಕೆಣಕಿದರೆ ಕಾಂಗ್ರೆಸ್ ಶಾಸಕಿ ಶಾರದಾ ಶೆಟ್ಟಿ ಜನತೆಯ ವಿಶ್ವಾಸ ಉಳಿಸಿಕೊಳ್ಳಲು ಭಾರಿ ಸರ್ಕಸ್ ಮಾಡುತ್ತಿದ್ದು, ಬಿಜೆಪಿ ಕೂಡ ಬಲಯುತವಾಗಿದೆ. ಬಿಜೆಪಿ ವತಿಯಿಂದ ಸಂಸದ ಅನಂತ ಕುಮಾರ್ ಹೆಗಡೆಯಿಂದ ಶುರುವಾಗಿ ಹಲವಾರು ಹವ್ಯಕರ ಹೆಸರುಗಳು ಓಡಾಡುತ್ತಿವೆ. ಹಾಗೆಯೇ ಕೊಂಕಣಿ ಸಮಾಜದಿಂದಲೂ ಹಲವು ಹೆಸರುಗಳು ಕಾಣುತ್ತಿವೆ. ಟಿಕೇಟ್ ಹಂಚಿಕೆಯಲ್ಲಿ ಗೊಂದಲದ ಸಂಭವ ಹೆಚ್ಚು. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಶಾರದಾ ಮೋಹನ್ ಶೆಟ್ಟಿ 36756 ಮತಗಳನ್ನು ಪಡೆದು ಜೆಡಿಎಸ್ ನ ದಿನಕರ ಕೇಶವ ಶೆಟ್ಟಿ ಅವರನ್ನು ಪರಾಭವಗೊಳಿಸಿದ್ದರು.