ಕೃಷ್ಣರಾಜ ಕ್ಷೇತ್ರ : ಬಿಜೆಪಿ- ಜೆಡಿಎಸ್ ನಡುವೆ ಪೈಪೋಟಿ
ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ನ ಎಂ.ಕೆ. ಸೋಮಶೇಖರ್. ಕಳೆದ ಬಾರಿಯ ಚುನಾವಣೆಯಲ್ಲಿ ಇಲ್ಲಿ ಸೋತ ಪ್ರಮುಖ ಅಭ್ಯರ್ಥಿಯೆಂದರೆ, ಬಿಜೆಪಿಯ ರಾಮ್ ದಾಸ್. ಇಲ್ಲಿ ಲಿಂಗಾಯತರು, ಬ್ರಾಹ್ಮಣ ಮತಗಳೇ ನಿರ್ಣಾಯಕ. ರಾಮದಾಸ್ ಅವರ ಪ್ರೇಮ ಪ್ರಕರಣ ಅವರಿಗೆ ಹಿನ್ನಡೆ ತಂದಿದ್ದರೆ, ಸೋಮಶೇಖರ್ ಅವರು ನಕಲಿ ಜಾತಿಪತ್ರ ನೀಡಿದ್ದಾರೆಂಬ ಪ್ರಕರಣ ಅವರನ್ನು ಸಂಕಟಕ್ಕೆ ತಳ್ಳಿದೆ. ಪ್ರೇಮಕುಮಾರಿ ಅವರು ಸ್ಪರ್ಧಿಸುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಹೀಗಾಗಿ, ಕಳೆದ ಬಾರಿ ಕೆಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಎಚ್.ವಿ.ರಾಜೀವ್ ಅವರು ಟಿಕೆಟ್ ಕೊಡಿ ಎಂದು ಯಡಿಯೂರಪ್ಪನವರಲ್ಲಿ ಬೇಡಿಕೆಯಿಟ್ಟಿದ್ದಾರೆ. ಅವರ ಮಾತು ಕೇಳಿ ಇಲ್ಲಿ ರಾಮ್ ದಾಸ್ ಅವರಿಗೆ ಟಿಕೆಟ್ ನೀಡದಿದ್ದರೆ, ರಾಮ್ ದಾಸ್ ಅವರು ಜೆಡಿಎಸ್ ಸೇರುತ್ತಾರೆಂಬ ವದಂತಿಗಳು ದಟ್ಟವಾಗಿವೆ. ದಳಕ್ಕೂ ಇಲ್ಲಿ ಒಬ್ಬ ದೊಡ್ಡ ವ್ಯಕ್ತಿ ಬೇಕಿರುವುದರಿಂದ ಈ ಅವಕಾಶ ಬರಲೆಂದು ಅದೂ ಹಾತೊರೆಯುತ್ತಿದೆ.
ಬಿಜೆಪಿ- ಜೆಡಿಎಸ್ ನದ್ದೇ ಜೋರು ಪೈಪೋಟಿ
ಕ್ಷೇತದಲ್ಲಿ ಒಟ್ಟು 2,39,192 ಮತದಾರರಿದ್ದು, ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಮಹಿಳೆಯರು: 1,20,618 ಮಂದಿ ಹಾಗೂ ಪುರುಷರು: 1,18,574 ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಜಾತೀವಾರು ಲೆಕ್ಕದಲ್ಲಿ ಬ್ರಾಹ್ಮಣರು ಮೊದಲ ಸ್ಥಾನದಲ್ಲಿದ್ದಾರೆ. ಸುಮಾರು 55-58 ಸಾವಿರ ಮಂದಿ ಬ್ರಾಹ್ಮಣ ಸಮುದಾಯದವರಿದ್ದಾರೆ. ನಂತರ ಪರಿಶಿಷ್ಟ ಜಾತಿ ಸಮುದಾಯ ಬರಲಿದ್ದು 40 ಸಾವಿರ ಮಂದಿ ಇದ್ದಾರೆ.
ಉಳಿದಂತೆ ವೀರಶೈವರು 32 ಸಾವಿರ, ಕುರುಬರು 25-28 ಸಾವಿರ, ನಾಯಕರು 10 ಸಾವಿರ, ಒಕ್ಕಲಿಗರು 15 ಸಾವಿರ, ಅಲ್ಪಸಂಖ್ಯಾತರು 8 ಸಾವಿರ, ಮರಾಠರು 5 ಸಾವಿರ, ಜೈನರು 6 ಸಾವಿರ, ತಮಿಳರು 3 ಸಾವಿರ, ಇತರ ಸಮುದಾಯಗಳು 35 ಸಾವಿರ ಇದ್ದಾರೆ.
2013 ರ ಫಲಿತಾಂಶ ವಿಶ್ಲೇಷಣೆ:
* 27 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 2 ರಿಜೆಕ್ಟ್, 6 ಮಂದಿ ವಿಥ್ ಡ್ರಾ ಮಾಡಿಕೊಂಡರು. 19 ಮಂದಿ ಸ್ಪರ್ಧಿಸಿದ್ದು, 17 ಮಂದಿ ಠೇವಣಿ ಕಳೆದುಕೊಂಡರು.
* ಶೇ 59.13 ರಷ್ಟು ಮತದಾನವಾಗಿತ್ತು. 102 ಮತಗಳು ರಿಜೆಕ್ಟ್ ಆಗಿದ್ದು, 127812 ಮತಗಳ ಪೈಕಿ ಎಂಕೆ ಸೋಮಶೇಖರ್ ಅವರು 52,611 ಮತಗಳನ್ನು ಗಳಿಸಿದರೆ, ಎಸ್ .ಎ ರಾಮದಾಸ್ 46,546 ಮತ ಪಡೆದರು. 6,065 ಮತಗಳ (ಶೇ 4.75) ಅಂತರದಿಂದ ಕಾಂಗ್ರೆಸ್ಸಿನ ಅಭ್ಯರ್ಥಿ ಎಂ.ಕೆ ಸೋಮಶೇಖರ್ ಜಯಭೇರಿ ಬಾರಿಸಿದರು.
ಟಿಕೆಟ್ ರಾಜಕೀಯ:
ಕೃಷ್ಣರಾಜ ಕ್ಷೇತ್ರ ಹೊಸದಾಗಿ ರಚನೆಯಾದ ನಂತರ ಈವರಗೆ ಎಸ್.ಎ.ರಾಮದಾಸ್ ಒಬ್ಬರೇ ಮೂರು ಬಾರಿ ಆಯ್ಕೆಯಾಗಿರುವ ಅಭ್ಯರ್ಥಿಯಾಗಿದ್ದಾರೆ. ಉಳಿದಂತೆ ಎಚ್.ಗಂಗಾಧರನ್ ಹಾಗೂ ಎಂ.ಕೆ.ಸೋಮಶೇಖರ್ ಅವರು ತಲಾ 2 ಬಾರಿ ಚುನಾಯಿತರಾಗಿದ್ದಾರೆ. ಡಿ.ಸೂರ್ಯನಾರಾಯಣ (ಕಾಂಗ್ರೆಸ್), ವೇದಾಂತ ಹೆಮ್ಮಿಗೆ (ಜನತಾ ಪಕ್ಷ), ಕೆ.ಎನ್.ಸೋಮಸುಂದರಂ (ಕಾಂಗ್ರೆಸ್) ತಲಾ ಒಂದು ಬಾರಿ ಆಯ್ಕೆಯಾಗಿದ್ದಾರೆ.
ಜಾತ್ಯತೀತ ಜನತಾದಳದಿಂದ ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಅವರಿಗೆ ಟಿಕೆಟ್ ನೀಡಿದ್ದು, ಪಕ್ಷದಲ್ಲಿ ಇವರಿಗೆ ಯಾವುದೇ ಪೈಪೋಟಿ ಇಲ್ಲವಾಗಿದೆ. ಕೆ.ವಿ.ಮಲ್ಲೇಶ್ ಅವರು ಚುನಾವಣಾ ಪ್ರಚಾರವನ್ನು ಬಿರುಸಿನಿಂದ ಆರಂಭಿಸಿದ್ದಾರೆ.