ಕ್ಷೇತ್ರ ಪರಿಚಯ: ಜೇವರ್ಗಿಯಲ್ಲಿ 'ಅಜೇಯ' ಧರಂ ಸಿಂಗ್?
ಕಲಬುರಗಿ ಜಿಲ್ಲಾ ಕೇಂದ್ರದಿಂದ 43 ಕಿಲೋಮೀಟರ್ ದೂರದಲ್ಲಿರುವ ತಾಲೂಕು ಕೇಂದ್ರ ಜೇವರ್ಗಿ. ಸಣ್ಣ ವ್ಯಾಪ್ತಿಯನ್ನು ಹೊಂದಿದ ತಾಲೂಕು ಇದು. ಈ ಹೆಸರಿನ ಜತೆ ಮಾಜಿ ಮುಖ್ಯಮಂತ್ರಿ, ದಿವಂಗತ ಧರಂ ಸಿಂಗ್ ಹೆಸರೂ ತಳುಕು ಹಾಕಿಕೊಂಡೇ ಬಂದಿದೆ. ಅದಕ್ಕೆ ಕಾರಣ ಈ ಕ್ಷೇತ್ರದ ಜನರು 7 ಬಾರಿ ಅವರನ್ನು ಎತ್ತಿ ಆಡಿಸಿದ್ದು.
ಚಿಣಗೇರಿ ಹೊಳೆಯ ಎಡದಂಡೆಯ ಮೇಲಿರುವ ಕಡಕೋಳ ಮಡಿವಾಲೇಶ್ವರ ಮಠ, ಚೌಡೇಶ್ವರಿಯ ಜಾತ್ರೆಗೆ ಪ್ರಸಿದ್ಧಿ ಪಡೆದಿರುವ ಮಳ್ಳಿ ಈ ಜೇವರ್ಗಿ ತಾಲೂಕಿನಲ್ಲಿ ಬರುತ್ತವೆ. ಒಂದಷ್ಟು ಸಕ್ಕರೆ ಕಾರ್ಖಾನೆಗಳೂ ಈ ತಾಲೂಕಿನಲ್ಲಿವೆ.
ಈ ಕ್ಷೇತ್ರದ ರಾಜಕೀಯ ಇತಿಹಾಸ ಕೆದಕಿದರೆ ಜೇವರ್ಗಿಯ ನೆಲೋಗಿ ಗ್ರಾಮದಲ್ಲಿ ಜನಿಸಿದ ಧರಂ ಸಿಂಗ್ ರ ಹೆಸರೇ ಎಲ್ಲೆಲ್ಲೂ ರಾರಾಜಿಸುತ್ತದೆ. ಕಲಬುರಗಿ ಜಿಲ್ಲೆಯ ಮೇಲೂ ಸಾಕಷ್ಟು ಪ್ರಭಾವ ಹೊಂದಿದ್ದ ಧರಂ ಸಿಂಗ್ 1978ರಲ್ಲಿ ಮೊದಲ ಬಾರಿಗೆ ಜೇವರ್ಗಿ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶಿಸಿದರು. ನಂತರ ಅವರು ತಿರುಗಿ ನೋಡಿದವರಲ್ಲ.
ಅಲ್ಲಿಂದ ನಿರಂತರವಾಗಿ 2004ರವರೆಗೆ 7 ಬಾರಿ ಈ ಕ್ಷೇತ್ರದಲ್ಲಿ ಅವರು ವಿಜಯ ಪತಾಕೆ ಹಾರಿಸಿದ್ದರು. ಜೇವರ್ಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗಲೇ 2004ರ ಮೇ ನಿಂದ 2006ರ ಜನವರಿವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನೂ ಅವರು ಏರಿದ್ದರು.
ಆದರೆ ವಿಚಿತ್ರವೆಂದರೆ ಸತತ 7 ಗೆಲುವು ಜತೆಗೆ 1980ರಲ್ಲೊಮ್ಮೆ ಲೋಕಸಭೆಗೂ ಕಲಬುರಗಿಯಿಂದ ಪ್ರವೇಶಿಸಿ ಸೋಲರಿಯದ ರಾಜಕಾರಣಿಯಾಗಿದ್ದ ಧರಂ ಸಿಂಗ್ 2008ರಲ್ಲಿ ಮಾತ್ರ ಸೋಲುಂಡರು! ಅದೂ 70 ಮತಗಳ ಅಂತರದಲ್ಲಿ!!
ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಎರಡು ವರ್ಷಗಳ ತರುವಾಯ ನಡೆದ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ನಾರೀಬೋಳ ವಿರುದ್ಧ ಅವರು ಸೋಲಬೇಕಾಯಿತು.

ಮುಂದೆ ಧರಂ ಸಿಂಗ್ ಬೀದರ್ ನಿಂದ ಲೋಕಸಭೆ ಪ್ರವೇಶಿಸಿದರು, 2013ರಲ್ಲಿ ಅವರ ಮಗ ಅಜಯ್ ಸಿಂಗ್ ಇಲ್ಲಿ ಚುನಾವಣೆಗೆ ನಿಂತು 36 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿಯ ದೊಡ್ಡಪ್ಪಗೌಡರಿಗೆ ಸೋಲುಣಿಸಿದ್ದರು. ಹೀಗೆ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿತ್ತು
ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಬಲವಾಗಿದೆ. ಜತೆಗೆ ಧರಂ ಸಿಂಗ್ ನಿಧನವಾದರೂ ಕುಟುಂಬ ಜೇವರ್ಗಿಯಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಜೆತೆಗೆ ಜೆಡಿಎಸ್, ಬಿಜೆಪಿಗೆ ನೆಲೆ ಇದೆಯಾದರೂ ಗೆಲುವಿನ ಸಮೀಪ ಬರುವುದು ಕಷ್ಟ. ಹಾಗಾಗಿ ಈ ಬಾರಿಯೂ ಅಜಯ್ ಸಿಂಗ್ ಗೆಲುವನ್ನು ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಆದರೆ ಒಂದೇ ಒಂದು.. ಧರಂ ಸಿಂಗ್ ಈ ಕ್ಷೇತ್ರದಿಂದ ಮುಖ್ಯಮಂತ್ರಿಯಾದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವ ಅಭಿವೃದ್ಧಿಗಳೂ ನಡೆದಿಲ್ಲ. ಶೈಕ್ಷಣಿಕ ಪ್ರಗತಿಯಲ್ಲಂತೂ ತಾಲೂಕು ಭಾರೀ ಹಿಂದುಳಿದಿದೆ. ರಾಷ್ಟ್ರೀಯ ಸಾಕ್ಷರತೆ ಸರಾಸರಿ ಶೇ. 59.5ಕ್ಕಿಂತಲೂ ಕನಿಷ್ಟ ಅಂದರೆ ಶೇಕಡಾ 53 ಸಾಕ್ಷರತೆಯನ್ನು ತಾಲೂಕು ಹೊಂದಿರುವುದು ನಿಜಕ್ಕೂ ಅವಮಾನಕರ.












Click it and Unblock the Notifications