ಕ್ಷೇತ್ರ ಪರಿಚಯ : ಹೊಸದುರ್ಗ, ಹೊಸ ಫಲಿತಾಂಶದ ನಿರೀಕ್ಷೆ
ವೇದಾವತಿ ನದಿ ಹಿನ್ನೀರಿನ ಪ್ರದೇಶದಲ್ಲಿರುವ ಹೊಸದುರ್ಗ ಶೇ 72ರಷ್ಟು ಸಾಕ್ಷರತೆ ಹೊಂದಿದೆ. ಕೃಷಿಯೇ ಜೀವಾಳವಾಗಿರುವ ಈ ಕ್ಷೇತ್ರದಲ್ಲಿ ಸಿಮೆಂಟ್, ತೆಂಗಿನ ಕಾಯಿ ಕಾರ್ಖಾನೆ ಬಿಟ್ಟರೆ ಮತ್ತೆ ಯಾವ ಕೈಗಾರಿಕೆಗಳಿಲ್ಲ. ಖನಿಜಭರಿತ ಭೂಮಿಯಾದರೂ ಫಲವತ್ತತೆ ಬಳಕೆಯಾಗುತ್ತಿಲ್ಲ.
ಹತ್ತು ಹಲವು ಪ್ರೇಕ್ಷಣೀಯ ಕ್ಷೇತ್ರಗಳನ್ನು ಹೊಸದುರ್ಗ ಹೊಂದಿದೆ. ಈ ಪೈಕಿ ಹಾಲು ರಾಮೇಶ್ವರದ ಉದ್ಭವ ಗಂಗೆಯಲ್ಲಿ ಬೇಡಿಕೆ ಸಲ್ಲಿಸಿದರೆ, ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತದೆ ಎಂಬ ಪ್ರತೀತಿಯಿದೆ. ರಾಮಾಯಣ ಕಾಲದ ದಶರಥ ರಾಮೇಶ್ವರ, ಜಾನಕಲ್ಲು, ಕೆಲ್ಲೋಡು ಜೈನಕ್ಷೇತ್ರ ಬಾಗೂರು, ಹೆಗ್ಗೆರೆ ಮುಂತಾದ ಕ್ಷೇತ್ರಗಳಿವೆ.
ಇಲ್ಲಿ ಸದ್ಯಕ್ಕೆ ಶಾಸಕರಾಗಿರುವುದು ಕಾಂಗ್ರೆಸ್ ಪಕ್ಷದ ನಾಯಕ ಎಂ. ಗೋವಿಂದಪ್ಪ. ಈ ಹಿಂದೆ ಈ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಪ್ರಾಬಲ್ಯ ಸಾಧಿಸಿದ್ದರು.

ಬಿಜೆಪಿ-ಜೆಡಿಎಸ್ ನ ಟ್ವೆಂಟಿ-ಟ್ವೆಂಟಿ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್, ಆ ಕ್ಷೇತ್ರದಲ್ಲಿ ಒಂದಿಷ್ಟು ಒಳ್ಳೆ ಕೆಲಸ ಮಾಡಿದ ಉದಾಹರಣೆಗಳಿಗಿಂತ ವೈಯಕ್ತಿಕವಾಗಿ ಹಲವಾರು ಜನರಿಗೆ ನೆರವಾದ ಮಾತುಗಳು ಕೇಳಿಬರುತ್ತವೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯಲು ಅವರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಭಾರೀ ಪ್ರಾಬಲ್ಯ ಗಳಿಸಿರುವ ಬಿ.ಜಿ ಗೋವಿಂದಪ್ಪ ಅವರಿಗೆ, ಗೂಳಿಹಟ್ಟಿ ಶೇಖರ್ ಅವರು ಮುಂದಿನ ಚುನಾವಣೆಯಲ್ಲಿ ಪೈಪೋಟಿಯೊಡ್ಡುವ ಸಾಧ್ಯತೆಗಳಿವೆ.
ಇವರಿಬ್ಬರಲ್ಲದೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆಎಸ್ ನವೀನ್, ಲಿಂಗಮೂರ್ತಿ ಕೂಡಾ ಟಿಕೆಟ್ ಆಕಾಂಕ್ಷಿಗಳು. ಜೆಡಿಎಸ್ ನಿಂದ ಮೀನಾಕ್ಷಿ ನಂದೀಶ್, ಉಪಾಧ್ಯಕ್ಷ ಶಿವಮೂರ್ತಿ ಅವರು ಸ್ಪರ್ಧೆ ಬಯಸಿದ್ದಾರೆ.
2013ರ ಫಲಿತಾಂಶ: 2013ರಲ್ಲಿ ಶೇ 79.94ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಬಿ.ಜಿ ಗೋವಿಂದಪ್ಪ 58,010 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗೂಳಿಹಟ್ಟಿ ಶೇಖರ್ 37,993 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದರು. 20, 017 ಮತಗಳ (ಶೇ 14.30ರಷ್ಟು) ಅಂತರದಿಂದ ಗೋವಿಂದಪ್ಪ ಜಯ ಸಾಧಿಸಿದ್ದರು.












Click it and Unblock the Notifications