ಕ್ಷೇತ್ರ ಪರಿಚಯ : ಚನ್ನಗಿರಿಯಲ್ಲಿ ಈ ಬಾರಿ ಯಾರಿಗೆ ಗೆಲುವು?
ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಚನ್ನಗಿರಿಯೂ ಒಂದು. ಏಷ್ಯಾದ 2ನೇ ಅತ್ಯಂತ ದೊಡ್ಡ ಕೆರೆ ಶಾಂತಿ ಸಾಗರ (ಸೂಳೆಕೆರೆ) ಯನ್ನು ಕ್ಷೇತ್ರದ ಒಡಲಲ್ಲಿ ಹೊಂದಿದೆ.
ಮೊದಲು ಚನ್ನಗಿರಿ ಶಿವಮೊಗ್ಗ ಜಿಲ್ಲೆಯ ಭಾಗವಾಗಿತ್ತು. ಜಿಲ್ಲಾ ಮರುವಿಂಗಡನೆ ಸಂದರ್ಭದಲ್ಲಿ ದಾವಣಗೆರೆಗೆ ಸೇರಿತು. ಅತ್ತ ಚಿತ್ರದುರ್ಗ, ಇತ್ತ ಶಿವಮೊಗ್ಗ ಜಿಲ್ಲೆಗೆ ಹತ್ತಿರವಿರುವ ಕ್ಷೇತ್ರವಿದು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು
ಭದ್ರಾ ನದಿ ನೀರು ಈ ಕ್ಷೇತ್ರಕ್ಕೆ ಮೂಲಧಾರ. ಭದ್ರಾ ನೀರು ಚಾನೆಲ್ ಮೂಲಕ ಹರಿದುಬರುತ್ತದೆ. ನೀರನ್ನು ಬಳಸಿಕೊಂಡು ರೈತರು ಭತ್ತ, ಅಡಿಕೆ, ಜೋಳ, ಕಬ್ಬು ಮುಂತಾದ ಬೆಳೆ ಬೆಳೆಯುತ್ತಾರೆ.
ದಾವಣಗೆರೆ ಜಿಲ್ಲಾ ಕೇಂದ್ರದಿಂದ 60 ಕಿ.ಮೀ.ದೂರದಲ್ಲಿದೆ ಶಾಂತಿ ಸಾಗರ ಕೆರೆ. ನೈಸರ್ಗಿಕವಾಗಿ ರಮ್ಯ ತಾಣವಿದಾಗಿದೆ. ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರನ್ನು ಈ ಕೆರೆಯ ಮೂಲಕ ಪೂರೈಕೆ ಮಾಡಲಾಗುತ್ತದೆ. ಕೆರೆಯಲ್ಲಿನ ಮೀನುಗಾರಿಕೆಯನ್ನು ನಂಬಿ ಹಲವು ಕುಟುಂಬಗಳು ಜೀವನ ನಡೆಸುತ್ತಿವೆ.
ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಸ್ವ ಕ್ಷೇತ್ರ ಚನ್ನಗಿರಿ. ಪಟೇಲ್ ಪುತ್ರ ಮಹಿಮಾ ಪಟೇಲ್ ರಾಜಕೀಯವಾಗಿ ಯಶಸ್ಸು ಸಾಧಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸದ್ಯ, ಅವರು ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರು.
2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮತ ಬ್ಯಾಂಕ್ ವಿಭಜನೆಯಿಂದಾಗಿ ಕಾಂಗ್ರೆಸ್ನ ವಡ್ನಾಳ್ ರಾಜಣ್ಣ ಗೆಲುವು ಕಂಡರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಮಡಾಳು ವಿರೂಪಾಕ್ಷಪ್ಪ ಅವರನ್ನು ಸೋಲಿಸಿದ್ದರು.
ಆದರೆ, ಈಗ ನಾಲ್ಕು ವರ್ಷಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ತನಕ ಎಲ್ಲಾ ಚುನಾವಣೆಯಲ್ಲಿ ಕಮಳ ಅರಳಿದೆ. ಈ ಬಾರಿ ವಿರೂಪಾಕ್ಷಪ್ಪ ಬಿಜೆಪಿಯಿಂದ ಸ್ಪರ್ಧಿಸಬಹುದು.
ಮಹಿಮಾ ಪಟೇಲ್ ಅವರು ಈಗ ಜೆಡಿಯು ರಾಜ್ಯಾಧ್ಯಕ್ಷರು. ಈಗಾಗಲೇ ಅವರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಚುನಾವಣೆಗೆ ಅವರು ಸ್ಪರ್ಧಿಸುವುದು ಖಚಿತವಾಗಿದೆ.
2013ರ ಚುನಾವಣೆಯಲ್ಲಿ ವಡ್ನಾಳ್ ರಾಜಣ್ಣ 53,355 ಮತ. ಕೆಜೆಪಿಯ ಮಾಡಾಳ್ ವಿರೂಪಾಕ್ಷಪ್ಪ 51,582 ಮತ, ಜೆಡಿಎಸ್ನ ಎಚ್.ರಮೇಶ್ 28,900 ಮತ, ಬಿಜೆಪಿಯ ಎಚ್.ಎಸ್.ಶಿವಕುಮಾರ್ 4,526 ಮತಗಳನ್ನು ಪಡೆದಿದ್ದರು.