ಜಯನಗರ ಕ್ಷೇತ್ರ: ಒಡವೆ ಹೇರಿಕೊಂಡ ನೀರೆ, ಅಲ್ಲಲ್ಲಿ ಹರಿದ ಸೀರೆ
ಬೆಂಗಳೂರಿನ ಪಾಲಿಗೆ ಜಯನಗರ ಎಂಬುದೇ ಕಿರೀಟ ಇದ್ದ ಹಾಗೆ. ದೊಡ್ಡ ರಸ್ತೆಗಳು, ಶಾಪಿಂಗ್ ಕಾಂಪ್ಲೆಕ್ಸ್, ಹೆಸರಾಂತ ಶಾಲೆ-ಕಾಲೇಜುಗಳು, ಅಷ್ಟೇ ಹೆಸರಾದ ಆಸ್ಪತ್ರೆಗಳು, ಹೋಟೆಲ್ ಗಳು, ಚಿತ್ರಮಂದಿರ, ಮಾಲ್ ಗಳು, ದೇವಸ್ಥಾನಗಳು, ಪುಸ್ತಕದ ಅಂಗಡಿ...ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅಂಥ ಜಯನಗರ ವಿಧಾನಸಭಾ ಕ್ಷೇತ್ರದ ಪರಿಚಯದ ವರದಿ ಇಲ್ಲಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 7 ವಾರ್ಡ್ ಗಳು
ಪಟ್ಟಾಭಿರಾಮನಗರ
ಬೈರಸಂದ್ರ
ಜಯನಗರ ಪಶ್ಚಿಮ
ಜೆ.ಪಿ.ನಗರ
ಸಾರಕ್ಕಿ
ಶಾಕಂಬರಿ ನಗರ
ಗುರಪ್ಪನ ಪಾಳ್ಯ
ಕ್ಷೇತ್ರ ಪರಿಚಯ : ಚಾಮರಾಜಪೇಟೆಯಲ್ಲಿ ಜೆಡಿಎಸ್ -ಕೈ ಜಟಾಪಟಿ!
ಈ ಏಳು ವಾರ್ಡ್ ಗಳ ಪೈಕಿ ಆರರಲ್ಲಿ ಬಿಜೆಪಿ ಕಾರ್ಪೊರೇಟರ್ ಗಳೇ ಇದ್ದಾರೆ. ಇನ್ನೊಂದು ಅಂದರೆ ಗುರಪ್ಪನಪಾಳ್ಯದಲ್ಲಿ ಮಾತ್ರ ಕಾಂಗ್ರೆಸ್ ಕಾರ್ಪೊರೇಟರ್ ಇದ್ದಾರೆ.
ಇನ್ನು ಮತದಾರರ ಪ್ರಮಾಣ ಎಷ್ಟಿದೆ ಅಂತ ನೋಡಿದರೆ,
ಒಟ್ಟು ಮತದಾರರು 1,87,891
ಪುರುಷರು 95,572
ಮಹಿಳೆಯರು 91,894
ತೃತೀಯ ಲಿಂಗಿಗಳು 25
2013ರ ವಿಧಾನಸಭೆ ಚುನಾವಣೆ ಫಲಿತಾಂಶ ಹೀಗಿದೆ
ಬಿಜೆಪಿಯ ಬಿ.ಎನ್.ವಿಜಯಕುಮಾರ್ 43,164 ಮತ
ಕಾಂಗ್ರೆಸ್ ನ ಎಂ.ಸುರೇಶ್ 20,570 ಮತ
ಪಕ್ಷೇತರ ಅಭ್ಯರ್ಥಿ ಕೆ.ಎಸ್. ಶಮೀ ಉಲ್ಲಾ 11,822 ಮತ
ಈಗಾಗಲೇ ಎರಡು ಬಾರಿ ಬಿಜೆಪಿಯ ಬಿ.ಎನ್.ವಿಜಯಕುಮಾರ್ ಗೆಲುವು ಸಾಧಿಸಿ, ಹ್ಯಾಟ್ರಿಕ್ ವಿಜಯದ ತಹತಹದಲ್ಲಿದ್ದಾರೆ. ಆದರೆ ಈ ಬಾರಿಯ ಸ್ಪರ್ಧೆ ಅಷ್ಟು ಸಲೀಸಾಗಿಲ್ಲ. ಒಂದು ಕಡೆ ಕಾಂಗ್ರೆಸ್ ನಿಂದ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳು ಸೌಮ್ಯಾ ಕಣಕ್ಕೆ ಇಳಿದಿದ್ದಾರೆ. ಮತ್ತೊಂದು ಕಡೆಯಿಂದ ಪಕ್ಷೇತರರಾಗಿ ರವಿಕೃಷ್ಣಾ ರೆಡ್ಡಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಜಾತಿ ಸಮೀಕರಣವನ್ನು ಗಮನಿಸಿದರೆ, ಬ್ರಾಹ್ಮಣರು, ಮುಸ್ಲಿಮರು, ವೈಶ್ಯರು, ಜೈನರು ಹಾಗೂ ಹಿಂದುಳಿದ ವರ್ಗದ ಮತಗಳು ಭಾರೀ ಪ್ರಾಮುಖ್ಯ ಪಡೆಯುತ್ತವೆ. 'ಸಂಪನ್ಮೂಲ'ದ ದೃಷ್ಟಿಯಿಂದ ನೋಡಿದರೆ ಸೌಮ್ಯಾ ರೆಡ್ಡಿ ಅವರು ವಿಜಯಕುಮಾರ್ ಅವರಿಗಿಂತ ಮುಂದಿರುವಂತೆ ಕಾಣುತ್ತಾರೆ. ಆದರೆ ಸಂಘಟನೆ ಹಾಗೂ ಇತಿಹಾಸದ ಫಲಿತಾಂಶವು ವಿಜಯಕುಮಾರ್ ಪರವಾಗಿ ತಕ್ಕಡಿ ತೂಗುತ್ತವೆ.
ಕಿರಿದಾದ ರಸ್ತೆಗಳು, ಒಳಚರಂಡಿ ಸಮಸ್ಯೆ, ಸಂಚಾರ ದಟ್ಟಣೆ, ಮಕ್ಕಳ ಆಟದ ಮೈದಾನದ ಕೊರತೆ, ಉದ್ಯಾನ ಒತ್ತುವರಿ ಇನ್ನಿತರ ಸಮಸ್ಯೆಗಳು ನಾವೂ ಇದ್ದೀವಿ ಎಂಬಂತೆ ಇಣುಕುತ್ತವೆ. ಚಂದದ ಉದ್ಯಾನಗಳು, ಸ್ವಚ್ಛವಾದ ರಸ್ತೆಗಳು, ನೀಟಾಗಿರುವ ಪಾದಚಾರಿ ರಸ್ತೆಗಳು ಜನರ ಮೆಚ್ಚುಗೆಯನ್ನೂ ಪಡೆದಿವೆ.
ಮುಖ್ಯವಾಗಿ, ಜಯನಗರ ತುಂಬ ಸುಂದರವಾಗಿ ಅಲಂಕಾರ ಮಾಡಿಕೊಂಡ ಹೆಣ್ಣುಮಗಳಂತೆ ಕಂಡುಬರುತ್ತದೆ. ಅದರೆ, ಕೆಲವು ಪ್ರದೇಶಗಳು ರಸ್ತೆ, ನೀರು, ಬೀದಿ ದೀಪ, ಮೈದಾನ ಹಾಗೂ ಉದ್ಯಾನಗಳಿಂದ ತುಂಬಿ ಒಡವೆಗಳು ಹೇರಿದಂತೆಯೂ ಮತ್ತೆ ಕೆಲವು ಕಡೆ ಕಿಷ್ಕಿಂದೆಯಂಥ ರಸ್ತೆ, ಒಳಚರಂಡಿ ಸಮಸ್ಯೆ, ಉದ್ಯಾನಗಳ ಒತ್ತುವರಿ ಆಗಿ, ಆಗಾಗ ತಲೆ ದೋರುವ ವಿದ್ಯುತ್ ವ್ಯತ್ಯಯವು ಸೀರೆಯೇ ಹರಿದಂತೆಯೂ ಗೋಚರಿಸುತ್ತದೆ.
ಜಯನಗರ ಕಾಂಪ್ಲೆಕ್ಸ್ ವಿಚಾರದಲ್ಲಿ ವ್ಯಾಪಾರಿಗಳ ಅಹವಾಲು ಕೇಳುತ್ತಿಲ್ಲ ಎಂಬುದು ಆರೋಪ. ಬಿಬಿಎಂಪಿ ಅಧಿಕಾರಿಗಳು ಈ ವಿಚಾರದಲ್ಲಿ ನನ್ನ ಮಾತು ಕೇಳುತ್ತಿಲ್ಲ ಎಂಬುದು ಶಾಸಕ ವಿಜಯಕುಮಾರ್ ಆಕ್ರೋಶ. ಜಯನಗರ ಕ್ಷೇತ್ರಕ್ಕೆ ಹಲವು ಕೋಡುಗಳಿವೆ. ಅದಕ್ಕೆ ಅಲಂಕಾರ ಮಾಡುವ ಕಾಲ ಚುನಾವಣೆ. ಅದೇ ರೀತಿ ಸಮಸ್ಯೆಗಳನ್ನು ಬೆಳಕಿಗೆ ಇಡುವ ಸಮಯವೂ ಚುನಾವಣೆಯೇ.