ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು
ಬೆಂಗಳೂರು, ಮೇ 15: ಕರ್ನಾಟಕ ಚುನಾವಣೆ ಫಲಿತಾಂಶದ ಬಗ್ಗೆ ರಾಜಕೀಯ ಪಂಡಿತರ, ಜ್ಯೋತಿಷಿಗಳ, ಟಿವಿ ಚಾನಲ್ ಸಮೀಕ್ಷೆಗಳ ಭವಿಷ್ಯ, ನಿರೀಕ್ಷೆಯನ್ನು ಮೀರಿ ಮತದಾರ ಮಹಾಪ್ರಭು ತನ್ನ ಜನಾದೇಶವನ್ನು ಮೇ 15ರಂದು ನೀಡಿದ್ದಾನೆ. ಅತಂತ್ರ ವಿಧಾನಸಭೆ ಸೃಷ್ಟಿಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧ್ಯತೆ ಉಂಟಾಗಿದ್ದು, ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ.
15ನೇ ವಿಧಾನಸಭೆಗಾಗಿ ಮೇ 12ರಂದು ಚುನಾವಣೆ ನಡೆದಿದ್ದು, ಮೇ 15ರಂದು ಫಲಿತಾಂಶ ಹೊರಬಂದಿದೆ. ಕಾಂಗ್ರೆಸ್ ಜತೆ ಮೈತ್ರಿಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಸಮ್ಮತಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯನ್ನಾಗಿಸಲು ಪ್ರಯತ್ನ ಮುಂದುವರಿದಿದೆ. ಈ ನಡುವೆ ಬಿಜೆಪಿ ಕೂಡಾ ಅತಿದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು ಏನೇನಿದೆ
ಈಗ 222 ಕ್ಷೇತ್ರಗಳ ಫಲಿತಾಂಶ ಇಲ್ಲಿದೆ
* ಬಲಾಬಲ 222/224: ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇತರೆ 2
* ಅಧಿಕಾರ ಸ್ಥಾಪನೆಗೆ ಬೇಕಾದ ಸಂಖ್ಯೆ : 112
* ಉಪ ಚುನಾವಣೆ ನಡೆಯಬೇಕಾಗಿರುವ ಕ್ಷೇತ್ರಗಳು : 2+1(ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ, ಒಂದು ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಯಲಿದೆ.
* ಗೆದ್ದಿರುವ ಇತರೆ ಪೈಕಿ ಬಿಎಸ್ಪಿ ಅಭ್ಯರ್ಥಿ ಜೆಡಿಎಸ್ ಬೆಂಬಲ ನೀಡಲಿದ್ದಾರೆ. ಕೆಪಿಜೆಪಿಯ ಅಭ್ಯರ್ಥಿ ಬಿಜೆಪಿಗೆ ಬೆಂಬಲಿಸಲಿದ್ದಾರೆ.

ವಜುಭಾಯಿ ವಾಲ ಅವರ ಮುಂದಿರುವ ಆಯ್ಕೆ 01
ಜನಾದೇಶಕ್ಕೆ ಬೆಲೆ ಕೊಟ್ಟು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಬಹುದು.
* ಸದ್ಯದ ಬಲಾಬಲದಂತೆ 222/224: ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇತರೆ 2
* ಅಧಿಕಾರ ಸ್ಥಾಪನೆಗೆ ಬೇಕಾದ ಸಂಖ್ಯೆ : 112
ಸರ್ಕಾರ ರಚನೆ ಮಾಡಿ, ಬಹುಮತ ಸಾಬೀತುಪಡಿಸುತ್ತೇವೆ ಎಂದು ಬಿಜೆಪಿಯ ಸಿಎಂ ಅಭ್ಯರ್ಥಿ, ಶಿಕಾರಿಪುರದ ಶಾಸಕ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
* ತಮ್ಮ ಬಳಿ 112 ಶಾಸಕರಿದ್ದಾರೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಇದು ಒಮ್ಮತವಾದರೆ, ಸರ್ಕಾರ ರಚಿಸಲು ಸೂಚಿಸಬಹುದು. ನಿಗದಿತ ಅವಧಿಯಲ್ಲಿ ಬಹುಮತ ಸಾಬೀತುಪಡಿಸಬೇಕಾಗುತ್ತದೆ.

ವಜುಭಾಯಿ ವಾಲ ಮುಂದಿರುವ ಆಯ್ಕೆ 02
ಜನಾದೇಶಕ್ಕೆ ಬೆಲೆ ಕೊಟ್ಟು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದರೂ, ಬಹುಮತ ಸಾಬೀತುಪಡಿಸಲು ಬೇಕಾದ ಸಂಖ್ಯೆ ಇಲ್ಲ ಎಂದೆನಿಸಿದರೆ ಅತಿದೊಡ್ಡ ಪಕ್ಷ ಹಾಗೂ ಇತರೆ, ಪಕ್ಷೇತರರ ನೆರವು ಪಡೆದು ಸಂಖ್ಯಾಬಲ ತೋರಿಸುವಂತೆ ಸೂಚಿಸಬಹುದು.

ವಜುಭಾಯಿ ವಾಲ ಮುಂದಿರುವ 3ನೇ ಆಯ್ಕೆ
ಚುನಾವಣೋತ್ತರ ಮೈತ್ರಿ ಸಾಧಿಸಿ, ಮೈತ್ರಿ ಸರ್ಕಾರಕ್ಕೆ ಮುಂದಾಗುವ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಕ್ಷಗಳಿಗೆ ಅವಕಾಶ ನೀಡಬಹುದು. ಸರ್ಕಾರ ರಚನೆಗೆ ಮಾಡಲು ಅತಿದೊಡ್ಡ ಪಕ್ಷ ಹಕ್ಕು ಮಂಡನೆ ಮಾಡಿದ್ದರೂ ಮೈತ್ರಿ ಸರ್ಕಾರ ಸಾಧಿಸಿದ ಪಕ್ಷಗಳಿಗೆ ಅವಕಾಶ ನೀಡಬಹುದು. ಈ ಅಧಿಕಾರ ರಾಜ್ಯಪಾಲರ ಕೈಲಿರುತ್ತದೆ. ಯಾವ ಪಕ್ಷಕ್ಕೆ ಅಧಿಕಾರ ಸ್ಥಾಪನೆಗೆ ಸೂಚಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಆದರೆ, ಆ ಪಕ್ಷ ಬಹುಮತ ಸಾಬೀತುಪಡಿಸಲು ಕಾಲಾವಕಾಶ ಕೋರಿ, ಸದನದಲ್ಲಿ ವಿಶ್ವಾಸಮತ ಗಳಿಸಬೇಕಾಗುತ್ತದೆ.

ವಜುಭಾಯಿ ವಾಲ ಮುಂದಿರುವ 4ನೇ ಆಯ್ಕೆ
ಜನಾದೇಶ ಅತಿದೊಡ್ಡ ಪಕ್ಷ ಅಥವಾ ಮ್ಯಾಜಿಕ್ ನಂಬರ್ ದಾಟುವ ವಿಶ್ವಾಸ ಹೊಂದಿರುವ ಮೈತ್ರಿಕೂಟ ಅಲ್ಲದೆ, ಚುನವಣೋತ್ತರ ಮೈತ್ರಿ ಸಾಧಿಸಿದ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪಕ್ಷಗಳು ಜತೆಗೆ ಬಾಹ್ಯ ಬೆಂಬಲ ಪಡೆದ ಪಕ್ಷೇತರ ನೆರವಿನಿಂದ ಸರ್ಕಾರ ರಚನೆಯಾಗುವ ವಿಶ್ವಾಸ ಉಂಟಾದರೆ, ರಾಜ್ಯಪಾಲರು ಅಂಥ ಮೈತ್ರಿಕೂಟಕ್ಕೆ ಸರ್ಕಾರ ರಚನೆ ಮಾಡಿ, ವಿಶ್ವಾಸಮತ ಗಳಿಸುವಂತೆ ಕೋರಬಹುದು.

ಬಿಜೆಪಿ ತಂತ್ರಗಾರಿಕೆ
ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಮಣಿಪುರದಲ್ಲಿ 60 ಕ್ಷೇತ್ರಗಳಲ್ಲಿ ಬಿಜೆಪಿ 21, ಕಾಂಗ್ರೆಸ್ 28ಗಳಿಸಿತ್ತು. ಆದರೆ, ಪಕ್ಷೇತರರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ಬಿಜೆಪಿ ಅಧಿಕಾರ ಸ್ಥಾಪಿಸಿತು.
ಗೋವಾದಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನ ಗಳಿಸಿತ್ತು. ಆದರೆ, ಬಿಜೆಪಿ ಮೈತ್ರಿ ಸಾಧಿಸಿ, ಸರ್ಕಾರ ರಚಿಸಿತು.
|
ಕಾನೂನು ಏನು ಹೇಳುತ್ತದೆ?
ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ ಕಾನೂನು ಏನು ಹೇಳುತ್ತದೆ? ರಾಜ್ಯಪಾಲರ ಮುಂದೆ ಕಾನೂನಾತ್ಮಕವಾಗಿ ಏನೇನು ಆಯ್ಕೆಗಳಿರುತ್ತವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.












Click it and Unblock the Notifications