ವ್ಯಕ್ತಿ ಚಿತ್ರ: ಜನ ಸಾಮಾನ್ಯ ಪಕ್ಷದ ಅಧ್ಯಕ್ಷ ಡಾ. ಅಯ್ಯಪ್ಪ
ಕರ್ನಾಟಕದ ರಾಜಕೀಯದಲ್ಲಿ ಸಂಕ್ರಮಣ ಮೂಡಿಸಲು ಕಳಸಾ ಬಂಡೂರಿ ಹೋರಾಟಗಾರರ ಬೆಂಬಲದಿಂದ ಜನ ಸಾಮಾನ್ಯರ ಪಕ್ಷವೊಂದು ಸ್ಥಾಪನೆಯಾಗಿದೆ. ಈ ಪಕ್ಷದ ನೂತನ ಅಧ್ಯಕ್ಷರಾಗಿ ಶಿಕ್ಷಣ ತಜ್ಞ ಡಾ. ಅಯ್ಯಪ್ಪ ರಾಮಪ್ಪ ದೊರೆ ಆಯ್ಕೆಯಾಗಿದ್ದಾರೆ.
ಅಭಿವೃದ್ಧಿ ಪರ - ಭ್ರಷ್ಟಾಚಾರ ವಿರೋಧಿ ಸಂಕಲ್ಪವನ್ನು ಹೊತ್ತಿರುವ ಈ ಪಕ್ಷ ಜನ ಸಾಮಾನ್ಯರಿಂದ ಜನ ಸಾಮಾನ್ಯರಿಗೋಸ್ಕರ ಪ್ರಾರಂಭವಾಗಿರುವ ಪಕ್ಷವಾಗಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಜನ ಸಾಮಾನ್ಯ ಪಕ್ಷ ಮುಂದಾಗಿದೆ.
ರಾಜ್ಯದ ನೆಲ, ಜಲ, ಭಾಷೆಯ ರಕ್ಷಣೆ ಹಾಗೂ ಪ್ರಾದೇಶಿಕ ಅಸಮಾನತೆಗೆ ಧಕ್ಕೆ ಬಂದಿರುವ ಕಾರಣ, ಹೋರಾಟಗಾರರು, ಸಾಹಿತಿಗಳು, ಜನ ಸಾಮಾನ್ಯರು ಹೊಸ ಪಕ್ಷ ಸ್ಥಾಪನೆ ಮಾಡುವ ಅಗತ್ಯ ಕಂಡು ಬಂದಿದ್ದರಿಂದ ಹೊಸ ಪಕ್ಷ ಸ್ಥಾಪಿಸಲಾಗಿದೆ ಎಂದು ಶಿಕ್ಷಣ ತಜ್ಞ ಡಾ. ಅಯ್ಯಪ್ಪ ಅವರು ಘೋಷಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದಿರುವ ಹೋರಾಟ, ಕಳಸಾ ಬಂಡೂರಿ ರೈತರ ಹೋರಾಟ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲ ಸದಾಕಾಲ ಇರುತ್ತದೆ. ಜನರಿಂದ ಜನರಿಗಾಗಿ ಸ್ಥಾಪಿತವಾಗಿರುವ ಈ ಪಕ್ಷದ ಮುಖ್ಯ ಉದ್ದೇಶ ಜನ ಸಾಮಾನ್ಯರಿಗೆ ಆಡಳಿತವನ್ನು ನೀಡುವುದಾಗಿದೆ.

ಸರೂರು ಗ್ರಾಮದವರಾದ ಡಾ. ಅಯ್ಯಪ್ಪ ರಾಮಪ್ಪ ದೊರೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದವರಾದ ಡಾ. ಅಯ್ಯಪ್ಪ ರಾಮಪ್ಪ ದೊರೆ ಅವರು ಶಿಕ್ಷಣ ತಜ್ಞರಾಗಿದ್ದಾರೆ. ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಅಲಾಯನ್ಸ್ ವಿಶ್ವ ವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದ ಇವರು, ಸಾರ್ವಜನಿಕ ಸೇವೆಗೆ ಧುಮುಕುವ ಇಚ್ಛೆಯಿಂದ ವಿವಿ ಉಪ ಕುಲಪತಿ ಹುದ್ದೆಯನ್ನು ತೊರೆದರು.

ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್
ಗ್ರಾಮೀಣಾಭಿವೃದ್ಧಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ.
ಬೆಂಗಳೂರು ವಿಶ್ವ ವಿದ್ಯಾಲಯದ ಕಾರ್ಯದರ್ಶಿ ಮತ್ತು ಸಿಂಡಿಕೇಟ್ ಸದಸ್ಯರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು. ಎನ್ ಸಿಸಿ ಮತ್ತು ಆರ್ಮಿ ಅಟ್ಯಾಚ್ಮೆಂಟ್ ಟ್ರಕಿಂಗ್ ನಲ್ಲಿ ಚಿನ್ನದ ಪದಕ ಪಡೆದಿದ್ದರು.
ತಮ್ಮ ಸೇವಾವಧಿಯಲ್ಲಿ ಪಡೆದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದ ಮಾದರಿ ವ್ಯಕ್ತಿಯಾಗಿದ್ದಾರೆ.

ರೈತರ ಹೋರಾಟದಲ್ಲಿ ನಿರಂತರವಾಗಿ ಭಾಗಿ
ಮಹಾದಾಯಿ ನೀರನ್ನು ಕಳಸಾ ಬಂಡೂರಿ ನಾಲೆ ಮೂಲಕ ಮಲಪ್ರಭೆಗೆ ಹರಿಸಲೇಬೇಕು ಎಂದು ಪಣತೊಟ್ಟು, ರೈತರ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದಾರೆ. ಇದಲ್ಲದೆ, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಶಿವರಾಮ ಕಾರಂತ ಡಿನೋಟಿಫಿಕೇಷನ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಎಸಿಬಿಗೆ ದೂರು ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಮೂಲಕ ಭ್ರಷ್ಟಾಚಾರ ವಿರೋಧಿ ಹೋರಾಟ ಮುಂದುವರೆಸಿದ್ದಾರೆ.

ಕರ್ನಾಟಕದಲ್ಲಿ ಹೊಸ ಅಲೆ ಎಬ್ಬಿಸಲು ಸಿದ್ಧ
ಕಳಸಾ ಬಂಡೂರಿ ಕೇಂದ್ರ ಯುವ ಸಮಿತಿ ಅಧ್ಯಕ್ಷ ವಿಜಯ್ ಕುಲಕರ್ಣಿ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮಯ ಸ್ವಾಮೀಜಿ, ಸಾಹಿತಿ ಪ್ರೊ ಚಂದ್ರಶೇಖರ ಪಾಟೀಲ, ನಟ ಚೇತನ್, ಜನ ಸಾಮಾನ್ಯರ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಸತೀಶ್ ಟಿ.ವಿ, ಪಕ್ಷದ ಮುಖಂಡರಾದ ಸತೀಶ್ ಟಿ ವಿ, ಅಮೃತ್ ಇಜಾರೆ, ವಿಕಾಸ್ ಸೊಪ್ಪಿನ ಸೇರಿದಂತೆ ಹಲವಾರು ರೈತ ಪರ ಚಿಂತಕರು, ಸಮಾಜ ಮುಖಿ ಮುಖಂಡರ ಬೆಂಬಲದಿಂದ ಕರ್ನಾಟಕದಲ್ಲಿ ಹೊಸ ಅಲೆ ಎಬ್ಬಿಸಲು ಡಾ. ಅಯ್ಯಪ್ಪ ಅವರು ಮುಂದಾಗಿದ್ದಾರೆ.

ಉದ್ಘಾಟನೆ ದಿನ ಮಾತನಾಡಿದ ಅಯ್ಯಪ್ಪ
ಡಾ. ಅಯ್ಯಪ್ಪ ಮಾತನಾಡಿ ಜನ ಸಾಮಾನ್ಯರ ಪಕ್ಷದ ನೂತನ ಅಧ್ಯಕ್ಷ ಡಾ. ಅಯ್ಯಪ್ಪ ಮಾತನಾಡಿ, ರಾಜ್ಯದ ಗಡಿಯ ಭಾಗದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯಾವುದೆ ಅನುಮತಿ ಪಡೆಯುವ ಅವಶ್ಯಕತೆಯಿಲ್ಲ. ಆದರೂ ಕೂಡಾ ರಾಜ್ಯ ಸರಕಾರ ಅನುಮತಿ ನೀಡಿದಲ್ಲಿ ರೈತರ ಸಹಾಯ ಹಾಗೂ ನೇತೃತ್ವದಲ್ಲಿ ಕಳಸಾ ಬಂಡೂರಿ ಕಾಮಗಾರಿಯನ್ನು ಪೂರ್ಣಗೊಳಿಸಲು ನಮ್ಮ ಪಕ್ಷ ಸಿದ್ದವಿದೆ. ಇದಕ್ಕಾಗಿ ಈಗಾಗಲೇ ನಾವು ರೈತ ಮುಖಂಡರುಗಳ ಜೊತೆ ಸಮಾಲೋಚನೆ ನಡೆಸಿದ್ದ ರೈತರುಗಳಿಂದ 100 ರೂಪಾಯಿ ಸಂಗ್ರಹಿಸಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ ಎಂದರು.












Click it and Unblock the Notifications