ಡಿ ಕೆ ಶಿವಕುಮಾರ್ ಸಹೋದರರ ನಡುವೆ ಭುಗಿಲೆದ್ದ ಮನಸ್ತಾಪ?
Recommended Video
ಕರ್ನಾಟಕ ರಾಜಕೀಯದಲ್ಲಿ 'ಅಪೂರ್ವ ಸಹೋದರ'ರಂತೆ ಇರುವ ಇಂಧನ ಸಚಿವ ಡಿ ಕೆ ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ನಡುವೆ ಎಲ್ಲವೂ ಸರಿಯಿಲ್ಲವೇ? ಹೌದು ಎನ್ನುತ್ತದೆ ಕೆಲವೊಂದು ಮೂಲಗಳು.
ಮುಂಬರುವ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಯಾರು ಸ್ಪರ್ಧಿಸಬೇಕು ಎನ್ನುವ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಒಂದೇ ವೇದಿಕೆಯಲ್ಲಿ ಗೌಡ್ರ ಸೊಸೆ, ಡಿಕೆಶಿ: ಏನೇನೋ ರಾಜಕೀಯ ಸುದ್ದಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಹೋದರನ ಗೆಲುವಿಗಾಗಿ ಸಿ ಪಿ ಯೋಗೇಶ್ವರ್ ಜೊತೆ ಡಿ ಕೆ ಶಿವಕುಮಾರ್ ಕೈಜೋಡಿಸಿದ್ದರು. ಆದರೆ, ಇವರಿಬ್ಬರ ನಡುವಿನ ಸಂಬಂಧ ಈಗ ಹಳಸಿರುವುದರಿಂದ ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ, ಯೋಗೇಶ್ವರ್ ಅವರನ್ನು ಸೋಲಿಸಲೇಬೇಕೆಂದು ಡಿಕೆಶಿ ಪಣ ತೊಟ್ಟಿದ್ದಾರೆ.
ಯೋಗೇಶ್ವರ್ ಅವರನ್ನು ಸೋಲಿಸಲು ತಮ್ಮ ಬದ್ದ ರಾಜಕೀಯ ವಿರೋಧಿ ಎಚ್ ಡಿ ದೇವೇಗೌಡ ಕುಟುಂಬದ ಸೊಸೆ ಅನಿತಾ ಕುಮಾರಸ್ವಾಮಿಗೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆಶಿ ಬೆಂಬಲ ಸೂಚಿಸುವ ಸಾಧ್ಯತೆಯ ಬಗ್ಗೆಯೂ ವರದಿಯಾಗಿತ್ತು.
ತಮ್ಮದೇ ಕುಟುಂಬದ ಇನ್ನೊಬ್ಬ ಸದಸ್ಯರಿಗೆ ಚನ್ನಪಟ್ಟಣದ ಟಿಕೆಟ್ ಕೊಡಿಸಿ, ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಡಿ ಕೆ ಸುರೇಶ್ ಮಾಡಿರುವ ಮನವಿಗೆ ಡಿಕೆಶಿ ಸೂಕ್ತವಾಗಿ ಸ್ಪಂದಿಸದೇ ಇರುವುದು ಸಹೋದರರಿಬ್ಬರ ನಡುವೆ ಜಟಾಪಟಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಮುಂದೆ ಓದಿ..
ತನ್ನ ಸ್ವಾರ್ಥಕ್ಕಾಗಿ ರಾಜಕೀಯ ಮಾಡುವ ಯೋಗೇಶ್ವರ್
ಬುಧವಾರ (ಜ 3) ಚನ್ನಪಟ್ಟಣದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ, ಯಾವುದೇ ಬದ್ದತೆಯಿಲ್ಲದ ವ್ಯಕ್ತಿ ಅಂದರೆ ಅದು ಯೋಗೇಶ್ವರ್. ಸುಳ್ಳು ಹೇಳಿಕೊಂಡು ಮತ್ತು ತನ್ನ ಸ್ವಾರ್ಥಕ್ಕಾಗಿ ಮಾತ್ರ ರಾಜಕೀಯ ಮಾಡುವ ಇದೇ ಯೋಗೇಶ್ವರ್, ಸಿಎಂ ಕಾಲಿಗೆ ಬಿದ್ದು, ಎಂದೆಂದಿಗೂ ಕಾಂಗ್ರೆಸ್ ಜೊತೆ ಇರುತ್ತೇನೆಂದು ಈಗ ಬಿಜೆಪಿ ಸೇರಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ಎದುರಿಗೆ ಬಂದು ಮಾತನಾಡಲಿ ಎಂದು ಡಿಕೆಶಿ, ಯೋಗೇಶ್ವರ್ ವಿರುದ್ದ ಹರಿಹಾಯ್ದಿದ್ದರು.
ತಮ್ಮ ಬಾವ ಶರತ್ ಚಂದ್ರ ಅವರಿಗೆ ಟಿಕೆಟ್
ಚನ್ನಪಟ್ಟಣ ಕ್ಷೇತ್ರದಿಂದ ತಮ್ಮ ಬಾವ (ಸಹೋದರಿಯ ಗಂಡ) ಶರತ್ ಚಂದ್ರ ಅವರಿಗೆ ಟಿಕೆಟ್ ನೀಡಬೇಕೆಂದು ಡಿ ಕೆ ಸುರೇಶ್ ಮಾಡುತ್ತಿರುವ ಒತ್ತಾಯಕ್ಕೆ ಡಿಕೆಶಿ ಸೊಪ್ಪು ಹಾಕುತ್ತಿಲ್ಲ. ಬ್ಯಾಂಕ್ ವೊಂದರ ಪ್ರಧಾನ ವ್ಯವಸ್ಥಾಪಕರಾಗಿರುವ ಶರತ್ ಚಂದ್ರ ಅವರನ್ನು ಕಣಕ್ಕಿಳಿಸಿದರೆ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಡಿ ಕೆ ಸುರೇಶ್ ಪಟ್ಟುಹಿಡಿದಿದ್ದಾರೆ ಎನ್ನುವ ಮಾಹಿತಿಯಿದೆ.
ಯೋಗೇಶ್ವರ್ ಅವರನ್ನು ಸೋಲಿಸಲೇ ಬೇಕಾದ ಕ್ಷೇತ್ರ
ತಮ್ಮ ಕುಟುಂಬದಿಂದ ನಾನು, ನೀನು ಮತ್ತು ರವಿ (ಡಿಕೆಶಿ ಹತ್ತಿರದ ಸಂಬಂಧಿ) ಈಗಾಗಲೇ ರಾಜಕೀಯದಲ್ಲಿದ್ದೇವೆ, ಮತ್ತೊಬ್ಬರು ಈ ಪಟ್ಟಿಗೆ ಸೇರೋದು ಬೇಡ. ಜೊತೆಗೆ, ಚನ್ನಪಟ್ಟಣ ಕ್ಷೇತ್ರ ನಮಗೆ ನಿರ್ಣಾಯಕ, ಯೋಗೇಶ್ವರ್ ಅವರನ್ನು ಸೋಲಿಸಲೇ ಬೇಕಾದ ಕ್ಷೇತ್ರವದು ಎನ್ನುವುದು ಡಿಕೆಶಿ ನಿಲುವು ಎನ್ನಲಾಗುತ್ತಿದೆ.
ಬಾವನಿಗೆ ಟಿಕೆಟ್ ಕೊಡಿಸಿ, ಮಿಕ್ಕಿದ್ದು ನನಗೆ ಬಿಡಿ
ಬರುವ ವರ್ಷ ಲೋಕಸಭಾ ಚುನಾವಣೆ ಬರುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರ ಕೂಡಾ ಬರಲಿದೆ. ನಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಚನ್ನಪಟ್ಟಣ ಅತಿಪ್ರಮುಖ. ಪಕ್ಷದ ಟಿಕೆಟ್ ಅನ್ನು ಬಾವನಿಗೆ ಕೊಡಿಸಿ, ಮಿಕ್ಕಿದ್ದು ನನಗೆ ಬಿಡಿ ಎಂದು ಡಿ ಕೆ ಸುರೇಶ್ ಅವರ ಒತ್ತಡಕ್ಕೆ ಡಿಕೆಶಿ ಸ್ಪಷ್ಟ ಉತ್ತರ ನೀಡದ ಹಿನ್ನೆಲೆಯಲ್ಲಿ, ಈ ವಿಚಾರ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿದೆ.
ಕೊನೆಯ ಕ್ಷಣದಲ್ಲಿ ಬಾವನಿಗೆ ಟಿಕೆಟ್ ನೀಡಲು ಪ್ರಯತ್ನಿಸಲೂ ಬಹುದು
ಪ್ರತೀ ಚುನಾವಣೆಗೊಂದು ಪಕ್ಷ ಬದಲಿಸುತ್ತಾ, ಅದನ್ನೇ ರಾಜಕೀಯ ಏಳಿಗೆಗೆ ಸೋಪಾನ ಮಾಡಿಕೊಂಡಿರುವ ಯೋಗೇಶ್ವರ್ ಅವರಿಗೆ, ಏಳು ಕೆರೆಯ ನೀರು ಕುಡಿಸುತ್ತೇನೆಂದು ನಿನ್ನೆಯಷ್ಟೇ ಚಾಲೆಂಜ್ ಮಾಡಿ ಬಂದಿರುವ ಡಿಕೆಶಿಗೆ, ಪ್ರಭಲ ಕಾಂಗ್ರೆಸ್ ಅಭ್ಯರ್ಥಿ ಚನ್ನಪಟ್ಟಣದಲ್ಲಿ ಇಲ್ಲದೇ ಇರುವುದು ದೊಡ್ದಚಿಂತೆಯಾಗಿ ಪರಿಣಮಿಸಿದೆ. ಕುಟುಂಬದಿಂದ ಇನ್ನೊಬ್ಬರು ಬೇಡ ಎನ್ನುವ ಡಿಕೆಶಿ, ಕೊನೆಯ ಕ್ಷಣದಲ್ಲಿ ತಮ್ಮ ಬಾವನಿಗೆ ಟಿಕೆಟ್ ನೀಡಲು ಪ್ರಯತ್ನಿಸಲೂ ಬಹುದು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.