ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಿಸದೇ ಕಲ್ಲುಕಲ್ಲಿನಲಿ ಹೆಣ್ಣಿನ ಕತೆ...

By Staff
|
Google Oneindia Kannada News


ಒನಕೆ ಓಬವ್ವ ನೋಡಲು ಹೇಗಿದ್ದಳು? ನನ್ನಂತೆ? ನಿಮ್ಮಂತೆ? ಅವಳ ಮನೋ ನೋವು, ನಲಿವು ಏನಿತ್ತು?. . . ಎಲ್ಲವೂ question mark ಳಾಗಿ ನನ್ನನ್ನೇ ಉತ್ತರ ಕೇಳುತ್ತಿದ್ದವು! ಚಿತ್ರದುರ್ಗದ ನೆಲದಲ್ಲಿ ಪಾಳೆಗಾರದ ಶೌರ್ಯಕ್ಕಿಂತಲೂ, ಅವರೊಂದಿಗಿದ್ದ ವನಿತೆಯರು ನನ್ನ ಮನ ತುಂಬಿದರು..

A stone chariot, a treat to watchಮೊನ್ನೆಯ ದೀಪಾವಳಿ ತಂದ ಸಾಲು ರಜೆ ನನ್ನ ಫ‚ಾ್ಯಮಿಲಿ ಟೈಂ. ನಿಮ್ಮ ನೆನಪುಗಳೊಡನೆ ಪ್ರವಾಸ ನನಗೆ ಅಪ್ಯಾಯಮಾನ. ನರಕ ಚತುರ್ದಶಿಯ ದಿನ ನಾನು ಚಿತ್ರದುರ್ಗದ ಕೋಟೆಯಲ್ಲಿದ್ದೆ. ನೂರಾರು ನರಕಾಸುರರ ವಧೆಯಾದ ಈ ಸ್ಥಳವನ್ನು ನಾಲ್ಕಾರು ಸಾರಿ ನೋಡಿದ್ದರೂ ಈ ಬಾರಿ ತುಂಬಾ different ಅನ್ನಿಸಿತು. ಯಾಕೆ ಗೊತ್ತಾ? ನಿಮ್ಮ ನೆನಪು ನನ್ನ ಜೊತೆಗಿತ್ತಲ್ಲಾ. . . . ನಿಮ್ಮೊಡನೆ ಎಲ್ಲವನ್ನೂ ಹಂಚಿಕೊಳ್ಳಬೇಕು ಎನ್ನುವ ತುಡಿತ ನನ್ನಲ್ಲಿತ್ತಲ್ಲಾ, ಅದಕ್ಕೆ. . . . .

ಕೋಟೆಯ ಹೆಬ್ಬಾಗಿಲಲ್ಲೆ ನನ್ನ ಅಪ್ಪ ‘ನೀವೆಲ್ಲಾ ಹೋಗಿಬನ್ನಿ ನಾನು ಇಲ್ಲೇ ಕೂತಿರ್ತೀನಿ. . . .’ ಎಂದದ್ದರಿಂದ ನಾವೆಲ್ಲಾ ಮುಂದೆ ಹೊರಟೆವು. ಬೆಟ್ಟದಲ್ಲಿ ಹಾಸುಹೊಕ್ಕಾಗಿರುವ ಆ ಕಲ್ಲಿನ ಕೋಟೆಗೆ ಏಳು ಹೆಬ್ಬಾಗಿಲು ಅಂತ ನಿಮಗೆ ಗೊತ್ತೇ ಇದೆ. ಎರಡು ಬಾಗಿಲುಗಳನ್ನು ದಾಟುವವರೆಗೂ ನಾನು ಎಲ್ಲರಂತೆಯೇ ಇದ್ದೆ. ಮೂರನೆ ಬಾಗಿಲಿನೊಳಗೆ ಹೆಜ್ಜೆ ಇಟ್ಟೊಡನೆ ಶುರುವಾಯ್ತು ನನ್ನ ಡಿಸೆಕ್ಟಿವ್‌ ಇನ್ಸ್‌ಟಿಂಕ್ಟ್‌ ! ಯಾಕೋ ಅವ್ಯಕ್ತ ಶೋಕ ನನ್ನನ್ನು ಆವರಿಸಿಕೊಡಿತು. ನಾನು ಚಿತ್ರದುರ್ಗದ ಇತಿಹಾಸದಲ್ಲಿ ಬದುಕಿದ್ದೇನಾ? ದುರ್ಗದ ಪ್ರತೀ ಕಲ್ಲು ಹೇಳುವ ಕಥೆಗೂ ಮಿಡಿಯುತ್ತಿದ್ದೇನಾ? ಏನೋ ಕಸಿವಿಸಿ. . . . .

ಒಮ್ಮೆ ಆ್ಯಂಜಿಯೋಪ್ಲಾಸ್ಟ್‌ ಮಾಡಿಸಿಕೊಂಡೂ ದೂರದಲ್ಲಿ ಒಬ್ಬರೆ ಕುಳಿತಿದ್ದ ಅಪ್ಪನಿಗಿಂತ, ಎರಡು ಮಂಡಿ ನೋವಿನಲ್ಲೂ, ಬಿಸಿಲಿನ ತಾಪಕ್ಕೆ ಹೆದರದೆ ಓಬವ್ವನ ಕಿಂಡಿ ನೋಡಲೇ ಬೇಕೆಂಬ ಉತ್ಸಾಹದಿಂದ ನಮ್ಮೊಡನೆ ಕಲ್ಲುಗಳನ್ನೇರುತಿದ್ದ ಅಮ್ಮ, ಇದ್ದಕ್ಕಿದ್ದಂತೆ ನನ್ನನ್ನು ಕಾಡತೊಡಗಿದಳು. . . . ಅವಳ ಉತ್ಸಾಹಕ್ಕೆ ನಾನು ಮೂಲ ಹುಡುಕುತ್ತಿದ್ದೇನೆ ಅನ್ನಿಸುತ್ತಿತ್ತು! ದುರ್ಗವನ್ನಾಳಿದ ನೂರಾರು ಗಂಡುಗಲಿ ಪಾಳೆಯಗಾರರಿಗಿಂತ ಅವರ ನಡು-ನಡುವೆ ಇದ್ದ ಹೆಂಗಸರು ‘ಹೆಂಗೆಳೆಯರಿಗೆ ಮಾತ್ರ’ದ ಗಾಥೆ ಹಾಡುತ್ತಿದ್ದಾರೆ ಎನ್ನಿಸುತ್ತಿತ್ತು. ನನಗೆ ಗೊತ್ತು, ನಿಮಗೆ ಇದರಲ್ಲಿ ಏನೂ ಅಶ್ಚರ್ಯ ಕಾಣುತ್ತಿಲ್ಲ ಕಾರಣ ನಿಮಗೂ ಎಷ್ಟೋ ಸಾರಿ ಹಾಗೇ ಅನ್ನಿಸಿದೆ ಅಲ್ಲವಾ?

ನಾನೀಗ ‘ಅಕ್ಕ-ತಂಗಿ ಹೊಂಡ’ದ ಬಳಿ ಇದ್ದೆ. ದಂಡೆತ್ತಿ ಬಂದವರ ದೌರ್ಜನ್ಯ ಸಹಿಸಿಕೊಳ್ಳಲಾರದೆ ಜಲಾವೃತವಾಗಿದ್ದ ಆ ಹೊಂಡಕ್ಕೆ ಹಾರಿ ಪ್ರಾಣ ಬಿಡುತ್ತಿದ್ದರಂತೆ ಆ ಕಾಲದ ಹೆಂಗಸರು ಎಂದು ಓದಿದ್ದ ನೆನಪಾಯ್ತು. ಈಗ ಹನಿ ನೀರೂ ಇಲ್ಲದೆ ಒಣಗಿ ನಿಂತಿರುವ ಹೊಂಡದಲ್ಲಿ ಹಸಿರು ನೀರು ಉಕ್ಕಿ ಬಂದಂತಾಯ್ತು. . . .ನನ್ನ, ನನ್ನ ಗೆಳತಿಯರ ಪ್ರತಿಬಿಂಬ ಕಣ್ಣಿಗೆ ಕಟ್ಟಿದಂತಾಯ್ತು. . . .ಸದ್ಯ, ನೀವು ನನ್ನ ಜೊತೆಯಲ್ಲಿರದಿದ್ದರೆ ನಾನು ಮೂರ್ಛೆ ಬೀಳುತ್ತಿದ್ದೆ ಖಂಡಿತ!

ಆ ದಿನ ಬೆಳಗಿನ ಪೇಪರ್ನಲ್ಲಿ ಓದಿದ್ದ ನ್ಯೂಸ್‌ ನೆನಪಾಯ್ತು. ಪಾಟ್ನಾದಲ್ಲಿ ಒಂದು ಹುಡುಗಿ ತನ್ನ ಮೇಲೆ ಅತ್ಯಾಚಾರ ಮಾಡಿದವನನ್ನು ಗುರ್ತು ಹಿಡಿದು ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಿದ್ದಾಳೆ. ಒಂದೇ ದಿನದ ಟ್ರಯಲ್‌ನಲ್ಲಿ ನ್ಯಾಯಾಧೀಶರು ಅವನಿಗೆ ಶಿಕ್ಷೆ ವಿಧಿಸಿ ಇತಿಹಾಸ ನಿರ್ಮಿಸಿದ್ದಾರೆ. ಅತ್ಯಾಚಾರಿಗೆ ಶಿಕ್ಷೆ ನೀಡಿ ಇತಿಹಾಸ ನಿರ್ಮಿಸುತ್ತಿದ್ದೇವೆ ನಾವು. ಆದರೆ ಇತಿಹಾಸದಲ್ಲಿ ‘ಅಕ್ಕ-ತಂಗಿ ಹೊಂಡ’ಕ್ಕೆ ಕಥೆಯಾದವರು ಎಷ್ಟು? ಅತ್ಯಾಚಾರಿಗೆ ಶಿಕ್ಷೆ ಕೊಡಿಸುವ ಮನೋಭಾವವುಳ್ಳ ಈ ಹುಡುಗಿಗೂ, ಅತ್ಯಾಚಾರಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಆ ಹೆಂಗಸರಿಗೂ ಏನೂ ಸಂಬಂಧ ಕಲ್ಪಿಸಲಾಗಲಿಲ್ಲ. ಆದರೆ ಅನ್ನಿಸಿದ್ದು, ಅತ್ಯಾಚಾರ-ಅತ್ಯಾಚಾರಿ ಬದಲಾಗಿಲ್ಲ, ನಾವು ಹೆಂಗಸರು ಬದಲಾಗುತ್ತಿದ್ದೇವಾ?

ಓಹ್‌! ನಾನೆಷ್ಟು ಭಾವುಕಳಾಗಿದ್ದೆ ಎಂದರೆ ಫೋಟೋ ಕ್ಲಿಕ್ಕಿಸುವುದೂ ಮರೆತೆ. ನೀವೂ ನೆನಪಿಸಲಿಲ್ಲ. . . . ಹೋಗಲಿ ಬಿಡಿ, ನೀವೂ ನನ್ನಂತೇ ಯೋಚಿಸುತ್ತಿದ್ದರಲ್ಲಾ?

ಏಳನೇ ಬಾಗಿಲಿನ ನಂತರ ಒಂದು ಏಕಶಿಲಾ ದೀಪ ಸ್ಥಂಭವಿದೆ. ಅದರ ಕಥೆ ನಿಮಗೆ ಗೊತ್ತಲ್ಲ? ರಾಜವೀರ ಮದಕರಿ ನಾಯಕ ಅಂತ ಒಬ್ಬ ಪಾಳೆಗಾರ ಜನರ ಅನುಕೂಲಕ್ಕಾಗಿ ಏಕಶಿಲಾ ದೀಪ ಸ್ಥಂಭ ನಿರ್ಮಿಸಿದ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಅದನ್ನು ನಿಲ್ಲಿಸಲು ಆಗುತ್ತಿರಲಿಲ್ಲವಂತೆ. ಜ್ಯೋತಿಷ್ಯ ಬಂತು ‘ಹೆಣ್ಣು ಬಲಿ ನೀಡಬೇಕು’ಅಂತ! ಪಾಪ ರಾಜವೀರ ಮದಕರಿ ನಾಯಕ ಚಿಂತೆಯಲ್ಲೇ ಸೋತು ಸುಣ್ಣವಾದ. ಅವನ ಮನೋವ್ಯಾಧಿ ತಿಳಿದ ಅವನ ಹೆಂಡತಿ ಕನಕಮ್ಮ ತಾನೇ ಖುದ್ದಾಗಿ ಬಲಿಯಾಗಲು ಸಿದ್ಧಳಾದಳಂತೆ. . . . ಅವಳ ಬಲಿಯಾಯ್ತುು, ದೀಪ ಸ್ಥಂಭ ನೂರಾರು ಜನರ ಪಾಲಿಗೆ ಬೆಳಕಾಯ್ತು! ದುರ್ಗಕ್ಕೆ ಬೆಳಕು ತಂದ ಆ ಪಾಳೆಗಾರನನ್ನು ಸಂಪೂರ್ಣ ಮರೆತು ನಾನು ಎಷ್ಟು ಹೊತ್ತು ಕನಕಮ್ಮನ ಜೊತೆ ಸಂಭಾಷಣೆಗೆ ಕುಳಿತಿದ್ದೆ! ಛೆ, ನಾನೆಷ್ಟು ವಿಚಿತ್ರ. . . ನೂರಾರು ಜನರಿಗೆ ಅನುಕೂಲವಾಗಿದೆ ಅಂತ ಗೊತ್ತಿದ್ದರೂ ನನ್ನ ಹೃದಯ, ಬಲಿಯಾದ ಅವಳಿಗಾಗಿ ಮಮ್ಮಲ ಮರುಗುತ್ತಿತ್ತು. . . ಈಗ ಕೆರೆಗೆ ಹಾರದ ಬಂಗಾರಿಯ ನೆನಪಾಗುತ್ತಿದೆ ಅಲ್ಲವಾ?

ಒನಕೆ ಓಬವ್ವ ನನ್ನ ಮುಂದೆ ನಿಂತಿದ್ದಳು! ನಿತ್ಯವೂ ಶತೃಗಳಿಂದ ಊರನ್ನು ರಕ್ಷಿಸುತ್ತಿದ್ದ ಅವಳ ಗಂಡನಿಗಿಂತ ಒಂದು ಕ್ಷಣದಲ್ಲಿ ತನ್ನ ಪತಿ-ಪ್ರೇಮ, ರಾಷ್ಟ್ರ-ಪ್ರೇಮಗಳೆರಡನ್ನೂ confuse ಮಾಡಿಕೊಳ್ಳದೆ, ಸಂಕೀರ್ಣವಾದದ್ದನ್ನು ಸರಳವಾಗಿ ನಮಗಾಗಿ ತೋರಿಸಿಕೊಟ್ಟಳಲ್ಲ ಆಕೆ, ನೋಡಲು ಹೇಗಿದ್ದಳು? ನನ್ನಂತೆ? ನಿಮ್ಮಂತೆ? ಅವಳ ಮನೋ ನೋವು, ನಲಿವು ಏನಿತ್ತು?. . . ಎಲ್ಲವೂ question mark ಗಳಾಗಿ ನನ್ನನ್ನೇ ಉತ್ತರ ಕೇಳುತ್ತಿದ್ದವು!

ಇದೇನು, ಮೇಲುಕೋಟೆ ಅಲಮೇಲು ಮಗನ ಹೆಸರು ಹೇಳ್ತೀನಿ ಅಂತ ದುರ್ಗದ ಕೋಟೆ ಹತ್ತಿಸಿಬಿಟ್ಟಳಲ್ಲಾ ಇವಳು ಅಂತ ಯೋಚಿಸುತ್ತಿದ್ದೀರಾ? ಖಂಡಿತ ಹೇಳ್ತೀನಿ. ಸಧ್ಯದಲ್ಲೇ ಹೇಳ್ತೀನಿ. . . . ಈಗಂತೂ ಬಯಲು ಸೀಮೆಯ ನಾನು ದುರ್ಗದ ಸೀಮೆಯಲ್ಲಿ ನಿಂತು ಮನುಜ-ಮನುಷ್ಯ ಎಲ್ಲವನ್ನೂ ಮೀರಿದ ಒಂದು ಹೆಣ್ಣು element ಮಾತ್ರ ಆಗಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳೋಣ ಅನ್ನಿಸಿತು. ಯಾವ ಸೀಮೆಯಲ್ಲೇ ಹುಟ್ಟಿ ಯಾವ ಸೀಮೆಯಲ್ಲೇ ಬೆಳೆದು ಯಾವ ಸೀಮೆಯಲ್ಲೇ ಉಳಿದರೂ ನಾವು ಹೆಣ್ಣಾಗೇ ಇರುತ್ತೇವೆ. ಹೌದು, ನಾವು ಹೆಂಗಸರೇ ಹೀಗೆ!

ಚಿತ್ರಗಳಲ್ಲಿ ಚಿತ್ರದುರ್ಗದ ಕಲ್ಲಿನ ಕೋಟೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X