Get Updates
Get notified of breaking news, exclusive insights, and must-see stories!

ಒಳ್ಳೆಯ ಕೆಲಸಗಳ ಪರಿಣಾಮ ಖಂಡಿತ ಒಳ್ಳೆಯದೇ ಆಗುತ್ತದೆ

ಹತ್ತೊಂಭತ್ತನೆಯ ಶತಮಾನದ ಕೊನೆಯ ವರ್ಷಗಳು. ಇಬ್ಬರು ಹುಡುಗರು ಅಮೇರಿಕದ ಪ್ರಖ್ಯಾತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದರು. ಅವರು ತುಂಬಾ ಬಡವರಾಗಿದ್ದರು. ಒಮ್ಮೆ ಅವರಿಗೆ ಮನೆಯಿಂದ ಬರಬೇಕಾದ ಹಣ ಬಂದಿರಲಿಲ್ಲ. ಹೀಗಾಗಿ ಅವರ ಹತ್ತಿರ ವಿಶ್ವವಿದ್ಯಾಲಯಕ್ಕೆ ಕೊಡಬೇಕಾದ ಶಿಕ್ಷಣ ಶುಲ್ಕ ಮತ್ತು ಇತರ ಖರ್ಚುಗಳಿಗೆ ಬೇಕಾದ ಹಣವೂ ಇರಲಿಲ್ಲ. ಇನ್ನೇನು ಆ ವರ್ಷದ ಓದನ್ನು ತ್ಯಜಿಸುವ ಗಳಿಗೆ ಬಂದಿತ್ತು.

ಆಗ ಆ ಹುಡುಗರಲ್ಲೊಬ್ಬನಿಗೆ ಒಂದು ಉಪಾಯ ತೋಚಿತು. ಅವನು ಅಂದು ಅಮೇರಿಕದಲ್ಲಿ ತುಂಬಾ ಹೆಸರುವಾಸಿಯಾಗಿದ್ದ ಪೋಲ್ಯಾಂಡ್ ಮೂಲದ ಪಿಯಾನೋ ವಾದಕ ಪಡೆರೆವಸ್ಕಿ ಅವರನ್ನು ಯಾಚಿಸಿ ವಿಶ್ವವಿದ್ಯಾಲಯದಲ್ಲಿ ಒಂದು ಕಚೇರಿಯನ್ನು ಏರ್ಪಡಿಸಿದರೆ ಅದರಿಂದ ಗಳಿಸಿದ ಲಾಭದಲ್ಲಿ ತಮ್ಮ ಶಿಕ್ಷಣ ಶುಲ್ಕವನ್ನು ಕಟ್ಟುವುದಲ್ಲದೇ ತಮ್ಮ ಉಳಿದ ಖರ್ಚುಗಳಿಗೂ ಹಣ ಉಳಿಯಬಹುದು ಎಂದು ಯೋಚಿಸಿದ. ಈ ಯೋಜನೆಗೆ ಅವನ ಮಿತ್ರನ ಸಹಕಾರವೂ ದೊರೆಯಿತು.

ಇಬ್ಬರೂ ಮಿತ್ರರೂ ಪಡೆರೆವಸ್ಕಿಯ ವ್ಯವಸ್ಥಾಪಕನನ್ನು ಭೇಟಿ ಮಾಡಿದಾಗ ಅವನು ಪಿಯಾನೋ ಕಾರ್ಯಕ್ರಮಕ್ಕೆ ಎರಡು ಸಾವಿರ ಡಾಲರ್ ಗೌರವಧನವನ್ನು ನೀಡುವ ಬೇಡಿಕೆಯನ್ನು ಮುಂದಿಟ್ಟ. ಅಂದಿನ ದಿನಗಳಲ್ಲಿ ಎರಡು ಸಾವಿರ ಡಾಲರುಗಳೆಂದರೆ ಬೃಹತ್ ಮೊತ್ತವಾಗಿತ್ತು. ಅವರ ಬೇಡಿಕೆಯನ್ನು ಕೇಳಿ ಅಪ್ರತಿಭರಾದ ಹುಡುಗರಿಬ್ಬರೂ ಕೊನೆಗೆ ಒಪ್ಪಿಕೊಂಡರು.

ಪಡೆರೆವಸ್ಕಿಯ ಅವರಂತಹ ವಿಖ್ಯಾತ ಸಂಗೀತಕಾರನ ಕಚೇರಿ ಎಂದರೆ ಬಹಳಷ್ಟು ಜನ ಸೇರುತ್ತಾರೆ. ಅದರ ಟಿಕೆಟ್ಟಿನ ಹಣದಲ್ಲಿ ಅವರಿಗೆ ಎರಡು ಸಾವಿರ ಗೌರವಧನ ನೀಡಿದರೂ ತಮಗೆ ಸಾಕಷ್ಟು ಹಣ ಉಳಿಯುತ್ತದೆ ಎಂದು ಅವರ ಲೆಕ್ಕಾಚಾರ. ಸಂಗೀತ ಕಚೇರಿ ಸುಲಲಿತವಾಗಿ ನಡೆಯಲು ಇಬ್ಬರೂ ಹುಡುಗರು ಬಹಳ ಪರಿಶ್ರಮ ಪಟ್ಟರು. ಕಚೇರಿಯ ಬಗ್ಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡಿದರು. ವಿಶ್ವವಿದ್ಯಾಲಯದ ಎಲ್ಲ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಕಚೇರಿಗೆ ಬರಲು ಮನವಿ ಮಾಡಿಕೊಂಡರು.

ಆದರೂ ಕಚೇರಿಯ ದಿನ ಅದೇಕೋ ಸಾಕಷ್ಟು ಜನರು ಸೇರಲಿಲ್ಲ. ಹೀಗಾಗಿ ಹುಡುಗರ ಹತ್ತಿರ ಕೇವಲ ಸಾವಿರದ ಆರುನೂರು ಡಾಲರ್ ಮಾತ್ರ ಸೇರಿತು. ಅವರು ಪಡೆರೆವಸ್ಕಿ ಅವರ ಹತ್ತಿರ ಹೋಗಿ ಅವರಿಗೆ ತಮ್ಮ ಎಲ್ಲ ಪ್ರಯತ್ನಗಳನ್ನೂ ವಿವರಿಸಿ ಅವರಿಗೆ ತಮ್ಮ ಹತ್ತಿರ ಉಳಿದ ಸಾವಿರದ ಆರುನೂರು ಡಾಲರುಗಳನ್ನು ಅವರಿಗೆ ನೀಡಿದರಲ್ಲದೇ ಉಳಿದ ನಾನೂರನ್ನು ಭವಿಷ್ಯದಲ್ಲಿ ನೀಡುವ ವಾಗ್ದಾನ ಪತ್ರ ಬರೆದು ತಮ್ಮ ಸಹಿ ಮಾಡಿ ಅವರಿಗೆ ನೀಡಿದರು.

It takes many good deeds to build a good reputation

ಪಡೆರೆವಸ್ಕಿಗೆ ಹುಡುಗರ ಮೇಲೆ ಬಹಳ ಕರುಣೆ ಉಂಟಾಯಿತು. ಅವರು ಹುಡುಗರಿಗೆ ಹಣವನ್ನು ವಾಪಸ್ಸು ಕೊಟ್ಟು ಅದರಲ್ಲಿ ಅವರಿಗೆ ತಮ್ಮ ಖರ್ಚುಗಳನ್ನೆಲ್ಲ ಕಳೆದು ಉಳಿದ ಹಣದಲ್ಲಿ ಹತ್ತು ಶೇಕಡಾವನ್ನು ತಮ್ಮ ಮುಂದಿನ ಖರ್ಚಿಗೆ ಇಟ್ಟುಕೊಂಡ ಮೇಲೆ ಹಣವೇನಾದರೂ ಉಳಿದರೆ ತಮಗೆ ನೀಡುವಂತೆ ಹೇಳಿದರು. ಅವರ ಔದಾರ್ಯವನ್ನು ಕಂಡ ಹುಡುಗರ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು.

ದಿನಗಳು ಉರುಳಿದವು. ಮುಂದೆ ಪಡೆರೆವಸ್ಕಿಯವರು ತಮ್ಮ ದೇಶ ಪೋಲಂಡ್ ನ ಪ್ರಧಾನಿಯಾಗಿ ಚುನಾಯಿತರಾದರು. ಆದರೆ ಮೊದಲ ವಿಶ್ವ ಯುದ್ಧದ ನಂತರ ಉಂಟಾದ ಕ್ಷಾಮದಲ್ಲಿ ಪೋಲಂಡ್ ಬಹು ದೊಡ್ಡ ಆಹಾರ ಕೊರತೆಯನ್ನು ಅನುಭವಿಸಿತು. ಪ್ರಧಾನಿ ಪಡೆರೆವಸ್ಕಿಯವರು ತಮ್ಮ ಪ್ರಜೆಗಳಿಗೆ ಆಹಾರ ಒದಗಿಸಲು ಬಹಳ ಪ್ರಯತ್ನವನ್ನು ಮಾಡುತ್ತಿದ್ದರು.

ಆಗ ಅಮೇರಿಕದಲ್ಲಿ ಆಹಾರ ಮತ್ತು ಪರಿಹಾರ ನಿಧಿಯ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ ಹರ್ಬರ್ಟ್ ಹೂವರ್ ಅವರಿಗೆ ಪತ್ರ ಬರೆದು ತಮ್ಮ ದೇಶದ ಪೀಡಿತ ಪ್ರಜೆಗಳಿಗಾಗಿ ಆಹಾರವನ್ನು ಕಳುಹಿಸಲು ಕೇಳಿಕೊಂಡರು. ಹರ್ಬರ್ಟ್ ಹೂವರ್ ಕೂಡಲೇ ಕಾರ್ಯ ಪ್ರವೃತ್ತರಾಗಿ ಪೋಲಂಡಿಗೆ ಮಿಲಿಯಗಟ್ಟಲೇ ಟನ್ನುಗಳಷ್ಟು ಆಹಾರ ಕಳುಹಿಸಿಕೊಟ್ಟರು. ಹರ್ಬರ್ಟ್ ಹೂವರ್ ಅವರ ಸಕಾಲಿಕ ನೆರವಿನಿಂದ ಪೋಲಂಡ್ ದೊಡ್ಡದೊಂದು ವಿಪತ್ತಿನಿಂದ ಪಾರಾಯಿತು.

ಹರ್ಬರ್ಟ್ ಹೂವರ್ ಅವರ ನೆರವಿನಿಂದ ಧನ್ಯರಾದ ಪ್ರಧಾನಿ ಪಡೆರೆವಸ್ಕಿಯವರು ಹರ್ಬರ್ಟ್ ಹೂವರ್ ಅವರನ್ನು ಭೇಟಿ ಮಾಡಿ ಅವರ ಸಕಾಲಿಕ ನೆರವಿಗೆ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು. ಆಗ ಹರ್ಬರ್ಟ್ ಹೂವರ್ ಅವರು ನಸುನಗುತ್ತ "ಅದೆಲ್ಲಾ ಸರಿ ಪ್ರಧಾನ ಮಂತ್ರಿಗಳೇ, ತಮಗೆ ನೆನಪಿಲ್ಲದಿರಬಹುದು. ಆದರೆ ನಾನು ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಬಹು ದೊಡ್ಡ ಆರ್ಥಿಕ ಸಂಕಷ್ಟದಲ್ಲಿದ್ದೆ. ಆಗ ನೀವು ನನ್ನನ್ನು ಪಾರು ಮಾಡಿದಿರಿ" ಎಂದು ಅಂದು ನಡೆದ ಘಟನೆಯನ್ನು ನೆನಪಿಸಿದಾಗ ಪಡೆರೆವಸ್ಕಿ ಅವರ ಮುಖದಲ್ಲಿ ಸಂತೃಪ್ತಿ ತುಂಬು ತುಳುಕಾಡುತ್ತಿತ್ತು.

ಈ ಮೇಲಿನ ಕಥೆ ಬಹಳ ದಿನಗಳ ಹಿಂದೆ ವಾಟ್ಸಾಪ್ ಜಾಲದಲ್ಲಿ ಹರಿದಾಡುತ್ತ ನನಗೆ ಬಂದಿತ್ತು. ನಾನದನ್ನು ಓದಿದಾಗ ಕಣ್ಣಂಚು ತೇವಗೊಂಡಿತ್ತು. ಒಳ್ಳೆಯ ಕೆಲಸಗಳ ಪರಿಣಾಮ ಒಳ್ಳೆಯದೇ ಆಗುತ್ತದೆ ಎಂಬುದರ ಬಹುದೊಡ್ಡ ಉದಾಹರಣೆ ಈ ಕಥೆ. ಕಥೆಯ ಬಲವಾದ ರಸಭಾವ ಮತ್ತು ಧನಾತ್ಮಕ ಸಂದೇಶಗಳಿಂದಾಗಿ ಅದು ಮನಸ್ಸಿನಲ್ಲಿ ಹಸಿರಾಗಿ ಉಳಿದುಕೊಂಡಿದೆ. ಅನೇಕ ಬಾರಿ ನಮ್ಮ ಸುತ್ತಮುತ್ತಲೂ ಇಂತಹ ಅನೇಕ ಚಿಕ್ಕ ಪುಟ್ಟ ಸದ್ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ನಮ್ಮ ಸುತ್ತಮುತ್ತಲೂ ಹರಡಿದ ಋಣಾತ್ಮಕ ವಾರ್ತೆಗಳಿಂದ ನಮಗೆ ಸಮಾಜದಲ್ಲಿ ನಡೆಯುವ ಇಂತಹ ಸದ್ಘಟನೆಗಳು ಕಾಣುವುದಿಲ್ಲ.

ಪಡೆರೆವಸ್ಕಿಯವರಂತಹ ಔದಾರ್ಯ ಅಥವಾ ಹರ್ಬರ್ಟ್ ಹೂವರ್ ಉಪಕಾರ ಸ್ಮರಣೆಯನ್ನು ಮಾಡುವ ಉನ್ನತ ಸ್ಥಾನ ಅಥವಾ ಅವಕಾಶ ನಮಗೆ ದೊರೆಯದಿರಬಹುದು. ಆದರೆ ಸಮಾಜದಲ್ಲಿ ಚಿಕ್ಕ ಪುಟ್ಟ ನೆರವು ನೀಡುವ ಅನೇಕ ಅವಕಾಶಗಳು ನಮಗೆ ಮೇಲಿಂದ ಮೇಲೆ ಒದಗುತ್ತಿರುತ್ತವೆ. ಎಲ್ಲೋ ದೂರದಲ್ಲಿ ಯಾರೋ ಅಪರಿಚಿತ ಬಡವ ಅನಾರೋಗ್ಯದಿಂದ ನರಳುತ್ತಿದ್ದರೆ ಅನಾಮಧೇಯರಾಗಿಯೇ ಅವರಿಗೆ ನಮ್ಮ ಪುಟ್ಟ ನೆರವು ನೀಡಬಹುದು. ವಿದ್ಯಾಭ್ಯಾಸಕ್ಕೆ ಹಣದ ಅವಶ್ಯಕತೆಯಲ್ಲಿದ್ದ ಹುಡುಗರಿಗೆ ಸ್ವಲ್ಪವಾದರೂ ಆಗಲಿ, ಧನ ಸಹಾಯ ಮಾಡಬಹುದು. ವರ್ಷದಲ್ಲಿ ಒಮ್ಮೆಯಾದರೂ ಅನಾಥಾಶ್ರಮಗಳಿಗೆ ಅಥವಾ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ತನು ಮನ ಧನಗಳ ಸಹಾಯ ಮಾಡಬಹುದು. ವಿಶ್ವದ ಯಾವುದೇ ಭಾಗಗಳಲ್ಲಿ ನೈಸರ್ಗಿಕ ವಿಪತ್ತು ತಲೆದೋರಿದರೆ ನಮ್ಮಿಂದಾದಷ್ಟು ಸಹಾಯವನ್ನು ತತ್ ಕ್ಷಣ ನೀಡಿದರೆ ಸಾಕು.

ಅಂತಹ ಸಂದರ್ಭದಲ್ಲಿ ಸ್ವಾರ್ಥ ತಲೆಯೆತ್ತದಂತೆ ನೋಡಿಕೊಂಡು ನಮ್ಮಿಂದಾದಷ್ಟು ನೆರವನ್ನು ನೀಡಿದರೆ ಸಾಕು. ಮತ್ತೇನಿರದಿದ್ದರೂ ಅಪೂರ್ವವಾದ ಸಂತೃಪ್ತಿ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಯಾವಾಗಲೂ ನಾವು ಮಾಡಿದ ನೆರವಿಗೆ ಪ್ರತಿಫಲ ದೊರೆಯಲೇಬೇಕು ಅಥವಾ ಖಂಡಿತ ದೊರೆಯುತ್ತದೆ ಎಂಬ ಭಾವನೆಯನ್ನು ಇಟ್ಟುಕೊಂಡು ನೆರವು ನೀಡಿದರೆ ಸ್ವಾರ್ಥದ ಸುಳಿವು ಅಪೂರ್ವವಾದ ಸಂತೃಪ್ತಿಯ ಮಾರ್ಗಕ್ಕೆ ಕಂಟಕವಾಗಿ ನಿಲ್ಲುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+