ಸಿಡುಕುವ ಟೀನೇಜ್ ಮಕ್ಕಳನ್ನು ಹೇಗಪ್ಪಾ ಹದ್ದುಬಸ್ತಿಗೆ ತರುವುದು?
ಮೊನ್ನೆ ನನ್ನ ಸಹೋದ್ಯೋಗಿ ಮಿತ್ರರೊಬ್ಬರು ಇತ್ತೀಚೆಗೆ ಟೀನೇಜಿಗೆ ಕಾಲಿಟ್ಟಿರುವ ಅವರ ಮಗ ತಮ್ಮ ಮೇಲೆ ಮಾತಿಗೊಮ್ಮೆ ಸಿಟ್ಟಿಗೇಳುತ್ತಾನೆ ಎಂದು ನನ್ನೊಂದಿಗೆ ತಮ್ಮ ದುಃಖ ತೋಡಿಕೊಂಡರು. ಅಭ್ಯಾಸ ಮತ್ತು ಆಟಗಳಲ್ಲಿ ಮುಂದಿರುವ ಅವರ ಮಗ ಅದು ಹೇಗೆ ಒಮ್ಮೆಲೇ ಬದಲಾದ ಎಂಬುದು ಅವರಲ್ಲಿ ಸಖೇದಾಶ್ವರ್ಯವನ್ನುಂಟು ಮಾಡಿತ್ತು.
ನಡವಳಿಕೆಗಳಲ್ಲಿ ಈ ತರಹದ ಬದಲಾವಣೆ ಟೀನೇಜ್ ಮಕ್ಕಳಲ್ಲಿ ಸರ್ವೇ ಸಾಮಾನ್ಯ ಎಂದು ನಾನು ಅವರಿಗೆ ಹೇಳಿ ಸಮಾಧಾನ ಪಡಿಸಿದೆ. ನಿಜ ಹೇಳಬೇಕೆಂದರೆ ಇಬ್ಬರು ಟೀನೇಜ್ ಮಕ್ಕಳಿರುವ ನಾನು ಕೂಡ ಮಕ್ಕಳ ವರ್ತನೆಯಲ್ಲಿ ಅನೇಕ ಬಾರಿ ಏರುಪೇರುಗಳನ್ನು ಕಂಡಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ. ಕೆಲವು ಬಾರಿ ತುಂಬಾ ಸಿಟ್ಟು ಮಾಡಿಕೊಂಡಿದ್ದೇನೆ ಕೂಡಾ.
ವಿನಾಶಕಾರಿ ಮಾರ್ಗದತ್ತ ಸಾಗದಿರಲಿ ಮಾನವನ ರಚನಾತ್ಮಕ ಬುದ್ಧಿ
ಟೀನೇಜ್ ಮಕ್ಕಳಲ್ಲಿ ಈ ತರಹದ ವರ್ತನೆ ಸಾಮಾನ್ಯ ಎಂದು ಅರಿತುಕೊಳ್ಳಲು ನನಗೆ ಸಾಕಷ್ಟು ಸಮಯವೇ ಬೇಕಾಯಿತು. ಒಟ್ಟಿನಲ್ಲಿ ಟೀನೇಜ್ ಮಕ್ಕಳ ಸೂಕ್ಷ್ಮ ಸ್ವಭಾವವನ್ನು ಅರಿತುಕೊಳ್ಳುವುದು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಒಂದು ದೊಡ್ಡ ಕಸರತ್ತೇ ಸರಿ.
ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು ತಾವು ಹೇಳಿದ್ದನ್ನೆಲ್ಲಾ ಮುಗ್ಧವಾಗಿ ಕೇಳುತ್ತಿದ್ದ ಮಕ್ಕಳು ಅದ್ಯಾವಾಗ ಒಮ್ಮೆಲೇ ಬೆಳೆದು ಎಲ್ಲವನ್ನೂ ಪ್ರಶ್ನಿಸುವ, ಎಲ್ಲದಕ್ಕೂ ಕಂಪ್ಲೇಂಟ್ ಮಾಡುವ ಟೀನೇಜರ್ ಆಗುತ್ತಾರೆ ಎಂಬುದು ನಮ್ಮಂತಹ ಅನೇಕ ಅಪ್ಪ ಅಮ್ಮಂದಿರಿಗೆ ಮೊದಮೊದಲು ತಿಳಿಯುವುದೇ ಇಲ್ಲ.
ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ
ಮಕ್ಕಳು ಚಿಕ್ಕವರಾಗಿದ್ದಾಗ ಅವರ ಬಾಲ್ಯದ ಮುದ್ದು ಮಾತುಗಳನ್ನು ಸಂತಸದಿಂದ ಕೇಳುತ್ತಲೋ, ಅವರ ಅನೇಕ ಮುಗ್ಧ ಪ್ರಶ್ನೆಗಳಿಗೆ ಬೆರಗಾಗುತ್ತಲೋ, ಅವರ ಕಲಿಕೆಯ ಬೆಳವಣಿಗೆಯನ್ನು ಕಂಡು ಆನಂದಪಡುತ್ತಲೋ ಸಾಗುತ್ತಿದ್ದ ತಂದೆ ತಾಯಿಯರಿಗೆ, ಮಕ್ಕಳು ಒಮ್ಮೆಲೇ ಪ್ರತಿಭಟಿಸುವುದನ್ನೋ ಅಥವಾ ತಮಗೆ ಅವಿಧೇಯತೆ ತೋರಿಸುವುದನ್ನೋ ಕಂಡಾಗ ಸ್ವಾಭಾವಿಕವಾಗಿ ಸಿಟ್ಟು ಬರುತ್ತದೆ ಅಥವಾ ಕೆಡುಕೆನಿಸುತ್ತದೆ. ಆದರೆ ಮಕ್ಕಳು ಬೆಳೆದು ದೊಡ್ಡವರಾದಂತೆ ಅವರು ತಮ್ಮದೇ ಆದ ದೃಷ್ಟಿಕೋನ ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಸದಾ ಕಾಲದ ನಿಯಂತ್ರಣದ ಪರಿಧಿಯಿಂದ ಹೊರಗೆ ಹೋಗುತ್ತಾರೆ ಎಂದು ಅರಿವಾಗುವುದಿಲ್ಲ. ಮಕ್ಕಳಲ್ಲಿನ ಈ ಬೆಳವಣಿಗೆ ತಂದೆ ತಾಯಿಯರಿಗೆ ಅನೇಕ ಬಾರಿ ನುಂಗಲಾಗದ ತುತ್ತಾಗುತ್ತದೆ.
ನಾವು ನಮ್ಮ ಪೂರ್ವಾಗ್ರಹಗಳ ಕೈದಿಗಳು, ನಾವು ವಿತಂಡವಾದಿಗಳು!
ಇದು ಬಹುತೇಕ ಎಲ್ಲ ಟೀನೇಜ್ ಮಕ್ಕಳ ತಂದೆತಾಯಿಯರ ಅನುಭವ. ನಮ್ಮ ಹಿಂದಿನ ತಲೆಮಾರಿನಲ್ಲಿ ಹೆಚ್ಚಿನ ಮನೆಗಳಲ್ಲಿ ನಿತ್ಯದ ಬದುಕಿನ ಬವಣೆಗಳಲ್ಲಿ ನಮ್ಮ ತಂದೆ ತಾಯಿಯರಿಗೆ ಅದೆಷ್ಟು ಈ ವಿಷಯದ ಅನುಭವವಾಗಿತ್ತೋ ಗೊತ್ತಿಲ್ಲ. ಅವರು ಈ ವಿಷಯದಲ್ಲಿ ನಮ್ಮಷ್ಟು ತಲೆಕೆಡಿಸಿಕೊಂಡಿರಲಿಲ್ಲ ಅಥವಾ ಅದರ ಬಗ್ಗೆ ಯೋಚಿಸುವ ವ್ಯವಧಾನವೂ ಅವರಿಗಿರಲಿಲ್ಲ ಎಂದು ಕಾಣುತ್ತೆ. ಆದರೆ ನಮ್ಮ ತಲೆಮಾರು ನಮ್ಮ ಮಕ್ಕಳ ವಿಷಯದಲ್ಲಿ ಅತೀ ಹೆಚ್ಚು ಸೂಕ್ಷ್ಮ ಎಂದು ಅನಿಸುತ್ತದೆ. ನಮ್ಮ ಮಕ್ಕಳು ಸರಿಯಾದ ರೀತಿಯಲ್ಲಿ ಬೆಳೆಯುತ್ತಿದ್ದಾರೋ ಎಂಬ ವಿಷಯದ ಬಗ್ಗೆ ನಮಗೆ ಅತೀವ ಕಾಳಜಿ. ಹೀಗಾಗಿ ಅವರ ಪ್ರತಿಯೊಂದು ವಿಷಯದ ಬಗ್ಗೆ ನಾವು ಓವರ್ ಪ್ರೊಟೆಕ್ಟಿವ್.
ಅವರೇನು ಮಾಡಬೇಕು, ಏನನ್ನು ಕೇಳಬೇಕು ಮತ್ತು ಏನನ್ನು ನೋಡಬೇಕು ಎಂಬುದರ ಬಗ್ಗೆ ನಮ್ಮದೇ ಆದ ಧೋರಣೆಗಳನ್ನು ನಾವು ಹೊಂದಿರುತ್ತೇವೆ ಮತ್ತು ಅವರ ಮೇಲೆ ಅವನ್ನು ಹೇರಲು ಪ್ರಯತ್ನಿಸುತ್ತೇವೆ. ಈ ವಿಷಯದಲ್ಲಿ ಜಾಗರೂಕರಾಗಿರುವುದು ಇಂದಿನ ಅಂತರ್ಜಾಲ ಯುಗದಲ್ಲಿ ತಪ್ಪೇನಿಲ್ಲ ಬಿಡಿ. ಮಕ್ಕಳು ಹಾದಿಗೆಡದಿರಲಿ ಮತ್ತು ಸರಿಯಾದ ಮಾರ್ಗದಲ್ಲಿ ನಡೆಯಲಿ ಎಂಬುದು ನಮ್ಮೆಲ್ಲರ ಆಶಯ. ಆದರೆ ಅನೇಕ ಬಾರಿ ನಮಗೆ ಅವರೊಂದಿಗೆ ಈ ವಿಷಯದಲ್ಲಿ ಹೇಗೆ ಮಾತನಾಡಬೇಕು ಮತ್ತು ಹೇಗೆ ವರ್ತಿಸಬೇಕು ಎಂದೇ ಗೊತ್ತಿರುವುದಿಲ್ಲ. ನಾವು ಅವರನ್ನ ಚಿಕ್ಕ ಮಕ್ಕಳಂತೆಯೇ ಪರಿಗಣಿಸಿ ವರ್ತಿಸುವುದರಿಂದ ಅವರಿಗೆ ಬೇಜಾರಾಗುತ್ತದೆ.
ಶಾಲಾ ಮೈದಾನವನ್ನೇ ಗದ್ದೆ ಮಾಡಿ ಮಕ್ಕಳಿಗೆ ಕೃಷಿಯ ಅರಿವು ಮೂಡಿಸಿದ ಶಿಕ್ಷಕರು
ಮುಖ್ಯವಾಗಿ ಎಲ್ಲ ತಂದೆ ತಾಯಿಗಳಿಗೆ ಮಕ್ಕಳು ತಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗಲೂ ಮೋಬೈಲು ಫೋನುಗಳಲ್ಲಿ ವಾಟ್ಸ್ ಆಪ್, ಫೇಸ್ ಬುಕ್ ಅಥವಾ ಟೆಲಿವಿಜನ್ ಕಾರ್ಯಕ್ರಮಗಳಲ್ಲಿ ನಿರತರಾಗಿರುತ್ತಾರೆ ಮತ್ತು ತುಂಬಾ ಸಿಡುಕಿನಿಂದ ತಮ್ಮೊಂದಿಗೆ ವರ್ತಿಸುತ್ತಾರೆ ಎಂಬ ಮೂರು ಪ್ರಮುಖ ದೂರುಗಳಿರುತ್ತವೆ.
ಮನಃಶಾಸ್ತ್ರಜ್ಞರ ಪ್ರಕಾರ, ಟೀನೇಜ್ ವರ್ಷಗಳಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಮಕ್ಕಳು ಹೆಣಗುತ್ತಿರುತ್ತಾರೆ. ಆದುದರಿಂದ ಅವರ ನಡವಳಿಕೆಗಳಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತದೆ. ಆದುದರಿಂದ ಅವರನ್ನು ಚಿಕ್ಕ ಮಕ್ಕಳಂತೆ ಕಾಣದೇ ತಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ ಸ್ವತಂತ್ರ ವ್ಯಕ್ತಿಗಳೆಂದೇ ಭಾವಿಸಬೇಕು. ಆದರೆ ಟೀನೇಜ್ ವರ್ಷಗಳಲ್ಲಿ ಚಿಕ್ಕವರೂ ಅಲ್ಲದ ಆದರೆ ದೊಡ್ಡವರೂ ಅಲ್ಲದ ಮಧ್ಯಂತರ ಸ್ಥಿತಿಯಲ್ಲಿರುವುದರಿಂದ ಅವರೊಂದಿಗೆ ಬಹಳ ಶಿಸ್ತಿನದೂ ಅಲ್ಲದ ಆದರೆ ಅತಿಯಾದ ಸಲಿಗೆಯೂ ಅಲ್ಲದ ನಡವಳಿಕೆಯನ್ನು ನಾವು ತೋರಬೇಕಾಗುತ್ತದೆ.
ದೇವರಲ್ಲಿ ನಂಬಿಕೆಯಿದೆಯೆ? ಎಲ್ಲಿದ್ದಾನೆ, ಯಾವ ಸ್ವರೂಪದಲ್ಲಿದ್ದಾನೆ?
ಟೀನೇಜ್ ಮಕ್ಕಳಲ್ಲಿ ತಮ್ಮದೇ ಆದ ಸ್ವತಂತ್ರ ವಿಚಾರಗಳಿರುತ್ತವೆ ಮತ್ತು ಅವರು ಆದರ್ಶವಾದಿಗಳಾಗಿರುತ್ತಾರೆ. ಅವರಿಗೆ ಸ್ವಲ್ಪವಾದರೂ ಅನ್ಯಾಯ ಎಂದು ತೋರಿದರೆ ಸಾಕು. ಅವರು ಪ್ರತಿಭಟಿಸುತ್ತಾರೆ. ಅಲ್ಲದೇ ತಂದೆ ತಾಯಿಯರು ಅವರನ್ನು ಚಿಕ್ಕವರು ಎಂದು ಭಾವಿಸಿ ಮಾತನಾಡಿದರೆ ಅವರಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ತಂದೆ ತಾಯಿಯರು ತುಂಬಾ ಶಿಸ್ತಿನ ನಿಯಮ ನಿರ್ಬಂಧಗಳನ್ನು ಹಾಕಿದರೆ, ಅವರು ಕೇಳುವುದಿಲ್ಲ. ಹೀಗಾಗಿ ನಿಯಮ ನಿರ್ಬಂಧಗಳನ್ನು ಆಗಾಗ ಸ್ವಲ್ಪ ಸಡಿಲಿಸಬೇಕಾಗುತ್ತದೆ. ಆದರೆ ಅದೇ ಸಮಯದಲ್ಲಿ ಅವರಿಗೆ ಲಕ್ಷ್ಮಣ ರೇಖೆ ಎಲ್ಲಿ ಎಂಬುದನ್ನು ಹೇಳಬೇಕಾಗುತ್ತದೆ. ಇದನ್ನು tightrope walk ಎಂದೇ ಹೇಳಬಹುದು. ಆದರೆ ನಮ್ಮಂತಹ ಎಲ್ಲ ಆಧುನಿಕ ತಂದೆ ತಾಯಿಯರು ಮಾಡುತ್ತಿರುವುದು ಅದೇ tightrope walk ತಾನೇ?
ಇದೇ tightrope walk ಮಕ್ಕಳ ಮೋಬೈಲು ಮತ್ತು ಸಾಮಾಜಿಕ ಜಾಲತಾಣಗಳ ಖಯಾಲಿಗೂ ಅನ್ವಯವಾಗುತ್ತದೆ. ಸಾಮಾಜಿಕ ಜಾಲತಾಣಗಳ ಖಯಾಲಿನಿಂದ ಮಕ್ಕಳ ಆರೋಗ್ಯ ಮತ್ತು ಅಭ್ಯಾಸಗಳ ಮೇಲೆ ಯಾವುದೇ ಪರಿಣಾಮ ಮಾಡದಿದ್ದರೆ ಅವರನ್ನು ಒಂದು ಮಟ್ಟಿನವರೆಗೆ ಮುಂದುವರೆಯಲು ಬಿಡಬಹುದು. ಆದರೆ ಅದು ಒಂದು ಗೀಳಾಗಿ ಪರಿವರ್ತಿಸದಂತೆ ನೋಡಿಕೊಂಡರೆ ಸಾಕು. ಅವರನ್ನು ಹಾಸಿಗೆಯ ಮೇಲೆ ಮಲಗಿಕೊಂಡು ಅಥವಾ ಊಟಮಾಡುವಾಗ ವಾಟ್ಸಾಪ್ ಮತ್ತು ಫೇಸ್ಬುಕ್ನಂತಹ ತಾಣಗಳ ಮೇಲೆ ಮಗ್ನರಾಗುವುದನ್ನು ಅಥವಾ ಆಟವಾಡುವುದನ್ನು ನಿರ್ಬಂಧಿಸಬೇಕು. ಅಲ್ಲದೇ ಅಂತರ್ಜಾಲ ತಾಣಗಳ ಮೇಲೆ ಕೆಲವು ಕಂಟ್ರೋಲ್ಗಳನ್ನು ಇಟ್ಟು ಮಕ್ಕಳು ಅವುಗಳ ದುರುಪಯೋಗ ಮಾಡದಂತೆ ನೋಡಿಕೊಳ್ಳುವುದು ಮುಖ್ಯ.
ಮತ್ತು ಸಿಡುಕುತನ ಹಾಗೂ ಅಸಮಾಧಾನ ಟೀನೇಜ್ ಮಕ್ಕಳಲ್ಲಿ ಸರ್ವಸಾಮಾನ್ಯ. ಇದು ಬೆಳೆಯುವ ಮಕ್ಕಳ ಮತ್ತು ಅವರು ಸ್ವತಂತ್ರ ವ್ಯಕ್ತಿತ್ವದೆಡೆಗೆ ಹೆಜ್ಜೆಯಿಕ್ಕುವುದರ ಮುಖ್ಯ ಲಕ್ಷಣ. ಆದುದರಿಂದ ಅವರ ಈ ಚಿಕ್ಕ ಪುಟ್ಟ ದುರ್ವರ್ತನೆಗಳನ್ನು ನಾವು ಅಲಕ್ಷಿಸುವುದೇ ಸರಿ. ಸದಾ ಅವರ ಮೇಲೆ ಕಣ್ಣಿಟ್ಟು, ನಿರ್ಬಂಧಗಳನ್ನು ಹೇರಿದರೆ ಅವರಿಗೆ ಕಿರಿಕಿರಿಯುಂಟಾಗುತ್ತದೆ. ಆದುದರಿಂದ ಟೀನೇಜ್ ಮಕ್ಕಳನ್ನು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯಲು ಸ್ವಲ್ಪ ಸ್ವಾತಂತ್ರ್ಯ ನೀಡುವುದು ಮುಖ್ಯ. ಆದರೆ ಮಕ್ಕಳು ಯಾವುದೇ ವಯಸ್ಸಿನವರಾಗಿರಲಿ ಅವರಿಗೆ ತಂದೆ ತಾಯಿಯರ ಅಗತ್ಯವಿದ್ದೇ ಇರುತ್ತದೆ. ಆದುದರಿಂದ ಅವರು ಚಿಕ್ಕವರಿರುವಾಗ ಹಾಕಿರುವ ಅತೀ ಶಿಸ್ತಿನ ಚೌಕಟ್ಟನ್ನು ಸಡಲಿಸಿ ಅವರಿಗೆ ಬೇಕಾದಾಗ ನಾವಿದ್ದೇವೆ ಮತ್ತು ಅವರ ಸಹಾಯಕ್ಕೆ ಒದಗುತ್ತೇವೆ ಎಂಬ ನಂಬಿಕೆಯನ್ನು ಬೆಳೆಸಿದರೆ ಸಾಕು. ಹೀಗೆ ಹೇಳುವುದು ಮಾಡುವುದಕ್ಕಿಂತ ಸರಳ ಎಂಬ ಮಾತು ಸತ್ಯ. ಆದರೆ ನಮಗೆ ಬೇರಾವ ಮಾರ್ಗವೂ ಇಲ್ಲ ಅಲ್ಲವೇ? ಆದುದರಿಂದ ಈ ದಿಶೆಯಲ್ಲಿ ಪ್ರಯತ್ನಿಸುತ್ತಾ ಇರುವುದೇ ಸರಿಯಾದ ಮಾರ್ಗ.