ಕವಿಮನಸ್ಸಿನ ಯುವ ಲೇಖಕ ಶ್ರೀನಿಧಿ ಡಿಎಸ್
'ಕಾಡುಹರಟೆ' ಹೊಡೆಯಲು ಬಂದಿರುವ ಮಲೆನಾಡಿನ ಹುಡ್ಗ ಶ್ರೀನಿಧಿ ಡಿ.ಎಸ್. ಒಬ್ಬ ಕನಸುಗಾರ. ತನ್ನ ಸುತ್ತಮುತ್ತಲಿನ ಪರಿಸರದಲ್ಲಿನ ಸೂಕ್ಷ್ಮತೆಗಳನ್ನು ಅರ್ಥಪೂರ್ಣವಾಗಿ ಗ್ರಹಿಸಿ, ಅಕ್ಷರ ರೂಪದಿ ನೀಡಬಲ್ಲ ಸಂವೇದನಾಶೀಲ ಯುವ ಲೇಖಕ. ಭಾವನೆಗಳಿಗೆ ತಕ್ಕ ವರ್ಣನೆಗಳನ್ನು ಹೊಂದಿಸಿ ಕವನ ರಚಿಸುವುದರ ಜೊತೆಗೆ, ನಿತ್ಯ ಜೀವನದ ಆಗುಹೋಗುಗಳನ್ನು ಹೊಸ ಆಯಾಮದಿ ಅಕ್ಷರಗಳನ್ನು ಪೋಣಿಸಿ ಕಥನಗಳನ್ನು ಹೆಣೆಯುವ ಕಲಾಕಾರ. ದಕ್ಷಿಣಕನ್ನಡದ ಕಿನ್ನಿಗೋಳಿಯವರಾದ ಇವರು, ಕೊಡಚಾದ್ರಿ ತಪ್ಪಲಿನಲ್ಲಿ, ನಂದಿನಿ ನದೀ ತೀರದಲ್ಲಿ ವಿಹರಿಸುವಾಗಲೆಲ್ಲಾ ಕಂಡದ್ದು ಒಂದೇ ಕನಸು, ಸಮೂಹ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು. ತಮ್ಮ ತಂದೆಯ ಜತೆ ಹವ್ಯಾಸದ ಬೇಸಾಯದ ಜೊತೆಗೆ ಅಕ್ಷರ ಕೃಷಿಗೆ ಇಳಿಯಬೇಕು ಎಂಬುದು ಇವರ ಬಾಲ್ಯದ ಕನಸಾಗಿತ್ತು.
ಕೆಲಸ ನಿಮಿತ್ತ ಬೆಂಗಳೂರಿಗೆ ಬಂದ ಮೇಲೂ ಕಾಡು ಮೇಡುಗಳನ್ನು ಸುತ್ತುವುದು, ಒಂದು ಪಕ್ಷ ಬಾಕಿ ಎಲ್ಲಾ ಕೆಲಸಗಳನ್ನು ಮರೆತರೂ ತಿಂಗಳಲ್ಲಿ ಎರಡು ಬಾರಿಯಾದರೂ ತಪ್ಪಿಸುವುದಿಲ್ಲ. ಪರಿಸರ ಬಗೆಗಿನ ಸೆಳೆತ ಸದಾ ಒಳ್ಳೆಯ ಚಿಂತನೆಗೆ, ಬರಹಕ್ಕೆ ಸ್ಫೂರ್ತಿಯಾಗಿದೆ ಎಂದರೆ ತಪ್ಪಾಗಲಾರದು. ಸಾಹಿತ್ಯ, ಸಂಗೀತ, ಪ್ರಕೃತಿಯಲ್ಲ್ಲಿ ತನ್ನಂತೆ ಅಭಿರುಚಿಯುಳ್ಳ ಸಮಾನ ಮನಸ್ಕರ ಜೊತೆ ಸೇರಿ ಪ್ರಣತಿ ಎಂಬ ಸಂಸ್ಥೆ ಚಿಗುರೊಡೆಯಲು ಕಾರಣರಾಗಿದ್ದಾರೆ.
ಕೆಲ ಕಾಲ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾಗ ವಿವಿಧ ಬಗೆಯ ಅಭ್ಯರ್ಥಿಗಳನ್ನು ಕಂಡು, ಜನಸಂಪರ್ಕದ ಸವಿವುಂಡು, ಕೆಲಸ ಕಹಿ ಎನಿಸುವ ಮೊದಲೇ ಅಲ್ಲಿಂದ ನೇರ ಇಳಿದಿದ್ದು ಅಕ್ಷರ ಯಜ್ಞಕ್ಕೆ. ಈಗ ಖಾಸಗಿ ಟಿವಿ ವಾಹಿನಿಯಲ್ಲಿ ಸೃಜನಶೀಲ ಕಾರ್ಯಕ್ರಮಗಳ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಲಾಗ್ ಲೋಕದ ಬಾಡಿಗೆ ಮನೆಯಿಂದ ಜಿಗಿದು ಆಗಾಗ ಹತ್ತು ಹಲವು ತಾಣಗಳಲ್ಲಿ ಲೇಖನಗಳ ಹನಿಗಳನ್ನು ಸುರಿಸಿದ್ದು ಆದಮೇಲೆ ಈಗ ದಟ್ಸ್ ಕನ್ನಡದಲ್ಲಿ ಪ್ರತಿ ಮಂಗಳವಾರ 'ಕಾಡುಹರಟೆ' ಎಂಬ ಹೊಸ ಅಂಕಣದಲ್ಲಿ ಹರಟೆ ಕೊಚ್ಚಲಿದ್ದಾರೆ. ಜೊತೆಗೆ ಸ್ವಲ್ಪ ಚಿಂತನೆಗೂ ನಿಮ್ಮನ್ನು ನೂಕಲಿದ್ದಾರೆ.
ಈ ಯುವ ಬರಹಗಾರನನ್ನು ಪ್ರೋತ್ಸಾಹಿಸಿ ವಸ್ತುನಿಷ್ಠವಾಗಿ ಅಭಿಪ್ರಾಯಗಳನ್ನು ಮಂಡಿಸುವ ಜವಾಬ್ದಾರಿ ಈಗ ಓದುಗರ ಮೇಲಿದೆ. ಲೇಖಕರ ಇಮೇಲ್ ವಿಳಾಸ : [email protected]
ಅಂಕಣದ ಮೊದಲ ಲೇಖನ : ದೀಪದಾರಿಯ ಹಿಡಿದು..












Click it and Unblock the Notifications