ಅಂಕರಣ ಬರಹ; ಅಜ್ಜಯ್ಯ ದಿನ್ನೆಹೊಸಳ್ಳಿಯ ರಾಮಯ್ಯ
ಮಾರನೆಯ ದಿವಸ (17.12.2021) ದಿನ್ನೆಹೊಸಳ್ಳಿ ದಾರಿಯನ್ನೇ ಹಿಡಿದೆ. ಆ ಊರಿನಲ್ಲಿ ಅಂದು ಗಮನ ಸೆಳೆಯುವಂತಹುದೇನೂ ಕಾಣಿಸಿಲಿಲ್ಲ. ಊರು ದಾಟಿ ಮೂರು ಕಿ. ಮೀ. ಹೋದೆ, ಕೂಡು ರಸ್ತೆ ಸಿಕ್ಕಿತು. ಒಂದು ನಿಮಿಷ ನಿಂತು ಎತ್ತ ಹೋಗುವುದೆಂದು ಚಿಂತಿಸಿದೆ. ಅತ್ತಲಾಗಲಿ, ಇತ್ತಲಾಗಲಿ ಮುಂದಿನ ಊರುಗಳ ನಾಮಫಲಕವಿರಲಿಲ್ಲ.
ಮನಸ್ಸು ಬಲಕ್ಕೆ ಹೋಗಲು ಸೂಚಿಸಿತು. ತಿರುಗಿದೆ ಒಂದರೆ ಕಿ. ಮೀ. ಹೋಗುತಿದ್ದಂತೆ ರಸ್ತೆಯ ಎಡಬದಿಯಲ್ಲಿ ತಲೆಗೆ ಮಂಕಿಟೋಪಿ ಹಾಕಿದ್ದ, ಹಳೆಯ ಚೆಡ್ಡಿ-ಅಂಗಿ ತೊಟ್ಟದ್ದ ಅಜ್ಜಯ್ಯ, ಕಾಲುಗಳು ದಾರಿಯ ದಿನ್ನೆ ತಗ್ಗುಗಳನ್ನು ಹುಡುಕಿ ಹುಡುಕಿ 'ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ' ಎಂಬಂತೆ ನಡೆಯುತ್ತಿದ್ದ.
ಪಕ್ಕಕ್ಕೆ ಹೋಗಿ ನಮಸ್ಕಾರ ಯಜಮಾನ್ರಿಗೆ ಎಂದೆ. ಹೂಂ ಎಂದರು. ನಿಲ್ಲಿ ಗುರುವೇ ಮಾತನಾಡೊಣ ಎಂದೆ. ನಡಿಗೆ ಮುಂದುವರೆಸುತ್ತಲೇ ನೀನು ಯಾರೋ ಏನೋ? ಏನಿದೆ ಮಾತಿಗೆ ಎಂದರು. ಆಡಿದರೆ ಬೇಕಾದಷ್ಟಿರುತ್ತೆ ಎಂದೆ. ನಿಂತರು. ಏನು ಮಾತು ಅಂದರು. ಕಷ್ಟಸುಖದ್ದು ಇರುತ್ತಲ್ಲ ಅಂದೆ. ಮಾಡೋಕೆ ಕೆಲಸವಿಲ್ದೋನೇನೋ ಅಂದರು. ಹಾಗೇ ಅಂದುಕೊಳ್ಳಿ ಎಂದೆ. ನಿನಗೆ ಕೆಲಸ ಇಲ್ದಮೇಲೆ ನನಗೇನು ಎಂದರು. ಆ ಮರದ ಕೆಳಗೆ ಕಲ್ಲು ಜಗುಲಿ ಇದೆಯಲ್ಲ ಅಲ್ಲಿ ಕೂತು ಮಾತಾಡೋನ ಎಂದೆ. ಆಯ್ತು ಅಂದರು.
ರಸ್ತೆಯಿಂದ ಕೊಂಚ ಎತ್ತರಕ್ಕಿದ್ದ ಮಣ್ಣಿನ ಬದು. ಅದಕ್ಕೆ ಕೆತ್ತಿದ್ದ ನಾಲ್ಕು ಪುಟ್ಟಪುಟ್ಟ ಮೆಟ್ಟಿಲಗಳು. ಕಡೆಯ ಮೆಟ್ಟಿಲಿಗೆ ಮೈ ಕೊಟ್ಟ ಚಿಕ್ಕ ಬಯಲು. ಸಾಲಾಗಿ ನೆಟ್ಟ, ಕೊಡೆಯಾರದಲ್ಲಿ ಬೆಳೆದ ನಾಲ್ಕು ಗಸಗಸೆ ಹಣ್ಣಿನ ಮರಗಳು. ಒಂದೊಂದು ಮರದಡಿ ಒಂದೊಂದು ಕಲ್ಲಿನ ಜಗುಲಿ. ಅಲ್ಲಿಂದಾಚೆಗೆ ಮೂರು ನಾಲ್ಕಡಿ ಅಂತರದಲ್ಲಿ ಪಶ್ಚಿಮಕ್ಕೆ ಮೈ ಚಾಚಿದ ಹೊಲ. ಅದರಲ್ಲಿ ಹೂವರಳಿಸಿದ ಅವರೆ, ತೊಗರಿ ಗಿಡಗಳು. ರಾಗಿ ಕೊಯ್ಲಾಗಿತ್ತು. ಬಿಸಿಲಿಗೆ ಕೂಳೆಗಳು ಬೆಳ್ಳಿ ಮೊಳೆತಂತೆ ಮುನುಗುತ್ತಿದ್ದವು.
ಅಜ್ಜಯ್ಯ ಬೀಳುವುರೇನೋ ಅನ್ನಿಸುವಂತೆ. ಆದರೆ ಬೀಳದೆ ಮೆಟ್ಟಿಲುಗಳನ್ನು ಏರಿ ನಿಂತು, ಹುಷಾರು. ಊರುಗೋರುಗಳು ಜಾರೀತು. ಬಿದ್ದುಗಿದ್ದರೆ ಹಿಡಿದುಕೊಳ್ಳೋಕೆ ನನ್ನಿಂದಾಗದು. ಕಣ್ಣೂ ಸರಿಯಿಲ್ಲ ಎಂದು ಎಚ್ಚರಿಸಿದರು. ಭಯ, ಧೈರ್ಯ ಎರಡನ್ನು ಇಟ್ಟುಕೊಂಡು ಏರಿದೆ. ಭೇಷ್ ಎಂದರು ಅಜ್ಜಯ್ಯ. ಬೆಂಚಿನ ಮೇಲೆ ಕುಳಿತೆವು.
ಅವರ ಮಾತಿನ ವರಸೆಯಲ್ಲಿ ಅಜ್ಜಯ್ಯ ದಿನ್ನೆಹೊಸಳ್ಳಿಯ ರಾಮಯ್ಯ. 85 ವರ್ಷದವ, ಬಲಗಣ್ಣು ಕಾಣಿಸದು ಎಡಗಣ್ಣು ಮಂಜುಮಂಜು. ಎರಡು ಕಣ್ಣಿಗೆ ಆಪರೇಷನ್ ಮಾಡಿಸಿದ್ದರೂ ಪ್ರಯೋಜನವಿರಲಿಲ್ಲ. ಸೊಸೆಯರು ಮೂರು ಜನ. ಮಗಳು ಚೆನ್ನಮ್ಮ ಊರಿನಲ್ಲಿಯ ಸಂಬಂಧದಲ್ಲಿಯೇ ಮದುವೆಯಾಗಿದೆ. ಸೊಸೆಯರು ಸರಿಯಾಗಿ ನೋಡಿಕೊಳ್ಲುವುದಿಲ್ಲ. ಸ್ನಾನಕ್ಕೆ ನೀರು ಕೊಟ್ಟು, ಬೆನ್ನು ತಿಕ್ಕಿ, ಬಟ್ಟೆ ಒಗೆದುಕೊಡುವುದು ಮಗಳೆ. ಎಷ್ಟು ದಿನ ಮಾಡುವಳೋ ಗೊತ್ತಿಲ್ಲ. ಗಂಡುಮಕ್ಕಳ ಕಿವಿ ತನ್ನ ಕಡೆಗೆ ಕಿವುಡು. ಹೆಂಡತಿ ಹೋಗಿ ಶಾನೆ ವರ್ಷಗಳಾಗಿವೆ. ಆಗಿನಿಂದ ತಾತ್ಸಾರಕ್ಕೆ ಸಿಕ್ಕಿದ ಬದುಕು. (ಹಳೆಯ ಕಥೆಗಳಲ್ಲಿ ಹೊಸ ಪಾತ್ರಗಳು. ನಾನೂ ಹೆಸರು ಬೇರೆಯಾದ ರಾಮಯ್ಯನೇ).
ರಾಮಯ್ಯ ದುಡಿದು ಸಂಪಾದಿಸಿದ ಹತ್ತು ಎಕರೆ ಜಮೀನು ಈಗ ಮೂರು ಮಕ್ಕಳಿಗೆ ಪಾಲಾಗಿ ಅವರ ಜಿರಾಯ್ತಿಯಲ್ಲಿದೆ. ತನ್ನದೇನೂ ಇಲ್ಲವಾದವಾದರೂ ಸಂಪಾದಿಸಿದ ವ್ಯಾಮೋಹದಲ್ಲಿ ಬೆಳಿಗ್ಗೆ ಹಾಕಿದ್ದನ್ನುಂಡು ಬಿಟ್ಟಿ ಜೀತದ ಕಾವಲುಗಾರನಂತೆ ಹೊಲವೆಲ್ಲ ಓಡಾಡುತ್ತಾನೆ. ತಾನೆ ನೆಟ್ಟ ಮರದಡಿ, ತಾನೇ ಹಾಕಿಸಿದ ಜಗುಲಿಯ ಮೇಲೆ ಕುಳಿತು ಕಣ್ಗಾವಲಲ್ಲಿ ಹೊಲ ಕಾಯುತ್ತಾನೆ, ಬೆಳೆ ಇದ್ದರೂ ಇಲ್ಲದಿದ್ದರು.
ರಾಮಯ್ಯ ಹೇಳಿದರು ನಾವು ಕೂತಿರುವ ಈ ಜಾಗದಲ್ಲಿ ದೊಡ್ಡ ಹಳ್ಳವಿತ್ತು. ಮುಚ್ಚಿಸೋನ ಅಂದತೆ ಒಬ್ಬ ಮಗನೂ ಒಪ್ಪಲಿಲ್ಲ. ಪೈಸಾ ಬಿಚ್ಚಲಿಲ್ಲ ನನ್ನನ್ನು ಬಿಟ್ಟು ಹೋದ ಹೆಂಡತಿಯ ತಾಳಿ ನನ್ನಲ್ಲಿಯೇ ಇತ್ತು. ಅದನ್ನು ಮಾರಿ ಹಳ್ಳ ಮುಚ್ಚಿಸಿದಾಗ ಮಕ್ಕಳು ಅದನ್ನೂ ಹೊಲಕ್ಕೆ ಸೇರಿಕೊಳ್ಳುವ ಮಾತಾಡಿದರು. ನಾನು ಒಪ್ಪಲಿಲ್ಲ ದಾರಿಯಲ್ಲಿ ಓಡಾಡುವ ಜನ ವಿಶ್ರಾಂತಿ ಪಡೆಯಲು ಗಿಡ ನೆಟ್ಟು ದೊಡ್ಡದು ಮಾಡಿದೆ.
ಜಗುಲಿ ಕಟ್ಟಿದೆ ದಣಿದವರು ಬಂದು ಸುಧಾರಿಸಿಕೊಂಡು ಹೋಗುತ್ತಾರೆ. ದೂರದಿಂದ ಬಂದವರು ಕುಳಿತು ಊಟವನ್ನೂ ಮಾಡುವುದಿದೆ. ಹಣ್ಣುಗಳ ಕಾಲದಲ್ಲಿ ಹಕ್ಕಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಈ ನೆರಳಿನಲ್ಲಿ, ಜಗುಲಿ ಮೇಲೆ ನನ್ನ ಉಸಿರು ಹೋಗದರೆ ಸುಖ ಎಂದು ಕಣ್ಣು ತುಂಬಿಕೊಂಡರು. ರಾಮಯ್ಯನವರದು ದೊಡ್ಡದಾಗಿ ಕಾಣದ, ಆ ದಾರಿಯ ಮಟ್ಟಿಗೆ ದೊಡ್ಡ ಕೆಲಸ.
ಉಪೇಕ್ಷೆಗೆ ಒಳಗಾದ ಜೀವನ ಅವರದಾದರೂ ಕುಟುಂಬ ಮಮಕಾರದ ಜೀವನ ರಾಮಯ್ಯನವರದು. ಮಕ್ಕಳು, ಮೊಮ್ಮಕ್ಕಳಲ್ಲಿ ಅಭಿಮಾನ, ವಾತ್ಸಲ್ಯವಿರಿಸಿಕೊಂಡ ಲೌಕಿಕ ಕುಂಟುಂಬಿ ಅವರು. ಎಂಬತ್ತೈದು ಅಲ್ಲ ಈ ಎಂಬತ್ತೈದಕ್ಕೆ ಇನ್ನೊಂದು ಎಂಬತ್ತೈದು ವರ್ಷಗಳನ್ನು ಕೂಡಿಸಿ ಕೊಟ್ಟರೂ 'ಬೇಡ, ಸಾಕಪ್ಪಾ ಸಾಕು' ಅನ್ನದೆ ಇರಲಿ ಎಂದೇ ಬಯಸುವ ಅಪ್ಪಟ ಇಹದ ಮನುಷ್ಯ ಅನ್ನಿಸಿತು.
ನಮಸ್ಕರಿಸಿ ಹೊರಡುವಾಗ ಈ ಕಡೆ ಬಂದಾಗ ಮಾತಾಡಿಸಿ. ಅವರೆಕಾಯಿ ಕಾಲದಲ್ಲಿ ಬನ್ನಿ. ಇಲ್ಲಿಯೇ ಬೇಸಿ ತಿನ್ನೋಣ. ಮನೆಗೆ ತೆಗೆದುಕೊಂಡು ಹೋಗಲೂ ಕೊಡುತ್ತೇನೆ ಎಂದರು.
ರಾಮಯ್ಯ ಹೇಳಿದರು, ನಾವು ಕೂತಿರುವ ಈ ಜಾಗದಲ್ಲಿ ದೊಡ್ಡ ಹಳ್ಳವಿತ್ತು. ಮುಚ್ಚಿಸೋನ ಅಂದತೆ ಒಬ್ಬ ಮಗನೂ ಒಪ್ಪಲಿಲ್ಲ. ಪೈಸಾ ಬಿಚ್ಚಲಿಲ್ಲ ನನ್ನನ್ನು ಬಿಟ್ಟು ಹೋದ ಹೆಂಡತಿಯ ತಾಳಿ ನನ್ನಲ್ಲಿಯೇ ಇತ್ತು. ಅದನ್ನು ಮಾರಿ ಹಳ್ಳ ಮುಚ್ಚಿಸಿದಾಗ ಮಕ್ಕಳು ಅದನ್ನೂ ಹೊಲಕ್ಕೆ ಸೇರಿಕೊಳ್ಲುವ ಮಾತಾಡಿದರು. ನಾನು ಒಪ್ಪಲಿಲ್ಲ. ದಾರಿಯಲ್ಲಿ ಓಡಾಡುವ ಜನ ವಿಶ್ರಾಂತಿ ಪಡೆಯಲು ಗಿಡ ನೆಟ್ಟು ದೊಡ್ಡದು ಮಾಡಿದೆ. ಜಗುಲಿ ಕಟ್ಟಿದೆ. ದಣಿದವರು ಬಂದು ಸುಧಾರಿಸಿಕೊಂಡು ಹೋಗುತ್ತಾರೆ.
ದೂರದಿಂದ ಬಂದವರು ಕುಳಿತು ಊಟವನ್ನೂ ಮಾಡುವುದಿದೆ. ಹಣ್ಣುಗಳ ಕಾಲದಲ್ಲಿ ಹಕ್ಕಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಈ ನೆರಳಿನಲ್ಲಿ, ಜಗುಲಿ ಮೇಲೆ ನನ್ನ ಉಸಿರು ಹೋಗದರೆ ಸುಖ ಎಂದು ಕಣ್ಣು ತುಂಬಿಕೊಂಡರು. ರಾಮಯ್ಯನವರದು ದೊಡ್ಡದಾಗಿ ಕಾಣದ, ಆ ದಾರಿಯ ಮಟ್ಟಿಗೆ ದೊಡ್ಡ ಕೆಲಸ.
ಉಪೇಕ್ಷೆಗೆ ಒಳಗಾದ ಜೀವನ ಅವರದಾದರೂ ಕುಟುಂಬ ಮಮಕಾರದ ಜೀವನ ರಾಮಯ್ಯನವರದು. ಮಕ್ಕಳು, ಮೊಮ್ಮಕ್ಕಳಲ್ಲಿ ಅಭಿಮಾನ, ವಾತ್ಸಲ್ಯವಿರಿಸಿಕೊಂಡ ಲೌಕಿಕ ಕುಂಟುಂಬಿ ಅವರು. ಎಂಬತ್ತೈದು ಅಲ್ಲ, ಈ ಎಂಬತ್ತೈದಕ್ಕೆ ಇನ್ನೊಂದು ಎಂಬತ್ತೈದು ವರ್ಷಗಳನ್ನು ಕೂಡಿಸಿ ಕೊಟ್ಟರೂ 'ಬೇಡ, ಸಾಕಪ್ಪಾ ಸಾಕು' ಅನ್ನದೆ ಇರಲಿ ಎಂದೇ ಬಯಸುವ ಅಪ್ಪಟ ಇಹದ ಮನುಷ್ಯ ಅನ್ನಿಸಿತು.
ನಮಸ್ಕರಿಸಿ ಹೊರಡುವಾಗ, ಈ ಕಡೆ ಬಂದಾಗ ಮಾತಾಡಿಸಿ. ಅವರೆಕಾಯಿ ಕಾಲದಲ್ಲಿ ಬನ್ನಿ. ಇಲ್ಲಿಯೇ ಬೇಸಿ ತಿನ್ನೋಣ. ಮನೆಗೆ ತೆಗೆದುಕೊಂಡು ಹೋಗಲೂ ಕೊಡುತ್ತೇನೆ ಎಂದರು.