ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎದುರೆದುರು ಬಂದಾಗ, ಅಕ್ಕಪಕ್ಕದಲ್ಲಿ ಕುಳಿತಾಗ ಮಾತಿಲ್ಲ ಕಥೆಯಿಲ್ಲ!

|
Google Oneindia Kannada News

ಇವರು ರಾಜ್ಯದಲ್ಲಿ ಆಡಳಿತ ಪಕ್ಷದ ಪ್ರಮುಖ ಟೀಕಾರಾರರು, ತೀವ್ರ ಗೊಂದಲದಲ್ಲಿರುವ ಮೈತ್ರಿ ಸರಕಾರವನ್ನು ಬೀಳಿಸಿ ತಾವೇ ಗದ್ದುಗೆಗೇರುವ ತಯಾರಿಯಲ್ಲಿದ್ದಾರೆ. ಅವರು ಕೇಂದ್ರದಲ್ಲಿ ಆಡಳಿತ ಪಕ್ಷವನ್ನು ತಮ್ಮ ವಾಗ್ದಾಳಿಯಿಂದ ಟೀಕಿಸುತ್ತಲೇ ಇರುತ್ತಾರೆ, ಜೊತೆಗೆ ಮುಂಬರುವ ಚುನಾವಣೆಯಲ್ಲಿ ತಾವೇ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾತುರರಾಗಿದ್ದಾರೆ.

ಒಬ್ಬರು ಸದಾ ಹಣೆಯಲ್ಲಿ ಬೊಟ್ಟು ಇಟ್ಟುಕೊಂಡು, ಶುದ್ಧ ಬಿಳಿ ಬಣ್ಣದ ಸಫಾರಿ ಧರಿಸಿಕೊಂಡು, ಸಿಡಿಮಿಡಿ ಮುಖ ಮಾಡಿಕೊಂಡೇ ಇರುವ ಬಿಜೆಪಿ ನಾಯಕ ಎಪ್ಪತ್ತೈದು ವರ್ಷದ ಹಿರಿಯ ನಾಯಕ ಯಡಿಯೂರಪ್ಪನವರಾದರೆ, ಮತ್ತೊಬ್ಬರು ಯಡಿಯೂರಪ್ಪನವರಿಗಿಂತ ಕೇವಲ ಒಂದು ವರ್ಷ ದೊಡ್ಡವರಾದ, ಗರಿಗರಿ ಪಂಚೆ, ಖಾದಿ ಜುಬ್ಬಾ ಮತ್ತು ಕೋಟು ಧರಿಸಿಕೊಂಡಿರುವ ಕಲಬುರಗಿಯ ಧುರೀಣ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.

ಬಜೆಟ್‌ ಮಂಡನೆಗೂ ಮುನ್ನ ಮತ್ತೊಂದು ಸುತ್ತಿನ ಆಪರೇಷನ್ ಕಮಲ?ಬಜೆಟ್‌ ಮಂಡನೆಗೂ ಮುನ್ನ ಮತ್ತೊಂದು ಸುತ್ತಿನ ಆಪರೇಷನ್ ಕಮಲ?

ಅಧಿಕಾರಕ್ಕಾಗಿ ನಡೆಯುವ ಯುದ್ಧಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಇಬ್ಬರೂ ಬದ್ಧ ವೈರಿಗಳು. ಪ್ರಸ್ತುತ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಕತ್ತಿ ಮಸೆಯುತ್ತಿದ್ದಾರೆ. ಹೀಗಿರುವ ಇಬ್ಬರೂ ಪತ್ರಿಕೆಯೊಂದರ ಷಷ್ಟ್ಯಬ್ಧಿ ಸಮಾರಂಭದಲ್ಲಿ ಪರಸ್ಪರ ಎದುರಾದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಸನ್ಮಾನ, ಭಾಷಣಗಳ ಸುರಿಮಳೆಯುದ್ದಕ್ಕೂ ಇಬ್ಬರೂ ಅಕ್ಕಪಕ್ಕವೇ ಕುಳಿತಿದ್ದರು. ಆದರೆ, ಮಾತಿಲ್ಲ ಕಥೆಯಿಲ್ಲ.

Yeddyurappa and Kharge came saw did not talk

ಇವರು ಭಾಷಣ ಮಾಡುವಾಗ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೆ... ಅವರು ಭಾಷಣ ಮಾಡುವಾಗ, ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಯಡಿಯೂರಪ್ಪನವರೆ... ಅಂತ ಪ್ರಸ್ತಾಪಿಸಿದ್ದು ಬಿಟ್ಟರೆ, ಇಬ್ಬರೂ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿದರೆ ಕೇಳಿ. ಒಬ್ಬರು ಉಸಿರು ಮತ್ತೊಬ್ಬರಿಗೆ ತಾಗುವಷ್ಟು ಹತ್ತಿರ ಕುಳಿತಿದ್ದರೂ ಉಭಯ ಕುಶಲೋಪರಿಯೂ ಇಲ್ಲ, ಕರ್ನಾಟಕದ, ದೇಶದ ಪ್ರಸ್ತುತ ರಾಜಕಾರಣದ ಬಗ್ಗೆ ಪಿಸುಗುಟ್ಟುವಿಕೆಯೂ ಇಲ್ಲ.

ಡಿಕೆಶಿ ತಲೆದಂಡದ ಬೇಡಿಕೆ ಬಂದಾಗಲೇ, ಬಿಎಸ್ವೈ ಆಪರೇಷನ್ ಕಮಲದಿಂದ ಹಿಂದಕ್ಕೆ ಸರಿದ್ರಾ?ಡಿಕೆಶಿ ತಲೆದಂಡದ ಬೇಡಿಕೆ ಬಂದಾಗಲೇ, ಬಿಎಸ್ವೈ ಆಪರೇಷನ್ ಕಮಲದಿಂದ ಹಿಂದಕ್ಕೆ ಸರಿದ್ರಾ?

ಅದು ಪತ್ರಿಕೆಯೊಂದರ ಕೌಟುಂಬಿಕ ಕಾರ್ಯಕ್ರಮದಂತಿತ್ತು. ಹೀಗಾಗಿ ಪತ್ರಿಕಾ ಸಿಬ್ಬಂದಿ ಮತ್ತು ಸಿಬ್ಬಂದಿಗಳ ಹಿತೈಷಿಗಳು ಮತ್ತು ಸನ್ಮಾನಿತರ ಕುಟುಂಬದವರೇ ಹೆಚ್ಚಾಗಿ ನೆರೆದಿದ್ದರು. ಈ ಆತ್ಮೀಯ ಸಮಾರಂಭದಲ್ಲಿ ಪತ್ರಿಕೋದ್ಯಮ ಹೇಗಿರಬೇಕು, ಪತ್ರಕರ್ತರು ಹೀಗಿರಬೇಕು ಎಂಬ ಒಂದೆರಡು ಕಿವಿಮಾತುಗಳನ್ನು ಹೊರತುಪಡಿಸಿದರೆ, ಇಬ್ಬರೂ ನಾಯಕರು ತಮ್ಮ ಚುಟುಕಾದ ಭಾಷಣದಲ್ಲಿ ಹೆಚ್ಚಿನ ಮಾತುಗಳನ್ನೂ ಆಡಲಿಲ್ಲ. ಸದ್ಯದ ರಾಜಕೀಯ ಸನ್ನಿವೇಶ ಹೇಗಿದೆಯೆಂದರೆ, ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ ಎಂಬಂತಿದೆ.

Yeddyurappa and Kharge came saw did not talk

ಸದ್ದಿಲ್ಲದೆ ಯಡಿಯೂರಪ್ಪನವರು ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ನೊಗ ಕಟ್ಟುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತೋ ಏನೋ ಖರ್ಗೆ ಸಾಹೇಬರು ಯಡಿಯೂರಪ್ಪನವರನ್ನು ಮಾತಾಡಿಸುವ ಗೋಜಿಗೂ ಹೋಗದೆ ಸುದ್ದಿ ಪತ್ರಿಕೆಯನ್ನೋದುತ್ತ ಅತ್ಯಂತ ಗಾಂಭೀರ್ಯದಿಂದಲೇ ಕುಳಿತಿದ್ದರು. ನನ್ನ ನಾಯಕತ್ವ ಬೇಡವೆನಿಸಿದ್ದರೆ ಹೇಳಿ ಈಗಲೇ ಕೆಳಗಿಳಿದುಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದ ಕುಮಾರಸ್ವಾಮಿಯವರೂ ಬರಲಿಲ್ಲ, ಏ ಅಂಥಾದ್ದೇನೂ ಇಲ್ಲಾರೀ, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದಲ್ಲದೆ ಮಹಿಳೆಯೊಬ್ಬರ ದುಪಟ್ಟಾ (ನಿರುದ್ದೇಶಪೂರ್ವಕವಾಗಿ) ಸೆಳೆದ ವಿವಾದದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರೂ ಬರಲಿಲ್ಲ.

ರಾಜಕೀಯದಲ್ಲಿ ಯಾರೂ ಮಿತ್ರರಲ್ಲ ಯಾರೂ ಶತ್ರುಗಳಲ್ಲ, ಹಲವಾರು ನಾಯಕರು ಹೀಗೆ ಸಿಕ್ಕಾಗ, ತಮ್ಮ ಹಿಂದಿನ ಬೈದಾಡುವಿಕೆ, ವೈಷಮ್ಯವನ್ನು ಕೂಡ ಮರೆತು ನಗಾಡುತ್ತ, ಉಭಯ ಕುಶಲೋಪರಿ ವಿಚಾರಿಸುತ್ತ ಕಾಲ ಕಳೆದುದ್ದನ್ನು ನೋಡಿದ್ದೇವೆ. ಹಿಂದೆ ಏನೂ ನಡೆದೇ ಇಲ್ಲವೇನೋ ಎಂಬಂತೆ, ನಗಾಡಿಕೊಂಡು ಒಬ್ಬರ ಹೆಗಲಮೇಲೆ ಮತ್ತೊಬ್ಬರು ಕೈಹಾಕಿಕೊಂಡು ವರ್ತಿಸಿದ್ದಕ್ಕೆ ಸಾಕ್ಷಿಯಾಗಿದ್ದೇವೆ. ಆದರೆ, ಇವರಿಬ್ಬರ ಮನದಲ್ಲಿ ಏನೇನು ಓಡಾಡುತ್ತಿತ್ತೋ? ಶಿವನೇ ಬಲ್ಲ!

Yeddyurappa and Kharge came saw did not talk

ಭಾಷಣಕಾರರೆಲ್ಲ ಅವರಿಬ್ಬರನ್ನು ಸಿಕ್ಕಾಪಟ್ಟೆ ಹೊಗಳಿದಾಗ ಕನಿಷ್ಠ ನಗುಮೊಗವನ್ನು ಕೂಡ ತೋರದೆ, ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳದೆ, ಭಾಷಣದಲ್ಲಿಯೂ ಹೆಚ್ಚು ಪ್ರಸ್ತಾಪಿಸದೆ, ಕನಿಷ್ಠ ಟೀಕೆಯನ್ನು ಕೂಡ ಮಾಡದೆ, ಇನ್ನೇನು ವಂದನಾರ್ಪಣೆ ಶುರುವಾಗಬೇಕು ಅನ್ನುವಾಗಲೇ ಇಬ್ಬರೂ ಬಿರುಗಾಳಿಯಂತೆ ಸಭಾಂಗಣದಿಂದ ಒಟ್ಟಿಗೇ ನಿರ್ಗಮಿಸಿದರು. ಖಾಲಿ ಕುರ್ಚಿಗಳೆದಿರು ಸಂಪಾದಕರು ವಂದನಾರ್ಪಣೆಯ ಫಾರ್ಮ್ಯಾಲಿಟಿ ಮುಗಿಸಿದರು. ಕರ್ನಾಟಕದಲ್ಲಿಯೂ ಬಿರುಗಾಳಿಯಂತೆ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಏನೇನು ಘಟನಾವಳಿಗಳು ನಡೆಯಲಿವೆಯೋ ಎಂದು ಜನರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.

English summary
Former chief minister Yeddyurappa and former union minister Mallikarjun Kharge came fact to face, sat next to each other, but did not speak at all. There are no friends or enemies in politics, but what made them not to speak to each other?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X