ಹುಬ್ಬಳ್ಳಿಯಲ್ಲಿ 'ಅನಂತನ ಅವಾಂತ'ರ ನೋಡಿದ 'ಅನುಭವ'!
ಅದೇ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ನಿರಾಳ ಭಾವ ಅನುಭವಿಸುತ್ತಿದ್ದ ಸಮಯ. ಹುಬ್ಬಳ್ಳಿಯಲ್ಲಿ ನೆಂಟರ ಮನೆಗೆ ಊಟಕ್ಕೆಂದು ನಾವೊಂದಿಷ್ಟು ಕುಡಿಮೀಸೆಯ ಚೆಲುವರು ಹೋಗಿದ್ದೆವು. ಊಟ ಮುಗಿಸಿ ಸಂಬಂಧಿಯೊಡನೆ ಮಾರ್ಕೆಟ್ಟಿಗೆ ಸುತ್ತಾಡಲು ಹೋಗಿದ್ದೆವು.
ಆಗಿನ ಕಾಲದಲ್ಲಿ ಸಿಕ್ಕಾಪಟ್ಟೆ ಒಳ್ಳೆ ಹುಡುಗರು ನಾವು. ಜಾಣ ಅಂತ ಅನ್ನಿಸಿಕೊಳ್ಳಬೇಕು, ಯಾವುದೇ ಕೆಟ್ಟ ಕೆಲಸ ಮಾಡಬಾರದು, ಥಿಂಕ್ ಕೂಡ ಮಾಡಬಾರದು, ಬೈಸಿಕೊಳ್ಳಲೇಬಾರದು, ಕೆಟ್ಟ ಚಟಗಳು ಇರುವುದಿರಲಿ, ನಮಗೆ ಟೀಕಾಫಿ ಕೂಡ ಕುಡಿಯುವುದೂ ಕೆಟ್ಟದೆಂದು ತಲೆಯಲ್ಲಿ ತುಂಬಿದ್ದರು.
ಆ ಸಮಯದಲ್ಲಿ ನಾವು ನೋಡುತ್ತಿದ್ದುದು ಡಾ. ರಾಜ್ ಕುಮಾರ್, ಭಾರತಿ, ವಿಷ್ಣುವರ್ಧನ್, ಮಾಧವಿ, ಅನಂತ್ ನಾಗ್, ಲಕ್ಷ್ಮೀ, ಅಂಬರೀಷ್, ಅಂಬಿಕಾ ಅವರಿರುವ ಸಹಕುಟುಂಬ ಸಹಪರಿವಾರದೊಡನೆ ಹೋಗಿ ನೋಡುವಂಥ ಸಿನೆಮಾಗಳು ಮಾತ್ರ. ಅಪ್ಪಿತಪ್ಪಿ ಕೂಡ ಬೇರೆ ಚಿತ್ರಗಳತ್ತ ಕತ್ತೆತ್ತಿ ನೋಡುತ್ತಿರಲಿಲ್ಲ.

ಹುಬ್ಬಳ್ಳಿಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದೆ ಕಾಶಿನಾಥ್ ಅವರ 'ಅನಂತನ ಅವಾಂತರ' ಸಿನೆಮಾದ ಪೋಸ್ಟರ್. ನಾವು ಕತ್ತೆತ್ತಿ ನೋಡಿಯೂ ನೋಡದಂತೆ ನಡೆಯುತ್ತಿದ್ದರೆ, ನಮ್ಮ ಸಂಬಂಧಿಯ ಕಣ್ಣು ಹಠಾತ್ತನೆ ಅರಳಿದ್ದವು. ಬೇಡಬೇಡವೆಂದರೂ ನಮ್ಮನ್ನೆಲ್ಲ ಎಳೆದುಕೊಂಡು ಸಿನೆಮಾಗೆ ಕರೆದುಕೊಂಡು ಹೋಗಿದ್ದ.
ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ
ನಮಗೆಲ್ಲ ನಾವೇ ವಿಧಿಸಿಕೊಂಡ ನಿರ್ಬಂಧವನ್ನು ಮೀರಿ, ಈ ಸಿನೆಮಾ ನೋಡಿದ್ದೇವೆಂದು ಯಾರೂ ಯಾರಿಗೂ ಬಾಯಿ ಬಿಡಬಾರದೆಂದು, ನಮಗೆ ನಾವೇ ಮತ್ತೆ ನಿರ್ಬಂಧ ಹಾಕಿಕೊಂಡು ಥಿಯೇಟರ್ ಒಳಹೊಕ್ಕಿದ್ದೆವು. ಕಾಶಿನಾಥ್ ಅವರ ಈ ಚಿತ್ರ ನಮ್ಮನ್ನು ಹೊಸ 'ಅನುಭವ' ನೀಡಿದ್ದು ಮಾತ್ರವಲ್ಲ, ಹೊಸ ಲೋಕಕ್ಕೇ ಕರೆದುಕೊಂಡು ಹೋಗಿತ್ತು.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
'ನಾನೇಕೆ ಅಂಜಲಿ' ಎಂದು ದಿಟ್ಟ ಹೇಳಿಕೆ ನೀಡಿ ದಿಟ್ಟಾನುದಿಟ್ಟ ನಟನೆ ಮಾಡಿದ್ದ ಅಂಜಲಿ ಜೊತೆ ಕಾಶಿನಾಥ್ ಅವರು 'ಹನಿಮೂನ್ ರೆಸಾರ್ಟ್'ನಲ್ಲಿ ಮಾಡಿದ ಚೇಷ್ಟೆಗಳು, ಲೈಂಗಿಕ ಕ್ರಿಯೆಗಾಗಿ ಅವರು ಮಾಡಿದ ಹೋರಾಟಗಳು, ಸಾಹಸಗಳು ನಮ್ಮನ್ನೆಲ್ಲ ಕುರ್ಚಿಯ ತುತ್ತತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದವು. ಮತ್ತೊಬ್ಬ ಹಾಸ್ಯನಟ ದಿನೇಶ್ ಅವರಿಗೆ ಅವರು ಹಿಂದೆಂದೂ ಮಾಡದಂಥ ಪಾತ್ರವನ್ನು ಅನಂತನ ಅವಾಂತರದಲ್ಲಿ ಕಾಶಿನಾಥ್ ನೀಡಿದ್ದರು.
ಥಿಯೇಟರ್ ಒಳಹೋಗುವಾಗ ಒಂದು ರೀತಿಯ ಹುಡುಗರಾಗಿದ್ದ ನಾವು, ಹೊರಬಂದಾಗ ಮತ್ತೊಂದು ರೀತಿಯ ಪಡ್ಡೆಗಳಾಗಿದ್ದೆವು.
ಕನ್ನಡ ಚಿತ್ರ ರಸಿಕರಿಗೆ, ಅದರಲ್ಲಿಯೂ ಯುವಕ ಯುವತಿಯರಿಗೆ 'ಅನುಭವ', 'ಅನಂತನ ಅವಾಂತರ', 'ಲವ್ ಮಾಡಿ ನೋಡು', 'ಮನ್ಮಥ ರಾಜ', 'ಪೋಲಿ ಕಿಟ್ಟಿ', 'ಚಪಲ ಚೆನ್ನಿಗರಾಯ', 'ಲವ್ ಟ್ರೇನಿಂಗ್', 'ರಂಭೆ ಊರ್ವಶಿ ಮೇನಕೆ'ಯಂಥ ಚಿತ್ರಗಳಲ್ಲಿ ನಟಿಸಿ ನಮಗೆಲ್ಲ ಕಚಗುಳಿ ಇಟ್ಟಿದ್ದ ಕಾಶಿನಾಥ್ ಅವರು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ.
ಈ ಬಗೆಯ ಚಪ್ಪರಿಸಿಕೊಂಡು ನೋಡುವಂಥ ಚಿತ್ರಗಳನ್ನು ಕೂಡ ಕನ್ನಡ ಚಿತ್ರರಸಿಕರಿಗೆ ಮಾಡಿ ತೋರಿಸಬಹುದು ಎಂದು ತೋರಿಸಿದವರು ಕಾಶಿನಾಥ್. ಹೊಸ ಅಲೆಯ ಚಿತ್ರಗಳೊಂದಿಗೆ, 'ಕಾಮಿಡಿ ಕಿಂಗ್' ಎಂಬ ಬಿರುದು ಕೂಡ ಪಡೆದಿದ್ದ ಕಾಶಿನಾಥ್ ಅವರು 'ಡಬಲ್ ಮೀನಿಂಗ್' ಕಾಮಿಡಿಗೇ ಬ್ರಾಂಡ್ ಆಗಿದ್ದು ಮಾತ್ರ ನಿಜಕ್ಕೂ ದುರಂತ.
ಕಾಶಿನಾಥ್ ಬ್ರಾಂಡ್ ನ ಚಿತ್ರಗಳನ್ನು ಮೀರಿ ಅವರು, ಅವಳೆ ನನ್ನ ಹೆಂಡತಿ, ಶ್, ಅವನೇ ನನ್ನ ಗಂಡ, ಅಜಗಜಾಂತರ, ನಾರಿ ಮುನಿದರೆ ಗಂಡು ಪರಾರಿ, ಮೂರ್ಖ ಮುಂತಾದ ಚಿತ್ರಗಳಲ್ಲಿ ನಟನಾ ಚಾತುರ್ಯವನ್ನೂ ಮೆರೆದಿದ್ದಾರೆ. ಇತ್ತೀಚೆಗೆ 'ಚೌಕ' ಸಿನೆಮಾದಲ್ಲಿ ಅಪ್ಪನಾಗಿ ಅವರು ನೀಡಿದ ಅಮೋಘ ಅಭಿನಯ ಮನಕಲಕುವಂತೆ ಮಾಡಿತ್ತು.
ಕಾಶಿನಾಥ್ ಸಿನೆಮಾ ಅಂದ್ರೆ ಪುರುಷರು ಮಾತ್ರವಲ್ಲ ಸ್ತ್ರೀಯರು ಕೂಡ ತುಂಟನಗೆ ಬೀರುತ್ತಾರೆ, ಕಣ್ಣು ಮನಸ್ಸುಗಳು ಅರಳುತ್ತವೆ. ಅವರಿಗಿದ್ದ ಸಾಮರ್ಥ್ಯವೇ ಅದು. ಅವರು ಮಾಡಿದಂಥ ಸಿನೆಮಾಗಳನ್ನು, ಉಪೇಂದ್ರ, ವಿ ಮನೋಹರ್, ಸುನೀಲ್ ಕುಮಾರ್ ದೇಸಾಯಿ ಮುಂತಾದ ಅವರ ಶಿಷ್ಯಂದಿರಿಂದ ಹಿಡಿದು ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಕಾಶಿನಾಥ್ ಈಗ ನಮ್ಮೊಂದಿಗಿಲ್ಲದಿರಬಹುದು. ಆದರೆ, ಅವರ ಚಿತ್ರಗಳು ನಮ್ಮ ಮನಃಪಟಲದಿಂದ ಎಂದೂ ದೂರವಾಗುವುದಿಲ್ಲ.












Click it and Unblock the Notifications