ಸಾಡೇಸಾತಿ : ವೃಷಭ ರಾಶಿಗೆ ಈಗ ಒಳ್ಳೆ ಸಮಯ
ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದ 1ನೇ ಪಾದದಲ್ಲಿ ಜನಿಸಿದವರು ಮೇಷ ರಾಶಿಗೆ ಅನ್ವಯಿಸುತ್ತಾರೆ. ಇದೇ ರೀತಿ ರೋಹಿಣಿ, ಮೃಗಶಿರಾ 1, 2, ಕೃತ್ತಿಕಾ 2, 3, 4ನೇ ಪಾದದಲ್ಲಿ ಜನಿಸಿದವರು ವೃಷಭ ರಾಶಿಯವರಾಗುತ್ತಾರೆ.
ವೃಷಭ ರಾಶಿಗೆ ಈ ದಿನಗಳಲ್ಲಿ ಮಹಾತ್ಮನು 6ನೇ ಸ್ಥಾನದಲ್ಲಿದ್ದಾನೆ. ಇದು ತುಂಬಾ ಒಳ್ಳೆಯ ಸಮಯವೆನ್ನಬಹುದು. ಯಶಸ್ಸಿನ ಮೆಟ್ಟಿಲು ಹತ್ತುತ್ತಲೇ ಇರುವುದರಿಂದ ಇವರಿಗೆ ಎಲ್ಲೆಡೆ ಮಾನ, ಸಮ್ಮಾನ ಸಿಗುತ್ತಿರುತ್ತದೆ. ನಿಮಗೆ ಗೊತ್ತಿದ್ದಂತೆ "ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವವರೇ". ವೃಷಭದವರು ಕೂಡ ಈಗ ಗೆದ್ದ ಎತ್ತು ಇದ್ದಂಗೆ. ಮಾನಸಿಕವಾಗಿ ಬಲಾಢ್ಯವಾಗಿರುವ ವೃಷಭದವರು ಈ ಸಮಯದಲ್ಲಿ ಏನೇ ಮಾಡಿದರು, ಎಲ್ಲದರಲ್ಲೂ ಗೆಲುವು ಸಿಕ್ಕೇ ಸಿಗುತ್ತದೆ. ಆದರೆ ನ್ಯಾಯಯುತ, ಪ್ರಾಮಾಣಿಕವಾಗಿ ಮಾಡಬೇಕು ಅಷ್ಟೇ. ಸಾಲ ತೀರಿಸುತ್ತಿರುವ ಸಂಭ್ರಮ ಒಂದು ಕಡೆಯಾದರೆ, ಸಂಸಾರದಲ್ಲಿನ ಸುಖದಿಂದ ದುಃಖವೆಂದರೇನು ಎನ್ನುವ ಹಾಗಾಗಿರುತ್ತದೆ ಈ ರಾಶಿಯವರಿಗೀಗ.
ಆದರೆ, ಈ ಸುಂದರ ಸಮಯ ಜೀವನದುದ್ದಕ್ಕೂ ಬೇಕು ಎಂದರೆ ಈ ಸಮಯದಲ್ಲಿ ಬೇರೊಬ್ಬರಿಗೆ ಅನ್ಯಾಯ ಮಾಡಬೇಡಿ. ದುಷ್ಟರಿಂದ ದೂರವಿರಲು ಕಲಿಯಬೇಕು. ಏಕೆಂದರೆ ಇಂಗ್ಲಿಷ್ನಲ್ಲಿ "ಟೆಲ್ ಯುವರ್ ಫ್ರೆಂಡ್ಸ್ ನೇಮ್, ಐ ವಿಲ್ ಟೆಲ್ ಹೌ ಯು ಆರ್" ಅಂತ ಒಂದು ಮಾತಿದೆ. ಕಳ್ಳರು ಕಳ್ಳರ, ಒಳ್ಳೆಯವರು ಒಳ್ಳೆಯವರ ಸ್ನೇಹ ಮಾಡುತ್ತಾರೆ. ಹೀಗಾಗಿ ನಿಮ್ಮ ಸ್ನೇಹಿತರ ಬಳಗವನ್ನೊಮ್ಮೆ ಚೆಕ್ ಮಾಡಿಕೊಳ್ಳಿ. ಎಂಥವರೊಂದಿಗೆ ನಿಮ್ಮ ಸ್ನೇಹವಿದೆಯೋ ನೀವು ಅವರಂಗೆ ಅಂತ ಅರ್ಥ ಮಾಡಿಕೊಳ್ಳಿ.
ಏಕೆಂದರೆ, ಶನಿಮಹಾತ್ಮನ ಶಕ್ತಿ ಅಪಾರ. ಒಳ್ಳೆಯದರಲ್ಲು ಮತ್ತು ಕೆಟ್ಟದ್ದರಲ್ಲು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಹೊಡೆತ ಬಿದ್ದು ಮೇಲೇಳಲಾರದೆ ಹೋದಾಗ ಮಹಾತ್ಮನ ಶಕ್ತಿ ಪರಿಚಯವಾಗುತ್ತದೆ. ಎಲ್ಲರಿಗೂ ಮಹಾತ್ಮನ ಏಟು ಗ್ಯಾರಂಟಿ. ಆದರೆ ಸ್ವಲ್ಪ ಹಿಂದೆ ಮುಂದೆ ಆಗುತ್ತದೆ. ಅದಕ್ಕಾಗಿ ಮತ್ತೊಬ್ಬರ ಪರಿಸ್ಥಿತಿ ನೋಡಿ ಕುಹಕ ಮಾಡಬೇಡಿ. ಹೀಗೆ ಮಾಡಿದವರು ಏನಾಗಿದ್ದಾರೆ ಎಂದು ಒಮ್ಮೆ ಯೋಚಿಸಿ. "ಕೋಟೆ ಕಟ್ಟಿ ಮೆರೆದವರೆಲ್ಲಾ ಏನಾದರು?" ಎಂಬುದು ನಿಮಗೆ ಗೊತ್ತಿದ್ದ ವಿಷಯವೆ.
ಯಾಕಿಷ್ಟು ಸುಖ, ಸಂತೋಷ ನನಗೆ ಎಂದು ಯೋಚಿಸದೆ ಹೋದರೆ, ಶನಿ ಕಾಡಾಟದಲ್ಲಿ ಕಷ್ಟಗಳು ಇಷ್ಟೊಂದು ಯಾಕೆ ಬರ್ತೀವೆ ಎಂದು ಕೂಡ ಚಿಂತಿಸಬೇಡಿ. ಸುಖ, ಸಂತೋಷ ಅನುಭವಿಸಿದಂತೆ ಕಷ್ಟ ಅನುಭವಿಸುವುದು ನಿಮ್ಮ ಧರ್ಮ ಎಂದುಕೊಂಡು ಸುಮ್ಮನಿದ್ದರೆ ತಪ್ಪೇನಿಲ್ಲ! ಇನ್ನು, ಮಾಡುವುದೆಲ್ಲಾ ಮಾಡಿ ಕಷ್ಟ ಬಂದಾಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು "ಮನುಷ್ಯರಿಗಲ್ಲದೇ ಮರಕ್ಕಾ ಕಷ್ಟ, ಸುಖ?" ಎಂಬ ಮಾತು ಕೆಲವರು ಹೇಳುತ್ತಾರೆ. ಆದರೆ, ಇಂಥವರು ತಮ್ಮ ಉತ್ತಮದ ದಿನಗಳಲ್ಲಿ ಹಲವರಿಗೆ ತೊಂದರೆ ನೀಡಿರುತ್ತಾರೆ. ಇವರಿಂದ ಕಷ್ಟಪಟ್ಟು ಪರಿತಪಿಸಿದವರು, ಎಲ್ಲ ದೇವರಲ್ಲಿ ನನಗೆ ಕಷ್ಟ ನೀಡಿದವರ ಜೀವನ ಬೇಗ ಹಾಳಾಗಲಿ ಎಂದು ಬೇಡಿಕೊಳ್ಳುತ್ತಿರುತ್ತಾರೆ!
ಮತ್ತೊಬ್ಬರು ನಮ್ಮ ಜೀವನ ಚೆನ್ನಾಗಿರಲಿ ಎಂದು ದೇವರಲ್ಲಿ ಹಾರೈಸುವಂತೆ ನಾವು ಇರಬೇಕೋ ಅಥವಾ ನಾವು ಹಾಳಾಗಲಿ ಎಂದು ಮತ್ತೊಬ್ಬರು ಬೇಡಿಕೊಳ್ಳುವಂತಿರಬೇಕೋ ಎಂಬುದನ್ನು ನಿರ್ಧರಿಸಿಕೊಂಡು ಎಲ್ಲ ರಾಶಿಯವರು ಜೀವನ ಸಾಗಿಸಬೇಕು. ಎಲ್ಲರಿಗೂ ಯಾರ್ಯಾರಿಗೆ ಅನ್ಯಾಯ ಮಾಡಿದ್ದೇನೆ ಎಂದು ಗೊತ್ತೇ ಇರುತ್ತದೆ. ಮಾಡಿದ್ದೆಲ್ಲವೂ ಬಡ್ಡಿ, ಚಕ್ರಬಡ್ಡಿ ಸಮೇತ ತಿರುಗಿ ಬಂದು ಇಡೀ ಸಂಸಾರಕ್ಕೇನೆ ಪಾಪದ ಕರ್ಮಫಲ ಸುತ್ತಿಕೊಳ್ಳುತ್ತದೆ. ಲೆಕ್ಕದ ಪ್ರಕಾರವೇ ಕಷ್ಟಗಳ ಸರಮಾಲೆಗಳು ಶುರುವಾಗುತ್ತವೆ ಶನಿಕಾಡಾಟದಲ್ಲಿ.
ಮುಂದಿನ ದಿನಗಳಲ್ಲಿ ಮಹಾತ್ಮನು ವೃಷಭ ರಾಶಿಗೆ ಸಪ್ತಮನಾಗಲಿದ್ದಾನೆ. ಆ ಸಮಯದಲ್ಲಿ ಯಾವುದೇ ರೀತಿ ಪಾರ್ಟನರ್ಶಿಪ್ ಮಾಡುವುದು ಶ್ರೇಯಸ್ಕರವಲ್ಲ. ಮಾಡಲೇಬೇಕು ಎಂದರೆ, ಜಾತಕ ಪರಿಶೀಲಿಸಿಕೊಂಡು ಮುಂದಿನ ನಿರ್ಧಾರ ತೆಗೆದುಕೊಂಡರೆ ಹಣ, ಗುಣ ಎರಡೂ ಉಳಿಯುತ್ತವೆ. ಯಾಕೆಂದರೆ ಜಾತಕದಲ್ಲಿ ಗೋಚಾರ, ದಶಾ, ಭುಕ್ತಿಗಳಿಂದ ಮಹತ್ವದ ಸಮಯ ನಮಗರಿವಾಗುತ್ತದೆ. ಆದರೆ, ಕೆಲವರು ಎಲ್ಲಿಯ ಜಾತಕ, ನಾನಂತು ಏನೂ ನೋಡುವುದಿಲ್ಲ, ಕಷ್ಟಪಟ್ಟು ಕೆಲಸ ಮಾಡುತ್ತೇನೆ ಅಷ್ಟೇ. ಎಲ್ಲ ತಾನಾಗಿಯೇ ಬರುತ್ತದೆ ಎಂದು ಹೇಳುತ್ತ ತಿರುಗುತ್ತಿರುತ್ತಾರೆ.
ಆದರೆ ಇಂಥಹವರು ತಾವು ಜಾತಕ ತೋರಿಸಿಕೊಂಡು ಎಲ್ಲ ತಿಳಿದುಕೊಂಡು ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನೇರುತ್ತಿರುತ್ತಾರೆ. ಆದರೆ ಮತ್ತೊಬ್ಬರು ಮೆಟ್ಟಿಲೇರುವುದನ್ನು ಇವರಿಗೆ ನೋಡಲಾಗುವುದಿಲ್ಲ. ಹೀಗಾಗಿ ಕುತ್ಸಿತ ಬುದ್ಧಿಯಿಂದ ಉಳಿದವರಿಗೆ ಈ ರೀತಿ ಹೇಳುತ್ತಿರುತ್ತಾರೆ. ದೊಡ್ಡವರು ಈ ರೀತಿ ಹೇಳುತ್ತಿದ್ದಾರೆಂದು ಹುಂಬರು ಅವರ ಮಾತನ್ನು ನಂಬಿ, ತಾವೂ ಜಾತಕ ಪರಿಶೀಲನೆ ಮಾಡಿಸಿಕೊಳ್ಳದೆ ದಡ್ಡರಾಗುತ್ತಾರೆ. "ದೊಡ್ಡವರೆಲ್ಲಾ ಜಾಣರಲ್ಲ" ಎಂಬ ಮಾತು ಹುಂಬರಿಗೆ ಗೊತ್ತಿರುವುದಿಲ್ಲ.
ವೃಷಭದ ಪೌರಾಣಿಕ ಕಥೆ : ವೃಷಭ ರಾಶಿ ಗುರುತು ಈಶ್ವರನ ಮುಂದಿರುವ ನಂದಿ ತರಹನೇ ಇದೆ ಎಂಬುದು ಎಲ್ಲರಿಗೆ ಗೊತ್ತಿದೆ. ಆದರೆ ಈಶ್ವರನ ಮುಂದೆ ನಂದಿ ಏಕೆ? ಎಂಬುದರ ಬಗ್ಗೆ ಪೌರಾಣಿಕ ಕಥೆಯೊಂದು ಪ್ರಚಲಿತಲ್ಲಿದೆ. ಸಂಕ್ಷಿಪ್ತವಾಗಿ ಅದರ ಸಾರಾಂಶ ಹೀಗಿದೆ.
ವೃಷಭನೆಂಬ ಅಸುರನು ದೇವಾನುದೇವತೆ ಹಾಗೂ ಋಷಿ-ಮುನಿಗಳನ್ನು ಪೀಡಿಸುತ್ತ ಅವರನ್ನು ನಿಗ್ರಹಿಸುತ್ತಿದ್ದನಂತೆ. ವೃಷಭಾಸುರನ ಕಾಟ ತಡೆದುಕೊಳ್ಳಲಾರದೆ ಎಲ್ಲರೂ ಪರಮೇಶ್ವರನ ಬಳಿ ಹೋಗಿ ಅಲವತ್ತುಕೊಂಡರಂತೆ. ವೃಷಭಾಸುರನ ಆರ್ಭಟ ಕೇಳಿ ಉಗ್ರನಾದ ರುದ್ರನು ಅವನ ಸದೆಬಡಿಯಲು ಅವನೊಂದಿಗೆ ಯುದ್ಧಕ್ಕಿಳಿದನು. ಆದರೆ ವೃಷಭಾಸುರನು ಯುದ್ಧದಲ್ಲಿ ದಣಿದು ಸೋಲುವ ಲಕ್ಷಣಗಳೇ ಕಾಣಿಸಲಿಲ್ಲವಂತೆ. ಹೀಗಾಗಿ ಮಹಾಶಿವನು ದಣಿಯದ ಈ ಅಸುರನ ಜತೆ ಯುದ್ಧ ಮಾಡುವ ಬದಲು ಇವನನ್ನು ಮಂಕನನ್ನಾಗಿ ಮಾಡುವುದೇ ಲೇಸೆಂದುಕೊಂಡನು.
ತಕ್ಷಣ ವೃಷಭಾಸುರನಿಗೆ, ನಿನ್ನ ಪರಾಕ್ರಮ ನನಗೆ ತುಂಬಾ ಮೆಚ್ಚುಗೆಯಾಯಿತು. ನಿನ್ನಂತಹ ಬಲಾಢ್ಯನನ್ನು ನಾನೆಲ್ಲೂ ನೋಡಿಲ್ಲ. ಏನು ವರ ಬೇಕು ನೀನಗೆ ಕೇಳು, ಎಂದು ವೃಷಭಾಸುರನನ್ನು ಹುರಿದುಂಬಿಸಿದನು. ಆಗ ವೃಷಭಾಸುರನು, ನನ್ನೊಡನೆ ಯುದ್ಧ ಮಾಡಲಾಗದೆ ನನ್ನನ್ನು ಮಂಕನನ್ನಾಗಿ ಮಾಡಲು ಈ ರೀತಿ ವರ ಕೇಳು ಎಂದು ಹೇಳುತ್ತಿದ್ದಿಯಾ ನೀನು ಎಂದು ಶಿವನ ಮೇಲೆ ಕೋಪಗೊಂಡನು. ಅದೇ ಕೋಪದಲ್ಲಿ, ನಿನಗೇನು ಬೇಕು ಕೇಳು, ನಾನು ನಿನಗೆ ವರ ಕೊಡುತ್ತೇನು ಎಂದನು.
ಇದೇ ಉತ್ತರಕ್ಕಾಗಿ ಕಾಯುತ್ತಿದ್ದ ಮಹಾಶಿವನು, ಹಾಗಾದರೆ ನೀನು ನನ್ನ ವಾಹನವಾಗಬೇಕು ಎಂದನಂತೆ. ವೃಷಭಾಸುರನು ಮಹಾಶಿವನೇ ನನ್ನ ಮೇಲಿರುವುದರಿಂದ ಇನ್ಯಾರ ಭಯ ನನಗೆ ಎಂದುಕೊಂಡು ವಾಹನವಾಗಲು ಖುಷಿಯಿಂದ ಒಪ್ಪಿಕೊಂಡ. ಕೂಡಲೇ ಶಿವನಿಗೆ ವೃಷಭಾಸುರನು, ನೀನೂ ನನಗೆ ಒಂದು ವರ ಕೊಡಬೇಕು ಎಂದು ಕೇಳಿದ. ಮಹಾಶಿವನು ನಿನಗ್ಯಾವ ವರ ಬೇಕು ಎಂದ, ಆಗ ವೃಷಭಾಸುರನು ನಿನ್ನನ್ನು ಪೂಜಿಸುವ ಮೊದಲು ನನ್ನನ್ನು ಪೂಜಿಸಬೇಕು ಎಂದನು.
ಶಿವನು, ಆಡಿದ ಆಟ ಫಲಿಸಿತೆಂದು ನಸುನಕ್ಕು, ಆಗಲಿ, ನಾನೆಲ್ಲಿರುತ್ತೇನೊ ಅಲ್ಲಿಯೇ ನೀನು ಇರಬೇಕು. ನನ್ನನ್ನು ಪೂಜಿಸುವ ಮೊದಲು ನಿನ್ನನ್ನು ಪೂಜಿಸವಂತಾಗಲಿ ಎಲ್ಲೆಡೆ. ನಿನ್ನನ್ನು ಪೂಜಿಸದೆ ಬಂದ ಭಕ್ತರ ಇಷ್ಟಾರ್ಥ ಯಾವುದನ್ನೂ ನಾನು ಈಡೇರಿಸುವುದಿಲ್ಲ ಎಂದು ವರ ನೀಡಿದ. ಹೀಗೆ ಮಹಾಶಿವನು ಚಾಣಾಕ್ಷತೆಯಿಂದ ವೃಷಭಾಸುರನನ್ನು ಒಂದೆಡೆ ಕುಳಿತುಕೊಳ್ಳುವ ಹಾಗೆ ಮಾಡಿ, ಅವನ ಪುಂಡಾಟಿಕೆಯನ್ನು ಮಟ್ಟ ಹಾಕಿದನು.
"ಶನಿಶಕ್ತಿ ; ಮಿಥುನ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಹೊರಗಿನಿಂದ ಮನೆಗೆ ಬಂದ ಕೂಡಲೇ ಕೈ,ಕಾಲು, ಮುಖ ತೊಳೆದುಕೊಳ್ಳದೆ ಯಾವುದೇ ಕೆಲಸ ಮಾಡಬಾರದು. ಮಾಡಿದರೆ ಅರಿಷ್ಟತನ ನಿಮ್ಮಲ್ಲಿದೆ ಎಂದರ್ಥ.
ಶನಿದೇವನ ಕೃಪೆಗೆ : ಪ್ರತಿ ಶನಿವಾರ ಈಶ್ವರನ ದರ್ಶನ ಮಾಡಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)