ಶನಿ ಮಹಾತ್ಮನ ಬಗ್ಗೆ ತಪ್ಪು ಕಲ್ಪನೆ ಬಿಡಿ
ಅಲ್ಲದೇ ಶನಿಯು ತನ್ನ ತಂದೆ, ತಾಯಿ ಮತ್ತು ಶಿವ, ಬ್ರಹ್ಮ, ಬೃಹಸ್ಪತಿ, ದಶರಥ, ಶಂಕರಾಚಾರ್ಯ, ಸತ್ಯ ಹರಿಶ್ಚಂದ್ರ, ಶ್ರೀಕೃಷ್ಣ, ವಿಷ್ಣುದೇವ, ಗಣಪತಿ, ಲಕ್ಮೀದೇವಿ, ವಿಶ್ವಾಮಿತ್ರ, ವಾಲಿ, ನಳ ಮಹಾರಾಜ, ಪಾಂಡವರು, ಕೌರವರು, ಪಾರ್ವತಿ, ಸರಸ್ವತಿ, ರಾಜಾ ವಿಕ್ರಮಾದಿತ್ಯ ಮತ್ತಿತರರನ್ನೇ ತನ್ನಾಟದಿಂದ ಬಿಟ್ಟಿಲ್ಲ, ಇನ್ನು ನಮ್ಮ ಕರ್ಮಫಲಗಳನ್ನು ಅನುಭವಿಸಲು ನಮ್ಮನ್ನು ಬಿಡದೇ ಇರುತ್ತಾನೆಯೇ? ಈ ಬಗ್ಗೆ ಹಲವಾರು ಪೌರಾಣಿಕ ಕಥೆಗಳಿವೆ. ಮುಂದಿನ ಲೇಖನಗಳಲ್ಲಿ ಓದುವಿರಿ.
ಇನ್ನು ಮಂತ್ರಕ್ಕೆ ಹಣ್ಣು ಉದುರುವುದೇ? ಎಂಬ ಮಾತಿನಂತೆ ನವಗ್ರಹ ಸ್ತೋತ್ರ, ಹನುಮಾನ ಚಾಲೀಸಾ, ಮಹಾಮೃತ್ಯುಂಜಯ ಮಂತ್ರಗಳನ್ನು ಪಠಿಸುವುದರಿಂದ ಶನಿ ಹೇಗೆ ಶಾಂತನಾಗುತ್ತಾನೆ ಎಂಬ ಪ್ರಶ್ನೆ ಅಪ್ರಬುದ್ಧರಲ್ಲಿ ಮೂಡುವುದು ಸಹಜವೇ. ನಾವು ರಾಷ್ಟ್ರಗೀತೆ, ದೇಶಭಕ್ತಿಗೀತೆ, ನಾಡಗೀತೆಗಳನ್ನು ಮನದುಂಬಿ ಹಾಡುವಾಗ ನಮ್ಮೆಲ್ಲರ ಕಣಕಣಗಳಲ್ಲೂ ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅದೇ ರೀತಿ ಮಂತ್ರಗಳನ್ನು ಪಠಿಸುವುದರಿಂದ ಭಯ, ಭಕ್ತಿ-ಭಾವ ಮನದಲ್ಲಿ ಮತ್ತು ದೇಹದಲ್ಲಿ ಮೂಡುತ್ತದೆ ಎನ್ನುವುದು ಮಂತ್ರ ಪಠಿಸುವವರ ಅನುಭವದ ಮಾತು.
ಎಷ್ಟೋ ಜನರಿಗೆ ಶನಿ ಮಹಾತ್ಮನು ಅವರ ಜಾತಕದಲ್ಲಿ ಉಪಸ್ಥಿತನಾಗಿದ್ದ ಸ್ಥಳದಿಂದ ಅವರ ಮೇಲೆ ಪ್ರಭಾವ ಬೀರುತ್ತಾನೆ. ಆದರೆ ಜಾತಕ ಸಂಪೂರ್ಣ ಪರಿಶೀಲಿಸಿದಾಗಲೇ ಗೊತ್ತಾಗುವುದು. ಇಲ್ಲಿ ನಾವು ಜ್ಯೋತಿಷ್ಯ ಮತ್ತು ಭವಿಷ್ಯವನ್ನು ಹೇಳುತ್ತಿಲ್ಲ. ಕೇವಲ ಶನಿ ಮಹಾತ್ಮನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮತ್ತು ಚರ್ಚೆ ಅಷ್ಟೇ.
ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಶನಿ ಮಹಾರಾಜನು ಜೀವಮಾನದಲ್ಲಿ 3 ರಿಂದ 4 ಸಲ ಬರುವನು. ಅಂದರೆ ಮೂವತ್ತು ವರ್ಷಕ್ಕೊಮ್ಮೆ ಸಾಡೇಸಾತಿಯಾಗಿ. ಆದರೆ ಒಂದನೇ ಬಾರಿಗೆ ಅಷ್ಟೊಂದು ಕೆಟ್ಟಫಲ ನೀಡಲಾರನು. 2ನೇ ಬಾರಿ ಅಸ್ತವ್ಯಸ್ತವಾದ ಜೀವನವನ್ನು ಸರಿ ಮಾಡುವ ಬಗೆಯ ಬಗ್ಗೆ ಬುದ್ಧಿ ಕಲಿಸುತ್ತಾನೆ. 3ನೇ ಬಾರಿ ಜೀವನದಲ್ಲಿ ಮಾಡಿದ ಎಲ್ಲ ಕರ್ಮಫಲಗಳನ್ನು ಮರಳಿ ನೀಡುತ್ತ ಮಾಡಿದ ಕರ್ಮಕ್ಕೆ ಫಲ ಉಣ್ಣಿಸುತ್ತಾನೆ.
ಶನಿ ಮಹಾರಾಜನಿಗೆ ಶನೈಶ್ಚರ, ಪಿಂಗಲ, ಕೃಷ್ಣ, ರೌದ್ರಾಂತಕ, ಯಮ, ಸೌರಿ, ಪಿಪ್ಪಲಾದ, ಸಂಸ್ತುತ, ಕೋಣಸ್ಥ, ಬಬ್ರು, ಮಂದ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶನಿ ಮಹಾರಾಜನ ಬಗ್ಗೆ ಬಹಳಷ್ಟು ಮುಂದಿನ ಲೇಖನಗಳಲ್ಲಿ ವಿವರಿಸಲಾಗುವುದು.
ಶನಿಕೃಪೆಗೆ : ಪ್ರತಿ ಶನಿವಾರ ಮತ್ತು ಮಂಗಳವಾರ ಹನುಮಂತ ದೇವರ ದೇವಸ್ಥಾನಕ್ಕೆ ಹೋಗಿಬರುವುದು ಒಳ್ಳೆಯದು. ನವಗ್ರಹ ಮತ್ತು ಈಶ್ವರ ದೇವಸ್ಥಾನಗಳಿಗೂ ಹೋಗಬಹುದು ಶನಿಕೃಪೆಯಾಗಬೇಕಿದ್ದರೆ. ಆದಷ್ಟು ನಿಮ್ಮ ಪರಿಚಯದವರು ಅಥವಾ ಹತ್ತಿರದ ಬಂಧುಗಳು ಸಂಕಷ್ಟದಲ್ಲಿದ್ದರೆ ನಿಮ್ಮ ಕೈಲಾದ ಸಹಾಯ ಮಾಡಿ ಸ್ವಲ್ಪನಾದರೂ. ಎಳ್ಳು ದೀಪವನ್ನು ಮನೆಯಲ್ಲಿ ಹಚ್ಚಲೇಬೇಡಿ ದೇವಸ್ಥಾನದಲ್ಲಿ ಮಾತ್ರ ಹಚ್ಚಿ.
ವಾಸ್ತುಟಿಪ್ಸ್ : ಮನೆತುಂಬ ದೇವರ ಫೋಟೋ ಹಾಕುವುದು ಬೇಡ, ದೇವರ ಜಗಲಿ ಬಳಿ ಅಥವಾ ಪೂಜಾ ಕೋಣೆಯಲ್ಲಿ ಮಾತ್ರ ದೇವರ ಫೋಟೋ ಇಡಿ, ಒಂದೇ ದೇವರ ಎರಡಕ್ಕಿಂತ ಹೆಚ್ಚಿನ ಫೋಟೋ ಬೇಡ. ಮನೆಯ ಹಿರಿಯರ ಫೋಟೋ ಪೂಜಾ ಕೋಣೆಯಲ್ಲಿ ಇರಿಸಲೇಬೇಡಿ. ಮನೆ ದಕ್ಷಿಣದ ಗೋಡೆಗೆ ಹಿರಿಯರ ಫೋಟೋ ಇರಲಿ. [ಲೇಖಕರ ಮೊಬೈಲ್ : 9481522011].