ಗಂಗಾವತಿಯ ನೂತನ ಕೃಷಿ ಮಹಾವಿದ್ಯಾಲಯ ಉದ್ಘಾಟಿಸಿದ ಸಚಿವ ಬಿ.ಸಿ ಪಾಟೀಲ್
ಕೊಪ್ಪಳ, ಮಾರ್ಚ್ 7: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವಾರು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಸಹಕರಿಸುವುದರ ಜೊತೆಗೆ ರೈತರ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದು ರಾಜ್ಯ ಕೃಷಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಗಂಗಾವತಿಯಲ್ಲಿ ನೂತನವಾಗಿ ಆರಂಭಿಸಿರುವ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ (ಮಾ.6) ದಂದು ಆಯೋಜಿಸಲಾಗಿದ್ದ ಮಹಾವಿದ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತಾತ್ಮಕ ಕಾರಣಗಳಿಂದ ಕಳೆದ 5 ವರ್ಷಗಳಿಂದ ಕೃಷಿ ವಿದ್ಯಾಲಯವನ್ನು ಆರಂಭಿಸುವ ಯೋಜನೆ ಕುಂಟುತ್ತಾ ಸಾಗಿತ್ತು. ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜ್ಯದ ಮುಖ್ಯಮಂತ್ರಿಗಳು ಕೃಷಿ ವಿದ್ಯಾಲಯ ಪ್ರಾರಂಭಿಸಲು ಅನುಮತಿ ನೀಡಿರುವುದು ಶ್ಲಾಘನೀಯ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಕೃಷಿ ವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇ.40 ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನು ಮುಂದೆ ಇದನ್ನು ಶೇ.50ಕ್ಕೆ ಹೆಚ್ಚಿಸಲಾಗುತ್ತಿದ್ದು, ಇದರಿಂದ ರೈತರ ಮಕ್ಕಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಎಂದರು.

ಕೃಷಿ ನಾಶವಾದರೆ ಜಗತ್ತಿಗೆ ದುರ್ಭಿಕ್ಷೆ ಬರುತ್ತದೆ. ಏಕೆಂದರೆ ಕೃಷಿ ಮಾಡಿದರೆ ಮಾತ್ರ ನಮ್ಮೆಲ್ಲರಿಗೂ ಆಹಾರ ದೊರೆಯುತ್ತದೆ. ಹಾಗಾಗಿ ಕೃಷಿಯಿಂದ ವಿಮುಖವಾದರೆ ನಮಗೆ ಆಹಾರದ ಕೊರತೆ ಉಂಟಾಗಿ, ಮಾನವ ಕುಲಕ್ಕೆ ಸಂಕಷ್ಟ ಎದುರಾಗಲಿದೆ. ಕೃಷಿಗೆ ಅಷ್ಟೊಂದು ಮಹತ್ವವಿದೆ. ದೇಶದಲ್ಲಿ ಶೇ.60 ರಷ್ಟು ಉದ್ಯೋಗಗಳು ಕೃಷಿಯಿಂದ ಸೃಷ್ಠಿಯಾಗಿವೆ. ಅಲ್ಲದೇ ಶೇ.20 ರಷ್ಟು ಜಿಡಿಪಿ ಕೃಷಿ ಕ್ಷೇತ್ರದಿಂದ ಬರುತ್ತದೆ. ಕೃಷಿ ಸಮ್ಮಾನ್ ಯೋಜನೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಇದರಿಂದ ಕೃಷಿ ಇಲಾಖೆಯ ಕಾರ್ಯವೈಖರಿ ತಿಳಿಯುತ್ತದೆ ಎಂದು ಹೇಳಿದರು.
ರಾಸಾಯನಿಕ ಬಳಸುವುದರಿಂದ ಭೂಮಿ ಹಾಳಾಗುತ್ತದೆ. ಕೃಷಿ ಉಳಿಯಬೇಕಾದರೆ ಭೂಮಿ ಉಳಿಯಬೇಕು. ಭೂಮಿ ಉಳಿದರೆ ಮಾತ್ರ ರೈತರು ಜೀವಂತವಾಗಿರಲು ಸಾಧ್ಯ. ರೈತರ ಮನಸ್ಸನ್ನು ಬದಲಾಯಿಸಬೇಕು. ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಭೂಮಿಯನ್ನು ಫಲವತ್ತಾಗಿಸಬೇಕು. ಅಲ್ಲದೇ ನೀರನ್ನು ಮಿತವಾಗಿ ಬಳಸಬೇಕು. ನೀರಾವರಿ ಭಾಗದ ರೈತರೇ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ಮಂಡ್ಯದಲ್ಲಿ ಕೆಆರ್ಎಸ್ ಮತ್ತು ಹೇಮಾವತಿ ಎರಡು ಜಲಾಶಯಗಳಿವೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ನೀರಾವರಿ ಪ್ರದೇಶವಲ್ಲ, ಆದರೆ ಇಲ್ಲಿ ಕೇವಲ 5 ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆಂದರೆ ಕೋಲಾರ ಜಿಲ್ಲೆಯವರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಹೆಚ್ಚು ಲಾಭ ಗಳಿಸುತ್ತಾರೆ. ಇವರನ್ನು ಮಾದರಿಯನ್ನಾಗಿ ತೆಗೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ರೈತರ ಮನೆ ಬಾಗಿಲಿಗೆ ಸರ್ಕಾರ ಹೋಗಬೇಕು ಎನ್ನುವ ಉದ್ದೇಶದಿಂದ ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂಪಾಯಿ ಹಣ ಮೀಸಲಿಟ್ಟಿತ್ತು. ಇದರಲ್ಲಿ 10 ಸಾವಿರ ಕೋಟಿ ಹಣವನ್ನು ಆಹಾರ ಸಂಸ್ಕರಣಾ ಘಟಕಕ್ಕಾಗಿ ಮೀಸಲಿಡಲಾಗಿದೆ. ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್ ವಿತರಿಸಲಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಂದು ಕೃಷಿ ಸಂಜೀವಿನಿ ವಾಹನ ವಾಹನವನ್ನು ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.












Click it and Unblock the Notifications