ಏನಾಗುತ್ತಿದೆ?:ದಕ್ಷಿಣ ಕನ್ನಡ ಮಾತ್ರವಲ್ಲ, ಮಲೆನಾಡಿನ ಪಂಚ ನದಿಗಳು ಬತ್ತುತ್ತಿವೆ!
ಚಿಕ್ಕಮಗಳೂರು, ಸೆಪ್ಟೆಂಬರ್.20: ವಾರದ ಹಿಂದೆ ಮುಂಗಾರು ಆರ್ಭಟಕ್ಕೆ ಉಕ್ಕಿ ಹರಿದ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು ಧಿಡೀರನೆ ಬತ್ತಲು ಶುರುವಾಗಿದ್ದ ಸುದ್ದಿ ಓದಿದ್ದೀರಿ ಅಲ್ಲವೇ. ಆದರೆ ಈ ಕೊರತೆ, ಸಮಸ್ಯೆ ಈಗ ಕರಾವಳಿಗರನ್ನು ಮಾತ್ರವಲ್ಲ. ಮಲೆನಾಡ ಜನರನ್ನೂ ಕಾಡುತ್ತಿದೆ.
ದಶಕಗಳ ನಂತರ ಸುರಿದ ಭಾರೀ ಮಳೆ ಮಲೆನಾಡನ್ನು ಅತಿವೃಷ್ಠಿಗೆ ನೂಕಿದ್ದು, ಇನ್ನು ಈ ಪರಿಸ್ಥಿತಿ ಹಸಿರಾಗಿ ಇರುವಾಗಲೇ ಭೀಕರ ದೃಶ್ಯವೊಂದು ಮಲೆನಾಡಿಗರಿಗೆ ಆಶ್ಚರ್ಯದ ಜೊತೆಗೆ ಆತಂಕವುಂಟು ಮಾಡಿದೆ.
ಹೌದು, 15 ದಿನಗಳ ಹಿಂದಷ್ಟೇ ಉಕ್ಕಿ ಹರಿಯುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಪಂಚ ನದಿಗಳು ಬರಗಾಲವನ್ನು ನಾಚಿಸುವ ಮಟ್ಟಿಗೆ ಬರಿದಾಗಿವೆ. ನೀರಿನ ಸೆಲೆಗಳು ಮಾಯವಾಗಿರುವ ರೀತಿಯಲ್ಲಿ ನದಿಗಳ ಒಡಲು ಖಾಲಿಯಾಗಿದ್ದು ವಿಜ್ಞಾನಕ್ಕೇ ಸವಾಲಾಗಿ ಪರಿಣಮಿಸಿದೆ.
ಕಳೆದ ಹದಿನೈದು ದಿನಗಳ ಹಿಂದೆ ಭೋರ್ಗರೆದು ಹರಿಯುತ್ತಿದ್ದ ಜಿಲ್ಲೆಯ ಪಂಚನದಿಗಳು ಇದೀಗ ಏಕಾಏಕಿ ಸಂಪೂರ್ಣ ನೆಲಕಚ್ಚಿ ಹೋಗಿದ್ದು, ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ತುಂಗಾ, ಭದ್ರಾ, ಹೇಮಾವತಿ, ಶರಾವತಿ, ವೇದಾವತಿ ನದಿಗಳು ಹುಟ್ಟಿ ಹರಿಯುತ್ತವೆ.
ಅದರಲ್ಲೂ ಈ ಭಾರಿ ಸುರಿದ ಮಳೆಗೆ ನದಿಗಳು ಪ್ರವಾಹವನ್ನೇ ಸೃಷ್ಟಿಸಿದ್ದವು. ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿದಿದ್ದವು. ಆದರೆ ಕೇವಲ 15 ದಿನಗಳಲ್ಲಿ ನದಿಗಳು ಏಕಾಏಕಿ ಸಂಪೂರ್ಣ ಬತ್ತಿ ಹೋಗಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಎಡೆ ಮಾಡಿದೆ. ಸದ್ಯ ಇಲ್ಲಿನ ನದಿಗಳ ಸ್ಥಿತಿ ಹೇಗಿದೆ ನೋಡಿ...

ಬರಿದಾದ ಭದ್ರೆಯ ಒಡಲು
ನದಿಗಳ ತಟದಲ್ಲಿ ನೀರು ಇಲ್ಲವಾಗಿದ್ದು, ಬರಡು ಭೂಮಿಯಂತೆ ಗೋಚರವಾಗುತ್ತಿದೆ. ಭದ್ರೆಯ ಒಡಲು ಬರಿದಾಗಿದ್ದು, ನೀರು ಕಾಣದೆ ನದಿಯ ತಳದಲ್ಲಿ ಮರಳು ಮರಳು ಮಾತ್ರ ಕಾಣಿಸುತ್ತಿದೆ. ಬಾಳೆಹೊನ್ನೂರು ಬಳಿ ಹರಿಯುವ ನದಿ ಪಾತ್ರದಲ್ಲಿ ಜನರಿಗೆ ಆಶ್ಚರ್ಯ ಜೊತೆಗೆ ಆತಂಕವೂ ಎದುರಾಗಿದೆ.

ರೈತರೂ ಕಂಗಾಲು
ಕಾರಣವೇ ಇಲ್ಲದೇ ಈ ರೀತಿ ಪ್ರಕೃತಿಯ ವಿಸ್ಮಯದಿಂದ ರೈತರೂ ಕಂಗಲಾಗಿದ್ದಾರೆ. ಇದೊಂದು ನಂಬಲಸಾಧ್ಯವಾದ ಘಟನೆಯಂತೆ ಕಾಣುತ್ತಿದ್ದು, ಏಕೆ ಹೀಗೆ ಆಗಿರಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸುವಂತೆ ಮಾಡಿದೆ.

ಭೂತಾಯಿ ನುಂಗಿ ಹಾಕಿದಳಾ?
ಈ ರೀತಿ ಏಕಾಏಕಿ ನದಿಗಳು ಬರಿದಾಗಿದ್ದು, ನದಿಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುವುದು ಸಹ ಅಗತ್ಯ ಎನ್ನುತಾರೆ ಜನಪ್ರತಿನಿಧಿಗಳು.
ಸದ್ಯ ಮಲೆನಾಡಿಗರನ್ನು ವಿಪರೀತ ಕಾಡುತ್ತಿರುವ ಪ್ರಶ್ನೆಯೆಂದರೆ "ಭೋರ್ಗರೆದ ವರುಣನನ್ನು ಭೂತಾಯಿ ನುಂಗಿ ಹಾಕಿದಳಾ?"

ಸೂಕ್ತ ತನಿಖೆ ನಡೆಯಲಿ
ಮೋಡದ ಮರೆಯಲ್ಲಿ ಮಳೆ ನೀರು ಆವಿಯಾಗಿ ಕರಗಿ ಹೋಯಿತಾ? ಅಬ್ಬರ ಮಾಡಿದ ವರುಣ ಕೊನೆಗೆ ಎಲ್ಲಿಗೆ ಹೋಗಿ ಸೇರಿಕೊಂಡ? ಎಂಬ ಕುತೂಹಲ ಮಲೆನಾಡಿನ ಜನರಲ್ಲಿ ಇಂದು ಕಾಡುತ್ತಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಸೂಕ್ತ ತನಿಖೆ ನಡೆಸಬೇಕಾಗಿದೆ ಎಂದು ಜಿಲ್ಲೆಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.












Click it and Unblock the Notifications