ಅಲ್ಪ ಭೂಮಿಯಲ್ಲಿ ಅಧಿಕ ಲಾಭ ತೆಗೆದು ಹುಬ್ಬೇರುವಂತೆ ಮಾಡಿದ ಸಿರಗುಪ್ಪ ರೈತ
ಬಳ್ಳಾರಿ, ಸೆಪ್ಟೆಂಬರ್. 09: ಇವರು ಬಿಬಿಎಂ ಪದವೀಧರರು. ಆದರೆ ಮಾಡುತ್ತಿರುವ ಕೆಲಸ ಹೈನುಗಾರಿಕೆ. ಶ್ರೀಚೇತನ್ ಎಂಬ ಫಾರ್ಮ್ ಹೌಸ್ ನಿರ್ಮಿಸಿ, ಎಚ್ಎಫ್ ತಳಿಯ 25 ಆಕಳುಗಳನ್ನು ಸಾಕುತ್ತಿದ್ದಾರೆ. ತಮ್ಮ ಜ್ಞಾನವನ್ನು ಬಂಡವಾಳ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣ ಗಳಿಸಿ, ಸ್ವಯಂ ದುಡಿಮೆಯಲ್ಲಿ ತೊಡಗಿದ್ದಾರೆ.
ಉನ್ನತ ಶಿಕ್ಷಣ ಪಡೆದಿರುವ ಅನೇಕರು ಈಗಾಗಲೇ ಹೈನುಗಾರಿಕೆ ಮಾಡಿ, ಲಾಭ ಕಂಡಿದ್ದಾರೆ. ಅದು ನಿಮಗೂ ಗೊತ್ತಿರುವ ವಿಷಯವೇ. ಆದರೆ ಇವರು ಮಾಡುತ್ತಿರುವ ಹೈನುಗಾರಿಕೆ ಬೇರೆಯವರಿಗಿಂತ ಸ್ವಲ್ಪ ಭಿನ್ನವಾಗಿ ಕಂಡುಬರುತ್ತದೆ.
ಇರುವ ಅಲ್ಪ ಜಮೀನಲ್ಲಿಯೇ ಹೆಚ್ಚಿನ ಆದಾಯ ಗಳಿಸಿದ್ದಾರೆ. ಹೌದು, ಅವರ ಹೆಸರು ರವಿಚರಣ್. ಶ್ರೀ ಚೇತನ್ ಫಾರ್ಮ್ ಹೌಸ್ ಮಾಲೀಕರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಕೇವಲ ಮೂರೂವರೆ ಎಕರೆ ಭೂಮಿಯಲ್ಲಿ ಇವರು ಪಡೆಯುವ ಆದಾಯ 2 ಲಕ್ಷ ರೂಪಾಯಿಗೂ ಮೀರಿದ್ದು.
ಕೇವಲ ಒಂದು ಎಕರೆ ವಿಸ್ತೀರ್ಣದಲ್ಲಿ ಆಕಳುಗಳಿಗೆ ಶೆಡ್ ನಿರ್ಮಿಸಿ, ಅರ್ಧ ಎಕರೆ ಭೂಮಿಯಲ್ಲಿ ಆಕಳುಗಳಿಗೆ ನಿತ್ಯ ಬೆಳಗಿನ ಜಾವ ವಿಹಾರಕ್ಕಾಗಿ ಸ್ಥಳ ಮೀಸಲು ಮಾಡಿ ಕಪ್ಪು ಬಣ್ಣದ ಕೂಲ್ ನೆಟ್ ಅಳವಡಿಸಿದ್ದಾರೆ. ಕಪ್ಪುಬಣ್ಣವು ಬೇಸಿಗೆಯಲ್ಲಿ ಬಿಸಿಲ ತಾಪವನ್ನು ಹೀರಿಕೊಳ್ಳುವ ಕಾರಣ ಈ ಬಣ್ಣದ ನೆಟ್ ಅನ್ನೇ ಬಳಕೆ ಮಾಡಬೇಕು ಎನ್ನುತ್ತಾರೆ ರವಿಚರಣ್.
ಇದಿಷ್ಟೇ ಅಲ್ಲ, ಇವರ ಫಾರ್ಮ್ ಹೌಸ್ ನಲ್ಲಿ ಇನ್ನು ಅನೇಕ ವಿಶೇಷಗಳಿವೆ. ಏನೆಂದು ತಿಳಿಯಲು ಒಮ್ಮೆ ಈ ಲೇಖನ ಓದಿ...

ಎಚ್ಎಫ್ ಶುದ್ಧ ತಳಿಯ ಆಕಳು ಸಾಕಾಣಿಕೆ
"ಈ ಮೊದಲು ಮುರ್ರಾತಳಿಯ ಎಮ್ಮೆಗಳನ್ನು ಸಾಕಾಣಿಕೆ ಮಾಡುತ್ತಿದ್ದೆ. ಆದರೆ ಹಾಲನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಹಾಗೂ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ಎಮ್ಮೆಗಳ ಸಾಕಾಣಿಕೆ ಕೂಡ ಶ್ರಮದಿಂದ ಕೂಡಿದ್ದು, ಖರ್ಚು ಹೆಚ್ಚಿತ್ತು.
ಕಾರಣ 5 ಮುರ್ರಾತಳಿಯ ಎಮ್ಮೆ ಕರುಗಳನ್ನು ಉಳಿಸಿಕೊಂಡು, 25ಕ್ಕೂ ಹೆಚ್ಚು ಸ್ಥಳೀಯವಾಗಿ ಜನಿಸಿರುವ ಎಚ್ಎಫ್ ಶುದ್ಧ ತಳಿಯ ಆಕಳುಗಳನ್ನು ಸಾಕುತ್ತಿರುವೆ. ತುಮಕೂರಿನ ಬೈಫ್' ಸಂಸ್ಥೆ ಅಭಿವೃದ್ಧಿ ಪಡಿಸಿದ ಬೈಫ್ ಕೋಬ್ರಾ ಈಗಲ್ ಎಫ್ ಟಿ' ಸ್ಪರ್ಮ್ ಅನ್ನು ಪಶುವೈದ್ಯರಿಂದ ಕೃತಕ ಗರ್ಭಧಾರಣೆ ಮಾಡಿಸಿ, ಆಕಳುಗಳನ್ನೇ ಪಡೆಯುತ್ತಿದ್ದೇವೆ" ಎಂದು ವಿವರಿಸುತ್ತಾರೆ ರವಿಚರಣ್.

ಹಸಿರೆಲೆ ಗೊಬ್ಬರವೇ ಆಹಾರ
ಒಂದೂವರೆ ಎಕರೆ ಜಮೀನಿನಲ್ಲಿ ರಾಸುಗಳಿಗೆ ಬೇಕಾಗುವ ಹಸಿರೆಲೆ ಗೊಬ್ಬರ ಆಹಾರವನ್ನು ಬೆಳೆಯಲಾಗುತ್ತಿದೆ. ಸಜ್ಜೆ, ಮೆಕ್ಕಜೋಳ, ತೌಡು, ನುಚ್ಚು, ಹತ್ತಿಬೀಜದ ಹಿಂಡಿ, ಕೊಬ್ಬರಿಹಿಂಡಿ, ಕಡ್ಲೆಹೊಟ್ಟು, ಮಿನರಲ್ ಮಿಕ್ಸರ್, ಉಪ್ಪು ಸೇರಿಸಿದ ಆಹಾರವನ್ನು ಹಾಗೂ ಸೂಪರ್ ನೇಪಿಯರ್, ಕೋಪರ್, ಪ್ಯಾರಗ್ರಾಸ್, ಹಸಿರು ಹುಲ್ಲು ಸೇರಿ ಇತರೆ ಹುಲ್ಲು ಜಾತಿಯ ಸಸಿಗಳನ್ನು ನಾಟಿಮಾಡಿ, ಹಸಿರು ಹುಲ್ಲು ಕತ್ತರಿಸುವ ಯಂತ್ರದಿಂದ ಚಿಕ್ಕತುಂಡುಗಳನ್ನಾಗಿ ಮಾಡಿ ಆಕಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ ಎನ್ನುತ್ತಾರೆ ರವಿಚರಣ್.

ಗೋ ಮೂತ್ರ ಸಂಗ್ರಹಣೆ
ಇಬ್ಬರು ಸಹಾಯಕರು ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸುವುದು, ಹಾಲು ಹಿಂಡುವುದು, ಹಾಲು ಸರಬರಾಜು ಮಾಡುವುದನ್ನು ನಿರ್ವಹಿಸಲು ನೆರವಾಗುತ್ತಿದ್ದಾರೆ. ಆಕಳುಗಳ ಸೆಗಣಿ - ಗೋಮೂತ್ರವನ್ನು ಸಂಗ್ರಹ ಮಾಡಿ, ಮೇವಿನ ಬೆಳೆಗೆ ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದೆ.
ಹಸುಗಳ ಜೊತೆಯಲ್ಲಿ ಕಡಕ್ ನಾಥ' ತಳಿಯ ಕಪ್ಪು ಬಣ್ಣವಿರುವ ನಾಟಿ ಕೋಳಿಗಳನ್ನು ಸಾಕಿದ್ದು ಮಧುಮೇಹ ಹಾಗೂ ಹೃದಯದ ಕಾಯಿಲೆ ಇರುವವರು ಈ ಮಾಂಸವನ್ನು ತಿನ್ನುತ್ತಾರೆ. ಈ ಕೋಳಿಯ ಮಾಂಸ ಪ್ರತಿ ಕೆಜಿಗೆ 600 ರೂಪಾಯಿ. ಪ್ರತಿ ಕೋಳಿ 2 ರಿಂದ 3 ಕೆಜಿ ತೂಕ ತೂಗುತ್ತದೆ ಎಂದು ವಿವರಿಸುತ್ತಾರೆ ರವಿ.

ಸ್ವರ್ಣಮುಖಿ ತಳಿಯ ಕೋಳಿಗಳೂ ಇವೆ
ಪುಕ್ಕರಹಿತ ಕೋಳಿ ತಳಿಗಳನ್ನು ಕೂಡ ನಾವು ಸಾಕಿದ್ದು, ಕೋಳಿ ಮಾಂಸ ಮಾರಾಟ ಮಾಡುವವರು ಹಾಗೂ ಕೋಳಿ ಮಾಂಸ ಪ್ರಿಯರು ನೇರವಾಗಿ ಈ ಕೋಳಿಗಳನ್ನು ಆಹಾರವಾಗಿ ಬಳಕೆ ಮಾಡಬಹುದು. ಗಿರಿರಾಜ ಸೇರಿದಂತೆ ಸ್ವರ್ಣಮುಖಿ ತಳಿಯ ಕೋಳಿಗಳನ್ನು ಕೂಡ ಸಾಕಾಣಿಕೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಮೈಸೂರು ನಾಟಿ ಕೋಳಿ ತಳಿಯ 200 ಕೋಳಿಗಳನ್ನು ಪ್ರತ್ಯೇಕವಾಗಿ ಸಾಕಲಿಕ್ಕಾಗಿ ಪ್ರತ್ಯೇಕ ಫಾರ್ಮ್ ಹೌಸ್ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ ಎಂದು ಭವಿಷ್ಯದ ಯೋಜನೆಯ ಕನಸನ್ನು ವಿವರಿಸುತ್ತಾರೆ ರವಿ.

ಕಾಯಿ ಪಲ್ಲೆ ಬೆಳೆಯಲು ಯೋಜನೆ
ಕೃಷಿ ಸಂಶೋಧನಾ ಕೆಂದ್ರದ ವಿಜ್ಞಾನಿ ಡಾ.ಎಂ.ಎ. ಬಸವಣ್ಣೆಪ್ಪ ಅವರು ಕಾಲಕಾಲಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುತ್ತಿದ್ದಾರೆ. ಹೈನುಗಾರಿಕೆಯ ಜೊತೆ ಜೊತೆಯಲ್ಲಿ ಕೋಳಿ, ಮೇಕೆ, ಕುರಿ ಮತ್ತು ಕಾಯಿ ಪಲ್ಲೆಯನ್ನೂ ಬೆಳೆಯುವ ವಿಚಾರವಿದೆ.
ಭವಿಷ್ಯದಲ್ಲಿ ಈ ಮೂರು ಎಕರೆಯಲ್ಲೇ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿ, ಪದವೀಧರ ನಿರುದ್ಯೋಗಿ ಯುವಶಕ್ತಿಗೆ ಮಾದರಿ ಆಗುವ ದೊಡ್ಡ ಕನಸಿದೆ. ಈ ನಿಟ್ಟಿನಲ್ಲಿ ಶ್ರಮವೂ ಇದೆ ಎಂದು ಮನದಾಳದ ಮಾತನ್ನು ಬಿಚ್ಚಿಟ್ಟರು ರವಿಚರಣ್.
-
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು












Click it and Unblock the Notifications