ದೇಶದ ರೈತರ ಮೇಲೆ ಕೇಂದ್ರ ಸರ್ಕಾರದಿಂದ ಮತ್ತೊಂದು ಪ್ರಹಾರ?
ಬೆಂಗಳೂರು, ಅ.02: ಎಪಿಎಂಸಿ, ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ಬಳಿಕ ಇದೀಗ ಕೇಂದ್ರ ಸರ್ಕಾರ ಮತ್ತೊಂದು ರೈತ ವಿರೋಧಿ ನಡೆಗೆ ಮುಂದಾಗಿದೆ ಎಂಬ ಸುದ್ದಿಗಳು ಬಂದಿದೆ. ಕೇಂದ್ರ ಸರ್ಕಾರ ರೈತರು ಬೆಳೆಯುವ ಬೆಳೆಗೆ ಕೊಡುತ್ತಿದ್ದ ಕನಿಷ್ಟ ಬೆಂಬಲ ಬೆಲೆಯನ್ನು ರದ್ದು ಮಾಡಲಾಗುತ್ತಿದೆ ಎಂಬ ಸುದ್ದಿ ಬಂದಿದೆ. ಇದು ಮತ್ತೊಂದು ಹಂತದ ವಿರೋಧಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ರೈತರ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು ಎಂಬ ಒತ್ತಾಯಗಳಿವೆ. ಆದರೆ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇಷ್ಟೇ ಅಲ್ಲ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ರೈತ ಸಮುದಾಯದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಇದೀಗ ಸಂಕಷ್ಟದಲ್ಲಿನ ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಕೊಡುವುದನ್ನು ಕೇಂದ್ರ ಸರ್ಕಾರ ನಿಲ್ಲಸಲಿದೆ ಎಂಬುದು ರೈತರ ನೆಮ್ಮದಿ ಹಾಳು ಮಾಡಿದೆ. ಆದರೆ ಇದೇ ವಿಚಾರದ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ.
ಹೊಸ ಕಾಯ್ದೆಗಳಿಂದ ರೈತರಿಗೆ ಲಾಭ!
ಕೇಂದ್ರ ಸರ್ಕಾರ ಅಂಗೀಕರಿಸಿರುವ ಹೊಸ ಕಾಯ್ದೆಗಳು ರೈತರನ್ನು ಎಲ್ಲ ಬಂಧನದಿಂದ ಮುಕ್ತಗೊಳಿಸಿದ್ದು, ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿವೆ ಎಂದು ಕೇಂದ್ರ ರಾಸಾಯನಿಕ ಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಹೇಳಿದ್ದಾರೆ.
ಕೃಷಿ ಸಚಿವ ಬಿ.ಸಿ. ಪಾಟೀಲರೇ ಇದೇ ನಿಮ್ಮ ಸಾಧನೆ...!
ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಮತ್ತಿತ್ತರ ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದು, ಮಸೂದೆಗಳಲ್ಲಿ ಟೀಕಿಸಲು ವಿಪಕ್ಷ ನಾಯಕರಿಗೆ ಯಾವುದೂ ಋಣಾತ್ಮಕ ಅಂಶಗಳು ಸಿಗುತ್ತಿಲ್ಲ. ಹೀಗಾಗಿ ಕಾಯಿದೆಗಳ ವಿಚಾರವಾಗಿ ಅಪಪ್ರಚಾರ ಮಾಡುತ್ತಿದ್ದು, ದಳ್ಳಾಳಿಗಳಿಗಾಗಿ ವಿಪಕ್ಷಗಳು ಧ್ವನಿಯೆತ್ತುವ ಮೂಲಕ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ವಿಚಾರ
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಿಂತೆಗೆದುಕೊಳ್ಳಲಾಗುತ್ತದೆ ಎಂಬುದು ಮಸೂದೆ ವಿರೋಧಿಗಳು ರೈತ ಸಮುದಾಯದಲ್ಲಿ ಹರಡುತ್ತಿರುವ ಪ್ರಮುಖ ಸುಳ್ಳಲಾಗಿದೆ. ಕನಿಷ್ಠ ಬೆಂಬಲ ವ್ಯವಸ್ಥೆಯನ್ನು ಮುಂದುವರೆಸುವುದರ ಜೊತೆಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಕ್ರಮಕೈಗೊಂಡಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರೆಸುವ ಬಗ್ಗೆ ಸಂಸತ್ತಿನಲ್ಲೂ ಹಾಗೂ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಈಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ರದ್ದಾಗುತ್ತವೆ ಎಂಬುದು ರೈತರನ್ನು ದಾರಿತಪ್ಪಿಸಲು ಮಸೂದೆ ವಿರೋಧಿಗಳು ಹೇಳುತ್ತಿರುವುದು ಮತ್ತೊಂದು ಸುಳ್ಳಾಗಿದೆ. 2012 ರ ಡಿಸೆಂಬರ್ 4 ರಂದು ಯುಪಿಎ ಸರ್ಕಾರದ ಪರವಾಗಿ ಸಚಿವ ಕಪಿಲ್ ಸಿಬಾಲ್ ಲೋಕಸಭೆಯಲ್ಲಿ ಏನು ಮಾತನಾಡಿದರು ಎಂಬುದು ಸದನದ ಕಡತದಲ್ಲಿದೆ. ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಆದ್ದರಿಂದ ಸುಳ್ಳುಪ್ರಚಾರದಲ್ಲಿ ತೊಡಗಿವೆ. ಆದರೆ ಯಾವುದೇ ಕಾರಣಕ್ಕೂ ಪಟ್ಟಭದ್ರ ಹಿತಾಸಕ್ತಿಗಳ ಅಪಪ್ರಚಾರಕ್ಕೆ ರೈತರು ಬಲಿಯಾಗುವುದಿಲ್ಲ ಎಂದು ಡಿವಿಎಸ್ ಭರವಸೆ ವ್ಯಕ್ತಪಡಿಸಿದರು.
ಈ ವರ್ಷ ಹೆಚ್ಚು ಬಿತ್ತನೆ
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ 2007ರ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಹೆಚ್ಚು ಬಿತ್ತನೆಯಾಗಿದೆ. ಬಿತ್ತನೆ ಹೆಚ್ಚಾದ ಕಾರಣ ರಸಗೊಬ್ಬರ ಯೂರಿಯಾಕ್ಕೂ ಬೇಡಿಕೆ ಹೆಚ್ಚಾಗಿತ್ತು. ರಾಜ್ಯದ ಬೇಡಿಕೆಯನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ಈಡೇರಿಸಿದ್ದು, ಎಲ್ಲಿಯೂ ರಸಗೊಬ್ಬರಕ್ಕಾಗಲೀ ಬಿತ್ತನೆ ಬೀಜಕ್ಕಾಗಲೀ ಕೊರತೆಯುಂಟಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವೆಡೆ ಅಪಪ್ರಚಾರ ಮಾಡಲಾಗಿತ್ತು. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ರಸಗೊಬ್ಬರ ಯೂರಿಯಾಕ್ಕೆ ಕೊರತೆಯಾಗುವಂತೆ ಮಾಡಿದ 148 ಅಂಗಡಿಗಳ ಪರವಾನಿಗೆ ರದ್ದುಪಡಿಸಿ ಕಾನೂನು ಕ್ರಮಜರುಗಿಸಲಾಗಿದೆ ಎಂದರು.
ರಾಜ್ಯದಲ್ಲಿ 190 ಲಕ್ಷ ಹೆ.ಭೌಗೋಳಿಕ ವಿಸ್ತೀರ್ಣದಲ್ಲಿ 118 ಲಕ್ಷ ಹೆ.ಕೃಷಿಗೆ ಯೋಗ್ಯಭೂಮಿಯಿದೆ. 7.69 ಲಕ್ಷ ಹೆ. ಬಂಜರು ಭೂಮಿ ಹಾಗೂ 4.03 ಲಕ್ಷ ಹೆ.ಕೃಷಿ ಮಾಡಬಹುದಾದ ತ್ಯಾಜ್ಯಭೂಮಿಯಿದೆ. ಬೀಳು ಭೂಮಿ 15.35 ಲಕ್ಷ ಹೆಕ್ಟೇರ್ ಪ್ರದೇಶವಿದೆ. ಕೃಷಿ ಮತ್ತು ಕೈಗಾರಿಕೆಗಳು ಎರಡು ಸಮಾನವಾಗಿ ಅಭಿವೃದ್ಧಿ ಹೊಂದಿರುವ ಅವಕಾಶವಿದೆ.
ಉದ್ದಿಮೆ ಸ್ವರೂಪಕ್ಕೆ ಕೃಷಿ ಬದಲಾವಣೆ
ಜೊತೆಗೆ ಕೃಷಿಯನ್ನು ಉದ್ದಿಮೆ ಸ್ವರೂಪದಲ್ಲಿ ಬೆಳೆಸುವ ಅವಕಾಶ ಕೃಷಿ ತಿದ್ದುಪಡಿ ಕಾಯಿದೆಯಿಂದ ಸಾಧ್ಯವಾಗಿದೆ. ಬಂಜರು ಬೀಳು ಭೂಮಿಯಲ್ಲಿಯೂ ಕೃಷಿ ಪದವೀಧರರು ಕೃಷಿ ಮಾಡಲು ಭೂಸುಧಾರಣೆ ಕಾಯಿದೆ ತಿದ್ದುಪಡಿಯಿಂದ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ ಸುಮಾರು 4 ಸಾವಿರ ಕೃಷಿ ಪದವೀಧರರು ಕೃಷಿ ವಿಶ್ವವಿದ್ಯಾಲಯದಿಂದ ಹೊರಬರುವುದರಿಂದ ಅವರಿಗೆ ಅಧಿಕ ಅವಕಾಶಗಳು ಇದರಿಂದ ದೊರೆತಂತಾಗುತ್ತದೆ. 10 ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ್ ಯೋಜನೆಯಡಿ ಕೃಷಿ ಆಹಾರ ಉತ್ಪಾದನೆಗೆ ಮೀಸಲಿಟ್ಟಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಭೂ ಸುಧಾರಣೆ ಕಾಯಿದೆ ತಿದ್ದುಪಡಿಯಾಗಿದೆ. ಒಂದು ರಾಷ್ಟ್ರ ಮಾರುಕಟ್ಟೆ ನೀತಿ ದೇಶದಲ್ಲಿ ಜಾರಿಗೆ ಬಂದಿದೆ ಎಂದರು.