ಇದು ನನ್ನ ಕೊನೇ ಪ್ರತಿಭಟನೆ; ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅಣ್ಣಾ ಹಜಾರೆ
ಮುಂಬೈ, ಡಿಸೆಂಬರ್ 28: ರೈತರ ಪರವಾಗಿ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದು, ಇದೇ ನನ್ನ ಕೊನೆಯ ಪ್ರತಿಭಟನೆ ಆಗುತ್ತದೆ ಎಂದಿದ್ದಾರೆ.
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಸಿದ್ದಿ ಗ್ರಾಮದಲ್ಲಿ ಮಾತನಾಡಿದ ಅಣ್ಣಾ ಹಜಾರೆ, "ಕಳೆದ ಮೂರು ವರ್ಷಗಳಿಂದಲೂ ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ ಈ ಸಮಸ್ಯೆಗಳಿಗೆ ಸರ್ಕಾರ ಏನೂ ಪರಿಹಾರ ನೀಡಿಲ್ಲ. ಮುಂದಿನ ಜನವರಿ ಕೊನೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಇದೇ ನನ್ನ ಕೊನೆ ಪ್ರತಿಭಟನೆ ಆಗುತ್ತದೆ" ಎಂದಿದ್ದಾರೆ. ಮುಂದೆ ಓದಿ...
"ಖಾಲಿ ಭರವಸೆಗಳು ಬೇಡ"
"ಬರೀ ಖಾಲಿ ಭರವಸೆಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರದ ಮೇಲೆ ಇನ್ನು ಯಾವುದೇ ನಂಬಿಕೆ ಉಳಿದಿಲ್ಲ. ನನ್ನ ಬೇಡಿಕೆಗಳ ಕುರಿತು ಏನು ಕ್ರಮ ತೆಗೆದುಕೊಳ್ಳುತ್ತದೆ ನೋಡೋಣ. ಸರ್ಕಾರ ಒಂದು ತಿಂಗಳ ಅವಧಿ ಸಮಯ ಕೇಳಿದೆ. ನಾನೂ ಜನವರಿ ಕೊನೆಯವರೆಗೆ ಸಮಯ ನೀಡಿದ್ದೇನೆ. ನನ್ನ ಬೇಡಿಕೆಗಳನ್ನು ಸರ್ಕಾರ ಪೂರೈಸದೇ ಇದ್ದರೆ, ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ. ಸರ್ಕಾರದ ವಿರುದ್ಧ ಇದು ನನ್ನ ಕೊನೆ ಪ್ರತಿಭಟನೆ" ಎಂದಿದ್ದಾರೆ.
ರೈತರ ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ: ಅಣ್ಣಾ ಹಜಾರೆ
ಕೃಷಿ ಸಚಿವರಿಗೆ ಪತ್ರ ಬರೆದಿದ್ದ ಹಜಾರೆ
ಎಂಎಸ್ ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸುಗಳು ಹಾಗೂ ಕೃಷಿ ವೆಚ್ಚ ಹಾಗೂ ಬೆಲೆ ಆಯೋಗಕ್ಕೆ (ಸಿಎಸಿಪಿ) ಸ್ವಾಯತ್ತತೆ ನೀಡುವ ನನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರೆ ಡಿಸೆಂಬರ್ 14ರಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದರು.
ಕೃಷಿ ಕಾಯ್ದೆ ವಿರುದ್ಧ ರೈತರಿಗೆ ಬೆಂಬಲ
ಈಚೆಗೆ ಬಿಜೆಪಿ ಮುಖಂಡ ಹಾಗೂ ಮಹಾರಾಷ್ಟ್ರದ ಮಾಜಿ ಸ್ಪೀಕರ್ ಹರಿಭಾವ್ ಬಗಾಡೆ ಅಣ್ಣಾ ಹಜಾರೆಯವರನ್ನು ಭೇಟಿಯಾಗಿ, ಕೇಂದ್ರದಿಂದ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ಕುರಿತು ಅವರಿಗೆ ವಿವರಣೆ ನೀಡಿದ್ದರು. ಆದರೆ ಈ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಂಬಲ ನೀಡಿ ಡಿಸೆಂಬರ್ 8ರಂದು ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ ಅಣ್ಣಾ ಹಜಾರೆ
ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ
ಕೇಂದ್ರ ಸರ್ಕಾರ ಪರಿಚಯಿಸಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿ ಗಡಿಗಳಲ್ಲಿ ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ ನಲ್ಲಿ ಕೃಷಿ ಕಾಯ್ದೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಈ ಕಾಯ್ದೆಗಳು ರೈತರಿಗೆ ಮಾರಕವಾಗಿವೆ, ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ರೈತರು ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.