ರೈತರಿಗೆ ಬೆರಳ ತುದಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಮಾಹಿತಿ...
ಕೃಷಿಯಲ್ಲಿ ಯಶಸ್ಸು ಪಡೆಯಬೇಕಾದರೆ ರೈತರಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ಅರಿವು, ಮಾಹಿತಿ ಇರುವುದು ಬಹಳ ಮುಖ್ಯ. ಹೀಗಾಗಿಯೇ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು "ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿ"ಗಳು ಹೆಸರಿನ ಕೃತಿಯನ್ನು ಹೊರ ತಂದಿದೆ.
ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ಹವಾಗುಣ, ವಿವಿಧ ತಿಂಗಳುಗಳಲ್ಲಿ ಮಳೆ ಪ್ರಮಾಣ, ಮಳೆ ದಿನಗಳು ಮತ್ತು ಉಷ್ಣಾಂಶದ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ. ರೈತರಿಗೆ ಸಂಬಂಧಪಟ್ಟ ಹಲವು ಉಪಯುಕ್ತ ಮಾಹಿತಿಗಳೂ ಪುಸ್ತಕದಲ್ಲಿವೆ.
ಮಾವಿನ ತೋಟದ ನಿರ್ವಹಣೆ; ರೈತರಿಗೆ ಸಲಹೆಗಳು
ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳು ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳ ತಳಿಗಳು, ಅವುಗಳ ವಿಶೇಷ ಗುಣಗಳು, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಇಳುವರಿ ಮುಂತಾದ ಮಾಹಿತಿಗಳನ್ನೂ ಈ ಕೃತಿ ಹೊತ್ತು ತಂದಿದೆ. ಇಷ್ಟರ ಜೊತೆಗೆ ವಿ.ವಿಯಲ್ಲಿ ದೊರೆಯುವ ಸೌಲಭ್ಯಗಳು, ಕೃಷಿ ಮಾಪನಗಳು... ಇನ್ನು ಮುಂತಾದ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ.
ಕೃಷಿ ವಿಶ್ವವಿದ್ಯಾನಿಲಯದ ಅಂತರ್ಜಾಲ ತಾಣ: www.uasbangalore.edu.in ದ e-Krishi AGRI Portal ನಲ್ಲಿ ಲಭ್ಯವಿರುತ್ತದೆ. ಈ ಕೈಪಿಡಿ ಮೊಬೈಲ್ ನಲ್ಲೇ ಲಭ್ಯವಿರುವುದರಿಂದ ವಿಜ್ಞಾನಿಗಳು ಮತ್ತು ವಿಸ್ತರಣಾ ಅಧಿಕಾರಿಗಳು ಮೊಬೈಲ್ ನಲ್ಲಿ ನೋಡಿ ರೈತರಿಗೆ ಸೂಕ್ತ ಪರಿಹಾರ ತಿಳಿಸಬಹುದು. ಕೃಷಿಕರು ತಮ್ಮ ಕೃಷಿ ಸಮಸ್ಯೆಗಳಿಗೆ ಮೊಬೈಲ್ನಲ್ಲಿ ನೋಡಿ ಪರಿಹಾರ ಕಂಡುಕೊಳ್ಳಬಹುದು. ಪುಸ್ತಕವನ್ನು ತಮ್ಮ ಜೊತೆ ಕೊಂಡೊಯ್ಯುವ ಅವಶ್ಯಕತೆವಿರುವುದಿಲ್ಲ. ಇದರಿಂದ, ಶ್ರಮ, ಸಮಯ, ಖರ್ಚಿನ ಉಳಿತಾಯವಾಗುವುದರ ಜೊತೆಗೆ ಅಧಿಕ ಇಳುವರಿ ಪಡೆಯಲು ಸಹ ಸಹಾಯವಾಗುತ್ತದೆ ಎಂದು ವಿ.ವಿಯ ಪ್ರಾಧ್ಯಾಪಕರು ಹಾಗೂ ಹಿರಿಯ ವಾರ್ತಾ ತಜ್ಞರಾದ ಕೆ.ಶಿವರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಧಾರಿತ ಬೇಸಾಯ ಕ್ರಮಗಳ ಪುಸ್ತಕ ಬೇಕಾದವರು ಜಿ.ಕೆ.ವಿ.ಕೆಯ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ 200 ರೂ.ಗಳಿಗೆ ಪುಸ್ತಕ ಕೊಳ್ಳಬಹುದು. ಪಿ.ಡಿ.ಎಫ್ ಪ್ರತಿಯನ್ನು ಉಚಿತವಾಗಿ ಪಡೆಯಲು 9972035456/9591347043 ಸಂಖ್ಯೆಗಳಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ತರಿಸಿಕೊಳ್ಳಬಹುದು.