ಮುಧೋಳ: ಸಿಮೆಂಟ್, ಕಬ್ಬಿಣ ಬಳಸದೇ ನಿರ್ಮಾಣವಾಗಿದೆ ಈ ದೇವಾಲಯ
ಬಾಗಲಕೋಟೆ, ನವೆಂಬರ್ 9: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿರುವ ಜೆ.ಕೆ. ಸಿಮೆಂಟ್ ಕಂಪನಿ ಆವರಣದಲ್ಲಿ ಪುರಾತನ ವಾಸ್ತುಶಿಲ್ಪ ಕಲೆಯ ಅನುಸಾರ ಯದುರೇಶ್ವರ ಶಿವ ಮಂದಿರವನ್ನು ಕಟ್ಟಲಾಗಿದೆ. ವಿಶೇಷವೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಸಿಮೆಂಟ್, ಕಬ್ಬಿಣವನ್ನು ಬಳಸದೇ ಕಟ್ಟಲಾಗಿದ್ದು, ಪ್ರವಾಸಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.
ಈ ಅತ್ಯಾಕರ್ಷಕ ಯದುರೇಶ್ವರ ಶಿವನ ದೇವಾಲಯ ಲೋಕಾರ್ಪಣೆಗೊಂಡು ಮೂರು ವರ್ಷಗಳಾಗಿವೆ. ಶಿವಭಕ್ತಾದಿಗಳಾದಿಯಾಗಿ ಮಕ್ಕಳು , ಕುಟುಂಬದವರು ಹೋಗಿ ಯದುರೇಶ್ವರ ಮಹದೇವ ಸ್ವಾಮಿ ದರ್ಶನ ಪಡೆಯಲು ಇಲ್ಲಿಗೆ ಆಗಮಿಸುತ್ತಿದ್ದು, ಪ್ರಮುಖ ಧಾರ್ಮಿಕ ಸ್ಥಳವಾಗಿ ರೂಪುಗೊಳ್ಳುತ್ತಿದೆ.
ಚಲನಚಿತ್ರಗಳಲ್ಲಿ ಚಿತ್ರಿಸಿದ ಭಾರತದ ರೈಲ್ವೆ ನಿಲ್ದಾಣಗಳು ಇಲ್ಲಿವೆ ನೋಡಿ..
ರಾಜಸ್ಥಾನದ ಬನ್ನಿ ಪಹಾರಪುರದ ಪಿಂಕ್ ಕಲ್ಲಿನಲ್ಲಿ ಕೆತ್ತಿರುವ ಅದ್ಭುತ ಕಲಾ ಚಿತ್ರಗಳು ಪ್ರವಾಸಿಗರು ಹಾಗೂ ಭಕ್ತರ ಮನ ಸೂರೆಗೊಳ್ಳುತ್ತಿದೆ . ಮಂದಿರದ ಕಂಬಗಳು , ಮೇಲ್ಬಾವಣಿಯಲ್ಲಿ ಕುಸುರಿ ಕಲೆ ಅರಳಿದೆ. ರಾಜಸ್ಥಾನದಲ್ಲೇ ಮಂದಿರದ ಕಂಬಗಳನ್ನು ಕೆತ್ತಿಸಿಕೊಂಡು ಇಲ್ಲಿಗೆ ತರಲಾಗಿದೆ.
ಈ ದೇವಾಲಯದ ಮತ್ತೊಂದು ವಿಶೇಷವೆಂದರೆ, ನರ್ಮದಾ ನದಿ ತಟದಿಂದ ಶಿವಲಿಂಗವನ್ನು ತರಿಸಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಕಾರ್ಖಾನೆ ಹಾಗೂ ವಸತಿ ಸಮುಚ್ಚಯದ ಮಧ್ಯೆ ನಿರ್ಮಾಣಗೊಂಡಿರುವ ದೇವಸ್ಥಾನವನ್ನು ಅಹ್ಮದಬಾದ್ ನಗರದ ಇಂಜಿನಿಯರ್ ಸಿ.ಬಿ. ಸೋಮಾಪುರ ವಿನ್ಯಾಸ ಮಾಡಿದ್ದಾರೆ.
ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯಕ್ಕೆ 68,640 ಹೆಕ್ಟೇರ್ ಮೀಸಲು
ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ಉದ್ಯಾನ
11,700 ಚದುರ ಅಡಿಗಳಲ್ಲಿ ಮಂದಿರದ ಕಟ್ಟಡವನ್ನು ಕೇವಲ 15ತಿಂಗಳಲ್ಲಿ ಪೂರ್ಣಗೊಳಿಸಿದ್ದಾರೆ . ಅಲ್ಲದೆ ದೇವಸ್ಥಾನದ ಸುತ್ತ 6 ಎಕರೆ ಜಾಗದಲ್ಲಿ ವಿಶಾಲವಾದ ಉದ್ಯಾನ ನಿರ್ಮಿಸಲಾಗಿದ್ದು , ಹೂ ಗಿಡ, ಹಚ್ಚಹಸುರಿನ ಉದ್ಯಾನವನ ಕಣ್ಮನ ಸೆಳೆಯುತ್ತದೆ. ಯದುರೇಶ್ವರ ದೇವಾಲಯ ಶ್ರದ್ಧಾಭಕ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿದೆ.
ಸಿಮೆಂಟ್, ಕಬ್ಬಿಣ ಬಳಸದೇ ದೇವಾಲಯ ನಿರ್ಮಾಣ
ಪುರಾತನ ದೇಗುಲಗಳಂತೆ ವಾಸ್ತುಶಾಸದ ಅನುಸಾರ, ಸಿಮೆಂಟ್ ಹಾಗೂ ಕಬ್ಬಿಣ ಬಳಸದೆ ದೇವಸ್ಥಾನವನ್ನು ನಿರ್ಮಿಸಿದ್ದು , ನೂರಾರು ವರ್ಷ ಬಾಳಿಕೆ ಬರುತ್ತದೆ . ದೇವಾಲಯ ನಿರ್ಮಾಣಕ್ಕೂ ಮುನ್ನ ಜೆ.ಕೆ. ಗ್ರೂಪ್ನ ಮಾಲೀಕ ಯದುಪತಿ ಸಿಂಘಾನಿಯಾ, ನಿರ್ದೇಶಕ ಮಾಧವಕೃಷ್ಣ ಸಿಂಘಾನಿಯಾ, ರಾಘವಪತ್ತ ಸಿಂಘಾನಿಯಾ ಮುತುವರ್ಜಿ ವಹಿಸಿ ಹಲವಾರು ಮಂದಿರಗಳನ್ನು ಪರಿವೀಕ್ಷಿಸಿ, ವಿಶಿಷ್ಟವಾದ ನೀಲಿ ನಕಾಶೆಯನ್ನು ಹಾಕಿಸಿ ಮಂದಿರ ನಿರ್ಮಾಣಕ್ಕೆ ನಿರ್ದೇಶನ ನೀಡಿದ್ದರು ಎಂದು ತಿಳಿದುಬಂದಿದೆ.
ಅಮೃತ ಶಿಲೆ ಜೋಡಿಸಿ ಮಂದಿರ ನಿರ್ಮಾಣ
ಯದುರೇಶ್ವರ ಮಹದೇವ ಸ್ವಾಮಿ ದೇವಾಲಯ ಅತ್ಯಂತ ಸುಂದರವಾದ ನಿರ್ಮಾಣ ಮಾಡಲಾಗಿದೆ. ಶಿವನ ಮಂದಿರದ ಕಂಬ ಮೇಲಭತ್ತು ಎಲ್ಲಡೆ ಕಲೆ ಕಸುರಿ ಅರಳಿದೆ. ಎಲ್ಲ ಕೆತ್ತನೆಯನ್ನು ಮಷಿನ್ ಮುಖಾಂತರ ಮಾಡಲಾಗಿದೆ. ಕಂಬವನ್ನು ರಾಜಸ್ತಾನದಲ್ಲಿ ಕೆತ್ತನೆ ಮಾಡಿಸಿಕೊಂಡು ಇಲ್ಲಿಗೆ ತರಲಾಗಿದೆ. ಈ ಮಂದಿರ ನೋಡಿದರೆ ಪುರಾತನ ಐತಿಹಾಸಿಕ ಮಂದಿರದಂತೆ ಕಾಣುತ್ತದೆ. ಈ ಭವ್ಯ ಮಂದಿರ ನಿರ್ಮಾಣಕ್ಕೆ ಒಂದೇ ಒಂದು ಮುಷ್ಟಿ ಸಿಮೆಂಟ್ ಹಾಗೂ ಕಬ್ಬಿಣ ಬಳಕೆ ಮಾಡದೇ ನಿರ್ಮಿಸಲಾಗಿದೆ. ಅಮೃತ ಶಿಲೆಯನ್ನು ಕೆತ್ತನೆ ಮಾಡಿ ಜೋಡಿಸಿ ದೇವಾಲಯ ನಿರ್ಮಿಸಲಾಗಿದೆ. ಈ ರೀತಿ ನಿರ್ಮಾಣ ಮಾಡಿರುವ ಕೆಲವೇ ದೇವಾಲಯಗಳಲ್ಲಿ ಯದುವೇಶ್ವರ ಶಿವ ದೇವಾಲಯ ಒಂದಾಗಿದೆ.
ವಿಶೇಷವೆಂದರೆ ಈ ದೇವಾಲಯ ಈ ರೀತಿ ನಿರ್ಮಾಣದಿಂದ ಇದು ನೂರಾರು ವರ್ಷ ಬಾಳಿಕೆ ಬರುತ್ತದೆ. ಆದ್ದರಿಂದ ಪ್ರವಾಸಿಗರು ಭಕ್ತರು ಇದನ್ನೊಮ್ಮೆ ನೋಡಲೇ ಬೇಕು ಎಂದು ಕುತೂಹಲದಿಂದ ಬಂದು ನೋಡುತ್ತಾರೆ. ಯದುರೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ಯದುವೇಶ್ವರ ಶಿವ ದೇವಾಲಯಕ್ಕೆ ಮಾರ್ಗ
ಬೆಂಗಳೂರಿಂದ ಬರುವವರು ನೇರವಾಗಿ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿಯಿಂದ ಧಾರವಾಡ ಮೂಲಕ ಜಮಖಂಡಿ ರಸ್ತೆ ಮಾರ್ಗವಾಗಿ ಬರಬೇಕು. ದಾರಿ ಮಧ್ಯೆ ಲೋಕಾಪುರ ಬಳಿಯ ಯಾದವಾಡ ರೋಡ್ ಕಡೆ ಟರ್ನ್ ತೆಗೆದುಕೊಳ್ಳಬೇಕು. ಲೋಕಾಪುರ ಯಾದವಾಡ ರಸ್ತೆ ಮಾರ್ಗ ಮಧ್ಯೆಯ ಜೆಕೆ ಕಾರ್ಖಾನೆ ಆವರಣದಲ್ಲಿ ಈ ದೇವಸ್ಥಾನ ಇದೆ.
ಬೆಳಗಾವಿಯಿಂದ ಬರುವವರು ಲೋಕಾಪುರಕ್ಕೆ ಬಂದು ಅಲ್ಲಿಂದ ಯಾದವಾಡ ಕಡೆಗೆ ಹೋಗುವ ದಾರಿಯಲ್ಲಿ ಸಾಗಿದರೆ ದೇವಸ್ಥಾನ ಸಿಗುತ್ತದೆ. ಇತ್ತ ಕೊಪ್ಪಳ, ಗದಗ, ರಾಯಚೂರು, ವಿಜಯಪುರ ಮಾರ್ಗವಾಗಿ ಬರುವವರು ಬಾಗಲಕೋಟೆಗೆ ಬಂದು ಅಲ್ಲಿಂದ ಲೋಕಾಪುರಕ್ಕೆ ಬಂದು, ಯಾದವಾಡ ಮಾರ್ಗದ ಮೂಲಕ ದೇವಾಲಯಕ್ಕೆ ತೆರಳಬಹುದು.