ಕೊಡಗಿನ ದೇವರ ಕಾಡುಗಳಲ್ಲಿ ವಿಜೃಂಭಿಸುತ್ತಿರುವ ವನದೇವಿ: ಏನಿದರ ವಿಶೇಷ?
ಮಡಿಕೇರಿ: ವನದೇವಿ ವಿಜೃಂಭಿಸಿದ ಸೊಬಗು.. ಕೈ ಬೀಸಿ ಕರೆಯುತ್ತಿದೆ ಕೊಡಗು.. ಇಂತಹದೊಂದು ಕವಿವಾಣಿ ಕೊಡಗಿನ ಹಲವೆಡೆ ಕಂಡು ಬರುತ್ತಿದೆ. ಇದರ ಜತೆಗೆ ಅಲ್ಲಲ್ಲಿ ವನದೇವಿಯ ದೇಗುಲಗಳು ಕೂಡ ಕಾಣಿಸುತ್ತವೆ. ಇದು ಕೊಡಗಿನ ಜನ ಪ್ರಕೃತಿಯ ಆರಾಧಕರು ಎಂಬುದನ್ನು ತೋರಿಸುತ್ತದೆ.
ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ದೇವರಿಗೆಂದೇ ಕಾಡನ್ನು ಬಿಡಲಾಗಿದೆ. ಅಲ್ಲಿ ವನದೇವಿ ವಿಜೃಂಭಿಸುತ್ತಿರುತ್ತಾಳೆ. ವನದೇವಿಯನ್ನು ಪೂಜಿಸುವ ಗ್ರಾಮಸ್ಥರು ಜನಜಾನುವಾರುಗಳನ್ನು ರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ.

ಸುಮಾರು 2,550 ಹೆಕ್ಟೇರ್ ಪ್ರದೇಶಗಳಲ್ಲಿ ದೇವರ ಕಾಡುಗಳಿದ್ದು, ಭದ್ರಕಾಳೇಶ್ವರಿ, ಭದ್ರಕಾಳಿ, ವನಭದ್ರಕಾಳಿ, ಬೇಟೆ ಅಯ್ಯಪ್ಪ, ಕುಟ್ಟಿಚಾತ ಹೀಗೆ ಸುಮಾರು 165 ಬೇರೆ, ಬೇರೆ ದೇವರ ಹೆಸರಿನಲ್ಲಿ ದೇವರ ಕಾಡುಗಳಲ್ಲಿರುವ ದೇವರನ್ನು ಪೂಜಿಸಲಾಗುತ್ತಿದೆ.
ಇಂತಹ ವನದೇವತೆಗಳ ಪೈಕಿ ವೀರಾಜಪೇಟೆ ಮತ್ತು ಗೋಣಿಕೊಪ್ಪ ರಸ್ತೆ ನಡುವೆ ಸಿಗುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾತೂರು ಕೊಳತ್ತೋಡು ಬೈಗೋಡಿನ ವನಭದ್ರಕಾಳೇಶ್ವರಿ ದೇವಾಲಯ ವಿಶೇಷವಾಗಿವೆ. ಪ್ರತಿ ದಿನವೂ ಈ ರಸ್ತೆಯಲ್ಲಿ ಸಾಗುವವರು ವನಭದ್ರಕಾಳೇಶ್ವರಿ ದೇವಿಗೆ ನಮಿಸಿ ಮುಂದೆ ಸಾಗುವುದು ಕಂಡು ಬರುತ್ತದೆ.
ಜನಜಾನುವಾರು ರಕ್ಷಕ ದೇವತೆ
ಈ ವನಭದ್ರಕಾಳೇಶ್ವರಿ ಬಗ್ಗೆ ಹೇಳಬೇಕೆಂದರೆ, ಹಿಂದೆ ಕಾಡಿನಿಂದ ಆವೃತ್ತವಾಗಿದ್ದ ಹಾತೂರು ಗ್ರಾಮದ ಜನರನ್ನು ವನಭದ್ರಕಾಳಿ ರಕ್ಷಿಸುತ್ತಿದ್ದಳಂತೆ. ಗ್ರಾಮದಲ್ಲಿ ಕಷ್ಟನಷ್ಟಗಳು ಸಂಭವಿಸಿದಾಗ ದೇವಿಗೆ ಮೊರೆಹೋದರೆ ಎಲ್ಲವನ್ನು ಪರಿಹಾರ ಮಾಡಿ ಕಾಪಾಡುತ್ತಿದ್ದಳಂತೆ. ಇಲ್ಲಿ ಪ್ರತೀ ತಿಂಗಳು ಅಮವಾಸ್ಯೆಯಂದು ಹಾಗೂ ಕೊಡಗಿನ ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಇಷ್ಟೇ ಅಲ್ಲದೆ ಎರಡು ವರ್ಷಕ್ಕೊಮ್ಮೆ ಸಾಂಪ್ರದಾಯ ಬದ್ಧವಾಗಿ ಹಬ್ಬವನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ.

ಈ ದೇವಾಲಯಕ್ಕೆ ಸುಮಾರು ಐದು ಶತಮಾನಗಳ ಇತಿಹಾಸವಿರುವುದಾಗಿ ತಿಳಿದು ಬರುತ್ತದೆ. ಜತೆಗೆ ವನಭದ್ರಕಾಳಿ ಇಲ್ಲಿ ಬಂದು ಹೇಗೆ ನೆಲೆಸಿದಳು ಎಂಬ ಬಗ್ಗೆಯೂ ಕಥೆಯೊಂದು ಪ್ರಚಲಿತದಲ್ಲಿದೆ. ಅದು ಏನೆಂದರೆ ಹಿಂದಿನ ಕಾಲದಲ್ಲಿ ದಟ್ಟ ಅರಣ್ಯದಿಂದ ಕೂಡಿದ ಈ ಪ್ರದೇಶದ ಒಂದು ಭಾಗದಲ್ಲಿ ಭತ್ತದ ಬಯಲಿದ್ದು ಅಲ್ಲಿ ಕೃಷಿ ಮಾಡಲಾಗುತ್ತಿತ್ತು. ಒಮ್ಮೆ ಮಹಿಳೆಯೊಬ್ಬಳು ಗದ್ದೆಯಲ್ಲಿ ಕೊಯ್ಲು ಮಾಡುತ್ತಿದ್ದಾಗ ಗದ್ದೆಯಲ್ಲಿ ಚಿನ್ನದ ಬಣ್ಣದ ಕೊಕ್ಕರೆ(ಕೊಡವ ಭಾಷೆಯಲ್ಲಿ ಪೋಳೆ) ಯನ್ನು ನೋಡುತ್ತಾಳೆ.
ಕಾಡಿನಲ್ಲಿ ನೆಲೆನಿಂತ ವನಭದ್ರಕಾಳೇಶ್ವರಿ
ಸಾಮಾನ್ಯವಾಗಿ ಬಿಳಿಬಣ್ಣದ ಕೊಕ್ಕರೆಗಳ ನಡುವೆ ಚಿನ್ನದ ಈ ಕೊಕ್ಕರೆ ಆಕೆಯ ಗಮನಸೆಳೆಯುತ್ತದೆ. ಆಕೆ ಅಚ್ಚರಿಗೊಳಗಾದ ಆಕೆ ಈ ವಿಚಾರವನ್ನು ಗ್ರಾಮದ ಜನಕ್ಕೆ ತಿಳಿಸುತ್ತಾಳೆ. ಗ್ರಾಮಸ್ಥರೆಲ್ಲ ಸೇರಿ ಅದನ್ನು ಹಿಡಿದು ಬುಟ್ಟಿಯಲ್ಲಿ ಮುಚ್ಚಿಡಲು ತೀರ್ಮಾನಿಸಿ ಅದನ್ನು ಹಿಡಿಯುವ ಪ್ರಯತ್ನ ಮಾಡುತ್ತಾರೆ. ಆದರೆ ಆ ಕೊಕ್ಕರೆ ಅವರ ಕೈಗೆ ಸಿಗದೆ ತಪ್ಪಿಸಿಕೊಂಡು ಬಂದು ಈಗಿನ ವನಭದ್ರಕಾಳಿ ನೆಲೆಸಿರುವ ಕಾಡಿನಲ್ಲಿ ಮಾಯವಾಗಿ ಬಿಡುತ್ತದೆ.
ಜನರಿಗೆ ಆಗ ಜ್ಞಾನೋದಯವಾಗುತ್ತದೆ. ನಮ್ಮ ಕಣ್ಣಿಗೆ ಕಾಣಿಸಿದ್ದು ಕೊಕ್ಕರೆ ಅಲ್ಲ ಕೊಕ್ಕರೆ ಅವತಾರದಲ್ಲಿ ಬಂದ ಭದ್ರಕಾಳಿ ಎಂಬುದು ಗೊತ್ತಾಗುತ್ತದೆ. ಜತೆಗೆ ಆಕೆ ತಮ್ಮ ಕಷ್ಟಗಳನ್ನು ನೀಗಿಸಲು ಬಂದ ಸಾಕ್ಷಾತ್ ದೇವಿ ಎಂಬ ನಂಬಿಕೆಯಲ್ಲಿ ಎಲ್ಲರೂ ಸೇರಿ ಕಾಡಿನಲ್ಲೊಂದು ಗುಡಿ ನಿರ್ಮಿಸಿ ಆಕೆಯನ್ನು ಪೂಜಿಸಲು ಆರಂಭಿಸುತ್ತಾರೆ. ಹೀಗೆ ವನದ ನಡುವೆ ನೆಲೆ ನಿಂತ ಭದ್ರಕಾಳಿ ಇವತ್ತು ವನಭದ್ರಕಾಳಿಯಾಗಿ ವಿಜೃಂಭಿಸುತ್ತಿದ್ದಾಳೆ.
ಇಲ್ಲಿನ ಕಾಡುಗಳತ್ತ ದೈವ ಭಾವನೆ
ಸುಮಾರು ಹದಿನಾರು ಎಕರೆ ದಟ್ಟಕಾಡಿನ ನಡುವೆ ದೇಗಲವಿದ್ದು, ರಸ್ತೆ ಹೊಂದಿಕೊಂಡಂತೆ ದೇಗುಲದ ಪ್ರವೇಶ ದ್ವಾರವಿದೆ. ಇಲ್ಲಿಯೇ ವಾಹನಗಳನ್ನು ನಿಲ್ಲಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮುಂದೆ ಸಾಗುತ್ತಾರೆ. ತಮ್ಮ ಪ್ರಯಾಣದಲ್ಲಿ ಯಾವುದೇ ತೊಂದರೆಯಾಗದಂತೆ ಬೇಡಿಕೊಂಡು ಪ್ರಯಾಣ ಮುಂದುವರೆಸುತ್ತಾರೆ.
ಕೊಡಗಿನ ಎಲ್ಲ ಕಡೆಗಳಲ್ಲೂ ವನದೇವರ ದೇಗುಲಗಳಿರುವುದು ವಿಶೇಷವಾಗಿದ್ದು, ಈ ದೇಗುಲಗಳಿಗೆ ಸಂಬಂಧಿಸಿದಂತೆ ಒಂದಷ್ಟು ಎಕರೆ ಕಾಡುಗಳಿದ್ದು ಅವುಗಳು ದೇವರ ಕಾಡುಗಳಾಗಿಯೇ ಪ್ರಚಲಿತದಲ್ಲಿವೆ. ಅಷ್ಟೇ ಅಲ್ಲದೆ ಇಲ್ಲಿನವರಿಗೆ ಪ್ರಕೃತಿ ಬಗ್ಗೆ ಇರುವ ದೈವಿಕ ಭಾವನೆಗೆ ಇದು ಸಾಕ್ಷಿಯಾಗಿದೆ.












Click it and Unblock the Notifications