Pamban Bridge: ಪಂಬನ್ ಹೊಸ ಸೇತುವೆ ಮೇಲೆ ರೈಲು ಸಂಚಾರ
ಚೆನ್ನೈ, ನವೆಂಬರ್ 11: ದೇಶದ ಪುರಾತನ ರೈಲು ಮಾರ್ಗದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಅಂತಿಮಗೊಂಡಿದೆ. ಹೊಸ ಸೇತುವೆ ಮೇಲೆ 80 ಕಿ. ಮೀ. ವೇಗದಲ್ಲಿ ಇಂಜಿನ್ ಹಾಗೂ ಕೋಚ್ಗಳ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ರಾಮೇಶ್ವರಂ ಅನ್ನು ಭಾರತದ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಅಸ್ತಿತ್ವದಲ್ಲಿರುವ ಪಂಬನ್ ರೈಲು ಸೇತುವೆ 106 ವರ್ಷ ಹಳೆಯದಾಗಿತ್ತು. ಈಗ ಈ ಮಾರ್ಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದೆ.
ಭಾರತೀಯ ರೈಲ್ವೆಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಗಳ ತಂಡ ಎರಡು ದಿನಗಳ ಹಿಂದೆ ಪಂಬನ್ ರೈಲು ಹೊಸ ಸೇತುವೆ ಮೇಲೆ ಪ್ರಾಯೋಗಿಕ ಸಂಚಾರವನ್ನು ನಡೆಸಿದರು. ಹಳೆಯ ಸೇತುವೆ ನಿರ್ಮಾಣವಾಗಿ 106 ವರ್ಷಗಳು ಕಳೆದಿವೆ. ಈ ಸೇತುವೆ ಮೇಲೆ ರೈಲು ಸಂಚಾರವನ್ನು 1914ರಲ್ಲಿ ಆರಂಭಿಸಲಾಗಿತ್ತು.

550 ಕೋಟಿ ರೂ. ವೆಚ್ಚದಲ್ಲಿ ಪಂಬನ್ ಹೊಸ ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗ ಕಾಮಗಾರಿ ಬುಹುತೇಕ ಅಂತಿಮಗೊಂಡಿದ್ದು, ರೈಲು ಇಂಜಿನ್, ಕೆಲವು ಬೋಗಿಗಳ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಹೊಸ ತೂಗು ಸೇತುವೆ ಮೇಲೆ ಹೈಡ್ರಾಲಿಕ್ ಲಂಬ ತೂಗು ಸೇತುವೆಯನ್ನು ಎತ್ತುವ ಮತ್ತು ಇಳಿಸುವ ಪ್ರಾಯೋಗ ಯಶಸ್ವಿಯಾಗಿತ್ತು.
ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ: ಪಂಬನ್ ಸೇತುವೆ ಮೇಲೆ ಪ್ರಾಯೋಗಿಕ ರೈಲು ಸಂಚಾರದ ಬಗ್ಗೆ ಮಾತನಾಡಿದ ರೈಲ್ವೆ ಸುರಕ್ಷತಾ ಆಯುಕ್ತ ಎ. ಎಂ. ಚೌಧರಿ, 'ಮಂಡಪಂನಿಂದ ಪಂಬನ್ ಮೂಲಕ ರಾಮೇಶ್ವರಂಗೆ ರೈಲು ಸಂಚಾರ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಹೊಸ ಸೇತುವೆ ಮೇಲೆ ರೈಲು ಓಡಿಸಿ, ಕಾಮಗಾರಿಯನ್ನು ಪರಿಶೀಲಿಸಲಾಗಿದೆ" ಎಂದರು.
"ಹೊಸ ಸೇತುವೆ ಮೇಲೆ 80 ಕಿ. ಮೀ. ವೇಗದಲ್ಲಿ ರೈಲು ಓಡಿಸುವ ಮೂಲಕ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿದೆ. ಮಂಟಪಂ-ರಾಮೇಶ್ವರಂ ವಿಭಾಗದಲ್ಲಿ ಗಂಟೆಗೆ 121 ಕಿ. ಮೀ. ಮತ್ತು ಪ್ರತಿ ಗಂಟೆಗೆ 80 ಕಿ. ಮೀ. ವೇಗವನ್ನು ರೈಲು ತಲುಪಿದೆ, ಇದು ಗಮನಾರ್ಹವಾಗಿದೆ" ಎಂದು ಹೇಳಿದ್ದಾರೆ.
ಪಂಬನ್ ಹಳೆಯ ಸೇತುವೆ ನಿರ್ಮಾಣವಾಗಿ 106 ವರ್ಷ ಕಳೆದಿತ್ತು. ಸೇತುವೆಗೆ ಹಾನಿಯಾದ ಕಾರಣ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಹೊಸ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಅಂತಿಮಗೊಂಡಿದೆ. ದೇಶದ ಮೊದಲ ಲಂಬವಾದ ಲಿಫ್ಟ್ ರೈಲ್ವೆ ಸಮುದ್ರ ಸೇತುವೆ ಇದಾಗಿದೆ. ಈ ಸೇತುವೆಯ ಉದ್ದ 2.05 ಕಿ. ಮೀ.ಗಳು.
ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ಈ ರೈಲ್ವೆ ಸೇತುವೆ ಕಾಮಗಾರಿಯನ್ನು ಕೈಗೊಂಡಿತ್ತು. ಮನ್ನಾರ್ ಕೊಲ್ಲಿಯಲ್ಲಿರುವ ರಾಮೇಶ್ವರಂ ದ್ವೀಪಕ್ಕೆ ಮಂಟಪವನ್ನು ಸಂಪರ್ಕಿಸಲು ಮೂಲ ಸೇತುವೆಯನ್ನು 1914ರಲ್ಲಿ ನಿರ್ಮಾಣ ಮಾಡಲಾಗಿತ್ತು. 1988ರಲ್ಲಿ ಸಮುದ್ರಕ್ಕೆ ಸಮಾನಾಂತರವಾಗಿ ಹೊಸ ರಸ್ತೆ ಸೇತುವೆ ನಿರ್ಮಾಣ ಮಾಡುವ ತನಕ ಇದು ಎರಡೂ ಸ್ಥಳ ಸಂಪರ್ಕಿಸುವ ಏಕೈಕ ಸಂಪರ್ಕ ವ್ಯವಸ್ಥೆಯಾಗಿತ್ತು.
ಈ ಅತ್ಯಾಧುನಿಕ ಸೇತುವೆಯ ನಿರ್ಮಾಣ ಕಾರ್ಯ ಮಾರ್ಚ್ 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಆದರೆ ಕಾಮಗಾರಿ ವಿಳಂಬವಾಗಿದೆ. ಈ ಸೇತುವೆಯು ರೈಲ್ವೆಗೆ ಹೆಚ್ಚಿನ ವೇಗದಲ್ಲಿ ರೈಲುಗಳನ್ನು ಓಡಿಸಲು ಅನುಕೂಲ ಮಾಡಿಕೊಡಲಿದೆ. ಇದು ಭಾರತದ ಮುಖ್ಯ ಭೂಭಾಗ ಮತ್ತು ರಾಮೇಶ್ವರಂ ದ್ವೀಪದ ನಡುವೆ ಸಂಚಾರಕ್ಕೆ ಸಹಾಯಕವಾಗಲಿದೆ.












Click it and Unblock the Notifications