ಉಚ್ಚಂಗಿದುರ್ಗ ಜಾತ್ರೆಗೆ ದಾವಣಗೆರೆ KSRTC ವಿಭಾಗದಿಂದ 35ಕ್ಕೂ ಹೆಚ್ಚು ವಿಶೇಷ ಬಸ್ಗಳ ವ್ಯವಸ್ಥೆ
ವಿಜಯನಗರ, ಮಾರ್ಚ್, 23: ಕೆಎಸ್ಆರ್ಟಿಸಿಯು ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ವಿಶೇಷ ಬಸ್ಗಳನ್ನು ಬಿಡುತ್ತಲೇ ಬಂದಿದೆ. ಅದೇ ರೀತಿಯಾಗಿ ಹರಪನಹಳ್ಳಿ ತಾಲೂಕಿನಲ್ಲಿರುವ ಐತಿಹಾಸಿಕ ಉಚ್ಚಂಗಿದುರ್ಗ ಉತ್ಸವಾಂಭ ದೇವಿ ಜಾತ್ರೆ ಇಂದಿನಿಂದ ಪ್ರರಾಂಭವಾಗಿದೆ. ಜಾತ್ರೆ ಪ್ರಯುಕ್ತ ಭಕ್ತರ ಅನುಕೂಲಕ್ಕಾಗಿ ದಾವಣಗೆರೆ ಕೆಎಸ್ಆರ್ಟಿಸಿ ಘಟಕದಿಂದ ವಿಶೇಷ ಬಸ್ಗಳನ್ನು ಬಿಡಲಾಗಿದೆ. ಹಾಗದರೆ ಎಷ್ಟು ಬಸ್ಗಳನ್ನು ಬಿಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಉಚ್ಚಂಗಿ ದುರ್ಗದ ಜಾತ್ರೆಯೂ ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ನಡೆಯಲಿದೆ. ಆದ್ದರಿಂದ ಭಕ್ತ ಅನುಕೂಲಕ್ಕಾಗಿ ದಾವಣಗೆರೆ ಕೆಎಸ್ಆರ್ಟಿಸಿ ಘಟಕದಿಂದಲೇ 35 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.

ನಾಯಕನಹಟ್ಟಿ ಜಾತ್ರೆಗೆ ವಿಶೇಷ ಬಸ್ಗಳ ಸಂಚಾರ
ಇತ್ತೀಚೆಗಷ್ಟೇ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ನಡೆದಿತ್ತು. ಆಗಲೂ ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಮಧ್ಯಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಜಾತ್ರೆಗೆ ರಾಜ್ಯದ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿತ್ತು.
ಬಸ್ ನಿಲ್ದಾಣಗಳ ಸ್ಥಾಪನೆ
ಸುಗಮ ಸಂಚಾರಕ್ಕೆ ಪಟ್ಟಣದ 3 ಕಡೆಗಳಲ್ಲಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿತ್ತು. ದಾವಣಗೆರೆ-ಜಗಳೂರು- ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗಂಗಯ್ಯನಹಟ್ಟಿಬಳಿ, ಬಳ್ಳಾರಿ-ಅನಂತಪುರ- ರಾಯದುರ್ಗ- ಕಲ್ಯಾಣದುರ್ಗ ಕಡೆಯಿಂದ ಬರುವ ವಾಹನಗಳಿಗೆ ತಳಕು ರಸ್ತೆಯ ಮದರಾಸದ ಬಳಿ, ಬೆಂಗಳೂರು- ತುಮಕೂರು- ಚಳ್ಳಕೆರೆ- ಚಿತ್ರದುರ್ಗ ಮಾರ್ಗದಿಂದ ಬರುವವರಿಗೆ ಮನಮೈನಹಟ್ಟಿ ಏಕಾಂತೇಶ್ವರ ದೇವಾಲಯದ ಬಳಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ದೇವಾಲಯದ ಬಳಿ ತೆರಳಲು ಆಟೋರಿಕ್ಷಾಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.
200 ವಿಶೇಷ ಬಸ್ಗಳ ಸಂಚಾರ
ರಥೋತ್ಸವದ ಅಂಗವಾಗಿ ಚಿತ್ರದುರ್ಗ ವಿಭಾಗದ ಕೆಎಸ್ಆರ್ಟಿಸಿಯಿಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ ಘಟಕಗಳಿಂದ ಒಟ್ಟು 200 ವಿಶೇಷ ಬಸ್ಗಳನ್ನು ಬಿಡಲಾಗಿತ್ತು. ಈ ವೇಳೆ ಚಿತ್ರದುರ್ಗ-ನಾಯಕನಹಟ್ಟಿ, ಚಳ್ಳಕೆರೆ-ನಾಯಕನಹಟ್ಟಿ, ಹಿರಿಯೂರು-ನಾಯಕನಹಟ್ಟಿ, ನಾಯಕನಹಟ್ಟಿ-ಪರಶುರಾಂಪುರ ಮಾರ್ಗದಲ್ಲಿ ಬಸ್ ಸಂಚಾರ ನಡೆಸಿದ್ದವು.
ಕನ್ನಡದ ಹಬ್ಬಕ್ಕೆ ವಿಶೇಷ ರಥ
ಇನ್ನು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಾರಿಗೆ ಇಲಾಖೆ ವಿಶೇಷ ರಥವನ್ನು ಸಿದ್ಧಪಡಿಸಲಾಗಿತ್ತು. ಹಾವೇರಿ ಜಿಲ್ಲೆ ಹಾನಗಲ್ ವಿಭಾಗದ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿ ಈ ಸಾರಿಗೆ ಬಸ್ ಅನ್ನು ಸಂಪೂರ್ಣ ಕನ್ನಡಮಯ ಮಾಡಿದ್ದರು. ಅಲ್ಲದೇ ಬಸ್ಗೆ "ಕನ್ನಡಮ್ಮನ ರಥ" ಎಂದು ನಾಮಕರಣ ಮಾಡಿದ್ದು ಇನ್ನು ವಿಶೇಷವಾಗಿತ್ತು.
ಬಸ್ನ ಹೊರಗೆ ಮತ್ತು ಒಳಗೆ ಕನ್ನಡದ ಕವಿಗಳು, ಲೇಖರು, ಸಾಹಿತಿಗಳ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಬಸ್ ಒಳಗಡೆ ಕವಿಗಳು ಬರೆದಿರುವ ಸಾಲುಗಳನ್ನು ಹಾಕಾಲಾಗಿತ್ತು. ಹೀಗೆ ಈ ಬಸ್ ಕನ್ನಡದ ಬಸ್ ಎಂದೇ ಪ್ರಸಿದ್ಧಿ ಪಡೆದಿತ್ತು. ಹಾನಗಲ್ ಬಸ್ ನಿಲ್ದಾಣದಿಂದ ಹಾವೇರಿ ಬಸ್ ನಿಲ್ದಾಣದ ನಡುವೆ ಈ ಬಸ್ ಸಂಚರಿಸಿತ್ತು.
ಜನಮನ್ನಣೆ ಪಡೆದಿದ್ದ ಕನ್ನಡಮ್ಮನ ರಥ
ಆಗ ವಾಯವ್ಯ ಸಾರಿಗೆಯ "ಕನ್ನಡಮ್ಮನ ರಥ" ಎಂಬ ಹೆಸರಿನ ಈ ಬಸ್ ಪೂರ್ಣವಾಗಿ ಅರಿಶಿಣ ಮತ್ತು ಕುಂಕುಮ ಬಣ್ಣದಿಂದ ಕಂಗೊಳಿಸುತ್ತಿತ್ತು. ಬಸ್ನ ಹೊರಭಾಗದಲ್ಲಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು, ಕವಿಗಳ ಚಿತ್ರಗಳು ಜನರನ್ನು ಕೈಬೀಸಿ ಕರೆಯುವಂತಿದ್ದವು.
ಬಸ್ ಹೊರಗರೆ ಎರಡು ಕಡೆಗಳಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎನ್ನುವ ವಾಕ್ಯವನ್ನು ಹಾಕಲಾಗಿತ್ತು. ಇನ್ನಯ ಬಸ್ ಮುಂಭಾಗದಲ್ಲಿ ತಾಯಿ ಭುವೇನೇಶ್ವರಿ ಚಿತ್ರವನ್ನು ಹಾಕಲಾಗಿದ್ದು, ಇದರ ಪಕ್ಕದಲ್ಲಿ ಹೊಯ್ಸಳರ ಲಾಂಛನವನ್ನು ಕೂಡ ಚಿತ್ರಿಸಲಾಗಿತ್ತು. ಹಾವೇರಿ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳು, ಮಠಗಳ ಮತ್ತು ಮಠಾಧೀಶರ ಚಿತ್ರಗಳನ್ನು ಸಹ ಬಸ್ನಲ್ಲಿ ಗಮನ ಸೆಳೆದಿದ್ದವು.
ಸಾಹಿತ್ಯ ಸಮ್ಮೇಳನದ ನಂತರ ಜಿಲ್ಲೆಯ ಸಾಹಿತ್ಯ ಕಾರ್ಯಗಳಿಗೆ ಈ ಬಸ್ ಅನ್ನೇ ಬಳಸಲಾಗುತ್ತಿದೆ. ಅಕ್ಕಿ ಆಲೂರಿನಲ್ಲಿ ನಡೆದ ನುಡಿ ಸಂಭ್ರಮ, ತಾಲೂಕುಗಳಲ್ಲಿ ನಡೆಯುವ ಸಮ್ಮೇಳನ ಮತ್ತು ಜಿಲ್ಲಾಮಟ್ಟದ ಸಮ್ಮೇಳನಗಳಿಗೆ ಈ ಬಸ್ ಅನ್ನು ಬಳಕೆ ಮಾಡಲಾಗಿದೆ.
ಹಾನಗಲ್ನಿಂದ ಅಕ್ಕಿಆಲೂರು, ಆಡೂರು, ಸಂಗೂರು, ಆಲದಕಟ್ಟಿ ಗ್ರಾಮಗಳಲ್ಲಿ ಈ ಬಸ್ ನಿಲುಗಡೆ ಆಗುತ್ತದೆ.
ಹೀಗೆ ಕೆಎಸ್ಆರ್ಟಿಸಿಯು ಹಬ್ಬ, ಜಾತ್ರೆಗಳಿಗೆ ವಿಶೇಷ ಬಸ್ಗಳನ್ನು ಬಿಡುವ ಮೂಲಕ ಜನಮನ್ನಣೆ ಪಡೆಯುತ್ತಾ ಬಂದಿದೆ. ಇದೇ ರೀತಿ ಸಾರಿಗೆ ಇಲಾಖೆ ಸಿಬ್ಬಂದಿಗಳ ಕಾರ್ಯಕ್ಷಮತೆಗೂ ಕೂಡ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.












Click it and Unblock the Notifications