ಕಡೂರು; ವಿಷ್ಣುಸಮುದ್ರ ಕೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ, 40 ಹಳ್ಳಿಗಳಿಂದ ಜನರ ಆಗಮನ
ಚಿಕ್ಕಮಗಳೂರು, ಅಕ್ಟೋಬರ್, 31: ಕಡೂರು ತಾಲೂಕಿನ ಹೇಮಗಿರಿಯ ವಿಷ್ಣುಸಮುದ್ರ ಕೆರೆ 12 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದೆ. ಶಾಶ್ವತ ಬರಪೀಡಿತ ಪ್ರದೇಶ ಅಂತಾನೇ ಹಣೆಪಟ್ಟಿ ಹೊತ್ತಿದ್ದ ಕಡೂರು ತಾಲೂಕಿನಲ್ಲಿ ಈ ಬಾರಿ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಸುರಿದಿದೆ. ಬರೋಬ್ಬರಿ 12 ವರ್ಷಗಳ ನಂತರ ಕೆರೆ ಕೋಡಿ ಬಿದ್ದಿದ್ದು, ಸುತ್ತಮುತ್ತಲಿನ ನಾಲವತ್ತಕ್ಕೂ ಹೆಚ್ಚು ಹಳ್ಳಿಯ ಜನರು ಸೇರಿ ತೆಪ್ಪೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.
ಕಡೂರು ತಾಲೂಕಿನ ಭಕ್ತರು ಮಾತ್ರ ಈ ದೇವರಿಗೆ ನಡೆದುಕೊಳ್ಳುವುದಿಲ್ಲ. ಇಂತಹ ಅಪರೂಪದ ಕ್ಷಣಗಳನ್ನು ನೋಡುವುದಕ್ಕೆ ಚಿಕ್ಕಮಗಳೂರು ಸೇರಿದಂತೆ ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದರು. ಭಕ್ತರು ದೇವಾಲಯಕ್ಕೆ ಆಗಮಿಸಿ ತೆಪ್ಪೋತ್ಸವದ ವಿಶೇಷ ಸಂಭ್ರಮದಲ್ಲಿ ಮಿಂದೆದ್ದರು. ಒಂದು ಲಕ್ಷಕ್ಕೂ ಅಧಿಕ ಜನರು ಕೀಲೋ ಮೀಟರ್ಗಟ್ಟಲೇ ಕೆರೆಯ ಸುತ್ತಲೂ ನಿಂತು ಅದ್ದೂರಿ ತೆಪ್ಪೋತ್ಸವವನ್ನು ಕಣ್ತುಂಬಿಸಿಕೊಂಡರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ತನ್ನದೇ ಆದ ವಿಶೇಷ ಪರಂಪರೆಯಿದೆ. ಹಿಂದಿನಿಂದಲೂ ಸುತ್ತಮುತ್ತಲಿನ ಹಳ್ಳಿಯ ಜನರು ಸೇರಿದಂತೆ ಜಿಲ್ಲೆ, ಹೊರಜಿಲ್ಲೆಯ ಭಕ್ತರು ಹೊಸ ವ್ಯವಹಾರ ಪ್ರಾರಂಭ, ಅನಾರೋಗ್ಯಕ್ಕೆ ಈಡಾದರೆ ಮತ್ತು ಮಕ್ಕಳ ಫಲ ಬಯಸಿ ಇಲ್ಲಿ ಶ್ರದ್ಧೆಯಿಂದ ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಂಡರೆ ಸಾಕು ಎಲ್ಲವೂ ನೆರವೇರುತ್ತದೆ ಅನ್ನುವ ನಂಬಿಕೆ ಭಕ್ತರದ್ದಾಗಿದೆ.

ತೆಪ್ಪೋತ್ಸವ ನೋಡಲು ನೆರೆದ ಜನಸಾಗರ
ಕೆರೆ ತುಂಬಿದ ಖುಷಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ತೆಪ್ಪವನ್ನು ಸಿಂಗಾರಗೊಳಿಸುವ ಕಾರ್ಯ ನಡೆದಿತ್ತು. ಮಂಗಳೂರಿನ ಕಮಲಾಕ್ಷ ಪೂಜಾರ್ ಮತ್ತು ತಂಡ ಎರಡು ದೋಣಿ ಬಳಸಿ ವಿಶೇಷ ತೆಪ್ಪವನ್ನು ನಿರ್ಮಿಸಿದರು. ಹಾಗಾಗಿಯೇ 66 ವರ್ಷಗಳ ನಂತರ ನಡೆಯುತ್ತಿರುವ ತೆಪ್ಪೋತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತೆಪ್ಪೋತ್ಸವದ ಅಪರೂಪದ ಕ್ಷಣಗಳನ್ನು ಕಣ್ತುಂಬಿಸಿಕೊಂಡರು. ತನ್ನ ನೋಡಲೆಂದೇ ಕೆರೆಯ ಸುತ್ತಲೂ ನಿಂತು ತೆಪ್ಪೋತ್ಸವವನ್ನ ಕಣ್ತುಂಬಿಕೊಂಡ ಭಕ್ತರನ್ನು ನೋಡಿ ಮಲ್ಲಿಕಾರ್ಜುನ ಸ್ವಾಮಿಯೂ ಪ್ರಸನ್ನನಾದ. ಒಟ್ಟಿನಲ್ಲಿ ಕಾಫಿನಾಡಿನಲ್ಲಿ ನಡೆದ ಅದ್ದೂರಿ ತೆಪ್ಪೋತ್ಸವ, ಇಡೀ ರಾಜ್ಯವೇ ತನ್ನತ್ತ ಗಮನವನ್ನ ಸೆಳೆಯುವಂತೆ ಮಾಡಿದೆ.

12 ವರ್ಷಗಳ ನಂತರ ಕೋಡಿಬಿದ್ದ ಕೆರೆ
ಜಿಲ್ಲೆಯ ಅತಿದೊಡ್ಡ ಕೆರೆಯಾದ ಹೇಮಗಿರಿಯ ವಿಷ್ಣು ಸಮುದ್ರಕೆರೆ ಕೋಡಿ ಬಿದ್ದಿದೆ. ಸತತ 12 ವರ್ಷಗಳ ನಂತರ ಕೆರೆ ಮೈದುಂಬಿ ಹರಿಯುತ್ತಿರುವುದರಿಂದ ರೈತರ ಮುಖದಲ್ಲಿ ಸಂತೋಷ ತರಿಸಿದೆ. ಕೆರೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರ ಹರಿದು ಬರುತ್ತಿದೆ. ನಂಜುಂಡಪ್ಪನವರ ವರದಿಯ ಪ್ರಕಾರ ಸತತ ಬರದ ದವಡೆಗೆ ಸಿಲುಕುತ್ತಿದ್ದ ಕಡೂರು ತಾಲೂಕು, ಈ ಬಾರಿ ವರುಣನ ಕೃಪೆಯಿಂದ ಬಹುತೇಕ ಕೆರೆಕಟ್ಟೆಗಳು ಉಕ್ಕಿಹರಿಯುತ್ತಿವೆ. ಸಮೃದ್ಧ ಮಳೆಯಿಂದಾಗಿ ಅಂತರ್ಜಲ ಅಭಿವೃದ್ದಿಗೆ ವರದಾನ ಆಗಿದೆ. ಕಳೆದ 2008-09ರ ಆಸುಪಾಸಿನಲ್ಲಿ ವಿಷ್ಣು ಸಮುದ್ರ ಕೆರೆಯು ತುಂಬಿ ಕೋಡಿ ಹರಿದಿರುವುದು ಬಿಟ್ಟರೆ, ನಂತರದಲ್ಲಿ ಕೋಡಿ ಬಿದ್ದ ಉದಾಹರಣೆಯೇ ಇಲ್ಲ.

ರೈತರಿಗೆ ಆಸರೆಯಾದ ವಿಷ್ಣುಸಮುದ್ರ ಕೆರೆ
ವಿಷ್ಣುಸಮುದ್ರ ಕೆರೆ ಕೋಡಿ ಬಿದ್ದಿರುವುದರಿಂದ ತಾಲೂಕಿನ ಕಸಬಾ, ಸಿಂಗಟಗೆರೆ, ಯಗಟಿ ಮತ್ತು ಪಂಚನಹಳ್ಳಿ ಹೋಬಳಿಗಳ ಅಚ್ಚುಕಟ್ಟು ಪ್ರದೇಶಗಳಿಗೆ ಆಸರೆ ಆದಂತಾಗಿದೆ. ತಾಲೂಕಿನ ಯಗಟಿ, ಮಲ್ಲಾಘಟ್ಟ, ಚಟ್ನಳ್ಳಿ ಕೆರೆಗಳಿಗೆ ನೀರುಣಿಸುವ ವಿಷ್ಣು ಸಮುದ್ರ ಕೆರೆಯು 554 ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿ ತನ್ನ ಕಬಂದಬಾಹುವಿನಂತೆ ಚಾಚಿಕೊಂಡಿದೆ. ಇನ್ನು ಅಯ್ಯನಕೆರೆ ಮತ್ತು ಮದಗದ ಕೆರೆಗಳ ವಿಸ್ತೀರ್ಣದ ಎರಡು ಪಟ್ಟು ಹೆಚ್ಚಾಗಿರುವ ವಿಷ್ಣುಸಮುದ್ರ ಕೆರೆಯ ಕೋಡಿ ಬಿದ್ದ ಸಂಗತಿ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಯ ಕೋಡಿ ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಧಾವಿಸುತ್ತಿದ್ದ ದೃಶ್ಯ ಕಂಡುಬಂದಿತ್ತು.

ಕೆರೆಯನ್ನು ನಿರ್ಮಾಣ ಮಾಡಿದವರು ಯಾರು?
ಹೇಮಗಿರಿಯ ಪ್ರದೇಶವು ಈ ಹಿಂದೆ ಪಿರಿಯಾಗ್ರಹ ಎಂಬ ಹೆಸರಿನಡಿ ನಿರ್ಮಾಣವಾಗಿತ್ತು. ಹೊಯ್ಸಳರ ದೊರೆ ವಿಷ್ಣುವರ್ಧನನು ಕ್ರಿಸ್ತಶಕ 1181ರ ಶಾಸನದ ಪ್ರಕಾರ ಕೆರೆಯನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗಿದೆ. ತದನಂತರದಲ್ಲಿ ಕ್ರಿಸ್ತ ಶಕ 1259ರ ಶಾಸನದ ಪ್ರಕಾರ ಮಹಾವಡ್ಡಬೆವಹಾರಿ ಸೋವಾಸಿ ಮಾಧವಭಟ್ಟಯ್ಯನ ಮಗ ಅಲ್ಲಾಳ ದೇವನು, ಶ್ರೀಮದ ನಾದಿಯ ಅಗ್ರಹಾರವಾದ ವಿಷ್ಣುಸಮುದ್ರವೆಂಬ ಕೆರೆ ಸಂತೆಯ ಕೆರೆಯ ಧರ್ಮಕ್ಕೆಂದು ಹಣವನ್ನು ದಾನ ನೀಡಿರುವುದನ್ನು ತಿಳಿಸಿದೆ.
ಈ ಹಣಕ್ಕೆ ಬಂದ ಬಡ್ಡಿಯಿಂದ ಪ್ರತಿ ವರ್ಷ 30 ಗದ್ಯಾಣದಲ್ಲಿ ಆ ಕೆರೆಯ ತೂಬನ್ನು ಸರಿಪಡಿಸುತ್ತಾ, ಮಹಾಜನರು ಸಧರ್ಮವನ್ನು ನಡಸುವರೆಂದು ಶಾಸನ ಉಲ್ಲೇಖಿಸಿದೆ. ಕೆರೆಯ ಒಂದು ಭಾಗದಲ್ಲಿ ಕೆರೆಸಂತೆ ಗ್ರಾಮ, ಮತ್ತೊಂದು ಭಾಗದಲ್ಲಿ ಹೇಮಗಿರಿ ಗ್ರಾಮ ಇದೆ. ಇಲ್ಲಿನ ಲಕ್ಚ್ಮೀ ಜನಾರ್ಧನ, ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳು ಪ್ರಖ್ಯಾತಿ ಪಡೆದಿವೆ. ಈ ಕೆರೆಗೆ ದೇವನೂರು ಕೆರೆ ತುಂಬಿದರೆ ಅಲ್ಲಿನ ಹೆಚ್ಚುವರಿ ನೀರು, ದುದ್ದ, ಹಾರನಹಳ್ಳಿ ಕಡೆ ಮಳೆ ಹೆಚ್ಚಾದರೆ ಅಲ್ಲಿಂದಲೂ ಸಹ ನೀರು ಬರುತ್ತದೆ.

ಕೆರೆಯನ್ನು ಪ್ರವಾಸಿತಾಣವಾಗಿಸಲು ಪ್ರಯತ್ನ
ಗದ್ಯಾನಾಣ್ಯಗಳ ಬಡ್ಡಿ ಹಣದಲ್ಲಿ ಕೆರೆಗೆ ತೂಬನ್ನು ನಿರ್ಮಿಸಲಾಗಿತ್ತು ಎಂದು ಪೂರ್ವಜರು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ರಾಜ್ಯದ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ವಿಷ್ಣುಸಮುದ್ರ, 12 ವರ್ಷಗಳ ನಂತರ ತುಂಬಿ ಕೋಡಿ ಹರಿಯುತ್ತಿದ್ದು, ಈ ಭಾಗದ ಜನರಲ್ಲಿ ಸತೋಷ ತರಿಸಿದೆ. ಕೆರೆಯ ಸುತ್ತಮುತ್ತಲಿನ ಗ್ರಾಮಗಳಾದ ಲಿಂಗ್ಲಾಪುರ, ಸಂತೆಕೆರೆಹಳ್ಳಿ, ಮಲ್ಲಪ್ಪನಹಳ್ಳಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ತುಂಬಾ ನಷ್ಟ ಉಂಟಾಗುತ್ತಲೇ ಇರುತ್ತದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕೆರೆಯನ್ನು ಪ್ರವಾಸಿ ತಾಣವಾಗಿಸಲು ಪ್ರಯತ್ನ ನಡೆಸುವಂತಾಗಲಿ ಎನ್ನುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯ ಆಗಿದೆ.












Click it and Unblock the Notifications