ಗದಗ; ಕಾಲಕಾಲೇಶ್ವರ ಬೆಟ್ಟದಲ್ಲಿ ಸೃಷ್ಟಿಯಾದ ಜಲಧಾರೆಗಳು, ಇಲ್ಲಿದೆ ವಿವರ
ಗದಗ, ಅಕ್ಟೋಬರ್, 20: ಈ ಸದರ್ಭದಲ್ಲಿ ಮಲೆನಾಡಿನ ಜಲಾಶಯಗಳು ಉಕ್ಕಿ ಹರಿಯುವುದನ್ನು ನೋಡಿದ್ದೇವೆ. ಅದೇ ರೀತಿಯಾಗಿ ಗದಗ ಜಿಲ್ಲೆಯ ಕಾಲಕಾಲೇಶ್ವರ ಬೆಟ್ಟದಲ್ಲಿಯೂ ಜಲಧಾರೆಗಳು ಉಕ್ಕಿ ಹರಿಯುತ್ತಿವೆ. ಈ ಸುಂದರ ಸೊಬಗನ್ನು ಸವಿಯಲು ಪ್ರವಾಸಿಗರು ಸಾಗರೋಪಾದಿಯಾಗಿ ಹರಿದುಬರುತ್ತಲೇ ಇದ್ದಾರೆ.
ಬರದ ನಾಡು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಕಾಲಕಾಲೇಶ್ವರ ಪರ್ವತಗಳ ತಪ್ಪಲಿನಲ್ಲಿ ಈ ಸುಂದರ ಸೊಬಗಿನ ಜಲಪಾತಗಳು ಸೃಷ್ಟಿ ಆಗಿವೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಾಲಕಾಲೇಶ್ವರ ಕ್ಷೇತ್ರವೂ ಮತ್ಸ್ಯದ ಮೇಲಿನ ಕೈಲಾಸದಂತೆ ಕಂಗೊಳಿಸುತ್ತಿದೆ. ಇಂತಹ ಪುರಾಣ ಪ್ರಸಿದ್ದ ಸ್ಥಳದಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು, ಬೆಟ್ಟದಲ್ಲಿ ಜಲಪಾತವೇ ಸೃಷ್ಟಿ ಆಗಿವೆ. ಕಾಲಕಾಲೇಶ್ವರ ದೇವಸ್ಥಾನದ ಒಳಗಡೆ ಜಿನುಗುವ ಗಂಗೆ ಭಕ್ತರ ಮನವನ್ನು ತನ್ನತ್ತ ಸೆಳೆಯುತ್ತಿದೆ.
ಹಿರಿಯೂರು; ಕೋಡಿ ಬಿದ್ದ ಧರ್ಮಪುರ ಕೆರೆ, ಡಿಜೆ ಸೌಂಡ್ಗೆ ಹೆಜ್ಜೆ ಹಾಕಿದ ಗ್ರಾಮಸ್ಥರು
ಪ್ರಕೃತಿ ನಿರ್ಮಿತ ಸೌಂದರ್ಯದ ಮಡಿಲಿನಲ್ಲಿ ಏಕಶಿಲೆ ಬೆಟ್ಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಏಕಶಿಲೆ ಬೆಟ್ಟದ ತುದಿಯಲ್ಲಿ ಸ್ವಯಂಭುಲಿಂಗ ಸ್ವರೂಪಿ, ದಕ್ಷಿಣ ಕಾಶಿ ಶ್ರೀ ಕಾಲಕಾಲೇಶ್ವರ ದೇವಸ್ಥಾನವಿದೆ. ಈ ತಾಣವು ಸುತ್ತಲೂ ಅನೇಕ ಸುಕ್ಷೇತ್ರಗಳನ್ನು ಹೊಂದಿದೆ. ರತ್ನಗಳ ಮಧ್ಯ ಕುಂದಣದಲ್ಲಿ ಕುಳ್ಳಿರಿಸಿದ ಮಾಣಿಕ್ಯದಂತೆ ಕಾಣಿಸುವ ಕಾಲಕಾಲೇಶ್ವರನ ಎದುರಿಗೆ ನೀರು ಧುಮ್ಮಿಕ್ಕುತ್ತಿದೆ. ಈ ಅಂತರಗಂಗೆಯನ್ನು ನೋಡಿದರೆ ಆಲದ ಮರದ ಕೊಂಬೆಗಳು ಭೂ ಮಾತೆ ಸ್ಪರ್ಶಿಸುವಂತೆ ಭಾಸವಾಗುತ್ತದೆ.
ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ
ಈ ಹಿಂದೆ ಮಳೆ ಕೊರತೆಯಿಂದ ಅಂತರಗಂಗೆ ಹರಿವು ಸ್ವಲ್ಪ ಕ್ಷೀಣಿಸಿತ್ತು. ಇದೀಗ ನಿರಂತರ ಮಳೆ ಆಗುತ್ತಿದ್ದು, ಈ ಪ್ರವಾಸಿ ತಾಣ ಭಕ್ತರು, ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿದೆ. ಮಳೆಗಾಲ ಬಂತೆಂದರೆ ಕಾಲಕಾಲೇಶ್ವರ ಬೆಟ್ಟವೂ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಹಸಿರಿನ ಮಧ್ಯದಲ್ಲಿ ಹಾಲಿನ ನೊರೆಯಂತೆ ಕಾಣುವ ಝುಳು ಝುಳು ಶಬ್ದದ ಜಲಧಾರೆಗಳು ನೋಡುಗರನ್ನು ಆಕರ್ಷಿಸುತ್ತಲೇ ಇವೆ.
2 ಏಕಶಿಲೆಯಲ್ಲಿ ದೀಪಸ್ಥಂಭ ನಿರ್ಮಾಣ
ಶ್ರೀಕಾಲಕಾಲೇಶ್ವರನ್ನು ನೋಡಲು ಮೊದಲು ನೂರಾರು ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ನಂತರ 2 ಏಕಶಿಲೆಯಲ್ಲಿ ನಿರ್ಮಿಸಲ್ಪಟ್ಟ ದೀಪಸ್ಥಂಭಗಳನ್ನು ಕಾಣಬಹುದು. ಮತ್ತೆ ಮೇಲೆ ಏರಿದರೆ ದೇವಸ್ಥಾನ ಪ್ರವೇಶಿಸುವ ಬಲಭಾಗದಲ್ಲಿ ಅಂತರಗಂಗೆಯನ್ನು ನೋಡಬಹುದಾಗಿದೆ. ಈ ಅಂತರಗಂಗೆಯನ್ನು ನೋಡಿದರೆ ಹಿಮಾಲಯದಲ್ಲಿ ಹುಟ್ಟಿರುವ ಗಂಗೆಯಷ್ಟೆ ಪುಣ್ಯ ಲಭಿಸುತ್ತದೆ ಎನ್ನುವುದು ಭಕ್ತರ ನಂಬಿಕೆ ಆಗಿದೆ. ಇಲ್ಲಿನ ಕಳಕಮಲ್ಲಯ್ಯನಿಗೆ ಪೂಜೆ, ರುದ್ರಾಭಿಷೇಕ, ಅನ್ನಸಂತರ್ಪಣೆ ಮಾಡಿಸಲು ನಿತ್ಯ ಆಗಮಿಸುವ ಭಕ್ತರು ಎಳೆ ನೀರಿನ ರುಚಿ ಇರುವ ಅಂತರಗಂಗೆ ನೀರನ್ನು ಪ್ರಸಾದಂತೆ ಸೇವಿಸುತ್ತಾರೆ. ನಂತರ ಅಂತರಗಂಗೆ ತೀರ್ಥವನ್ನು ಮನೆಗಳಿಗೂ ತೆಗೆದುಕೊಂಡು ಹೋಗುತ್ತಾರೆ.
28 ಕಿ.ಮೀ.ನಷ್ಟು ಉದ್ದವಿರುವ ಬೆಟ್ಟ
ಸಸ್ಯ ಸಂಪತ್ತಿನ ಗಿಡಮೂಲಿಕೆಗಳ ನೈಸರ್ಗಿಕ ಪ್ರಕೃತಿಗೆ ಹೆಸರಾಗಿರುವ ಗಜೇಂದ್ರಗಡ ಭಾಗದಲ್ಲಿರುವ ಈ ಬೆಟ್ಟವು ಸುಮಾರು 28 ಕಿಲೋ ಮೀಟರ್ಗಳಷ್ಟು ಉದ್ದ ಇದೆ. ಇತ್ತೀಚೆಗೆ ಸುರಿದ ಮಳೆಯಿಂದ ಬೆಟ್ಟವು ಅಚ್ಚ ಹಸರಿನಿಂದ ಕಂಗೊಳಿಸುತ್ತಿದೆ. ಬರದಲ್ಲಿ ಬಳಲಿ ಬೆಂಡಾಗಿದ್ದ ಗಿಡ, ಮರಗಳು ಇದೀಗ ಅಚ್ಚ ಹಸಿರಿನ ಚಿಗುರೊಡನೆ ಕಂಗೊಳಿಸುತ್ತಿವೆ. ಇದಕ್ಕಿಂತಲೂ ಹೆಚ್ಚಾಗಿ ಇಲ್ಲಿನ ಬೆಟ್ಟದಲ್ಲಿನ ಜಲಮೂಲಗಳು ಮುಚ್ಚಿಹೋಗಿದ್ದವು. ಇದೀಗ ಮಳೆ ಸುರಿದ ಕಾರಣ ಮತ್ತೆ ಅನೇಕ ಜಲಪಾತಗಳು ಸೃಷ್ಟಿ ಆಗಿವೆ.
ಧುಮ್ಮಿಕ್ಕುವ ಅಂತರಗಂಗೆಯ ವೈಭವ
ಗುಡ್ಡದ ಮೇಲೆ ಎಲ್ಲೆಂದರಲ್ಲಿಯೇ ಹರಿಯುವ ನೀರಿನ ಝರಿಗಳು, ಕೆಳಗಡೆ ತುಂಬಿ ನಿಂತಿರುವ ಹೊಂಡಗಳು, ಧುಮ್ಮಿಕ್ಕುವ ಅಂತರಗಂಗೆ, ಗುಡ್ಡದಲ್ಲಿ ಹಚ್ಚಹಸುರಿನಿಂದ ಕಂಗೋಳಿಸುವ ಸಣ್ಣ-ಪುಟ್ಟ ಗಿಡ, ಬಳ್ಳಿಗಳು ಪ್ರವಾಸಿಗರು ಮತ್ತು ಭಕ್ತರ ಮನಸ್ಸಿಗೆ ಹೊಸ ಚೈತನ್ಯ ಮೂಡಿಸುತ್ತಿವೆ. ಕಾಲಕಾಲೇಶ್ವರ ಸುಕ್ಷೇತ್ರ ಮಳೆಗಾಲದಲ್ಲಿ ನಿಸರ್ಗ ಪ್ರೀಯರಿಗೆ ರಮಣೀಯ ಸ್ವರ, ಚಾರಣಿಗರಿಗೆ ಸಾಹಸದ ವೇದಿಕೆ ಆಗಿ ಮಾರ್ಪಾಡಾಗುತ್ತದೆ. ಇನ್ನು ಸಂಶೋಧಕರಿಗೆ ಅಧ್ಯಯನ ಕೇಂದ್ರವಾದರೆ, ಕಲಾವಿದರಿಗೆ ಸ್ಪೂರ್ತಿಯ ಕಾರಂಜಿ, ಯಾತ್ರಾರ್ಥಿಗಳಿಗೆ ಚೈತನ್ಯದ ಚಿಲುಮೆಯಾಗಿ ಹೊರಹೊಮ್ಮಿದೆ.