ಚಿಕ್ಕಮಗಳೂರು; ದೇವಿರಮ್ಮನ ಬೆಟ್ಟದ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ
ಚಿಕ್ಕಮಗಳೂರು, ಅಕ್ಟೋಬರ್, 23: ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನೆಲೆ ನಿಂತಿರುವ ಶಕ್ತಿದೇವತೆ ದೇವಿರಮ್ಮನ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಲಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ಬೆಟ್ಟ ಹತ್ತಲು ಕ್ಷಣಗಣನೆ ಆರಂಭವಾಗಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಇದ್ದು, ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವಿಯನ್ನ ನೋಡಲು ಇಂದು (ಭಾನುವಾರ) ಮಧ್ಯರಾತ್ರಿಯಿಂದಲೇ ಸಾವಿರಾರು ಜನ ಬೆಟ್ಟ ಹತ್ತಲಿದ್ದಾರೆ. ಪ್ರವಾಸಿಗರು ನಾಳೆ (ಸೋಮವಾರ) ಬೆಳಗಿನ ಜಾವದ ಹೊತ್ತಿಗೆ ಗುಡ್ಡದ ತುದಿಯಲ್ಲಿ ನಿಂತಿರುತ್ತಾರೆ. ಪ್ರತಿ ವರ್ಷ ಈ ಬೆಟ್ಟವನ್ನು 50 ಸಾವಿರಕ್ಕೂ ಅಧಿಕ ಭಕ್ತರು ಹತ್ತಿ ದೇವಿಯ ದರ್ಶನ ಪಡೆಯುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ಭಾರಿ ಮಳೆ ಹಾಗೂ ಕೊರೊನಾ ಕಾರಣದಿಂದ ಬೆಟ್ಟ ಹತ್ತುವವರ ಸಂಖ್ಯೆ ಇಳಿಮುಖವಾಗಿತ್ತು.
ಗದಗ; ಕಾಲಕಾಲೇಶ್ವರ ಬೆಟ್ಟದಲ್ಲಿ ಸೃಷ್ಟಿಯಾದ ಜಲಧಾರೆಗಳು, ಇಲ್ಲಿದೆ ವಿವರ
ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಕೂಡ ಹೆಚ್ಚಿನ ಭಕ್ತರು ಬರದಂತೆ ಮನವಿ ಮಾಡಿತ್ತು. ಕೊನೆಗೆ ಜಿಲ್ಲಾಡಳಿತ ಪ್ರಮುಖ ನಿರ್ಧಾರ ಕೈಗೊಂಡಿದ್ದು, ಸ್ಥಳೀಯರಿಗೆ ಮಾತ್ರ ಬೆಟ್ಟ ಹತ್ತಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಆದೇಶಿಸಿತ್ತು. ಆದರೆ ಈ ವರ್ಷ ಕೊರೊನಾ ತಗ್ಗಿದ ಕಾರಣ ಸುಮಾರು 80 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಬಹುದು ಎಂದು ಅಂದಾಜಿಸಲಾಗಿದೆ.
ದೇವಿರಮ್ಮನ ಬೆಟ್ಟದ ಬಳಿ ಪೊಲೀಸ್ ಭದ್ರತೆ
ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಬೆಟ್ಟ ಹತ್ತುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿಗೆ ಹೆಚ್ಚುವರಿ ಬಸ್ಗಳನ್ನೂ ಬಿಡಲಾಗಿದೆ. ಪೊಲೀಸ್ ಇಲಾಖೆ ಕೂಡ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಓರ್ವ ಡಿವೈಎಸ್ಪಿ, ಎಂಟು ಜನ ಸರ್ಕಲ್ ಇನ್ಸ್ಪೆಕ್ಟರ್, 32 ಜನ ಪಿಎಸ್ಐ, 87 ಜನ ಎಎಸ್ಐ, 500ಕ್ಕೂ ಅಧಿಕ ಜನ ಪೇದೆಗಳು, 62 ಜನ ಹೋಂಗಾರ್ಡ್ಸ್ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆಯವರೆಗೂ ಕಾಫಿನಾಡು ಭಕ್ತರು ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ ಎಂದು ಹೇಳಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿವೆ ಅಪರೂಪದ ಪ್ರವಾಸಿ ತಾಣಗಳು, ಇಲ್ಲಿದೆ ಮಾಹಿತಿ
ನಾಳೆ ಬೆಳಗ್ಗೆ 3ರಿಂದಲೇ ಕಾಲ್ನಡಿಗೆ ಶುರು
ದೇವಿ ದರ್ಶನ ಮಾಡಲು ಬರುವ ಭಕ್ತರು ಸುಮಾರು 8 ಕಿಲೋ ಮೀಟರ್ ದೂರವನ್ನು ನಡೆದೇ ಕ್ರಮಿಸಬೇಕಾಗುತ್ತದೆ. ಬೆಟ್ಟ - ಗುಡ್ಡಗಳ ಸಾಲಿನಲ್ಲಿ, ಮಂಜಿನ ನಡುವೆ ಬರಿಗಾಲಿನಲ್ಲಿ ದುರ್ಗಮ ಹಾದಿಯಲ್ಲಿ ಹೆಜ್ಜೆ ಹಾಕಬೇಕು. ಎಷ್ಟೇ ಕಷ್ಟವಾದರೂ ಕೇರ್ ಮಾಡದ ಭಕ್ತರು, ಮುಂಜಾನೆ 3 ಗಂಟೆಯಿಂದಲೇ ನಡೆಯಲು ಶುರು ಮಾಡುತ್ತಾರೆ. ಕೆಲವರು ಬೆಟ್ಟವನ್ನು ತುಂಬಾ ಸುಲಭವಾಗಿ ಏರಿದರೆ, ಮತ್ತೆ ಹಲವರು ಬೆಟ್ಟವನ್ನು ಏರಬೇಕಾದರೆ ಪಡುವ ಕಷ್ಟ ನಿಜಕ್ಕೂ ಆ ದೇವಿಗೇ ಪ್ರೀತಿ ಅನಿಸುತ್ತದೆ. ಆದರೂ ಕೂಡ ಛಲ ಬಿಡದೇ ಸಾಗುತ್ತಾರೆ. ಬೆಟ್ಟದ ಮೇಲಿರುವ ದೇವಿಯನ್ನು ಕಂಡಾಗ ಅನುಭವಿಸಿದ ದಣಿವೆಲ್ಲಾ ಕ್ಷಣ ಮಾತ್ರದಲ್ಲಿ ಮಾಯವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.
ನಿರ್ಬಂಧವಿದ್ದರೂ ಬೆಟ್ಟ ಏರಿದ್ದ ಭಕ್ತರು
ಪ್ರತಿ ವರ್ಷ ಈ ಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಕೊರೊನಾ ಸೋಂಕು ಕಡಿಮೆಯಾಗಿದ್ದರೂ ಮುನ್ನೆಚ್ಚರಿಕೆಯಿಂದ ಜಿಲ್ಲಾಡಳಿತ ಬೆಟ್ಟವೇರಲು ಹೊರಗಡೆಯಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಿತ್ತು. ಕೇವಲ ಅಕ್ಕ ಪಕ್ಕದ ಗ್ರಾಮಸ್ಥರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು. ಆದರೂ ಕೂಡ ದೇವಿಯ ದರ್ಶನವನ್ನು ಮಾಡಬೇಕು ಎಂದು 25 ಸಾವಿರಕ್ಕೂ ಹೆಚ್ಚು ಜನರು ಪೊಲೀಸರ ಕಣ್ತಪ್ಪಿಸಿ ಬೆಟ್ಟವನ್ನೇರಿ ದೇವಿಯ ದರ್ಶನವನ್ನ ಮಾಡಿದ್ದರು.
ಕಾಫಿನಾಡಲ್ಲಿ ದೀಪಾವಳಿ ಆಚರಣೆ ಹೇಗೆ?
ಕೊರೆಯುವ ಚಳಿ, ಮೈಮೇಲೆ ಬೀಳುವ ಇಬ್ಬನಿ, ಜಾರುವ ಗುಡ್ಡವನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಸಂತಸಪಡುತ್ತಾರೆ. ಇನ್ನು ಭಕ್ತರು ಬರಿಗಾಲಲ್ಲಿ ಬೆಟ್ಟವೇರಿ, ದೇವಿಯ ದರ್ಶನ ಮಾಡುವುದು ಈಗಲೂ ನಡೆದುಕೊಂಡು ಬಂದಿದೆ. ಹರಕೆ ಕಟ್ಟಿಕೊಂಡವರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದರೂ ಅವರ ಶಕ್ತಿಗನುಸಾರವಾಗಿ ಸೌದೆಯನ್ನು ಹೊತ್ತೊಯ್ಯುತ್ತಾರೆ. ಇದರ ಜೊತೆಗೆ ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆ ಹಣ್ಣನ್ನು ದೇವಿಗೆ ಸಮರ್ಪಿಸುತ್ತಾರೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದು, ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡುತ್ತಾರೆ. ಭಕ್ತರು ತರುವ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಿಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನು ನೋಡುತ್ತಾರೆ. ದೀಪವನ್ನು ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನು ಆಚರಿಸುತ್ತಾರೆ.