ಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'

ಚಿತ್ರ ಬರಹ : ರಾಘವೇಂದ್ರ ಶರ್ಮಾ ಕೆಎಲ್, ಕಡವಿನಮನೆ, ತಲವಾಟ
ಯುವಕರ ಪಟ್ಟಣ ವಲಸೆಯಿಂದಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂಬುದು ಇತ್ತೀಚಿನ ದಶಕಗಳಲ್ಲಿನ ಆತಂಕಕಾರಿ ಬೆಳವಣಿಗೆ. ಪಟ್ಟಣ ಜೀವನದ ಆಕರ್ಷಣೆಗೆ ಒಳಗಾಗಿ ಹಳ್ಳಿಯ ತೊರೆದ ಯುವ ಪೀಳಿಗೆ ಅತ್ತ ಅಲ್ಲೂ ಏಗಲಾರದೆ ಇತ್ತ ಹಳ್ಳಿಗೂ ಅರಲಾರದೆ ಇರುವಂತಹ ಪರಿಸ್ಥಿತಿಯಿದ್ದರೂ ಪಟ್ಟಣದ ಆಕರ್ಷಣೆ ಕಡಿಮೆಯಾಗಿಲ್ಲ. ಇದರ ಪರಿಣಾಮ ನೇರವಾಗಿ ಕೃಷಿಯ ಮೇಲಾಗಿರುವುದಂತೂ ಸತ್ಯ.ಹೀಗೆಯೇ ಮುಂದುವರೆದರೆ ಪಟ್ಟಣದ ಮೇಲಿನ ಒತ್ತಡದ ಜತೆ ಹಳ್ಳಿನಿರ್ಜನವಾಗುವುದು ಸಂಶಯವಿಲ್ಲ. ಆದರೆ ಕೆಲವು ಕಡೆ ಹಳ್ಳಿಯ ಹೈಕಳು ತಮ್ಮ ಕೃಷಿ ಕೆಲಸಗಳ ಇಡುವಿನ ನಡುವೆ ಪಟ್ಟಣಿಗರನ್ನೇ ಹಳ್ಳಿಯತ್ತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅಂತಹ ಒಂದು ಉದಾಹರಣೆ ಶಿವಮೊಗ್ಗ ಜಿಲ್ಲೆಯ ಜೋಗದ ಸಮೀಪ ತಲವಾಟ ಎಂಬ ಹಳ್ಳಿಯಲ್ಲಿ ಸಿಗುತ್ತದೆ. ಇದು ಹಳ್ಳಿಯ ಯುವಕರು ತಮ್ಮ ಬಿಡುವಿನ ವೇಳೆಯಲ್ಲಿ ಆದಾಯ ಗಳಿಸುವುದರ ಜತೆ ಪಟ್ಟಣಿಗರನ್ನು ಆಕರ್ಷಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ತಲವಾಟ ಕೃಷಿಕ ಹುಡುಗರು ಆಯ್ದುಕೊಂಡ ಮಾರ್ಗ ಹೋಂ ಸ್ಟೆ ಹೆಸರಿನ ಉಳಿಮನೆ.
ಹೋಂ ಸ್ಟೇ ಎಂಬ ಮಾಯೆ ಕೊಡಗು ಮಡಕೇರಿಯಿಂದ ಆರಂಭವಾಗಿ ಮಲೆನಾಡಿನಾದ್ಯಂತ ವ್ಯಾಪಿಸಿದೆ. ಹೋಂ ಸ್ಟೇ ಎಂದ ಕೂಡಲೆ ನೆನಪಾಗುವುದು ಐಷಾರಾಮಿ ಬಂಗಲೆ ದುಬಾರಿ ವೆಚ್ಚ, ಹೈಫೈ ಜನರ ಮೋಜು ಮಸ್ತಿ ತಾಣ ಎಂದು. ಇಂತಹ ಒಂದು ಬಂಗಲೆ ಕಟ್ಟಿ ಅಲ್ಲಿ ಸಕಲ ಸೌಲಭ್ಯ ಒದಗಿಸಿವುದು ಹಣವಂತರಾಗಿರಬೇಕು ಎಂಬುದು ಎಲ್ಲರ ನಂಬಿಕೆ. ಆದರೆ ತಲವಾಟದ ಮಧ್ಯಮವರ್ಗದ ಕೃಷಿಕ ಹುಡುಗರು ಕಡಿಮೆ ಖರ್ಚಿನಲ್ಲಿ ಮಲೆನಾಡು ಶೈಲಿಯ ಮನೆ ಕಟ್ಟಿಸಿ. ಕುಡಿತ ಮುಂತಾದವುಗಳಿಂದ ಹೊರತುಪಡಿಸಿ ಕೇವಲ ಶಾಕಾಹಾರಿ ವ್ಯವಸ್ಥೆ ಇಟ್ಟು ಪ್ರವಾಸಿಗರಿಗೆ ಆತ್ಮೀಯ ಆದರದಿಂದ ರುಚಿ ರುಚಿಯಾದ ಮಲೆನಾಡು ಆಹಾರ ಉಣಬಡಿಸಿ ಯಶ ಸಾಧಿಸುತ್ತಿದ್ದಾರೆ. ಇಂತಹ ಪ್ರಯತ್ನಗಳು ಖಂಡಿತವಾಗಿ ಹಳ್ಳಿಗರ ವಲಸೆಯನ್ನು ತಡೆಯುತ್ತದೆ ಎನ್ನುವುದು ನಿಸ್ಸಂಶಯ.

ಚಿಂತನವಿಕಾಸ ವಾಹಿನಿ ಎಂಬ ನಬಾರ್ಡ್ ಪ್ರಾಯೋಜಿತ ಸಂಘದ ಸದಸ್ಯರು ಒಗ್ಗೂಡಿ ನಡೆಸುವ ಉಳಿಮನೆ ಸದಸ್ಯರ ವೈಯಕ್ತಿಕ ಆದಾಯದ ವೃದ್ಧಿಯ ಜತೆಗೆ ಸಾಮಾಜಿಕ ಬದ್ಧತೆಯನ್ನೂ ಮೆರೆಸುತ್ತಾರೆ. ಹೀಗೆ ಕೃಷಿಕರು ಪಟ್ಟಣ ಹಾಗೂ ಹಳ್ಳಿಗಳ ಮನಸ್ಸುಗಳನ್ನು ಬೆಸೆಯುವ ಕಾರ್ಯ ಕೈಗೊಂಡರೆ ಇಬ್ಬರಿಗೂ ಅನುಕೂಲ ಎನ್ನುವ ಮಾತು "ನಮ್ಮನೆ"ಯ ನೇತಾರ ಜಿ.ಎಸ್. ಜಯಕೃಷ್ಣರದ್ದು. ಇದು ಹೋಂ ಸ್ಟೇ ಅನ್ನುವುದಕ್ಕಿಂತ ಉಳಿಮನೆ ಎಂದರೆ ಸೂಕ್ತ ಕಾರಣ ಇಲ್ಲಿಗೆ ಬರುವವರು ನಮ್ಮವರಂತೆ ನಮಗೆ ಎನ್ನುವುದು ಮತ್ತೋರ್ವ ಯುವಕ ಪ್ರಶಾಂತ್ ರ ಅಭಿಮತ. ಒಟ್ಟಿನಲ್ಲಿ ಪ್ರಶಾಂತತೆ ಅರಸಿ ಬರುವ ಜೋಗದ ಪ್ರವಾಸಿಗರಿಗೆ ಇದೊಂದು ಹಳ್ಳಿಯ ಕೃಷಿಕರ ಆರ್ಥಿಕ ಪ್ರಗತಿಗೆ ಕೈಜೋಡಿಸಿದ ಸಾರ್ಥಕತೆಯೂ ಇಲ್ಲಿದೆ ಎನ್ನುವುದು ನಿಶ್ಚಿತ.
ಕೃಷಿಕರು ಕೃಷಿಯಿಂದ ಸೋಲುಂಡಲ್ಲಿ ಆತ್ಮಹತ್ಯೆಗೆ ಮೊರೆಹೋಗುವುದಕ್ಕಿಂತ ಹೀಗೆ ಹತ್ತಾರು ಜನ ಒಗ್ಗೂಡಿ ಹೊಸ ಉಪಾಯದಿಂದ ಜೀವನದ ದಾರಿ ಕೈಗೊಂಡರೆ ಸರ್ವೇ ಜನಾ: ಸುಖೀನೋ ಭವಂತು ಎನ್ನುವುದರ ಜತೆ ಕೃಷಿಕೋ ನಾಸ್ತಿ ದುರ್ಭಿಕ್ಷ: ಎಂಬ ಮಾತಿಗೆ ಅರ್ಥ ಪ್ರತ್ಯಕ್ಷ ದೊರಕುತ್ತದೆ.
ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕ: 9449623735, 08183207361, 9448914791, 08183207700. [email protected]












Click it and Unblock the Notifications