'ದೇವರನ್ನೇ ಧಿಕ್ಕರಿಸಿ ಬದುಕುವ ಸ್ವಾತಂತ್ರ್ಯ ಇರೋದು ನಮ್ಮ ಧರ್ಮದಲ್ಲಿ ಮಾತ್ರ'
ಸಿದ್ದರಾಮಯ್ಯ ಅವರು ಮಾಂಸದೂಟ ಮಾಡಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ವಿಚಾರವಾಗಿ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಅಂಥ ಚರ್ಚೆ ಪೈಕಿ ಆಸಕ್ತಿಕರ ಎನಿಸಿದ ಹಾಗೂ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದ ಅಭಿಪ್ರಾಯವೊಂದನ್ನು ಲೇಖಕಿಯ ಒಪ್ಪಿಗೆ ಪಡೆದು ಹಾಕಲಾಗಿದೆ. ಇಲ್ಲಿರುವ ಅಭಿಪ್ರಾಯ ಲೇಖಕಿಯದು. ಇದು ಒನ್ಇಂಡಿಯಾ ಕನ್ನಡದ ಅಭಿಪ್ರಾಯವಲ್ಲ. -ಸಂಪಾದಕ
****
ದೇವಸ್ಥಾನಕ್ಕೆ ಏನು ತಿಂದು ಬರಬೇಕು ಅನ್ನೋದು ಅತ್ಲಾಗಿರಲಿ, ಅಸಲಿಗೆ ಬರ್ಲೇ ಬೇಕು ಅನ್ನೋದು ಯಾವ ದೇವರೂ ಯಾವ ಗ್ರಂಥವೂ ಹೇಳಿರದ ವಿಶಾಲ ಧರ್ಮ ನಮ್ಮದು. ದೇವರಿಗೆ ನಮಸ್ಕಾರ ಮಾಡೋದು ಇರ್ಲಿ, ದೇವರನ್ನೇ ಧಿಕ್ಕರಿಸಿ ಬದುಕುವ ಸ್ವಾತಂತ್ರ್ಯ ಇರೋದು ನಮ್ಮ ಧರ್ಮದಲ್ಲಿ ಮಾತ್ರ.

ದೇವಸ್ಥಾನ ಅನ್ನೋದು ಶ್ರದ್ಧಾ ಕೇಂದ್ರ, ಶಕ್ತಿ ಕೇಂದ್ರ. ಅಲ್ಲಿಗೆ ಹೋಗೋದು ಮನಸ್ಸಿನ ನೆಮ್ಮದಿಗಾಗಿ, ತನ್ನ ಸಂಕಟ ಕೇಳುವ ನಂಬಿಕಸ್ತ ಕಿವಿ ಇದೆ ಅನ್ನೋ ಕಾರಣಕ್ಕಾಗಿ, ಭರವಸೆ ತುಂಬುವ, ಬೀಳದಂತೆ ಆಧರಿಸುವ ಹೆಗಲು ಇದೆ ಅನ್ನೋ ನಂಬಿಕೆಯಿಂದ. ಅದರಲ್ಲೂ ಪುರಾತನ, ಇತಿಹಾಸ ಇರುವ ದೇವಸ್ಥಾನಗಳು ಮನಸ್ಸಿಗೆ ಶಕ್ತಿ ತುಂಬುವುದು ಸತ್ಯ. ಅದು ತರ್ಕಕ್ಕೂ, ವಿಜ್ಞಾನಕ್ಕೂ, ಮಾನವನ ಬುದ್ಧಿಗೂ ನಿಲುಕದ ಸಂಗತಿ. ಬಹುತೇಕರಿಗೆ ಒಂದಲ್ಲೊಂದು ಸಲ ಅನುಭವಕ್ಕೂ ಬಂದ ಶಕ್ತಿ.
ಇಂಥ ಜಾಗಗಳಿಗೆ ಹೇಗೆ ಹೋಗಬೇಕು, ಅಲ್ಲಿನ ಪಾವಿತ್ರ್ಯತೆಗೆ ಧಕ್ಕೆ ಬರದ ಹೇಗೆ ನಡೆದುಕೊಳ್ಳಬೇಕು ಅನ್ನೋದು ನಮ್ಮ ನಮ್ಮ ಸಂಸ್ಕಾರಕ್ಕೆ ಬಿಟ್ಟ ವಿಚಾರ ಅಷ್ಟೇ. ಹೀಗೆ ಬದುಕಿದರೆ ಆತ್ಮೋನ್ನತಿ ಅಂತಷ್ಟೇ ಹೇಳುವ ನಮ್ಮ ಧರ್ಮ, ಹೀಗೆ ಬದುಕು ಅಂತ ಕತ್ತುಪಟ್ಟಿ ಹಿಡಿದು ಯಾರಿಗೂ ಧಮಕಿ ಹಾಕಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಿಲ್ಲ.
ಹಾಗಾಗಿ ಅದರ ಪಾವಿತ್ರ್ಯತೆಗೆ ಧಕ್ಕೆ ಬರುವ ಹಾಗೆ ನಡೆದುಕೊಂಡರೆ, ಅದನ್ನ ಸಮರ್ಥಿಸಿಕೊಂಡರೆ ಬಯಲಾಗೋದು ನಮ್ಮ ವಿಕೃತಿ, ಧಕ್ಕೆಯಾಗೋದು ನಮ್ಮ ವ್ಯಕ್ತಿತ್ವವೇ ಹೊರತು ದೇವರದೂ ಅಲ್ಲ, ದೇವಸ್ಥಾನದ್ದೂ ಅಲ್ಲ. ನಮ್ಮೊಳಗಿನ ಸಂಸ್ಕಾರದ ಪ್ರತಿಫಲನವೇ ನಮ್ಮ ವರ್ತನೆ.
ಕಳೆದುಕೊಳ್ಳುವಷ್ಟು ಸುಲಭವಲ್ಲ ಸಂಸ್ಕಾರವನ್ನು ಪಡೆದುಕೊಳ್ಳುವುದು....
ವ್ಯಕ್ತಿತ್ವವನ್ನು ಬೆತ್ತಲಾಗಿಸಿಕೊಳ್ಳಲು ಕ್ಷಣ ಸಾಕು, ಕಟ್ಟಿಕೊಳ್ಳಲು ಮಾತ್ರ ಜೀವಮಾನವೇ ಬೇಕು.
ವಿಕೃತಿಯ ವೇಗ, ಸದ್ದು ಎರಡೂ ಜಾಸ್ತಿ, ಉಪಯೋಗ ಮಾತ್ರ ಕಡಿಮೆ ಅಷ್ಟೇ...











Click it and Unblock the Notifications