ಕರ್ನಾಟಕದ ಸಾರಿಗೆ ಸಂಸ್ಥೆಗಳ ನಷ್ಟ ಏನೂ ಅಲ್ಲಾ ಸ್ವಾಮಿ!
ಬೆಂಗಳೂರು, ಜ.3 : ಹೊಸ ವರ್ಷಕ್ಕೆ ಬಸ್ ಪ್ರಯಾಣ ದರ ಕಡಿಮೆ ಮಾಡಿ ಜನರಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರ ಸದ್ಯ ಆ ಬಗ್ಗೆ ಮೌನ ವಹಿಸಿದೆ. ಬಸ್ ಪ್ರಯಾಣ ದರ ಇಳಿಕೆ ಮಾಡಿದರೆ ನಷ್ಟ ಉಂಟಾಗುತ್ತದೆ ಎಂಬ ಸಾರಿಗೆ ಸಚಿವರ ಹೇಳಿಕೆಗೆ ನಮ್ಮ ಓದುಗ ಭಾಸ್ಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ಬೆಲೆ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಯಾಣ ದರ ಕಡಿಮೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದ್ದರು. ನಂತರ ಹೊಸ ವರ್ಷಕ್ಕೆ ದರ ಕಡಿಮೆ ಮಾಡುತ್ತೇವೆ ಎಂದು ಹೇಳಿದರು. ಆದರೆ, ಈಗ ಆ ಬಗ್ಗೆ ಮಾತನಾಡುತ್ತಿಲ್ಲ. [ಸಾರಿಗೆ ಸಂಸ್ಥೆಗಳ ನಷ್ಟದ ಲೆಕ್ಕ]

ಬೆಳಗಾವಿಯಲ್ಲಿನ ಚಳಿಗಾಲದ ಅಧಿವೇಶನದಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಂಸ್ಥೆ ಎಷ್ಟು ನಷ್ಟದಲ್ಲಿದೆ ಎಂದು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡುವ ಸಚಿವರು, ನಮ್ಮ ಅಕ್ಕ-ಪಕ್ಕದ ರಾಜ್ಯಗಳ ಸಾರಿಗೆ ಸಂಸ್ಥೆಗಳ ನಷ್ಟದ ಬಗ್ಗೆ ಒಮ್ಮೆ ಮಾಹಿತಿ ಪಡೆದುಕೊಂಡರೆ ಒಳ್ಳೆಯದು. [ಪ್ರಯಾಣದರ ಇಳಿಕೆ ಪೊಳ್ಳು ಭರವಸೆ]
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ರಾಜ್ಯದ ನಷ್ಟ ಯಾವ ಲೆಕ್ಕವೂ ಅಲ್ಲ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಂಸ್ಥೆಗೆ 2014ರಲ್ಲಿ 147 ಕೋಟಿ ನಷ್ಟವಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ನಮ್ಮ ಅಕ್ಕಪಕ್ಕದ ರಾಜ್ಯಗಳು ಇದಕ್ಕಿಂತ ನಷ್ಟದಲ್ಲಿ ಓಡುತ್ತಿವೆ. [ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು]
2014ರಲ್ಲಿ 4,259 ಬಸ್ಗಳು ಓಡುತ್ತಿರುವ ಮುಂಬೈ ಸಾರಿಗೆ ಇಲಾಖೆಗೆ 630 ಕೋಟಿ ನಷ್ಟವಾಗಿದೆ. 5,363 ಬಸ್ಗಳು ಸಂಚರಿಸುವ ದೆಹಲಿಯಲ್ಲಿ 2,765 ಕೋಟಿ ನಷ್ಟವಾಗಿದೆ. 1,120 ಬಸ್ಗಳಿರುವ ಚೆನ್ನೈ ಸಾರಿಗೆಗೆ 116 ಕೋಟಿ ನಷ್ಟವಾಗಿದೆ. ಸುಮಾರು 6 ಸಾವಿರ ಬಸ್ಗಳಿರುವ ನಮ್ಮ ಬಿಎಂಟಿಸಿಗೆ ಆದ 147 ಕೋಟಿ ನಷ್ಟದ ಅಧಿಕವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಇಲಾಖೆ ದರ ಇಳಿಕೆ ಬಗ್ಗೆ ಕಳುಹಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ ಎಂಬ ಎರಡು ದಿನಗಳ ಹಿಂದೆ ವರದಿ ಬಂದಿದೆ. ಜಸಸಾಮಾನ್ಯರ ಹಿತ ಕಾಯಬೇಕಾದ ಸರ್ಕಾರಕ್ಕೆ ಬಸ್ ದರ ಇಳಿಕೆ ವಿಚಾರದಲ್ಲಿ ಇಂತಹ ಹಠವೇಕೆ? ಎಂಬುದು ತಿಳಿಯುತ್ತಿಲ್ಲ.











Click it and Unblock the Notifications