ಓದುಗರ ಓಲೆ : ಫೇಸ್ಬುಕ್ಕಲ್ಲಿ ಕನ್ನಡ ವಿರೋಧಿಗಳು
ಫೇಸ್ಬುಕ್ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ತಾಣಗಳಲ್ಲಿ ಇತ್ತೀಚಿಗೆ ಕೆಲವು ಕನ್ನಡೇತರರು ಕರ್ನಾಟಕ ಸಂಬಂಧಿತ ಸುದ್ದಿಗಳು, ರಾಜ್ಯ ಸರಕಾರದ ಕೆಲ ಕನ್ನಡಪರ ವಿಚಾರಗಳ ಬಗ್ಗೆ ಕೆಟ್ಟ ಶಬ್ದಗಳಲ್ಲಿ ನಿಂದಿಸಿ ತಮ್ಮ ದುರ್ಬುದ್ಧಿಯನ್ನು ತೋರಿಸುತ್ತಿದ್ದಾರೆ. ವಲಸಿಗರು ರಾಜ್ಯದಲ್ಲಿ ಬಂದು ಇಲ್ಲಿನ ಎಲ್ಲ ಸೌಲಭ್ಯಗಳನ್ನು ಅನುಭವಿಸಿ, ಕರ್ನಾಟಕದ ಜನತೆ ಮತ್ತು ಸರಕಾರಕ್ಕೆ ಈ ರೀತಿ ಅಗೌರವ ತೋರಿಸುತ್ತಿರುವುದು ನಿಜಕ್ಕೂ ಖೇದಕರ.
ಇಂಗ್ಲಿಷ್ ಗಾದೆಯಲ್ಲಿ ಹೇಳಿದಂತೆ 'ರೋಮ್ ಗೆ ಹೋದಾಗ ರೋಮನ್ ರಂತೆ ಇರು' ಅನ್ನುವುದು 100ಕ್ಕೆ 100 ಸತ್ಯ. ಇದನ್ನು ಬಹಳಷ್ಟು ಕನ್ನಡೇತರ ವಲಸಿಗರು ಅರ್ಥ ಮಾಡಿಕೊಳ್ಳದೆ ನದಿ ಗಡಿ ಸಮಸ್ಯೆ ಉಂಟಾದಾಗ ತಮ್ಮ ರಾಜ್ಯದ ಪರವೇ ಮಣೆ ಹಾಕುವ ಇವರು ಕರ್ನಾಟಕದಲ್ಲೇಕೆ ದರ್ಪ ತೋರುತ್ತಿದ್ದಾರೆ?
ಇನ್ನು ಇಂಥ ಜನಗಳ ವಿರುದ್ಧವಾಗಿ ದನಿಯೆತ್ತಿ ಸತ್ಯ ಹೇಳಹೊರಟ ಕೆಲ ಕನ್ನಡಿಗ ಗೆಳೆಯರನ್ನು ನಮ್ಮ ಕನ್ನಡಿಗರೇ ತಾಲಿಬಾನಿಗಳು ಎಂದು ಜರಿಯುತ್ತಾರೆ. ಇದು ಗಾಯದ ಮೇಲೆ ಬರೆ ಇದ್ದಂತೆ. ನಮ್ಮ ನಾಡಿನಲ್ಲಿ ಕೂಡ ವಲಸೆ ನೀತಿ ಜಾರಿಯಾಗಲಿ. ರಾಜ್ಯ ಸರಕಾರ ಈ ಬಗ್ಗೆ ಗಂಬೀರವಾಗಿ ಪರಿಗಣಿಸಿ ಕನ್ನಡಿಗರ ಹಿತ ರಕ್ಷಣೆ ಕಾಯಲಿ. [ಓದಲು ಮರೆಯದಿರಿ : ಕನ್ನಡಿಗರು ಬಿಟ್ಟಿ ಬಿದ್ದಿಲ್ಲ]
ಜಯತೀರ್ಥ ಬಾಪುರಾವ ನಾಡಗೌಡ, ಸಜ್ಜನ ಕಾಲನಿ, ವಿಜಾಪುರ
***
ಕನ್ನಡಿಗರು ಇದಕ್ಕೆ ಏನೆನ್ನುತ್ತಾರೆ? (ಶಾಮ್ ಫೇಸ್ಬುಕ್ ತಾಣದಲ್ಲಿ ಬಂದಿರುವ ಕಾಮೆಂಟುಗಳು)
ಅತ್ಯಂತ ಪ್ರಭಾವಶಾಲಿ ಸಾಮಾಜಿಕ ತಾಣವಾಗಿರುವ ಫೇಸ್ಬುಕ್ನಲ್ಲಿ ಈ ಲೇಖನಕ್ಕೆ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ವಿಕೃತ ಮನೋಭಾವ ಇರುವ ಉದ್ಯೋಗಿಗಳನ್ನು ನಾವು ದಿನನಿತ್ಯ ಕಚೇರಿಯಲ್ಲಿ ನೋಡುತ್ತಿರುತ್ತೇವೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ನಾವೆಲ್ಲಿದ್ದಿವೆಂಬ ಪರಿಜ್ಞಾನ ಇರುವವರು ಈ ರೀತಿ ಮಾಡಲಾರರು. ಅಂತಹವರ ಮಾತುಗಳಿಗೆ ಬೆಲೆ ಕೊಡದೆ ನಿರ್ಲಕ್ಷಿಸುವುದೇ ಉತ್ತಮ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಗದೊಬ್ಬರು, 'ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು' ಎಂಬ ಕುವೆಂಪು ಅವರ ವಾಣಿಯನ್ನು ಉದ್ಗರಿಸಿ, ನಾವೆಲ್ಲೇ ಇದ್ದರೂ ಅಲ್ಲಿನ ಜನತೆಯನ್ನು ಗೌರವಿಸುವುದನ್ನು ಕಲಿಯಬೇಕು ಎಂದು ನುಡಿದಿದ್ದಾರೆ. ಜೊತೆಗೆ, ವಲಸೆ ನೀತಿ ಎಂದರೆ ಏನು? ಎಂದು ಪ್ರಶ್ನಿಸಿರುವ ಅವರು, ಇಡೀ ಜಗತ್ತೇ ಒಂದು ಹಳ್ಳಿಯಾಗಿ ಮಾರ್ಪಡುತ್ತಿರುವಾಗ ಒಂದು ದೇಶ ಅನ್ನುವ ಭಾವನೆ ಉಳಿಸಿಕೊಳ್ಳದಿದ್ದರೆ ಹೇಗೆ ಎಂದು ಲೇಖಕರನ್ನೇ ಪ್ರಶ್ನಿಸಿದ್ದಾರೆ. ನಮ್ಮನ್ನು ಗೌರವಿಸಲು ಅನ್ಯರಿಗೆ ದಿಟ್ಟವಾಗಿ ಹೇಳೋಣ, ಮತ್ತು ನಾವೂ ಅವರನ್ನು ಗೌರವಿಸೋಣ ಎಂದು ಖಚಿತವಾಗಿ ಹೇಳಿದ್ದಾರೆ.
ಕರ್ನಾಟಕದ ಜನರ ಶಾಂತಿ ಮನೋಭಾವವನ್ನು ಕದಡಲು ಯತ್ನಿಸುತ್ತಿರುವ ಇಂಥ ದುರ್ಬುದ್ಧಿಯವರಿಗೆ ಪಾಠ ಕಲಿಸುವುದು ಹೇಗೆ? ಎಲ್ಲರೂ ಸಹಬಾಳ್ವೆಯಿಂದ ಬಾಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು? ಸರಕಾರವನ್ನು ಈ ನಿಟ್ಟಿನಲ್ಲಿ ಯಾವ ರೀತಿ ಎಚ್ಚರಿಸಬೇಕು ಎಂಬ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿದೆ.