ಸ್ವಾಮಿ ಸದಾನಂದರೇ ಹೀಗೇಕೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ?
ನಿವೃತ್ತ ಲೋಕಾಯುಕ್ತ ನ್ಯಾ ಹೆಗ್ಡೆ ಅವರು 'ಭ್ರಷ್ಟಾಚಾರವಿಲ್ಲದ ಸಂಸ್ಥೆಯೇ ಇಲ್ಲ' ಎಂದು ವಾಸ್ತವದ ಮೇಲೆ ಬೆಳಕು ಚೆಲ್ಲುತ್ತಿದ್ದಂತೆ ಪಾಪ ಸದಾನಂದರು ಎಲ್ಲಿ ಮುಟ್ಟಿ ನೋಡಿಕೊಂಡರೋ ನ್ಯಾ ಹೆಗ್ಡೆ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ನ್ಯಾ. ಸಂತೋಷ್ ಹೆಗ್ಡೆ ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಭ್ರಷ್ಟಾಚಾರವಿಲ್ಲದ ಸಂಸ್ಥೆಯೇ ಇಲ್ಲ ಎನ್ನುವ ಹೆಗ್ಡೆ ಹೇಳಿಕೆಯಿಂದ ತುಂಬಾ ಬೇಸರವಾಗಿದೆ. ಪ್ರಚಾರಕ್ಕಾಗಿ ಮಾಧ್ಯಮದ ಮುಂದೆ ಪದೇ ಪದೇ ಹೇಳಿಕೆ ನೀಡುವುದು ಸಂಪ್ರದಾಯವಲ್ಲ. ತಮ್ಮ ವಿರುದ್ಧದ ಟೀಕೆಗಳಿಗೆ ಈ ರೀತಿ ಆವೇಶಭರಿತವಾಗಿ ಮಾಧ್ಯಮದ ಮುಂದೆ ಬಂದು ಉತ್ತರಿಸುವುದು ಸರಿಯಲ್ಲ' ಎಂದೂ ಅಪ್ಪಣೆ ಕೊಡಿಸಿದ್ದಾರೆ.
ಸ್ವಾಮಿ ಸದಾನಂದರೇ ಯಾಕೆ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದೀರಿ? ನ್ಯಾ. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತ ಹುದ್ದಯಿಂದ ಎದ್ದು ಹೋದ ಮೇಲೆ ಆ ಸ್ಥಾನವನ್ನು ಅರ್ಹರಿಗೆ ನೀಡಲು ನೀವು ಹೇಗೆ ವಿಫಲರಾಗುತ್ತಿದ್ದೀರಿ ಎಂಬುದು ನಾಡಿನ ಜನತೆಗೆ ಗೊತ್ತಿದೆ. ಒಂದು ಹಂತದಲ್ಲಿ ಹತಾರಾಶರಾಗಿ 'ನೂರಕ್ಕೆ ನೂರರಷ್ಟು ಯಾರೂ ಪರಿಪೂರ್ಣರಾಗಿರುವುದಿಲ್ಲ' ಎಂದು ನೀವೇ ಹೇಳಿದ್ದನ್ನು ಮರೆತುಹೋದಿರಾ.
ವ್ಯಕ್ತಿಯಾದರೇನೂ, ಸಂಸ್ಥೆಯಾದರೇನೂ? ನೂರಕ್ಕೆ ನೂರರಷ್ಟು ಪರಿಪೂರ್ಣರಾಗಿರುವ ವ್ಯಕ್ತಿಯೇ ನಿಮಗೆ ಸಿಗೊಲ್ಲ ಅಂತಾದರೆ ಇನ್ನು ಸಂಸ್ಥೆಗಳು ಎಲ್ಲಿಂದ ಸಿಗಬೇಕು? ಅದನ್ನೇ ನ್ಯಾ ಸಂತೋಷ್ ಹೆಗ್ಡೆ ಅವರು ಹೇಳಿದ್ದು 'ಭ್ರಷ್ಟಾಚಾರ ಇಲ್ಲದ ಸಂಸ್ಥೆಯೇ ಇಲ್ಲ' ಎಂದು. ಅದಕ್ಕೆ ನೀವೂ ಆವೇಶಭರಿತವಾಗಿ ಮಾಧ್ಯಮದ ಮುಂದೆ ಬಂದು ಉತ್ತರಿಸುವ ಅಗತ್ಯವಿಲ್ಲ.
ಅಷ್ಟಕ್ಕೂ ಯಾರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನೀವು ಇಂತಹ ಅಪ್ಪಣೆ ಕೊಡಿಸಿದಿರಿ? ಸ್ವಲ್ಪ ಯೋಚಿಸಿ ನೋಡಿ. ನ್ಯಾಯ-ಅನ್ಯಾಯದ ಮತ್ತೊಂದು ಮುಖ ನಿಮಗೇ ಪರಿಚಯವಾದೀತು.