ಅಂತರ್ಜಾತಿ ವಿವಾಹ ಸಮಾಜಕ್ಕೆ ಮಾರಕವೇ?
ಮದುವೆಯನ್ನು ಯಾರು ಯಾರೊಂದಿಗೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡಿಸುತ್ತದೆ. ಇದು ಗಂಡು-ಹೆಣ್ಣಿಗೆ ಸಂಬಂಧಪಟ್ಟ ವಿಷಯ. ಆಯ್ಕೆ ಅವರವರಿಗೆ ಬಿಟ್ಟದ್ದು, ಜೀವನ ಸಂಗಾತಿಗಳು ಅವರು, ಬಾಳಬೇಕಾದವರೂ ಅವರೇ. ಕಷ್ಟ, ಸುಖದಲ್ಲಿ ಮುಳುಗಿ, ತೇಲಿಸುವವರೂ ಅವರೇ.
ಎಲ್ಲಾ ಧರ್ಮಗಳಲ್ಲಿಯೂ ಸಂಪೂರ್ಣ ಹಕ್ಕು, ಅಧಿಕಾರ ಅವರಿಗೆ ಕೊಡಲಾಗಿದೆ. ಆದರೆ, ಬಹುತೇಕವಾಗಿ ತಂದೆ, ತಾಯಂದಿರು ಹೀಗೆ ಮಾಡುತ್ತಿಲ್ಲ. ವರದಕ್ಷಿಣೆಯ ಆಸೆಗಾಗಿ ತಮ್ಮ ಇಚ್ಛಾನುಸಾರವೇ ನಡೆಯಬೇಕು. ಅವರು ನಿಶ್ಚಯಿಸಿದವರನ್ನೇ ತಮ್ಮ ಮಕ್ಕಳು ಒಪ್ಪಿಕೊಳ್ಳಬೇಕು.
ಹೀಗಾಗದೆ ಇದ್ದರೆ ತಂದೆ-ತಾಯಿ ಮತ್ತು ಮಕ್ಕಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ಬೇರೆ, ಬೇರೆ ಆಗುವ ಸಂದರ್ಭಗಳು ಹೆಚ್ಚಾಗುತ್ತಿವೆ. ಜನ್ಮ ಕೊಟ್ಟು ಬೆಳೆಸಿದ ಮಗ-ಮಗಳು, ತಂದೆ-ತಾಯಿಯರನ್ನು ತ್ಯಜಿಸಿ ಕೇವಲ ಒಬ್ಬ ಹೆಣ್ಣಿನ ಮೋಹದ ಬಲೆಯಲ್ಲಿ ಬಿದ್ದ ಎಂಬ ಆರೋಪವನ್ನು ಎದುರಿಸಬೇಕು.
ಹೀಗೆಯೇ, ಒಬ್ಬ ಹುಡುಗನಿಗೋಸ್ಕರ ಎಲ್ಲವನ್ನು ಬಿಟ್ಟಳೆಂದು ಹೆಣ್ಣು ಆರೋಪಕ್ಕೆ ಸಿಕ್ಕಿ ಅನುಭವಿಸಬೇಕು. ಹೀಗೆ ಯೋಚಿಸುವುದು ಸರಿಯಲ್ಲ. ವಯಸ್ಸಾದ ಮಗನಿಗೆ, ಮಗಳಿಗೆ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು.
ಬುದ್ಧಿ ಹೇಳುವ ಹಕ್ಕು, ಅಧಿಕಾರ ಪೋಷಕರಿಗಿದೆ. ಒಪ್ಪದೆ ಹೋದರೆ ಆಶೀರ್ವಾದ ಮಾಡಬೇಕು.ಇದರ ಬದಲು ಮನೆತನದ ಮರ್ಯಾದೆ ಎಂಬ ಕಾರಣ ಸುಪಾರಿ ಕೊಲೆಗಾರರಿಗೆ ತಾಂಬೂಲ ಕೊಟ್ಟು, ಹಣ ಕೊಟ್ಟು ತಮ್ಮ ಮಗಳನ್ನು ಮತ್ತು ಮಗಳು-ಅಳಿಯನನ್ನೂ ಕೊಲ್ಲಿಸುವುದು ಸೂಕ್ತವೇ ? ಇದು ಕಾನೂನು ಹಾಗೂ ಧರ್ಮದ ವಿರುದ್ಧ. ಇದೊಂದು ಪಾಪ ಮತ್ತು ಅಪರಾಧ.
ತಮ್ಮ ಮಗಳನ್ನು ಕೊಲ್ಲಿಸಿದರು ಎಂಬ ಅಪಕೀರ್ತಿಗೆ, ಜೈಲಿಗೆ ಗು ರಿಯಾಗುತ್ತಾರೆ ಪೋಷಕರು. ಈಗ ಯಾರ ಮರ್ಯಾದೆ ಹೋಯಿತು ? ಮಗಳದೋ ಅಥವಾ ಪೋಷಕರದೋ? ನರಕಕ್ಕೆ ಹೋಗುವವರಾರು ? ಸಮಾಜದಲ್ಲಿ ಪ್ರತಿ ದಿನ ನಿಂದನೆಗೆ ಗುರಿಯಾಗುವವರು ಯಾರು ? ಪೋಷಕರೇ ಸಾವಧಾನದಿಂದ ಈ ಪ್ರಶ್ನೆಗಳ ಕಡೆ ಗಮನ ಕೊಡಿ .