ದಾವಣಗೆರೆ ರೈಲಿನಲ್ಲಿ ಧರ್ಮಪ್ರಚಾರದ ತಮಿಳು ಹಾಡು
ನಮಸ್ಕಾರ ಸಾರ್,
ನಾನೊಬ್ಬ ಕನ್ನಡಿಗ. ಕನ್ನಡದ ಬಗೆಗೆ ನಿಮ್ಮ ಲೇಖನಗಳನ್ನು ದಟ್ಸ್ ಕನ್ನಡದಲ್ಲಿ ಓದುತ್ತಿರುತ್ತೇನೆ. ನನ್ನೂರು ಬೆಂಗಳೂರು. ನಮ್ಮ ಮಾತೃಭಾಷೆಯ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುವುದು ನನ್ನ ಇಷ್ಟ ಮತ್ತು ಹವ್ಯಾಸ. ನಮ್ಮ ಕಚೇರಿಯಲ್ಲಿ ಯಾರಾದರೂ ಕನ್ನಡ ಮಾತನಾಡಿದ್ದು ಕಿವಿಗೆ ಬಿದ್ದರೆ ಪುಳಕಗೊಳ್ಳುತ್ತೇನೆ.
ಮೊನ್ನೆ ನಿಮ್ಮದೇ ತರಹದ ಒಂದು ಅನುಭವ ನನಗೂ ಆಯಿತು. ಬೆಂಗಳೂರಿನಿಂದ ನಮ್ಮೂರು ದಾವಣಗೆರೆಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಒಂದಿಪ್ಪತ್ತು ಜನ ತಮಿಳರ ಗುಂಪು ತಮಿಳಿನಲ್ಲಿ ಏಸುಕ್ರಿಸ್ತನನ್ನು ಕೊಂಡಾಡುವ ಹಾಡುಗಳನ್ನು ಜೋರಾಗಿ ಹಾಡುತ್ತಿದ್ದರು. ಅವರ ಉದ್ದೇಶ ಧರ್ಮಪ್ರಚಾರ ಮಾಡುವುದಾಗಿತ್ತು.
ಧರ್ಮಪ್ರಚಾರದ ಗೀತೆಗಳು ಅದರನ್ನೂ ತಮಿಳಿನಲ್ಲಿ ಕೇಳಿಕೇಳಿ ನನಗೆ ಸಿಟ್ಟುಬಂತು. ಆದರೂ ಸುಮ್ಮನೆ ಇದ್ದೆ. ಮನಸ್ಸು ತಡೆಯಲಿಲ್ಲ. ಅಕ್ಕಪಕ್ಕದಲ್ಲಿದ್ದ ಇಬ್ಬರು ಕನ್ನಡಿಗರನ್ನು ಕರೆದು ಧರ್ಮಪ್ರಚಾರದ ಹಾಡುಗಳನ್ನು ನಿಲ್ಲಿಸುವಂತೆ ತಮಿಳರಿಗೆ ಹೇಳಿದೆ. ಆದರೆ ಅವರಿಗೆ ನನ್ನ ಮನವಿ ಹಿಡಿಸಲಿಲ್ಲ.
"ಉನ್ನುಡೆಯ ಸೀಟ್ ಎಂಗೆ?"ಎಂದು ನನಗೆ ದಬಾಯಿಸಿದರು. ಜತೆಗೆ ಕುಳಿತಿದ್ದ ಕನ್ನಡಿಗರಾರೂ ಒಬ್ಬರಾದರೂ ಒಂದೂ ಮಾತನಾಡಲಿಲ್ಲ. ಈ ಘಟನೆ ನಡೆದದ್ದು ಮಧ್ಯ ಕರ್ನಾಟಕದ ಕನ್ನಡ ರಾಜಧಾನಿ ಎಂದು ಕರೆಯಿಸಿಕೊಳ್ಳುವ ದಾವಣಗೆರೆಗೆ ಹೋಗುವ ರೈಲಿನಲ್ಲಿ. ನನ್ನ ಕಣ್ಣಲ್ಲಿ ನೀರು ಬಂತು ನಟರಾಜ್.
ವೀರೇಶ್, ಬೆಂಗಳೂರು.