ಕಾರ್ಮಿಕರಿಗೆ ಬಂಪರ್ ಗಿಫ್ಟ್: ಕನಿಷ್ಠ ವೇತನ ಬರೋಬ್ಬರಿ ಶೇ. 60ರಷ್ಟು ಹೆಚ್ಚಳ ಮಾಡಿದ ರಾಜ್ಯ ಸರ್ಕಾರ
ರಾಜ್ಯದ ಲಕ್ಷಾಂತರ ಶ್ರಮಿಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಕಾರ್ಮಿಕರ ಬಹು ವರ್ಷಗಳ ಬೇಡಿಕೆಯಾಗಿದ್ದ ಕನಿಷ್ಠ ವೇತನ ಹೆಚ್ಚಳಕ್ಕೆ ಸರ್ಕಾರ ಅಸ್ತು ಎಂದಿದ್ದು, ಕಾರ್ಮಿಕರ ಕನಿಷ್ಠ ವೇತನವನ್ನು ಬರೋಬ್ಬರಿ ಶೇಕಡಾ 60ರಷ್ಟು ಏರಿಕೆ ಮಾಡಿ ಮಹತ್ವದ ಅಧಿಸೂಚನೆ ಹೊರಡಿಸಿದೆ. ಇದು ನಾಡಿನ ಶ್ರಮಿಕ ವರ್ಗಕ್ಕೆ, ಅದರಲ್ಲೂ ವಿಶೇಷವಾಗಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಇಟ್ಟಿರುವ ಅತ್ಯಂತ ದೊಡ್ಡ ಹೆಜ್ಜೆಯಾಗಿದೆ.
ಈ ವೇತನ ಪರಿಷ್ಕರಣೆಯು ಕೇವಲ ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ಕನಿಷ್ಠ ವೇತನವನ್ನು ನಿಗದಿಪಡಿಸುವಾಗ ರಾಜ್ಯವನ್ನು ನಾಲ್ಕು ವಿಭಿನ್ನ ವಲಯಗಳಾಗಿ ವರ್ಗೀಕರಣ ಮಾಡಲಾಗುತ್ತಿತ್ತು. ಇದರಿಂದಾಗಿ ವೇತನ ತಾರತಮ್ಯದ ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಹಳೆಯ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದು, ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯ ಅಡಿಯಲ್ಲಿ ತಂದಿದೆ.ಒಟ್ಟು 81 ಅನುಸೂಚಿತ ಉದ್ಯೋಗಗಳಲ್ಲಿ (Scheduled Employments) ದುಡಿಯುವ ಲಕ್ಷಾಂತರ ಶ್ರಮಿಕರಿಗೆ ಈ ಹೊಸ ನಿಯಮದಿಂದ ನೇರ ಲಾಭವಾಗಲಿದೆ.

ಕನಿಷ್ಠ ವೇತನವನ್ನು ನಿರ್ಧರಿಸುವಾಗ ಸರ್ಕಾರವು ಸುಪ್ರೀಂ ಕೋರ್ಟ್ನ ಘನ ನ್ಯಾಯಪೀಠವು ನೀಡಿದ್ದ ಸ್ಪಷ್ಟ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ ಹಾಗೂ ಕಾರ್ಮಿಕರ ಜೀವನಮಟ್ಟವನ್ನು ಸುಧಾರಿಸುವ ಸದುದ್ದೇಶದಿಂದ ಈ ವೈಜ್ಞಾನಿಕ ಪರಿಷ್ಕರಣೆ ಮಾಡಲಾಗಿದೆ.
ಈ ನಿರ್ಧಾರದಿಂದಾಗಿ ದೈನಂದಿನ ಕೂಲಿ ನಂಬಿ ಬದುಕುತ್ತಿರುವ ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕೆಲಸಗಾರರು, ಹೋಟೆಲ್ ಕಾರ್ಮಿಕರು ಸೇರಿದಂತೆ ನಾನಾ ಅಸಂಘಟಿತ ವಲಯಗಳ ಕಾರ್ಮಿಕರ ಕುಟುಂಬಗಳಿಗೆ ಹೊಸ ಆಶಾಭಾವನೆ ಮೂಡಿದೆ. ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದ್ದು, ಕನಿಷ್ಠ ವೇತನ ಕಾಯ್ದೆಯ ಅಡಿಯಲ್ಲಿ ಬರುವ ಎಲ್ಲಾ ಕಾರ್ಮಿಕರಿಗೂ ಮಾಲೀಕರು ಕಡ್ಡಾಯವಾಗಿ ಈ ಪರಿಷ್ಕೃತ ವೇತನವನ್ನು ಪಾವತಿಸಬೇಕಾಗುತ್ತದೆ.
ಕಾರ್ಮಿಕ ಇಲಾಖೆಯ ಈ ದಿಟ್ಟ ಹಾಗೂ ಜನಪರ ನಿರ್ಧಾರದ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. "ಈ ಮಹತ್ವದ ಹೆಜ್ಜೆಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿ ಸದಾ ಪ್ರೋತ್ಸಾಹಿಸಿದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ, ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಹಾಗೂ ಅಮೂಲ್ಯ ಸಲಹೆಗಳನ್ನು ನೀಡಿದ ತಜ್ಞರಿಗೆ ಸಮಸ್ತ ಶ್ರಮಿಕ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು" ಎಂದು ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications