ಬೀದಿನಾಯಿಗಳಿಗೆ ಕಂಡಲ್ಲಿ ಗುಂಡು; ಇದೇ ಸರಿಮಾರ್ಗ!
ನಾಯಿಗಳ ಬಾಯಿಗೆ ಸಿಕ್ಕು ಮಕ್ಕಳು ಸಾಯುವುದೆಂದರೆ? ಇಡೀ ಸಮಾಜ ತಲೆತಗ್ಗಿಸಬೇಕು.ಈ ಸಮಸ್ಯೆಗೆ ಪರಿಹಾರವೇ ಇಲ್ಲವಾ? ಸಚಿವ ಮಹೋದಯರೆ, ಮುಖ್ಯಮಂತ್ರಿಗಳೆ, ರಾಜ್ಯಪಾಲರೆ, ಶೇಮ್!
ಸಂಪಾದಕರ ಸಮಕ್ಷಮಕ್ಕೆ,
ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ. ಬೆಂಗಳೂರಿನ ಬೀದಿನಾಯಿಗಳಿಗೆ ಹೆದರಿ ನಾವು ಜೀವನ ಮಾಡಬೇಕಾಗಿದೆ. ಮಕ್ಕಳನ್ನು ಹೊರಗಡೆ ಆಡುವುದಕ್ಕೆ ನಾನು ಬಿಡುತ್ತಿಲ್ಲ. ಹೆದರಿಕೆ ಆಗುತ್ತದೆ. ಬೆಂಗಳೂರಿನಲ್ಲಿ ಇರುವ ಎಲ್ಲ ಬೀದಿ ನಾಯಿಗಳನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಬಾರದೇಕೆ? ನಾಯಿಗಳು ಮುಖ್ಯವೋ? ನಮ್ಮ ಮಕ್ಕಳು ಮುಖ್ಯವೋ? ಇದೆಂಥ ಸಮಾಜ?
-ನೇಹ, ವಿಜಯನಗರ, ಬೆಂಗಳೂರು.
*
ಮಾನ್ಯರೆ,
ಬೆಂಗಳೂರಿನಲ್ಲಿ ನಾಯಿಗಳ ಬೇಟೆಗೆ ಮತ್ತೊಂದು ಕಂದನ ಬಲಿ ಓದಿ, ಹೊಟ್ಟೆ ತೊಳೆಸಿತು. ಕೇವಲ ಎರಡು ತಿಂಗಳಲ್ಲಿ ಮೂರನೆ ದುರಂತವೆಂದರೆ ಸಂಬಂಧಪಟ್ಟ ಅಧಿಕಾರಿಗಳು, ರಾಜಕಾರಣಿಗಳು ಹೊಟ್ಟೆಗೆ ಏನು ತಿನ್ನುತ್ತಿದ್ದಾರೋ ತಿಳಿಯುತ್ತಿಲ್ಲ. ಬೆಂಗಳೂರಿನಲ್ಲಿ ಇವರೆಲ್ಲ ಏನು ಮಾಡುತ್ತಾರೆ?
ನಾವು ಯಾವ ಯುಗದಲ್ಲಿದ್ದೇವೆಂಬುದೇ ದಿಗ್ಬ್ರಮೆಯಾಗುತ್ತದೆ. ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ, ಮಾನ್ಯ ಬೆಂಗಳೂರು ಉಸ್ತುವಾರಿ ಸಚಿವರಾದ, ಮಂತ್ರಿಗಳಾದ ಅಶೋಕ್ರವರು ರಾಜಿನಾಮೆ ಕೊಡಬೇಕು.
ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು, ತಮ್ಮ ಮನೆಯಲ್ಲೇ ಒಂದು ಹಸುಳೆಯನ್ನು ನಾಯಿ ನರಿಗಳು ಕಿತ್ತಾಡಿ ಸಾಯಿಸಿದ್ದರೆ ಹೇಗನಿಸುತ್ತಿತ್ತೆಂದು ಕೇವಲ ಒಂದು ಕ್ಷಣ ಯೋಚಿಸಿ, ಯಾವ ಮಕ್ಕಳೂ ಬಿಟ್ಟಿಯಲ್ಲವೆಂಬ ಅರಿವಿನೊಂದಿಗೆ, ಅಧಿಕಾರಿಗಳನ್ನು (ಸಾಧ್ಯವಾದರೆ ಜೈರಾಜ್ರವರನ್ನೂ ) ಅಮಾನತ್ತು ಮಾಡಿದರೆ, ಆ ಪುಟಾಣಿಗಳ ಆತ್ಮಕ್ಕೆ ಶಾಂತಿ ದೊರಕಬಹುದೆಂದು ನನ್ನ ಭಾವನೆ.
-ಸತ್ಯ, ನ್ಯೂಜೆರ್ಸಿ
*
ಮಾನ್ಯರೇ,
ಇಂತಹ ಅನಾಹುತಗಳಾದಾಗ, ಬೀದಿನಾಯಿಗಳ ಹಿಡಿದು ಸಾಯಿಸಿ ಎಂಬ ವಾದಕ್ಕೆ ಬಲ ಬರುತ್ತದೆ. ಆಡಳಿತ ಯಂತ್ರವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ. ಆದರೆ ಯಾವುದೋ ಒಂದೆರಡು ನಾಯಿಗಳು ಮಾಡುವ ತಪ್ಪಿಗೆ, ಸಮಸ್ತ ನಾಯಿ ಕುಲವನ್ನೇ ನಿರ್ವಂಶ ಮಾಡುವುದು ಉಚಿತವೇ?
ಇನ್ನೊಂದು ಪ್ರಾಣಿಯ ಜೀವ ತೆಗೆವ ಆ ಹಕ್ಕನ್ನು ನಮಗೆ ಕೊಟ್ಟವರು ಯಾರು? ಯಾರು? ಯಾರು?
-ಕೇಶವಸುತ












Click it and Unblock the Notifications