ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ ಪ್ರಚಾರಕ್ಕೆ ನ್ಯೂ ಜೆರ್ಸಿಯಲ್ಲಿ ರೋಡ್ ಶೋ

By Prasad
|
Google Oneindia Kannada News

ಬೃಂದಾವನದ ಆಶ್ರಯದಲ್ಲಿ ನಡೆಸಲಾಗುತ್ತಿರುವ ಆರನೇ "ಅಕ್ಕ" ವಿಶ್ವ ಕನ್ನಡ ಸಮ್ಮೇಳನದ ಪ್ರಚಾರಕ್ಕೆ, ಇದೇ ಪ್ರಥಮ ಬಾರಿಗೆ ಹೊಸದೊಂದು ಪ್ರಯೋಗ ನಡೆಸಲಾಯ್ತು. ಎಡಿಸನ್ ನಗರದ ಓಕ್ ಟ್ರೀ ರಸ್ತೆಯಲ್ಲಿ ನಡೆದ "ರೋಡ್ ಶೋ"ನಲ್ಲಿ ನಡೆದವರು ನೂರಾರು ಮಂದಿ.

ಕಳೆದ ಶನಿವಾರ ಮೇ 22ರಂದು ಬೃಂದಾವನ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ರಾಮ್ ಬೆಂಗಳೂರ್ ರವರ ಕಛೇರಿಯ ಪಾರ್ಕಿಂಗ್ ಲಾಟ್ ನಲ್ಲಿ ಸಂಭ್ರಮವೋ ಸಂಭ್ರಮ. 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಇಂಡಿಯಾ ಸಂಚಾಲಕ ಸಮಿತಿಯ ಚೇರ್ ಆದ ಲಕ್ಷ್ಮೀನಾರಾಯಣ್ ರವರು ವಿತರಿಸಿದ ಸಮ್ಮೇಳನದ ಲಾಂಛನವಿದ್ದ ಬಿಳಿಯ ಬಣ್ಣದ ಟಿ ಶರ್ಟ್ ಹಾಗು ಟೋಪಿಯನ್ನು ತೊಟ್ಟುಕೊಂಡು ಹಲವಾರು ಉತ್ಸಾಹಿತ ಸ್ವಯಂಸೇವಕರು ಸೇರಿದ್ದರು.

ಸಮ್ಮೇಳನ ಕಾರ್ಯಕಾರಿ ಸಮಿತಿಯ ಸದಸ್ಯರು, ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಡಂಕಣಿಕೋಟೆ, ಉಪಾಧ್ಯಕ್ಷರಾದ ಶಾಂತರಾಜು ಕೆಂಪಯ್ಯ, ಕಾರ್ಯದರ್ಶಿಗಳಾದ ದಯಾಶಂಕರ್ ಅದಪ್ಪ, ಅಕ್ಕ ನಿರ್ದೇಶಕರುಗಳಾದ ಎಚ್.ವಿಶ್ವಾಮಿತ್ರ, ರಮೇಶ್ ಗೌಡ, ಶ್ರೀಮತಿ ಯಮುನ ಶ್ರೀನಿಧಿ, ಬೃಂದಾವನ ಕನ್ನಡ ಕೂಟದ ಅಧ್ಯಕ್ಷೆ ಉಷಾ ಪ್ರಸನ್ನ ಕುಮಾರ್, ನ್ಯೂಯಾರ್ಕ್ ಕನ್ನಡ ಕೂಟದ ಅಧ್ಯಕ್ಷ ಜ್ಯೋತಿ ಕೃಷ್ಣ, ಹ್ಯಾರಿಸ್ ಬರ್ಗ್ ಕನ್ನಡ ಕೂಟದ ಅಧ್ಯಕ್ಷ ಅನಂತ್ ಕುಲಕರ್ಣಿ, ತ್ರಿವೇಣಿ ಕನ್ನಡಕೂಟ ಮತ್ತ ಎಲ್ಲ ಸಂಘಗಳ ಪಧಾಧಿಕಾರಿಗಳು ಹಾಗು ಸದಸ್ಯರು, ಸಮ್ಮೇಳನದ ಹಲವಾರು ಸಮಿತಿಗಳ ಚೇರ್, ಕೋ ಚೇರ್ ಹಾಗು ಸದಸ್ಯರೆಲ್ಲರೂ ಸೇರಿದ್ದಿದ್ದು ಸುಮಾರು 250ಕ್ಕೂ ಹೆಚ್ಚು ಮಂದಿ ನೆರೆದಿದ್ದರು.

ಡಾ. ಎಂ.ಜಿ. ಪ್ರಸಾದ್ ರವರ ಶಂಖನಾದದೊಂದಿಗಿನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಸಮ್ಮೇಳನದ ಪ್ರಚಾರ ಸಮಿತಿಯ ಚೇರ್ ಆದ ಬಸವರಾಜು ಶಿವಣ್ಣ ಅವರು ಎಲ್ಲರಿಗು ಸ್ವಾಗತ ಕೋರಿದರು. ಮುಖ್ಯ ಅತಿಥಿಗಳಾದ ಎಡಿಸನ್ ಮೇಯರ್ ಅಂಟೊನಿಯ ರಿಸಿಗ್ಲಿಯಾನೋ, ಎಡಿಸನ್ ಕೌನ್ಸಿಲ್ ಮನ್ ಸುಧಾಂಶು ಪ್ರಸಾದ್, ಅಕ್ಕ ವಿಶ್ವಸ್ಥ ಮಂಡಲಿಯ ಚೇರ್ಮನ್ ಅಮರನಾಥ್ ಗೌಡ, ಕರ್ನಾಟಕದ ವಿಧಾನಸಭೆ ಸದಸ್ಯರಾದ ಪುಟ್ಟರಾಜು ಮುಂತಾದವರು ಅಕ್ಕ ಸಮ್ಮೇಳನ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಸಮ್ಮೇಳನ ಪ್ರಚಾರ ಸಮಿತಿಯ ಕೊ ಚೇರ್ ಪ್ರಶಾಂತ್ ಮೈಸೂರ್ ವಂದನಾರ್ಪಣೆ ನಡೆಸಿಕೊಟ್ಟ ನಂತರ ಕೌನ್ಸಿಲ್ ಮನ್ ಸುಧಾಂಶು ಪ್ರಸಾದ್ ರೋಡ್ ಶೋಗೆ ಹಸಿರು ನಿಶಾನೆ ತೋರಿಸಿದರು.

ಎಡಿಸನ್ ಪೋಲಿಸ್ ನವರ ಸಹಾಯದಿಂದ ಸುಮಾರು 400 ಜನ ಸ್ವಯಂಸೇವಕರು ಓಕ್ ಟ್ರೀ ರಸ್ತೆಯ ಎರಡು ಕಡೆ ನಡೆದುಕೊಂದು ಹೋದರೆ, ಸಮ್ಮೇಳನದ ಬಗೆಗಿನ ಜಾಹಿರಾತುಗಳನ್ನು ಹೊತ್ತ ವ್ಯಾನ್ ಗಳು ಪಾದಯಾತ್ರೆ ಮಾಡುತ್ತಿದ್ದ ಸ್ವಯಂಸೇವಕರ ನಡುವೆ ಮಂದಗತಿಯಲ್ಲಿ ಚಲಿಸುತ್ತಿದವು. ಸುಮಾರು 10 ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಯಂಸೇವಕರು ರಸ್ತೆಯ ಇಬ್ಬದಿಯಲ್ಲಿರುವ ಹಲವಾರು ನಮ್ಮ ದೇಶಿ ಅಂಗಡಿ(Indian Stores)ಗಳಿಗೆ ಭೇಟಿ ನೀಡಿ ಸಮ್ಮೇಳನದ ಬಗ್ಗೆ ವಿವರಿಸಿದರು. ರೋಡ್ ಶೋನ ಮೂಲ ಉದ್ದೇಶವಾಗಿದ್ದ ಸಮ್ಮೇಳನದ ಬಗ್ಗೆ ಪ್ರಚಾರ, ಸ್ಮರಣ ಸಂಚಿಕೆಗೆ ಜಾಹಿರಾತು, ಕಾರ್ಯಕ್ರಮಗಳಿಗೆ ಧನ ಸಂಗ್ರಹಣೆ, ವಾಣಿಜ್ಯ ಮಳಿಗೆಯ ಬಗ್ಗೆ ವಿವರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಟೀಮ್ ಬಿಲ್ಡಿಂಗ್ ಕಾರ್ಯ ಎಲ್ಲವೂ ಕೈಗೂಡಿತು.

ಮಾರ್ಗ ಮಧ್ಯದಲ್ಲಿ ಬಿಸಿಲಿನ ಬೇಗೆಗೆ ತಂಪಾಗಲು ತಣ್ಣನೆಯ ನೀರನೆರೆದ ಮನಿ ಡಾರ್ಟ್ ಸಂಸ್ಥೆಗೂ, ಎಲ್ಲ ಸ್ವಯಂಸೇವಕರಿಗೂ ಪುಷ್ಕಳವಾದ ಭೋಜನವನ್ನು ಪ್ರಾಯೊಜಿಸಿದ್ದ ಡಾ. ರಾಮ್ ಬೆಂಗಳೂರ್ ರವರಿಗೂ, ರುಚಿಯಾದ ಬಿಸಿ ಬೇಳೆ ಬಾತ್, ಆಂಬೊಡೆ, ಮೊಸರನ್ನ, ಕೇಸರಿಬಾತ್ ಹಾಗು ಕಾಫಿ ಸರಬರಾಜು ಮಾಡಿದ ಇಡ್ಲಿ ರೆಸ್ಟಾರೆಂಟಿಗೂ ಹಾಗೂ ನ್ಯೂ ಜೆರ್ಸಿ, ನ್ಯೂ ಯಾರ್ಕ್, ಪೆನ್ಸಿಲ್ಲ್ವೇನಿಯ, ಮೇರಿಲ್ಯಾಂಡ್, ಇಲಿನಾಯ್ ಮತ್ತು ಟೆಕ್ಸಾಸ್ ರಾಜ್ಯಗಳಿಂದ ಆಗಮಿಸಿದ್ದ ಅಕ್ಕ ಪದಾಧಿಕಾರಿಗಳಿಗೂ, ಎಲ್ಲಾ ಸ್ವಯಂಸೇವಕರಿಗೂ ಮನದಾಳದಿಂದ ಹೃತ್ಪೂರ್ವಕ ಧನ್ಯವಾದಗಳು.

ರೋಡ್ ಶೋ ನಡೆದ ವಾರಕ್ಕೆ ಮುಂಚೆ ಲೋಕಸಭೆ ಸದಸ್ಯರಾದ ಚೆಲುವರಾಯಸ್ವಾಮಿ ಅವರನ್ನು ರಾರಿಟನ್ ಸೆಂಟರ್ ನಲ್ಲಿ ನಡೆದ ಚಿಕ್ಕ ಸಮಾರಂಭವೊಂದರಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನಕ್ಕೆ ಶುಭ ಕೋರಿದ ಚೆಲುವರಾಯಸ್ವಾಮಿಯವರು ಅಕ್ಕ ಸಮ್ಮೇಳನದ ಯಶಸ್ವಿಗಾಗಿ ಕರ್ನಾಟಕದಿಂದ ತಮಗೆ ಸಾಧ್ಯವಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಸಮ್ಮೇಳನ ಕಾರ್ಯಕಾರಿ ಸಮಿತಿ

ಗ್ಯಾಲರಿ
ನ್ಯೂ ಜೆರ್ಸಿಯ ರೋಡ್ ಶೋ
ಚೆಲುವರಾಯಸ್ವಾಮಿ ಅವರಿಗೆ ನಡೆದ ಸನ್ಮಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X