ಬಾಲ್ಟಿಮೋರ್ ಸಮ್ಮೇಳನದ ಆಧ್ಯಾತ್ಮಿಕ ಒಲವುಗಳು
ಈಬಾರಿಯ ಸಮ್ಮೇಳನದಲ್ಲಿ ಇವೆಲ್ಲದರ ಜತೆಗೆ ಮನಸ್ಸಿಗೆ ಹೊಸ ಹೊಳಪು ಕೊಡುವ, ಚಿಂತನೆಯನ್ನು ಒರೆಗೆ ಹಚ್ಚಿ ಹರಿತವಾಗಿಸುವ ಆಧ್ಯಾತ್ಮಿಕ ಉಪನ್ಯಾಸಗಳು ಮತ್ತು ವಿಚಾರಸಂಕಿರಣಗಳನ್ನೂ ಹಮ್ಮಿಕೊಳ್ಳಲಾಗಿದೆ. ಕನ್ನಡ ನಾಡಿನ ಪ್ರಖ್ಯಾತ ಧಾರ್ಮಿಕ ಮುಖಂಡರು, ವಾಗ್ಮಿಗಳು, ವಿದ್ವಾಂಸರು ಸರಳಗನ್ನಡದಲ್ಲಿ ಆಧ್ಯಾತ್ಮತತ್ತ್ವಗಳ ಉಪನ್ಯಾಸ ಕೊಡುತ್ತಿರುವುದು - ಅಮೆರಿಕದ ನೆಲದಲ್ಲಿ ಇಂಥ ಅವಕಾಶಗಳು ನಿಜಕ್ಕೂ ಅಪರೂಪವೇ. ಈ ನಿಟ್ಟಿನಲ್ಲೂ ಇದೊಂದು ಅಭೂತಪೂರ್ವ ಸಮ್ಮೇಳನವಾಗಲಿದೆ!
ಸಮ್ಮೇಳನದ ಎರಡು ದಿನಗಳಲ್ಲೂ (ಸೆಪ್ಟೆಂಬರ್ 2 ಮತ್ತು 3) ಸಮಾನಾಂತರ ಅಧಿವೇಶನಗಳಲ್ಲಿ ಈ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೊದಲ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಹಿಸುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಪಕ್ಷಿನೋಟ ಪರಿಚಯ ಪ್ರೊ। ಶ್ರೀಧರ್ ಅವರಿಂದ, ಕರ್ನಾಟಕಕ್ಕೆ ದಾಸಸಾಹಿತ್ಯದ ಕೊಡುಗೆ ಎಂಬ ವಿಷಯದ ಬಗ್ಗೆ ಪ್ರೊ।ಲಕ್ಷ್ಮೀದೇವಿಯವರ ಭಾಷಣ ಮತ್ತು 'ಅಧ್ಯಾತ್ಮ" ಕುರಿತು ಶ್ರೀ ಸಿದ್ದೇಶ್ವರ ಸ್ವಾಮಿಗಳ ಉಪನ್ಯಾಸವಿದೆ. ಅದೇ ಕಾರ್ಯಕ್ರಮದಲ್ಲಿ ದೈವಜ್ಞ ಕೆ.ಎನ್.ಸೋಮಯಾಜಿಯವರು 'ವಾಸ್ತು" ಬಗ್ಗೆ ಮತ್ತು ಜಯಕೃಷ್ಣ ಅವರು 'ಜ್ಞಾನ"ದ ಬಗ್ಗೆಯೂ ಮಾತಾಡಲಿದ್ದಾರೆ.
ಎರಡನೆ ದಿನದ ಅಧಿವೇಶನಕ್ಕೆ ಖ್ಯಾತ ಸಾಹಿತಿ ಎಸ್.ಎಲ್.ಬೈರಪ್ಪ ಅಧ್ಯಕ್ಷತೆ ವಹಿಸುತ್ತಾರೆ. ಅಂದು ಪ್ರೊ। ಜಿ. ಅಶ್ವತ್ಥನಾರಾಯಣ ಅವರಿಂದ 'ಕರ್ನಾಟಕಕ್ಕೆ ಜೈನಧರ್ಮದ ಕೊಡುಗೆ" ಎಂಬ ವಿಷಯದಲ್ಲಿ ಹಾಗೂ ರೋಹಿತ್ ಶೆಟ್ಟಿ ಅವರಿಂದ 'ಕರ್ನಾಟಕದಲ್ಲಿ ಬೌದ್ಧ ಧರ್ಮ" ಕುರಿತ ಭಾಷಣಗಳಿವೆ.
ಡಾ. ಶಿವಾನಂದ ಶಿವಾಚಾರ್ಯರಿಂದ 'ಶೂನ್ಯ ಸಂಸ್ಕೃತಿ"ಯ ಬಗ್ಗೆ ಉಪನ್ಯಾಸ, 'ಸಮಯದ ಕರೆ - ಆಧ್ಯಾತ್ಮಿಕ ಜ್ಞಾನ" ಎಂಬ ವಿಷಯದ ಬಗ್ಗೆ ಬಿ.ಕೆ.ಮೃತ್ಯುಂಜಯ ಅವರಿಂದ ಭಾಷಣ ಹಾಗೂ ಕರ್ನಾಟಕದ ಸಂತರ ಬಗ್ಗೆ ಆಧ್ಯಾತ್ಮಿಕ ಸಮಿತಿಯ ಪ್ರಸ್ತುತಿ - ಇವು ಸಹ ಎರಡನೆ ದಿನದ ಕಾರ್ಯಕ್ರಮದ ಮುಖ್ಯಾಂಶಗಳಾಗಿರುತ್ತವೆ.
ಸಮ್ಮೇಳನದಲ್ಲಿ ಭಾಗವಹಿಸುವವರೆಲ್ಲ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವುಗಳ ಪ್ರಯೋಜನವನ್ನು ಪಡೆಯಬೇಕೆಂದು ಆಧ್ಯಾತ್ಮಿಕ ಕಾರ್ಯಕ್ರಮ ಸಮಿತಿ ಸಾದರಪೂರ್ವಕ ಆಹ್ವಾನಿಸುತ್ತಿದೆ.
(4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ 'ವಾರ್ತಾ ಮತ್ತು ಪ್ರಚಾರ" ಸಮಿತಿಯ ಪ್ರಕಟಣೆ. ಸಂಯೋಜನೆ: ಶ್ರೀವತ್ಸ ಜೋಶಿ)











Click it and Unblock the Notifications