ಎಸ್ಪಿಬಿ ಬಗ್ಗೆ ಗೌರವವಿದೆ, ಅಸಮಾಧಾನವೂ ಇದೆ; ಆದರೆ ಆಕ್ರೋಶ ಇಲ್ಲ!
- -ಪೂರ್ಣಿಮಾ ಸುಬ್ರಹ್ಮಣ್ಯ
[email protected]
ನನ್ನ ಪತ್ರಕ್ಕೆ ಹಲವರ ಸಮ್ಮತಿ ಇದೆ, ಕೆಲವರ ಪ್ರಶ್ನೆಗಳೂ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಭಾಷೆಯ ಮೇಲಿನ ಕಳಕಳಿ ವ್ಯಕ್ತವಾಗಿದೆ. ಅದಕ್ಕಾಗಿ ಎಲ್ಲರಿಗೂ ನನ್ನ ಧನ್ಯವಾದಗಳು.
ಒಂದು ಭಾಷೆ ಬೆಳೆಯಬೇಕಾದರೆ ಅನ್ಯಭಾಷೆಯ ಕೊಡುಗೆಯೂ ಇರುತ್ತೆ, ಮತ್ತು ಅದು ಅವಶ್ಯ ಕೂಡಾ. ಬೇಂದ್ರೆ, ಮಾಸ್ತಿಯವರ ಮನೆಮಾತು ಕನ್ನಡವಲ್ಲ ಎಂದು ಎಲ್ಲರಿಗೂ ಗೊತ್ತು. ಆದರೆ ಅವರಿಗೆ ಕನ್ನಡಕಿರೀಟ ಬೇಡ ಎಂದರೆ ನನ್ನಂಥ ಮೂರ್ಖಳು ಮತ್ತೊಬ್ಬರಿಲ್ಲ. ಕುವೆಂಪು, ಕಾರಂತರಷ್ಟೇ ಅಕ್ಕರೆ ಇವರ ಮೇಲೂ ಇದೆ, ಇರಬೇಕು. ಕಲೆಗೆ ದೇಶ-ಭಾಷೆಗಳ ಹಂಗು ಇಲ್ಲ ಎಂದು ನನ್ನ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ.
ನನ್ನ ಸಮರ್ಥನೆ ಇಷ್ಟೇ. ‘ಎದೆ ತುಂಬಿ ಹಾಡಿದೆನು’ ಮಾದರಿಯ ತೆಲುಗಿನ ಕಾರ್ಯಕ್ರಮ ವಿಜೇತ ಮಲ್ಲಿಕಾರ್ಜುನನಷ್ಟೆ ಪ್ರತಿಭಾನ್ವಿತರು, ಆದರೆ ಅವಕಾಶ ವಂಚಿತರು ಕನ್ನಡದಲ್ಲೂ ಇದ್ದಾರೆ. ಅಂಥ ಕನ್ನಡದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಟ್ಟಿದ್ದರೆ ಸಮಾರಂಭ ಹೆಚ್ಚು ಅರ್ಥಪೂರ್ಣ ಆಗಿರುತ್ತಿತ್ತು. ಕನ್ನಡದ ಪ್ರತಿಭೆಗಳಿಗೆ ಕನ್ನಡಿಗರೇ ಪ್ರೋತ್ಸಾಹ ನೀಡದಿದ್ದರೆ ಹೇಗೆ? ಸುಭದ್ರಾ ಅವರು ಹೇಳಿದಂತೆ, ಗುರುಕಿರಣ್ ಕನ್ನಡದವರಾಗಿಯೂ ಕನ್ನಡ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡದೇ ಇರುವುದು ಇನ್ನೂ ಹೆಚ್ಚು ಪ್ರಶ್ನಾರ್ಹ.
ಬಾಲು, ಜಾನಕಿ, ಸುಶೀಲ, ಚಿತ್ರ ಮುಂತಾದವರಿಗೆ ಕನ್ನಡದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಕ್ಕೆ ಸನ್ಮಾನ ಮಾಡಲಿ. ಮಲ್ಲಿಕಾರ್ಜುನನ ಹಾಡೂ ಕೇಳೋಣ. ಜೊತೆಯಲ್ಲೇ ನಮ್ಮ ಕಲಾವಿದರಿಗೂ ಅದೇ ಮಟ್ಟದ ಪ್ರೋತ್ಸಾಹ ದೊರಕಲಿ.
ಇನ್ನೊಂದು ವಿಷಯ, ಅಂದಿನ ಕಾರ್ಯಕ್ರಮದಲ್ಲಿ ಎಸ್ಪಿ ಚೆನ್ನಾಗಿಯೇ ಕನ್ನಡ ಮಾತಾಡಿದರು. ನನಗೆ ಅವರ ಮೇಲೆ ಅಭಿಮಾನವೂ ಇದೆ, ಅಸಮಾಧಾನವೂ ಇದೆ; ಆದರೆ ಆಕ್ರೋಶ ಇಲ್ಲ.
ಕೊನೆಯ ಮಾತು, ಒಂದು ಲೇಖನಕ್ಕೆ ಅದರ ಶೀರ್ಷಿಕೆ ಎಷ್ಟೊಂದು ಉಪಯುಕ್ತ ಎಂದು ಕೇಳಿ- ಓದಿ ತಿಳಿದಿದ್ದೆ. ಈಗ ಅದು ನನ್ನ ಸ್ವಂತ ಅನುಭವಕ್ಕೆ ಈ ಚರ್ಚೆಯ ಮೂಲಕ ಬಂದಿದೆ. ನನ್ನ ಲೇಖನ ದಟ್ಸ್ ಕನ್ನಡ ತಲುಪಿದಾಗ ಇದ್ದ ಶೀರ್ಷಿಕೆ ‘ಹಿತ್ತಲ ಗಿಡ ಮದ್ದಲ್ಲ’ ಎಂದು. ಪ್ರಕಟವಾದಾಗ ಅದು ಸಂಪಾದಕರ ಸ್ವಾತಂತ್ರ್ಯದಿಂದ ‘ಬಾಲುವಿಗೇಕೆ ಕನ್ನಡ ಕಿರೀಟ?’ ಆಗಿ ಮಾರ್ಪಟ್ಟಿತ್ತು. ಶೀರ್ಷಿಕೆಯಿಂದ ನಾವು ಲೇಖನವನ್ನು ಓದುವ ಮನಸ್ಥಿತಿಯೇ ಬದಲಾಗುತ್ತದೆ. ಅದೇ ಲೇಖನವನ್ನು ‘ಹಿತ್ತಲು ಗಿಡ ಮದ್ದಲ್ಲ’ ಎಂಬ ತಲೆಬರಹದೊಂದಿಗೆ ಓದಿದ್ದರೆ ಈ ಮಟ್ಟದ ಅಭಿಮಾನ, ಆವೇಶ, ಉದ್ವೇಗ ಕಂಡುಬರುತ್ತಿರಲಿಲ್ಲ ಎಂದು ನನ್ನ ಅನಿಸಿಕೆ.
ಈ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಮತ್ತೊಮ್ಮೆ ನನ್ನ ಧನ್ಯವಾದಗಳು.
ನುಡಿ-ಕಿಡಿ :
ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
| ಪೂರ್ವ ಸಿದ್ಧತೆ | Be a patronate! Use .in e-mail | Post Your Views |











Click it and Unblock the Notifications